ಶೋಷಿತ ಹೆಣ್ಣಿನ ಪುನಃಶ್ಚೇತನ: ಸವಾಲುಗಳ ಅವಲೋಕನ
ರವಿ ಗೋಪಾಲರಾವ್, ಸ್ಯಾನ್ ಹೋಸೆ, ಕ್ಯಾಲಿಫೋರ್ನಿಯ
ಅವಳು ಜನಿಸಿದ್ದೇ ಬಡತನದಲ್ಲಿ. ಹಿಂದೂ ಸಮಾಜದ ಅಸ್ಪೃಶ್ಯತೆಯ ತುಚ್ಛ, ನಿರ್ಗತಿಕ ಸಂಸಾರದಲಿ. ಸಹಿಸಲಾರದ ಅತ್ಯಾಚಾರ, ದೌರ್ಜನ್ಯ, ಅಸಾಹಾಯಕತೆಯಲ್ಲೂ ಸಮಾಜದ ವಿರುದ್ಧ ಬಂಡೆದ್ದು ದುಷ್ಕೃತ್ಯ ಮಾಡಿದವರನ್ನು ತಾನೇ ಕೊಂದು ಸೇಡು ತೀರಿಸಿಕೊಂಡ ದಲಿತ ಹೆಣ್ಣು. ನ್ಯಾಯಕ್ಕೆ ತಲೆಬಗ್ಗಿ ಶರಾಣಾಗತಿಯಲಿ ಕಠಿಣ ಕಾರಾಗೃಹವನು ಅನುಭವಿಸಿದ ಧೀರ ಮಹಿಳೆ. ತನ್ನ ಮೂವತ್ತೆಳೇ ವರ್ಷಗಳ ಜೀವನದಲ್ಲಿ ಶೋಷಿತ ಹೆಣ್ಣಿನ ಸ್ಥಾನದಿಂದ ಅಂತ್ಯ ಪಡೆದು ಪುನಃಸ್ಚೇತನ ಗಳಿಸಿ ಶೋಷಿತ ಜನರ ಪ್ರತಿನಿಧಿಯಾಗಿ ರಾಜಕೀಯದಲ್ಲಿ ಮೆರೆದ ದಿಟ್ಟ ಹೆಣ್ಣು. ದುರಾದೃಷ್ಟಾವಶಾತ್ ಮೇಲ್ಜಾತಿಯ ದ್ವೇಷ ಅಭಿಯಾನದ ಗುಂಡಿಗೆ ಬಲಿಯಾದ ಅಭಾಗ್ಯ ಹೆಣ್ಣು. ಆದರೂ ಕೊನೆಯಲ್ಲಿ ಜೀವನದ ಅತ್ಯಂತ ವಿಷಾದಕರ ಸಂಗತಿ ಏನು ಮತ್ತು ಮುಂದಿನ ಜನ್ಮದಲ್ಲಿ ಏನಾಗಲು ಬಯಸುತ್ತೀರಿ ಎನ್ನುವ ಪ್ರಶ್ನೆಗಳಿಗೆ ಆಕೆ ಉತ್ತರಿಸಿದ್ದು, “ವಿಧ್ಯೆ ಕಲಿಯಲು ಆಗಲಿಲ್ಲವೆಂಬ ವ್ಯಥೆ” ಮತ್ತು “ಏನೇ ಆದರೂ ಹೆಣ್ಣಾಗಿ ಮಾತ್ರ ಹುಟ್ಟಬಾರದೆಂಬ ಆಸೆ.” ಇದು ‘ದರೋಡೆಕೋರರ ರಾಣಿ’ ಎಂದೇ ಹೆಸರು ಪಡೆದ ಫೂಲನ್ ದೇವಿಯ ಸಂಕ್ಷಿಪ್ತ ಜೀವನ ಯಾತ್ರೆ.
ಫೂಲನ್ ದೇವಿಯ ಕಥೆ ಯಾವುದೇ ರಸಿಕತೆಯಿಂದ ಕೂಡಿದ ಕಥೆ ಅಲ್ಲ. ಬಹಳಷ್ಟು ಮಾನವನ ನೋವುಗಳ ಕತೆ. ಒಂದು ಹೆಂಗಸಿನ ಸಂಘರ್ಷದ ಕತೆ. ಯಾವ ರೀತಿ ಫೂಲನ್ ದೇವಿಯ ಕಥೆಯನ್ನು ಅರ್ಥ ಮಾಡಿಕೊಳ್ಳಬೇಕಾಗಿತ್ತೋ ಅದನ್ನು ಯಾರೂ ಅರ್ಥ ಮಾಡಿಕೊಳ್ಳಲೇ ಇಲ್ಲ ಎಂದರೆ ಬಹುಶಃ ತಪ್ಪಾಗಲಾರದು. ನಮ್ಮ ಇತಿಹಾಸದಲ್ಲಿ ಆ ರೀತಿ ಸಂಘರ್ಷ ಮಾಡುವ ವ್ಯಕ್ತಿಗಳು ಎಷ್ಟೋ ಜನರು ಬಂದು ಹೋಗುತ್ತಾರೆ ಆದರೆ ಅವರನ್ನು ನಾವು ಮರೆತು ಬಿಡುತ್ತೇವೆ. ಇತಿಹಾಸದಲ್ಲಿ ಉಳಿವವರು ಕೇವಲ ಒಂದೋ ಎರಡೂ ವ್ಯಕ್ತಿಗಳು. ಹಾಗೆ ನೋಡಿದಾಗ ಅವಳದೇ ಕತೆಯಲ್ಲಿ ಇದು ಸಂಪೂರ್ಣ ಕತೆ. ಈ ಕತೆಯನ್ನು ಆಧಾರವಾಗಿಟ್ಟುಕೊಂಡು ಬರೆದ ಲಘುಲೇಖನವಿದು.
ನಾನು ಫೂಲನ್ ದೇವಿಯ ಧಾರುಣ ಕತೆಯನ್ನು ಇಲ್ಲಿ ವಿವರಿಸಲು ಪ್ರಯತ್ನಿಸುವುದಿಲ್ಲ. ಏಕೆಂದರೆ ಈ ದಿಟ್ಟ ಮಹಿಳೆಯ ಆತ್ಮಚರಿತ್ರೆಯನ್ನು ಪುಸ್ತಕವಾಗಿ, ಚಲನಚಿತ್ರವಾಗಿ, ಕಿರುತೆರೆಯಲ್ಲಿ, ಜಾನಪದ ಗೀತೆಗಳಲ್ಲಿ, ನಾಟಕಗಳಲ್ಲಿ, ಚಿತ್ರಕಲೆಗಳಲ್ಲಿ, ಕರಕುಶಲ ವಸ್ತುಗಳ ಮೂಲಕ ಎಲ್ಲ ಮಾಧ್ಯಮದಲ್ಲೂ, ಪರದೇಶಗಳ ಮತ್ತು ಭಾರತದ ಶೈಕ್ಷಣಿಕ ಸಂಶೋಧಕರ ವಿಷಯಗಳಲ್ಲಿಯೂ, ತುಲನೆ ಮಾಡಿದ್ದಾರೆ. ಆದ್ದರಿಂದ ನಾನು ಇಲ್ಲಿ ಅವಳ ವ್ಯಕ್ತಿ ಚಿತ್ರಣವನ್ನೇ ನಿಮ್ಮ ಮುಂದಿಡುವುದರ ಜೊತೆಗೆ ಯಾವ ಹಂತದಲ್ಲಿ ಮತ್ತು ಹೇಗೆ ಅವಳು ತನ್ನ ಶೋಷಿತ ಸ್ಥಿತಿಯಿಂದ ಹೊರಬಂದು ಪುನಃಸ್ಚೇತನ ಗಳಿಸಿದಳು, ಆ ಪ್ರಕ್ರಿಯೆಯಲ್ಲಿ ಯಾವ ಸವಾಲುಗಳು ಉದ್ಭವಿಸುತ್ತವೆ ಎನ್ನುವುದರ ಅವಲೋಕನವನ್ನೇ ಈ ಲೇಖನದ ಗುರಿ ಮಾಡಿಕೊಂಡಿದ್ದೇನೆ. ಫೂಲನ್ ದೇವಿಯು ಹೇಗೆ ಜಾತಿಯ ಕಳಂಕ, ಆರ್ಥಿಕ ಶೋಷಣೆ ಮತ್ತು ಲಿಂಗ ಬೇಧಗಳನ್ನು ಸ್ಪಂದಿಸುವುದರ ಜೊತೆಗೆ ತನ್ನದೇ ಪ್ರತಿರೋಧಕ ಸಿದ್ಧಾಂತಗಳನ್ನು ಅಳವಡಿಸಿಕೊಂಡಳು ಎಂದು ಅವಲೋಕಿಸುವ ಪ್ರಯತ್ನವನ್ನು ಕೂಡ ಮಾಡಿದ್ದೇನೆ.
ಸವಾಲುಗಳು:
* ಶೋಷಣೆಗೊಳಗಾದ ಹೆಣ್ಣು ನ್ಯಾಯಗಳಿಸಲು ಪ್ರತೀಕಾರದ ಮಾರ್ಗದಲ್ಲಿ ನಡೆದರೆ ತಪ್ಪೇ?
* ಶೋಷಿತ ಹೆಣ್ಣು ಪುನಃಶ್ಚೇತನಗೊಂಡು ಗೌರವಾನ್ವಿತ ವ್ಯಕ್ತಿಯಾಗಬೇಕಾದರೆ ಪುರುಷರ ಮತ್ತು ಸಮಾಜದ ಬೆಂಬಲ ಬೇಕೇ?
* ಮಲ್ಲಾಹ್ ಮತ್ತು ಠಾಕೂರರ ಸಮಾಜದಲ್ಲಿ ಅತ್ಯಾಚಾರಗಳು ನಡೆಯುತ್ತಿದ್ದರೂ ಆ ಹಳ್ಳಿಯಲ್ಲಿ ಅದನ್ನು ಎದುರಿಸಲು ಯಾರೂ ಇರಲಿಲ್ಲವೇ? ಆ ಠಾಕೂರ್ ಸ್ತ್ರೀಯರು ಮತ್ತೊಬ್ಬ ಹೆಣ್ಣಿನ ಮೇಲಾದ ಅತ್ಯಾಚಾರಗಳ ಬಗ್ಗೆ ಏಕೆ ಸುಮ್ಮನಿದ್ದರು? ಅಥವ ಅವರ ಧ್ವನಿ ಯಾರಿಗೂ ಕೇಳಿಸಲಿಲ್ಲವೇ? ಆ ಸಮಾಜದಲ್ಲಿ ಎಲ್ಲ ಮಹಿಳೆಯರೂ ದಲಿತರಂತೆಯೇ? ದಲಿತ ಮಹಿಳೆಯರು ಯಾವ ಕಾರಣಕ್ಕಾಗಿ ತಾವು ಅತ್ಯಾಚಾರಕ್ಕೆ ಒಳಗಾದರೂ ಬೇರೆಯವರೊಡನೆ ಹೇಳಿಕೊಳ್ಳುವುದಿಲ್ಲ?
* ಫೂಲನ್ ದೇವಿಯ ಪ್ರತೀಕಾರದ ಹಿಂಸಾಕೃತ್ಯದಲ್ಲಿ ನೈತಿಕತೆಯ ನ್ಯಾಯ ಅದಲುಬದಲಾಗಿ ವಿಧವೆಯರಾದ ಅದೇ ಠಾಕೂರ ಸ್ತ್ರೀಯರು ಮತ್ತೊಮ್ಮೆ ಶೋಷಿತರಾದರೇ?
ಈ ಪ್ರಶ್ನೆಗಳಿಗೆ ಉತ್ತರ ಹುಡುಕಲು ಈ ಕೆಳಗಿನ ನಾಲ್ಕು ಮುಖ್ಯ ವಿವರಣೆಯನ್ನು ಕೊಡುವುದರ ಜೊತೆಗೆ ಫೂಲನ್ ದೇವಿಯ ಅನನ್ಯ ಸಾಧನೆ ಮತ್ತು ಮನೋಗತವನ್ನು ಓದುಗರ ಮುಂದಿಟ್ಟಿದ್ದೇನೆ: ಶೋಷಿತ ದಲಿತ ಮಹಿಳೆ, ಅತ್ಯಾಚಾರಿ ಪುರುಷರು, ಪ್ರತೀಕಾರ ಮತ್ತು ಪುನಃಶ್ಚೇತನ ಗಳಿಸಿದ ಹೆಣ್ಣು.
ಶೋಷಿತ ದಲಿತ ಮಹಿಳೆ:
ಯಾವ ಸಮಾಜವು ಹೆಣ್ಣಿಗೆ ತಾನು ಮತ್ತೆ ಹೆಣ್ಣಾಗಿ ಮಾತ್ರ ಹುಟ್ಟಬಾರದೆಂಬ ಆಶಯ ಮೂಡಿಸುತ್ತದೆಯೋ ಅಂತಹ ಸಮಾಜ ತನ್ನೊಳಗಿರುವ ಕಟು ಸತ್ಯವನೇ ವ್ಯಾಖ್ಯಾನಿಸಲು ಅನರ್ಹ ಸಮಾಜ ಎಂದು ಹೇಳಬಹುದು. ಅಂತಹುದೇ ಸಮುದಾಯದಲ್ಲಿ ಹುಟ್ಟಿದ್ದು ಫೂಲನ್ ದೇವಿ. ಸ್ವಾತಂತ್ರ್ಯಾ ನಂತರ ಬೇರೆಡೆಗಿಂತ ಹೆಚ್ಚಾಗಿ ಬಿಹಾರ ಮತ್ತು ಉತ್ತರ ಪ್ರದೇಶ ರಾಜ್ಯಗಳ ಕೆಲವೊಂದು ಪ್ರಾಂತಗಳಲ್ಲಿ ದಲಿತರ ಸ್ಥಿತಿ, ಅದರಲ್ಲೂ ದಲಿತ ಮಹಿಳೆಯರ ಸ್ಥಿತಿ ಶೋಚನೀಯವೇ ಆಗಿತ್ತು. ಸತ್ಯ ಹೇಳಬೇಕೆಂದರೆ ಅಲ್ಲಿನ ಮಹಿಳೆಯೆರೇ ದಲಿತರು. ದಲಿತ ಸಮಾಜವೇ ಮಹಿಳೆಯರನ್ನು ತಮ್ಮ ಮೇಲಾದ ಅತ್ಯಾಚಾರ ಮತ್ತು ಹಿಂಸಾಚಾರಕ್ಕೆ ಅವರೇ ಜವಾಬ್ದಾರಿಯುತರೆಂದು ಹಿಂದಿನಿಂದಲೂ ಹೇಳುತ್ತಿರುವುದರ ಜೊತೆಗೆ ಅವರ ಅಶಕ್ತತೆ ಮತ್ತು ಅಶುದ್ದತೆಯೇ ಕಳಂಕವೆಂದು ಸ್ವನಿಂದನೆಗೆ ಎಡೆ ಮಾಡಿಕೊಡುತ್ತದೆ. ಫೂಲನ್ ದೇವಿ ಮತ್ತು ಇತರ ದಲಿತ ಸ್ತ್ರೀಯರ ಹೇಳಿಕೆಯ ಪ್ರಕಾರ, ಬಿಹಾರ್ ರಾಜ್ಯದಲ್ಲಿ ಮೇಲ್ಜಾತಿಯ ಪುರುಷರು ದಲಿತ ಹೆಣ್ಣು ಮಕ್ಕಳನ್ನು ಅವರ ತಂದೆ ತಾಯಿಗಳಿಂದ ಕಸಿದುಕೊಂಡು ಅತ್ಯಾಚಾರ ಅಥವಾ ಲೈಂಗಿಕ ಕಿರುಕಳ ಕೊಡುವುದು ಬಹಳವೇ ಸಾಮಾನ್ಯ. ಅಷ್ಟೇ ಏಕೆ, ಮೇಲ್ಜಾತಿಯ ಪುರುಷರ ಮುಂದೆ ದಲಿತ ಮಹಿಳೆ ಸುಳಿದಾಡುವುದೇ ತಪ್ಪೆಂದು ತಮ್ಮ ಮಕ್ಕಳಿಗೆ ಭೋದಿಸುವ ದಲಿತ ಮಹಿಳೆಯರೇ ಸಾಮಾನ್ಯ. ಇಂತಹ ಘಟನೆಗಳು ಮತ್ತು ಮನೋಭಾವ ಸಮಾಜದಲ್ಲಿ ದಲಿತ ಮಹಿಳೆಯರ ಕೆಳ ಸ್ಥಿತಿಯನ್ನು ಮತ್ತು ಮಾನವ ಘನತೆಗೆ ಮತ್ತೊಬ್ಬ ಮಾನವ ತೋರಿಸುವ ಉಪೇಕ್ಷೆಗಳಿಗೆ ಸಾಕ್ಷ್ಯ ಕೊಟ್ಟಿವೆ. ಆದರೆ ಫೂಲನ್ ದೇವಿಯ ಬಹುತೇಕ ವರುಷಗಳೇ ಈ ರೀತಿಯ ಸಮುದಾಯದಲ್ಲಿ ಕಳೆದು ಹೋದರೂ, ಅವಳ ಶೋಚಿತ ಜೀವನದ ಬಗ್ಗೆ ಸಕಾರಾತ್ಮಕ ತಿರುವು ಕೊಟ್ಟ ಕೆಲವು ದಲಿತ ಸಮುದಾಯದ ಜಾನಪದ ಗೀತೆಗಳನ್ನು ಕೇಳಿದಾಗ ಅವಳ ಹುಟ್ಟು, ಬಾಲ್ಯ ಮತ್ತು ಹರೆಯದ ಬಗ್ಗೆ ಒಂದು ನಿಜ ಜೀವನದ “ದೇವಿ” ಚಿತ್ರಣ ಮೂಡುತ್ತದೆ:
“ಸುಮ್ಮನೆ ಫೂಲನ್ ದೇವಿ ಹುಟ್ಟುವುದಿಲ್ಲ,
ಸುಮ್ಮನೆ ಎಲ್ಲರೂ ಫುಲನ್ ದೇವಿ ಆಗಲು ಸಾಧ್ಯವಿಲ್ಲ
ಒಂದಲ್ಲ ನೂರು ಬಾರಿ ಹುಡುಕು
ನದಿ, ನದಿಯಲ್ಲಿ ಸಿಗದಿದ್ದರೆ ಸಮುದ್ರದಲ್ಲಿ ಹುಡುಕು
ಬೀಸಿದ ಕಲ್ಲಿನ ರಭಸದಿಂದಲೇ ಒಡೆಯುವುದು ಗಾಜು
ಒಡೆಯಲಿ ಕಲ್ಲು ಗಾಜಿನ ರಭಸಕೆ
ಅಂತಹದನು ಹುಡುಕು
ಸಿಗುವಳು ಫೂಲನ್ ದೇವಿ”
ಮತ್ತೆ ಕೆಲವು ಜನಪದ ಗೀತೆಗಳು ಆಕೆಯನ್ನು ನ್ಯಾಯದ ಸಂಕೇತವಾಗಿ ಬಳಸಿಕೊಂಡಿವೆ. ಇತಿಹಾಸ ಮತ್ತು ಸ್ಟೈರ ಕಲ್ಪನೆಯನ್ನು ಒಂದೇ ಅರ್ಥದಲ್ಲಿ ಹೇಳುವ ಈ ಗೀತೆಗಳು ಕೆಲವೊಮ್ಮೆ ವಾಸ್ತವ, ಕೆಲವೊಮ್ಮೆ ಅಭಿಪ್ರಾಯಗಳನ್ನೂ ಸೇರಿಸಿ ಕತೆ ಹಣೆದಿರುವಂತಿವೆ. ಹಾಗಾಗಿ ಒಂದು ಸಾದೃಶ್ಯ ದಲಿತ ಸಮಾಜವನ್ನೇ ನಿರ್ಮಿಸಿ ಫೂಲನ್ ದೇವಿಯನ್ನು ವೀರ ಸ್ತ್ರೀಯೆಂದು ಸಾರುತ್ತವೆ. ಕತೆಯ ಪ್ರತಿ ಹಂತದಲ್ಲೂ ಅವಳ ಹಿಂದಿನ ವಾಸ್ತವ ಕತೆಗಿಂತಲೂ ಅವಳ ಭವಿಷತ್ಕಾಲದ ಪುನರ್ನಿರ್ಮಾಣವೇ ಮುಖ್ಯವಾಗಿ ಕಾಣುತ್ತವೆ. ಉದಾಹರಣೆಗೆ, ಅವಳು ಯಾರಿಗೂ ಭಯಪಡುವುದಿಲ್ಲ ಮತ್ತು ಅವಳು ಎಂದಿಗೂ ಅನ್ಯಾಯವನ್ನು ಸಹಿಸುವುದಿಲ್ಲ ಎನ್ನುವ ಭೂತ-ಭವಿಷ್ಯ ಕಾಲದ ಒಂದಕ್ಕೊಂದು ಪೂರಕವಾಗುವ ಘಟನೆಗಳನ್ನು ಒತ್ತಿಹೇಳುತ್ತವೆ. ವಾಸ್ತವದಲ್ಲಿ ಫೂಲನ್ ದೇವಿಯ ನೈಜ ಗುಣವೇ ಬೇರೆ.
ಅನಕ್ಷಳಾದ ಫೂಲನ್ ದೇವಿ ದಲಿತ ಮಹಿಳೆಯರ ಬಗ್ಗೆ ತನ್ನ ವೈಯಕ್ತಿಕ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಾ “ದಲಿತ ಮಹಿಳೆಯರು ಕೋಮಲ, ಮಮತೆಯುಳ್ಳವರು, ಎಷ್ಟೊಂದು ದಯಾಮಯಿಗಳು ಅಂದರೆ ಬೇರೆಯವರಿಗೆ ಭಾವಾನಾಪೂರಕವಾಗಿ ತಮ್ಮ ಪ್ರಾಣವನ್ನೇ ಕೊಡಬಲ್ಲರು. ಮಹಿಳೆಯರ ಧನಸಂಪತ್ತು ಅವಳ ಮಾನ. ಯಾವಾಗ ಅದನ್ನು ಬೇರೆಯವರು ಕಸಿದುಕೊಳ್ಳುತ್ತಾರೋ ಆಗ ಮಹಿಳೆಯರಿಗೆ ಬೆಂಕಿಯಲ್ಲಿ ಬೀಳುವುದೇಕೆ, ಪ್ರಾಣಹತ್ಯೆ ಮಾಡಿಕೊಳ್ಳುವ ಇಚ್ಛೆ, ಅಥವಾ ದುಷ್ಕರ್ಮಿಗಳನ್ನು ಕೊಂದುಬಿಡುವ ಯೋಚನೆಗಳು ಸಹಜ,” ಎಂದು ಭಾವಾನಾತ್ಮಕವಾಗಿ ಹೇಳಿರುವುದು ಒಂದು ಮಹತ್ವವುಳ್ಳ ಸಂಗತಿ. ಏಕೆಂದರೆ ಆಕೆಯಲ್ಲಿ ಹಿಂದೂ ಸ್ತ್ರೀಯರಲ್ಲಿ ಸಹಜವಾಗಿ ಸ್ಪಂದಿಸುವ ಮನೋಭಾವನೆಗಳೇ ಇರುವುದರ ಜೊತೆಗೆ ಆತ್ಮಗೌರವ ಕಾಪಾಡಿಕೊಳ್ಳಲು ತನ್ನ ಪ್ರಾಣವನ್ನೇ ಒತ್ತೆ ಇಟ್ಟು ದುಷ್ಕರ್ಮಿಗಳ ಮೇಲೆ ಪ್ರತೀಕಾರ ತೀರಿಸಿಕೊಳ್ಳುವ ದೃಢ ನಿಶ್ಚಯ ಕೂಡ ಇದೆ. ಈ ಕಾರಣಕ್ಕಾಗಿ ಫೂಲನ್ ದೇವಿ ಹರೆಯದ ವಯಸ್ಸಿನಿಂದಲೂ ಒಂದೆಡೆ ಅಮಾಯಕಳಾಗಿಯೂ ಮತ್ತೊಂದು ಸಂದರ್ಭಗಳಲ್ಲಿ ಮೇಲ್ಜಾತಿಯ ಪುರುಷರ ಮೇಲೆ ಬಂಡಾಯಗಾರ ಮನೋವೃತ್ತಿಯವಳಾಗಿಯೇ ಬೆಳದದ್ದು ಸ್ಪಷ್ಟವಾಗುತ್ತದೆ. ಈ ದ್ವಂದ್ವವೇ ಅವಳು ಮುಂದೆ ಬಂದೂಕು ಹಿಡಿದು ನಿರ್ದಯಿ ದರೋಡೆಕೋರಳಾದ ಕಾರಣಗಳಿಗೆ ಸೂಕ್ಷ್ಮ ಸೂಚನೆ ಕೊಡುತ್ತವೆ ಎಂದು ನಾವು ಯೋಚಿಸಿದರೆ ಬಹುಶಃ ತಪ್ಪಾಗಲಾರದು. ಏಕೆಂದರೆ ಅವಳ ಮೇಲೆ ಅತ್ಯಾಚಾರವೆಸಗಿದ ದುಷ್ಕರ್ಮಿಗಳೆಲ್ಲರೂ ಪುರುಷರೇ.
* ಅತ್ಯಾಚಾರಿ ಪುರುಷರು
ಬಡತನ ಮತ್ತು ಆಸ್ತಿಯ ವಹಿವಾಟಿನಲ್ಲಿ ಸಿಕ್ಕಿಹಾಕಿಕೊಂಡ ತಂದೆ ತನ್ನ ಹನ್ನೊಂದು ವರ್ಷದ ಮಗಳನ್ನು ಮೂವತ್ತಮೂರು ವರ್ಷದ ವಿಧುರನೊಬ್ಬನಿಗೆ ಕನ್ಯಾ ದಾನದ ಹೆಸರಿನಲ್ಲಿ ಕೊಟ್ಟು ಮಗಳ ಜವಾಬ್ದಾರಿಯನ್ನು ಕೈ ತೊಳೆದುಕೊಳ್ಳುವುದು ದಲಿತ ಸಮುದಾಯಕ್ಕೆ ಹೊಸದೇನಲ್ಲ. ಆದರೆ ಫೂಲನ್ ದೇವಿಯನ್ನು ಮದುವೆಯಾದ ಅತ್ಯಾಚಾರಿ ಗಂಡು ತನ್ನ ಕಾಮುಕತೆಯನ್ನು ಪೂರೈಸಿಕೊಳ್ಳಲು ಮಾಡಿದ ಅಕೃತ್ಯಗಳ ಬಗ್ಗೆ ಬರೆಯುವುದೂ ಮತ್ತು ಓದುವುದು ಮೃದುಹೃದ್ಯಗಳಿಗೆ ಮಾತ್ರವಲ್ಲ, ಕಟುಕರಿಗೂ ಸಾಧ್ಯವಿಲ್ಲ. ಆ ಕೃತ್ಯಗಳನುಭವಿಸುವಾಗ ತಾನು ಗುಡಿಗಳ ಕಲ್ಲಿನ ಮೂರ್ತಿಗಳಂತಾಗಬಾರದೇ, ಯೋಚನೆಗಳೆ ಬರದಂತಾಗಲಿ, ಯಾವುದನ್ನೂ ಕೇಳದಂತಾಗಲಿ, ಯಾವುದನ್ನು ನೋಡದಂತಾಗಲಿ ಎಂದು ಆಶಿಸುವ ಬಾಲಕಿಯ ಆಕ್ರಂದನವನ್ನು ಯಾರು ಕೇಳಲು ಇರಲಿಲ್ಲ ಆ ಗಂಡನ ಮನೆಯಲ್ಲಿ. ಕೆಲವು ವರ್ಷಗಳ ನಂತರ ಗಂಡನ ಮನೆಯಿಂದ ತಪ್ಪಿಸಿಕೊಂಡು ಮನೆಗೆ ಹಿಂತಿರುಗಿದರೂ, ಹಳ್ಳಿಯ ಸರಪಂಚನ ಕಡೆಯವರು ಇಬ್ಬರು ಅವಳ ತಂದೆ ತಾಯಿ, ಚಿಕ್ಕ ಸಹೋದರಿ ಮತ್ತು ಸಹೋದರನ ಮುಂದೆ, ಅವಳದೇ ಮನೆಯಲ್ಲಿ ಅತ್ಯಾಚಾರ ಮಾಡಿದ ಘೋರ ಕೃತ್ಯಕ್ಕೂ ಹಳ್ಳಿಯ ಜನ ಯಾರೂ ಹೆದರಿಕೆಯಿಂದ ಪೊಲೀಸರಿಗೆ ದೂರುಕೊಡಲು ಮುಂದೆ ಬರಲಿಲ್ಲ.
ಫೂಲನ್ ದೇವಿಯ ಜೀವನದಲ್ಲಿ ಎಲ್ಲ ಪುರುಷರು ಅವಳನ್ನು ಭೋಗದ ವಸ್ತುವಾಗಿಯೇ ಕಂಡವರು; ಹನ್ನೊಂದು ವರ್ಷಕ್ಕೆ ಅವಳನ್ನು ಮದುವೆಯಾದ ಫೂಲನಳ ಅತ್ಯಾಚಾರಿ ಗಂಡ, ಹಳ್ಳಿಯ ಮುಖ್ಯಸ್ಥನ ಅತ್ಯಾಚಾರಿ ಪುತ್ರ, ಹಳ್ಳಿಯ ಅತ್ಯಾಚಾರಿ ಪೊಲೀಸರು, ಮೇಲ್ಜಾತಿಯ ದರೋಡೆಕೋರರ ಮುಖ್ಯಸ್ಥ ಅತ್ಯಾಚಾರಿ ಬಾಬು ಗುಜ್ಜರ್, ಅವಳನ್ನು ಅಪಹರಿಸಿ ಅತ್ಯಾಚಾರವೆಸಗಿದ ಥಾಕುರ್ ಶ್ರೀ ರಾಮ್ ಮತ್ತು ಲಾಲಾ ರಾಮ್ ನ ಗ್ಯಾಂಗ್, ಎಲ್ಲರೂ ಅವಳ ಜೀವನವನ್ನು ಕನಿಕರದಲ್ಲಿ ಮುಳುಗಿಸಿದವರು. ಆದರೆ ಅವಳ ಹೃದಯವನ್ನು ಕಲ್ಲು ಮಾಡಿದ್ದು ಬಹುಶಃ ಶ್ರೀ ರಾಮ್ ಮತ್ತು ಲಾಲಾ ರಾಮ್ ಅವಳನ್ನು ನಗ್ನ ಮಾಡಿ ಹಳ್ಳಿಯ ಕಿರುರಸ್ತೆಗಳಲ್ಲಿ ಎಲ್ಲರ ಮುಂದೆ ಓಡುವಂತೆ ಮಾಡಿದ ಘಟನೆ. ದಲಿತ ಹೆಣ್ಣಿನ ಮೇಲೆ ಕೊನೆಯೇ ಇಲ್ಲದ ಅತ್ಯಾಚಾರ ಮತ್ತು ಶಾರೀರಿಕ ದೌರ್ಜನ್ಯದಿಂದ ಮೇಲ್ಜಾತಿಯ ಗಂಡುಗಳು ಪುಷ್ಟಿಕರಿಸಿಕೊಂಡಿದ್ದು ಇಷ್ಟೇ: ಪುರುಷ ಬಲದಿಂದ ಬಂಧಿಸಿದ ದಲಿತ ಹೆಣ್ಣಿನ ದೇಹವನ್ನು ತಮ್ಮ ಹತೋಟಿಯಲ್ಲಿ ಇಟ್ಟುಕೊಂಡು ಸಮಾಜದ ಜಾತಿ ಪದ್ದತಿಯ ಮೂಲಕ ಯಾರು ಪ್ರಬಲರು ಎನ್ನುವುದನ್ನು ಸ್ಥಾಪಿಸುವ ಒಂದು ದಾರುಣ ಕೃತ್ಯ.
ಇಂತಹ ಪುರುಷರ ಮಧ್ಯೆ ತನ್ನ ಹರೆಯತನವನ್ನು ಕಳೆದ ಫೂಲನ್ ದೇವಿಗೆ ಕ್ಷಣ ಕಾಲದ ನೆಮ್ಮದಿ ಸಿಕ್ಕಿದ್ದು ವಿಕ್ರಂ ಮಲ್ಲಾಹ್ ಎನ್ನುವ ಅವಳ ಜಾತಿಯ ದಲಿತನೊಬ್ಬನಿಂದ ಮಾತ್ರ. ಗಜ್ಜರ್ ಎನ್ನುವ ದರೋಡೆಕೋರರ ಗುಂಪಿನಲ್ಲಿ ಇದ್ದವನು ವಿಕ್ರಂ. ಅವನು ಅವಳ ವಿಶ್ವಾಸ ಗೆದ್ದು ಅವಳಿಗೆ ಬಂದೂಕ ಚಲಾಯಿಸುವುದು ಮತ್ತು ದರೋಡೆಕೋರರ ಜೀವನದ ಶೈಲಿಗೆ ಹೊಂದಿಕೊಳ್ಳಲು ಅವಳಿಗೆ ಸಹಾಯ ಮಾಡಿದ ವ್ಯಕ್ತಿ. ಅವರಿಬ್ಬರ ಮಧ್ಯೆ ಪ್ರಣಯದ ಜೊತೆ ಒಬ್ಬರಿಗೊಬ್ಬರು ಸಹಾಯ ಮಾಡುವ ಅನುಭೂತಿ ಬೆಳೆದಿತ್ತು. ಆದರೆ ಒಂದು ದಿನ ಮುಖ್ಯಸ್ಥ ಗಜ್ಜರ್ ಫೂಲನ್ ಮೇಲೆ ಅತ್ಯಾಚಾರವೆಸಗುವ ಸಮಯದಲ್ಲಿ ಕೋಪಗೊಂಡ ವಿಕ್ರಂ ಅವನನ್ನು ಗುಂಡಿಕ್ಕಿ ಕೊಲ್ಲುತ್ತಾನೆ. ವಿಕ್ರಂ ಮುಖ್ಯಸ್ಥನಾಗಿ ದರೋಡೆಕೋರರ ಕೆಲಸದಲ್ಲಿ ಮುಂದುವರೆಯುತ್ತಾನೆ. ಸಹಬಾಗಿಯಂತೆ ಫೂಲನಳಿಗೂ ಅರ್ಧ ಮುಖ್ಯಸ್ಥ ಸ್ಥಾನವನ್ನು ಕೊಡುವಷ್ಟು ಉಪಕಾರಿ ವಿಕ್ರಂ. ಆದರೆ ಆ ಸಮಯದಲ್ಲಿ ಡೊರೋಡೆಕೋರರ ಗುಂಪಿಗೆ ಶ್ರೀ ರಾಮ್ ಮತ್ತು ಲಾಲಾ ರಾಮ್ ಜೈಲುವಾಸ ಮುಗಿಸಿಕೊಂಡು ಮತ್ತೆ ಸೇರುತ್ತಾರೆ. ವಿಕ್ರಂನ್ನು ಕೊಂದು ತಮ್ಮ ಹಗೆ ತೀರಿಸಿಕೊಳ್ಳುತ್ತಾರೆ. ಅವಳನ್ನು ಅಪಹರಿಸಿ ಠಾಕೂರರ ದುಷ್ಟರ ಕೂಟ ಅವಳನ್ನು ಬೆಹ್ಮಾಯಿ ಎನ್ನುವ ಹಳ್ಳಿಯೊಂದರಲ್ಲಿ ನಿರಂತರವಾಗಿ ಅತ್ಯಾಚಾರ ಮಾಡುತ್ತಾರೆ. ಅಲ್ಲಿಂದ ತಪ್ಪಿಸಿಕೊಂಡು ಫೂಲನ್ ಬಾಬಾ ಮುಸ್ತಾಕಿನ್ ಎನ್ನುವವನ ಆಶ್ರಯ ಪಡೆದು ಮಾನ್ ಸಿಂಗ್ ಎನ್ನುವನ ದರೋಡೆಕೋರರ ಗುಂಪು ಸೇರುತ್ತಾಳೆ. ವಿಕ್ರಂನ ಸಾವಿನ ನಂತರ ಫೂಲನ್ ದೇವಿ ತನ್ನದೇ ದರೋಡೆಕೋರರ ಗುಂಪಿಗೆ ಮುಖ್ಯಸ್ಥೆ ಆಗುತ್ತಾಳೆ. ವಿಧಿಲಿಖಿತವೋ ಎನ್ನುವಂತೆ ಒಂದು ಶೋಷಿತ ಹೆಣ್ಣು ಪುರುಷ-ಪ್ರಮುಖವಾದ ದರೋಡೆ ಕೆಲಸದಲ್ಲಿ ತೊಡಗುತ್ತಾಳೆ. ಅಂದಿನಿಂದ ಅವಳ ಜೀವನವೇ ಬದಲಾಗುತ್ತದೆ. ದುಷ್ಕರ್ಮಿಗಳನ್ನು ಕೊಂದುಬಿಡುವ ಪ್ರತೀಕಾರದ ಛಾಯೆ ಕಂಡುಬರುತ್ತದೆ.
* ಪ್ರತೀಕಾರ
ದರೋಡೆಕೋರರ ಗುಂಪಿಗೆ ನಾಯಕಿ ಆದರೂ, ಫೂಲನ್ ದೇವಿಯ ದ್ವಂದ್ವ ಗುಣಗಳನ್ನು ಪರಿಶೀಲಿಸುವುದು ಅಷ್ಟೇನೂ ಕಷ್ಟದ ಕೆಲಸವಲ್ಲ: ಒಂದು ಕಡೆ ರಾಬಿನ್ ಹುಡ್ ತರಹ ಶ್ರೀಮಂತರ ಹಣವನ್ನು ದೋಚಿ ಬಡಬಗ್ಗರಿಗೆ ಕೊಡುವುದು, ಮತ್ತೊಂದು ಕಡೆ ತನಗೆ ಮತ್ತು ತನ್ನ ದಲಿತ ಸಮುದಾಯಗಳ ಮೇಲೆ ಅತ್ಯಾಚಾರ ಮಾಡಿದವರನ್ನು ಶಿಕ್ಷಿಸಿ ತನ್ನದೇ ನ್ಯಾಯಾಂಗ ಕ್ರಮಗಳನ್ನು ಜಾರಿಗೆ ತರುವುದು, ಎರಡೂ ರೀತಿಯ ವಿಭಿನ್ನ ಪ್ರಕ್ರಿಯೆಗಳಿಗೆ ಒಂದೇ ರೀತಿ ಸ್ಪಂದಿಸುತ್ತಿದ್ದಳು. ಶೋಷಿತ ಹೆಣ್ಣು ಬಂದೂಕ ಹಿಡಿದು ಡಕಾಯಿತಳಾಗಲು ಅವಳದೇ ಸಮರ್ಥನೆ ಇತ್ತು: “ಡಕಾಯಿತರು ತಾವು ತಾವಾಗಿಯೇ ಬಂದೂಕ ಹಿಡಿದರೆಂದು ನೀವೆಂದುಕೊಂಡಿದ್ದರೆ ಮತ್ತೊಮ್ಮೆ ಯೋಚಿಸಿ. ನಾನೇನು ಚಂಬಲ್ ಘಾಟಿನಲ್ಲೇ ಹುಟ್ಟಿ ಬೆಳೆದವಳು ಅಂದುಕೊಂಡಿದ್ದೀರೇನು? ನನಗೂ ತಂದೆ ತಾಯಿ ಬಂಧು ಬಳಗವಿತ್ತು. ಶಿಕ್ಷಣವೇ ಇಲ್ಲದ ನನಗೆ ನಾನು ದೊಡ್ಡವಳಾದ ತಕ್ಷಣ ನಮ್ಮ ತಂದೆ ತಗೋ, ಈ ಬಂದೂಕ ಚಲಾಯಿಸಲು ಕಲಿತುಕೊ ಅಂತ ಪಾಠ ಹೇಳಿಕೊಡಲಿಲ್ಲ. ನಾನು ನಾನಾಗಲು ನಮ್ಮ ಸಮಾಜವೇ ಕಾರಣ.”
ಜನಪದ ಗೀತೆಗಳಲ್ಲಿ ಅವಳ ದರೋಡೆಕೋರ ಜೀವನದ ಒಂದು ಘಟನೆಯನ್ನು ಹೀಗೆ ವಿವರಿಸಿದೆ:
ಫೂಲನಳ ಗುಂಪು ಹಿಡಿದವು ಬಂದೂಕ
ಕೆಂಪು ವಸ್ತ್ರದ ಮುಂಡಾಸು ಧರಿಸಿ ನಡೆದಳು
ಬೆಹ್ಮಾಯಿ ಹಳ್ಳಿಯ ಕಡೆಗೆ
ಎಲ್ಲಿ ಅವಳ ಅತ್ಯಾಚಾರವೆಸಗಿದರೋ ಠಾಕೂರರು
ಅಲ್ಲಿ ಇಪ್ಪತ್ತೊಂದು ಠಾಕುರರನು ಕೊಂದಳಂದು ಫೂಲನ್ ದೇವಿ
ರಕ್ತದಲಿ ಓಕುಳಿಯನೇ ಆಡಿದಳು
ಯಮುನಾ ನದಿಯೇ ಕೆಂಪಾಯಿತು ಅಂದು
ಅವಳ ವರ್ಷಗಳ ಕೋಪ ತೀರಿತಂದು ಪ್ರತೀಕಾರದಲಿ
ದಾಖಲೆಗಳ ಪ್ರಕಾರ ಫೂಲನ್ ದೇವಿ ಕೊಂದದ್ದು ಇಬ್ಬರು ಠಾಕುರರನ್ನು ಮಾತ್ರ, ಆದರೆ ಉದ್ರೇಕದಲ್ಲಿ ಮಿಕ್ಕವರನ್ನು ಕೊಂದದ್ದು ಅವಳ ಗುಂಪಿನ ದರೋಡೆಕೋರರು. ಪ್ರತೀಕಾರದ ಮಾರ್ಗದಲ್ಲಿ ಒಮ್ಮೆ ಹೆಜ್ಜೆ ಇಟ್ಟಮೇಲೆ ಹಿಂದೆಗೆಯುವುದು ಕಷ್ಟ ಸಾಧ್ಯವಾದರೂ, ಫೂಲನ್ ದೇವಿಗೆ ಅರಿವಾದದ್ದು, ಅವಳದೇ ದಲಿತ ಸಮುದಾಯ ಅವಳನ್ನು ಬೆಂಬಲಿಸುತ್ತಿದೆ ಎನ್ನುವ ಸತ್ಯತೆ. ಆದರೆ ಪ್ರತೀಕಾರ, ಬೂದಿ ಮುಚ್ಚಿದ ಕೆಂಡದಿಂದ ಆಗುವ ಅನಾಹುತದಂತೆ ಶೀಘ್ರದಲ್ಲಿಯೇ ತಾಪ ಹರಡುತ್ತಿತ್ತು. ಪೊಲೀಸರು ದರೋಡೆಕೋರರ ಗುಂಪಿನ ಹಿಂದೆ ಬಿದ್ದಿದ್ದರು. ನ್ಯಾಯದ ದೃಷ್ಟಿಯಲ್ಲಿ ಫೂಲನ್ ದೇವಿ ಒಬ್ಬ ಕೊಲೆಪಾತಕಿ. ಆದರೆ ಅವಳ ಮನೋಗತದಲ್ಲಿ ತನ್ನ ಮಾನ ಅಪಹರಿಸಿದ ಮೇಲ್ಜಾತಿಯವರನ್ನು ಕೊಲ್ಲುವುದು ಸಹಜವೇ ಹೊರತು ಬೇರೆ ದಾರಿ ಕಾಣುತ್ತಿರಲಿಲ್ಲ. ಜೊತೆಗೆ ದಲಿತ ಸಮುದಾಯದ ಅಭಿಪ್ರಾಯದಲ್ಲಿ ಕೂಡ ಶೋಷಿತ ಹೆಣ್ಣು ಸೇಡು ತೀರಿಸಿಕೊಳ್ಳುವುದರಲ್ಲಿ ಯಾವ ತಪ್ಪೂ ವ್ಯಕ್ತವಾಗಿರಲಿಲ್ಲ. ಪುರುಷರ ಅತ್ಯಾಚಾರದಿಂದ ಹೃದಯವೇ ಕಲ್ಲಾಗಿದ್ದ ಫೂಲನ್ ದೇವಿಗೆ ತಾನು ಕೊಲೆ ಪಾತಕಿ, ಆದ್ದರಿಂದ ಸುಸಂಸ್ಕೃತರ ತಿರಸ್ಕಾರಕ್ಕೆ ಮತ್ತು ಸಮಾಜದ ನ್ಯಾಯಕ್ಕೆ ತಾನು ಮಣಿಯಬೇಕೆಂಬ ಅನಿಸಿಕೆ ಮೂಡಲೇ ಇಲ್ಲ. ಆದರೆ ಅವಳು ಮನೋವಿಕೃತ ಕಾಯಿಲೆಗೆ ಬಲಿಯಾಗಿ ಠಾಕುರರನ್ನು ಕೊಲ್ಲಲಿಲ್ಲ.
ಯಾವ ವಿಕೃತಕಾಮಿ ಪುರುಷರು ತನ್ನ ಮೇಲೆ ಅತ್ಯಾಚಾರವೆಸಗಿದರೋ ಅವರನ್ನು ಕೊಲ್ಲುವುದರಲ್ಲಿ ಯಾವ ತಪ್ಪಿದೆ ಎನ್ನುವುದು ಅವಳ ತರ್ಕವಾಗಿತ್ತು. ಆಕೆ ಆ ಅತ್ಯಾಚಾರಗಳ ಬಗ್ಗೆ ಕೋಪಗೊಂಡಿದಂತೂ ನಿಜ ಆದರೆ ಆ ಕೋಪದ ಕಾರಣದಿಂದ ಮೇಲ್ಜಾತಿಯವರ ನಿರ್ದೋಷಿಗಳ ಮೇಲೆ ತಾನೂ ಅತ್ಯಾಚಾರ ಮಾಡುವ ವ್ಯಕ್ತಿಯಲ್ಲ. ಅಂದರೆ ಅವಳ ಪ್ರತೀಕಾರದ ಹರವು ಮತ್ತು ಗಂಭೀರತೆ ದೋಷಿಗಳ ಮೇಲೆಯೇ. ಆದರೂ ಅವಳು ಕಾರಣಳಾದ ಇಪ್ಪತ್ತೊಂದು ಠಾಕೂರರ ಕೊಲೆಯ ಅಂತಿಮ ಆಘಾತವಾದದ್ದು ಮಹಿಳೆಯರ ಮೇಲೆಯೇ. ಒಂದು ಸಣ್ಣ ಹಳ್ಳಿಯಲ್ಲಿ ಇಪ್ಪತ್ತೊಂದು ಗೃಹಣಿಯರು ವಿಧವೆಯರಾದ ಕ್ರೂರ ಘಟನೆಗೆ ತಾನು ಕಾರಣಳು ಎಂದು ಅವಳಿಗೆ ಅರಿವಾಗದಿರಲು ಹಲವು ರೀತಿ ಅವಲೋಕಿಸಬಹುದು. ಒಂದು, ಅವಳ ಹಿಂಸಾಕೃತ್ಯದಲ್ಲಿ ನೈತಿಕತೆಯ ನ್ಯಾಯ ಅದಲುಬದಲಾಗಿ ವಿಧವೆಯರಾದ ಅದೇ ಠಾಕೂರ್ ಸ್ತ್ರೀಯರು ಮತ್ತೊಮ್ಮೆ ಶೋಷಿತರಾದರೇ? ಎರಡು, ಈ ಕೃತ್ಯವನ್ನು ತಾನೇ ವಕೀಲೆ, ತಾನೇ ನ್ಯಾಮೂರ್ತಿಯೂ, ತಾನೇ ತಪ್ಪಿತಸ್ಥರನ್ನು ಗಲ್ಲಿಗೇರಿಸುವವಳೂ ಆಗಿ ಎಲ್ಲವನ್ನೂ ತನ್ನ ಸ್ವಾಧೀನದಲ್ಲೆ ನೆರವೇರಿಸಿದ್ದು ಸರಿಯೇ? ಮೂರು, ಈ ಹೀನ ಕೃತ್ಯದಿಂದ ಅವಳ ಕೋಮಲ ಮತ್ತು ಅಮಾಯಕತೆಯ ಮೇಲೆ ಯಾವ ಮಾನಸಿಕ ಪ್ರಭಾವ ಬೀರಿರಬಹುದು? ನಾಲ್ಕು, ಅದು ಪಶ್ಚಾತ್ತಾಪದಲ್ಲಿ ಕೊನೆಗೊಂಡು ಅವಳ ಮುಂದಿನ ಜೀವನದ ಶೈಲಿಯನ್ನು ಬದಲಾಯಿಸಿತೆ? ಮೊದಲನೇ ಪ್ರಶ್ನೆಗೆ ಉತ್ತರ ಖಂಡಿತವಾಗಿಯೂ ಆ ಠಾಕೂರ ಸ್ತ್ರೀಯರು ಶೋಷಿತರಾದರೆಂದು ಹೇಳಬಹುದು. ಏಕೆಂದರೆ ಫೂಲನ್ ದೇವಿಯ ಜೊತೆಗೂಡಿ ದಲಿತ ಸಮುದಾಯವೇ ಬಂಡೆದ್ದು ಜಾತಿಯಲ್ಲಿ ಶ್ರೇಣಿ ವ್ಯವಸ್ಥೆಯನ್ನು ವಿಪರ್ಯಯ ಗೊಳಿಸಿ ಆ ಠಾಕೂರ ಸ್ತ್ರೀಯರನ್ನು ಆರ್ಥಿಕ ಶೋಷಣೆಗೆ ಒಳಮಾಡಿತ್ತು. ನ್ಯಾಯ ಇಲಾಖೆಗಳೂ ಕೂಡ ಅವರಿಗೆ ನಷ್ಟ ಪರಿಹಾರ ಕೊಡದೆ ಅವರನ್ನು ಮತ್ತಷ್ಟು ಅಧೋಗತಿಗೆ ತಳ್ಳಿದವು. ಎರಡನೇ ಪ್ರಶ್ನೆಗೆ ಉತ್ತರ, ದರೋಡೆಕೋರರ ನಾಯಕಿಯಾಗಿ ತಾನು ಕೈಗೊಂಡ ಕಾರ್ಯವನ್ನು ತನ್ನದೇ ಕರಾರುಗಳಿಗೆ, ತನ್ನದೇ ಅಲಿಖಿತ ನ್ಯಾಯದಲ್ಲಿ ಪೂರ್ತಿಗೊಳಿಸುವುದು ನಾಯಕತ್ವದ ಸಂಕೇತವಾಗಿತ್ತು. ಆದ ಕಾರಣ ಮೂರೂ ಕೆಲಸವನ್ನು ತಾನೇ ನಿರ್ವಹಿಸಿದ್ದು ಸರಿ ಎಂದು ಅನಿಸಿದರೆ ಅದರ ಅರ್ಥ ವಿವರಣೆ ಓದುಗನಿಗೆ ಬಿಟ್ಟದ್ದು. ನಾಲ್ಕನೆಯ ಪ್ರಶ್ನೆಗೆ ಉತ್ತರ, ಪಶ್ಚಾತ್ತಾಪಕ್ಕಿಂತ ಹೆಚ್ಚಾಗಿ ಆ ಕೃತ್ಯದ ನಂತರ ಪೊಲೀಸರು ಅವಳ ಇಡೀ ದರೋಡೆಕೋರರ ಗುಂಪನ್ನು ವ್ಯವಸ್ಥಿತವಾಗಿ ನಿರ್ನಾಮ ಮಾಡಿದ ಕಾರಣ ಅವಳಿಗೆ ಬೇರೆ ದಾರಿ ಕಾಣದೆ ನ್ಯಾಯಕ್ಕೆ ಶರಣಾಗತಳಾಗ ಬೇಕಾಯಿತು. ಮುಂದೆ ಈ ಲೇಖನದಲ್ಲಿ ವಿಶ್ಲೇಷಿಸಿರುವಂತೆ ಈ ಒಂಟಿತನ ಮತ್ತು ಧೀರ್ಘ ಕಾರಾಗೃಹವಾಸದಿಂದ ಅವಳಲ್ಲಿ ಬದಲಾವಣೆ ಕಂಡುಬಂದಿತು ಎಂದರೆ ತಪ್ಪಾಗಲಾರದು.
* ಪುನಃಸ್ಚೇತನ
ಪುನಃಸ್ಚೇತನದ ಹಿನ್ನಲೆಯ ಪ್ರಕ್ರಿಯೆ ಬಹಳಷ್ಟು ಅವಳದೇ ಆತ್ಮಸಾಧನೆ ಆದರೂ ತನ್ನೊಡನೆ ಸ್ಪಂದಿಸುವವರ ಜೊತೆಗೂಡಿ ಕಾರ್ಯ ಸಾಧಿಸುವ ಛಲ ಕೂಡ ಸೇರಿದೆ. ಪ್ರಕೃತಿ ತಾನು ಬಯಸಿದ ಗುಣಗಳನ್ನು ಪುರುಷನಲ್ಲಿ ನಿರಂತರವಾಗಿ ಸೃಷ್ಟಿಸುವ ಶಕ್ತಿ ಪಡೆದಿರುತ್ತಾಳೆ ಮತ್ತು ಯಾವ ಅಸಾಧಾರಣವಾದ ಸಾಮರ್ಥ್ಯಗಳನ್ನು ಅವಳು ಹೊಂದಲು ಸಾಧ್ಯವಿಲ್ಲವೋ ಅಂತಹ ಪುರುಷ ಗುಣಗಳೇ ಅವಳಿಗೆ ಅಪಾರ ಮತ್ತು ಮಹತ್ತರವಾದ ಶಕ್ತಿ ಆಗಿರುತ್ತದೆ. ಡಕಾಯಿತಳಾಗುವ ಹಂತದಲ್ಲಿ ಪೂಲನ್ ಮತ್ತು ವಿಕ್ರಂ ನಡುವೆ ಇಂತಹ ಸಮ್ಮಿಶ್ರಣವಾದ ಶಕ್ತಿಯ ಪ್ರದರ್ಶನವನ್ನು ನಾವು ಕಾಣಬಹುದು. ನಂತರ ಮಾನ್ ಸಿಂಗ್ ಜೊತೆ ಕೂಡ ಇದೆ ರೀತಿಯ ಸಮ್ಮಿಶ್ರಣವನ್ನು ಕಾಣುತ್ತೇವೆ. ವಿಕ್ರಂ ಮತ್ತು ಮಾನ್ ಸಿಂಗ್ ಇಲ್ಲದಿದ್ದರೆ ಪೂಲನ್ ತನ್ನ ಕಾಲ ಮೇಲೆ ತಾನು ನಿಂತ ಮಹಿಳೆ ಆಗುತ್ತಿದ್ದಳೇ ಎನ್ನುವ ಪ್ರಶ್ನೆಗೆ ಕೂಡ ಈ ವಿವರಣೆ ಸಮರ್ಥನೆ ಕೊಡುತ್ತದೆ. ಫೂಲನ್ ದೇವಿಯ ಪುನಃಸ್ಚೇತನದ ಮೊದಲ ಅಧ್ಯಾಯಕ್ಕೆ ಕಾರಣ ಕೂಡ ಪುರುಷನೆಂಬುದು ಇಲ್ಲಿ ಗಣನೆಗೆ ತಂದುಕೊಳ್ಳಬಹುದು.
ಪ್ರತೀಕಾರದಲ್ಲಿ ಗೆಲುವು ಪಡೆದ ಮೇಲೆ ಫೂಲನ್ ದೇವಿಗೆ ದೊರೆತದ್ದು, ಹಿಂದೆ ಯಾವ ಹೆಣ್ಣೂ ಗಳಿಸದ, “ದರೋಡೆಕೋರರ ರಾಣಿ” ಎನ್ನುವ ಬಿರುದು ಮಾತ್ರ. ಸ್ಥಳೀಯ ದಲಿತರಿಗೆ ಅವಳ ಬಗ್ಗೆ ಗೌರವ, ಗೌರವಕ್ಕಿಂತ ಭಯ, ಭಯಕ್ಕಿಂತ ಅವಳು ಕೊಡುತ್ತಿದ್ದ ಬಳುವಳಿ, ಬಳುವಳಿಗಿಂತ ಅವಳು ತುಂಬುತ್ತಿದ್ದ ಸ್ಥೈರ್ಯ ಮುಖ್ಯವೆನಿಸಿದವು. ಶೋಷಿತ ಜನರ ಮನೋಭಾವ ಹೇಗಿರುತ್ತೆ ಅಂದರೆ ಅವರಿಗೆ ಯಾರಾದರೂ ನಾವು ನಿಮ್ಮ ಜೊತೆ ಇದ್ದು ಸಹಾಯಮಾಡುತ್ತೇವೆ ಅಥವಾ ನಿಮ್ಮ ಯಾವುದೇ ಕಷ್ಟಗಳನ್ನು ನಮ್ಮೊಡನೆ ಹಂಚಿಕೊಳ್ಳಬಹುದು ಎಂದು ಹೇಳಿದರೆ ಇಡೀ ಸಮಾಜದ ಸ್ಥೈರ್ಯವೇ ಹೆಚ್ಚಾಗುತ್ತೆ. ಫೂಲನ್ ದೇವಿ ತಾನು ದರೋಡೆಕೋರಳಾಗಿ ಬಡಜನರಿಗೆ ಆಶ್ವಾಸನೆ ಕೊಡುತ್ತಿದ್ದನ್ನು ನೋಡಿದರೆ ಅವಳ ಸಮುದಾಯದ ಜನರಿಗೆ ಅವಳ ಮೇಲೆ ವಿಶ್ವಾಸ ಬರಲು ಮುಖ್ಯ ಕಾರಣವಾಯಿತು. ಆದರೆ ತಪ್ಪಿತಸ್ಥೆಯ ಹಿಂದೆ ಇಡೀ ರಾಜ್ಯದ ಪೊಲೀಸ್ ಸಿಬ್ಬಂದಿ ಕಾರ್ಯಗತವಾಗಿದ್ದರೂ ಅವಳನ್ನು ಬಂಧಿಸಲು ಅಸಮರ್ಥವಾಗಿದ್ದವು. ಇಡೀ ನಾಡಿನಲ್ಲಿ ಅವಳ ಕ್ರೂರತೆಯನ್ನು ತೆಗಳಿ ಅವಳನ್ನು ದ್ವೇಷಿಸುವವರೇ ಹೆಚ್ಚು ಮಂದಿ ಇದ್ದರು. ತಾನು ಶೋಷಿತ ಹೆಣ್ಣು ನಿಜ, ಆದರೂ ತನ್ನನ್ನು ಜನ ದ್ವೇಷಿಸುತ್ತಾರೆ ಎನ್ನುವ ಅರಿವು ಅವಳಿಗಿತ್ತು. ಹಾಗೆಂದ ಮಾತ್ರಕ್ಕೆ ತಲೆಮರೆಸಿಕೊಂಡು ದೇಶ ಬಿಟ್ಟುಹೋಗುವಳೇ? ಜೀವನದಲ್ಲಿ ಸವಾಲುಗಳು ಬರುತ್ತಲೇ ಇರುತ್ತವೆ. ಬಿರುಗಾಳಿ, ಭೂಕಂಪ ಎಲ್ಲ ಆಗುತ್ತಲೇ ಇರುತ್ತವೆ. ಸಾವು ಬಂದರೆ ಶ್ರಮದಿಂದ ಬರುವ ನಿದ್ದೆಯಲ್ಲೇ ಸಾಯುವೆನು ಹೊರತು ಅಂಜುವುದಿಲ್ಲ ಎನ್ನುವ ಸಂಕಲ್ಪ ಅವಳದು. ಸಾವನ್ನು ಬಹಳವೇ ಸಮೀಪದಿಂದ ನೋಡಿದ ಹೆಣ್ಣು ಅವಳು. ಒಂದು ಕ್ಷಣ ಸಾವಿನಿಂದ ಬಚಾವು ಆದಳು ಎನ್ನುವುದರಲ್ಲಿ ಮತ್ತೊಂದು ಕ್ಷಣದಲಿ ಅದು ಜೀವವನ್ನೇ ಕಸಿದುಕೊಳ್ಳಬಹುದು ಎನ್ನುವ ಭಯದಲ್ಲಿ ಇದ್ದದ್ದೇ ಹೆಚ್ಚು. ಈ ಬೆಕ್ಕು ಇಲಿ ಆಟದಲ್ಲಿ ಸೋತಿದ್ದು ಪೊಲೀಸರೇ –ಪ್ರಪಂಚವೇ ಕೌತುಕದಿಂದ ಕಾಯುತ್ತಿದ್ದ ಫೂಲನ್ ದೇವಿಯ ದಸ್ತಗಿರಿಯ ಬದಲು ಅವಳು ತನ್ನದೇ ಷರತ್ತುಗಳನ್ನು ಒಡ್ಡಿ ಕೊನೆಗೆ ನ್ಯಾಯಾಂಗಕ್ಕೆ ಶರಣಾಗತಿ ಆದಳು.
ಹನ್ನೊಂದು ವರ್ಷಗಳ ಕಠಿಣ ಶಿಕ್ಷೆಯ ಪರ್ಯಟನದೊಂದಿಗೆ ಅವಳ ಪುನಃಸ್ಚೇತನದ ಎರಡನೆಯ ಅಧ್ಯಾಯ ಪ್ರಾರಂಭವಾಯಿತು. ಆದರೆ ಅವಳು ಎಂತಹ ಮಹಿಳೆಯೆಂದರೆ, ಯಾರೊಡನೆಯೂ ಸಮಜಾಯಿಷಿ ಮಾಡುತ್ತಿರಲಿಲ್ಲ. ಫೂಲನ್ ದೇವಿ ಒಂದು ಹಸುಳೆಯ ತರಹ, ತನ್ನ ಮೇಲಾದ ಅತ್ಯಾಚಾರವನ್ನು ಅತ್ಯಾಚಾರದ ಘಟನೆಗಳನ್ನು ಕೂಡ ನಗು ನಗುತ್ತಲೇ ಹೇಳಿಬಿಡುತ್ತಿದ್ದಳು. ಕಷ್ಟಗಳನ್ನು ಇಂತ ಸಣ್ಣ ಪುಟ್ಟ ಹಾಸ್ಯ ರೀತಿಯಲ್ಲಿ ನಿಭಾಯಿಸಿಕೊಳ್ಳುವ ಕಲೆಯನ್ನು ಕರಗತಮಾಡಿಕೊಳ್ಳುವುದು ಪುನಃಸ್ಚೇತನದ ಮೊದಲ ಹಂತ. ಜೈಲಿನಲ್ಲಿ ಕುಳಿತು ಇನ್ನೊಬ್ಬ ಹೆಣ್ಣಿನ ಸಹಾಯದಿಂದ ತನ್ನ ಆತ್ಮಕತೆಯನ್ನು ನಿರೂಪಿಸಿ ಅದು ಪುಸ್ತಕವಾಗಿ ಪ್ರಕಟಣೆಗೊಂಡಿದ್ದೂ ಕೂಡ ಅವಳ ಪುನಃಸ್ಚೇತನಕ್ಕೆ ನಾಂದಿಯಾಯಿತು ಎಂದು ಹೇಳಬಹುದು. ಅನಕ್ಷರತೆ ಮತ್ತು ವಿದ್ಯೆಕಲಿಯದ ವಿಷಾದ ಕಾಡಿತಾದರೂ ಮನಸ್ಸಿನಲ್ಲಿ ಹುದುಗಿದ ಭಾವನೆಗಳನ್ನು ನಿಸ್ಸಂಕೋಚವಾಗಿ ಹಂಚಿಕೊಂಡಿದ್ದರಿಂದ ಅವಳ ನ್ಯೂನತೆಗಳಿಗೆ ಚಿಕಿತ್ಸಕ ಮೌಲ್ಯ ದೊರಕಿದಂತಾಯಿತು. ಜೈಲಿನ ನಾಲ್ಕು ಗೋಡೆಗಳ ಮಧ್ಯೆ ಸಕಾರಾತ್ಮಕ ದೃಷ್ಟಿಯಿಂದಲೇ ತನ್ನ ಎದೆಯಮೇಲಿನ ಭಾರ ಕಳೆದುಕೊಂಡದ್ದೂ ಕೂಡ ಸಹಾಯವಾಯಿತು. ನಂತರದ ಹಂತಗಳಲ್ಲಿ ಅವಳು ಜೈಲಿನಿಂದ ಬಿಡುಗಡೆ ಹೊಂದಿ ರಾಜಕೀಯಕ್ಕೆ ಇಳಿಯುವ ಹೊತ್ತಿಗಾಗಲೇ ಬೌದ್ಧ ಮತವನ್ನು ಸ್ವೀಕರಿಸಿದ್ದಳು. ಅವಿದ್ಯಾವಂತೆಯಾದ ಅವಳು ಬೌದ್ಧ ಧರ್ಮವನ್ನು ಸ್ವೀಕರಿಸಲು ಅವಳಿಗೆ ಕಷ್ಟವೇ ಆಗಿರಬೇಕು. ಏಕೆಂದರೆ ಬೌದ್ಧ ಧರ್ಮದ ಖಠಿಣ ಶಿಸ್ತು, ಅದರೊಳಗೆ ಹಾಸುಹೊಕ್ಕಾಗಿರುವ ಅಹಿಂಸೆ, ಶಾಖಾಹಾರಿ ಪದ್ದತಿಗಳನ್ನು ಅರಿತು ಅದರಂತೆ ನಡೆಯಲು ಒಂದಿಷ್ಟಾದರೂ ಅದರ ಬಗ್ಗೆ ಯೋಚಿಸಿರಬೇಕು. ಆ ಹಂತಕ್ಕೆ ಬರಲು ಮೊದಲು ಜ್ಞಾನದೀಕ್ಷೆಯನ್ನೇ ಪಡೆದಿರಬೇಕು. ಶಾರೀರಿಕ, ಮಾನಸಿಕ ಮತ್ತು ಸಮಾಜದಲ್ಲಿ ಆಕೆ ಚಿಕ್ಕ ಹುಡುಗಿಯಾಗಿ ಕಿಶೋರಿಯಾಗಿ ಹೆಣ್ಣಾಗಿ ಅನುಭವಿಸಿದ ಹಿಂಸಾಕೃತ್ಯವನ್ನು ಬೌದ್ಧ ಧರ್ಮದ ಅನುಯಾಯಿ ಆಗಿ ಮರೆಯಲು ಸಾಧ್ಯವಾಯಿತೇ? ಸಾಧ್ಯವಿರಬಹುದು. ಆದರೆ ಬೇರೊಂದು ರೀತಿಯಾಗಿ ವಿಶ್ಲೇಷಿಸಿದಾಗ ಅರಿವಾಗುವುದು ಆಕೆ ಹಿಂದೂ ಸಮಾಜದ ಜಾತಿ ಪದ್ಧತಿಯಲ್ಲಿ ಬೇಸತ್ತಿದ್ದಂತೂ ಕಂಡುಬರುತ್ತದೆ. ಅದರ ಭೀಭತ್ಸ ರೂಪವನ್ನು ಕಣ್ಣಾರೆ ಕಾಣುವುದರ ಜೊತೆಗೆ ಅವಳಿಗೆ ಅನುಭವಕ್ಕೂ ಬಂದಿತ್ತು. ಅಂತಹ ವ್ಯವಸ್ಥೆಯಿಂದ ಹೊರ ಬಂದಾಗಾಲೆ ದಲಿತರ, ಅದಕ್ಕೂ ಹೆಚ್ಚಾಗಿ ಹೆಣ್ಣಿನ ಶೋಷಣೆಯನ್ನು ದೂರ ಮಾಡಲು ಸಾಧ್ಯವೆಂಬ ಅರಿವನ್ನು ತಾನು ಮನಗಂಡಿರಬೇಕು. ಅಥವಾ ಅಂಬೇಡ್ಕರ್ ಅವರ ಈ ರೀತಿಯ ಅನಿಸಿಕೆಗಳನ್ನು ಮನದಟ್ಟು ಮಾಡಿದವರ ಒಡನಾಟ ಇದ್ದಂತೆ ಕಾಣುತ್ತದೆ. ಈ ಎಲ್ಲ ಕಾರಣಗಳಿಂದ ಆಕೆಗೂ ಹಿಂದೂ ಸಮಾಜದಿಂದ ತನನ್ನು ತಾನು ಬೇರ್ಪಡಿಸಿಕೊಂಡು ಶೋಷಿತರನ್ನು ಬೌದ್ಧ ಮತದಲ್ಲಿರುವಂತೆ ಯಾವುದೇ ಜಾತಿ ಭೇದವಿಲ್ಲದೆ ಮುಂದಕ್ಕೆ ತರಬಹುದೆಂಬ ಅರಿವಾಗಿರಬೇಕು. ದೀಕ್ಷಾ ಭೂಮಿ ಎನ್ನುವ ಸ್ಥಳದಲ್ಲಿ ಬೌದ್ಧ ಧರ್ಮವನ್ನು ಸ್ವೀಕರಿಸುವಾಗ ಆಕೆಯನ್ನು “ಕೋಪವಿಲ್ಲದ ಫೂಲನ್ ದೇವಿ, ಮೊದಲ ಬಾರಿಗೆ ಬಂದೂಕವನ್ನು ಹೆಗಲಮೇಲೆ ಏರಿಸದೆ ಮುಗುಳುನಗೆಯಲಿ, ಓರ್ವ ಸಾಮಾಜಿಕ ಮತ್ತು ಸಾಂಸ್ಕೃತಿಕ ನ್ಯಾಯಮೂರ್ತಿಯಾಗಿ, ಮುಖ್ಯಸ್ಥಳಂತೆ ನಿಂತಿದ್ದಳು,” ಎಂದು ವರ್ಣಿಸಿದ್ದವು ಅಂದಿನ ಪತ್ರಿಕೆಗಳು. ಬೌದ್ಧ ಧರ್ಮ ಸ್ವೀಕಾರ ಫೂಲನ್ ದೇವಿಯ ಪುನಃಸ್ಚೇತನದಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದು ಸಂಕ್ಷಿಪ್ತವಾಗಿ ಹೇಳಬಹುದು.
ರಾಜಕೀಯಕ್ಕೆ ಫೂಲನ್ ದೇವಿಯ ಪ್ರವೇಶ ಅವಳ ಸಾಧನೆ ಎಂದು ಹೇಳುವುದು ಕಷ್ಟವೆನಿಸಿದರೂ ಅದು ಅವಳ ಪುನಃಸ್ಚೇತನದ ಪ್ರಕ್ರಿಯೆಯಲ್ಲಿ ಮೂರನೆಯ ಅಧ್ಯಾಯ ಎನ್ನಬಹುದು. “ನಮ್ಮ ದೇಶದಲ್ಲಿ ಬಡವರಿಗೆ ಒಂದು ನ್ಯಾಯ ಶ್ರೀಮಂತರಿಗೆ ಮತ್ತೊಂದು ನ್ಯಾಯ. ದೇಶದಲ್ಲಿ ಪರಿವರ್ತನೆ ಆಗಲೇ ಬೇಕು. ಯಾವ ಜಾತಿಯದೇ ನಾಯಕರಾದರೂ ಎಲ್ಲರೂ ಸೇರಿ ಬಡವರ ಬಗ್ಗೆ ಸಂಘಟನೆ ನೆಡಸಬೇಕು. ಮಹಿಳಿಯೆಯರಿಗೂ ಕೂಡ. ಇಲ್ಲಿಯವರೆಗೂ ಮಹಿಳೆಯರು ಸತ್ಯತೆಯಲ್ಲಿ ದಲಿತರೇ.” ಒಬ್ಬ ರಾಜಕಾರಿಣಿ ಆಗಿ ಇವು ತನ್ನ ಧ್ಯೇಯವೆಂದು ಸಾರಿ ತನ್ನ ಸ್ವಂತ ಪುನಃಸ್ಚೇತನದ ಮಾದರಿಯಲ್ಲೇ ಸಮಾಜವೂ ಕೂಡ ಉನ್ನತ ಗುರಿಮುಟ್ಟಬಹುದು ಎಂದು ನೀತಿ ಬೋಧೆ ಮಾಡಿದಳು. ಆದರೆ ಫೂಲನ್ ದೇವಿಯೇ ತಾನು ಹುಟ್ಟಿಬೆಳೆದ ಚಂಬಲ್ ಕಣಿವೆಯ ಗ್ರಾಮದಲ್ಲಿ ದಲಿತ ಮಹಿಳೆಯರ ಸೇನಾ ಪಡೆ ಎನ್ನುವ ನಾಗರೀಕ ಎಚ್ಚರಿಕೆಯ ತಂಡಗಳನ್ನು ದಲಿತ ಹಳ್ಳಿಯವರೇ ಸ್ಥಾಪಿಸಿಕೊಳ್ಳಲು, ಹೆಣ್ಣುಮಕ್ಕಳಿಗೆ ಬಂದೂಕ ಉಪಯೋಗಿಸುವುದನ್ನು ಕಲಿಸುವ ಕಾರ್ಯಗಾರಗಳನ್ನು ಪ್ರಾರಂಭ ಮಾಡಿದಳು. ಫೂಲನ್ ದೇವಿ ಮುಂದೆ ದಲಿತ ಯುವಕ ಯುವತಿಯರ ಸ್ವಯಂ ರಕ್ಷಣೆಗಾಗಿ ಏಕಲವ್ಯ ಸೇನಾ ಅನ್ನುವ ಪಡೆಯನ್ನೂ ಪ್ರಾರಂಭ ಮಾಡಿದಳು. ಬರಿ ಮಾತಿನಿಂದ ಕೆಲಸ ಸಾಗುವುದಿಲ್ಲ, ಜೊತೆಗೆ ಕಾರ್ಯೋಪಯೋಗಿ ವ್ಯವಸ್ಥೆಗಳನ್ನು ಮಾಡಬೇಕೆಂಬ ತರ್ಕ ಅವಳದು. ಹೆಣ್ಣು ಅಮಾಯಕಳಾಗಿಯೂ ದೌರ್ಜನ್ಯದ ವಿರುದ್ಧ ಅಗತ್ಯವಿದ್ದರೆ ಬಂದೂಕದ ಸಹಾಯ ಪಡೆಯಬಹುದು. ಅದು ಅವಳ ಪುನಃಸ್ಚೇತನ ಜೀವನದ ಪಯಣದಲ್ಲಿ ಕಲಿತ ಪಾಠ. ಶೋಷಣೆ ತಡೆಯಲಾರದೆ ಸಮಾಜವನ್ನೇ ಎದುರುಹಾಕಿಕೊಂಡು ತಪ್ಪು ದಾರಿಹಿಡಿದ ಡಕಾಯಿತರು ಎಲ್ಲಿ ಈಗಲೂ ಇದ್ದಾರೋ ಅವರಿಗೂ ನ್ಯಾಯ ಸಿಗಲಿ, ಅವರೂ ಕೂಡ ತನ್ನಂತೆಯೇ ಶರಣಾಗತರಾಗಲು ನ್ಯಾಯಾಂಗದ ಕ್ರಮಗಳನ್ನೂ ಜಾರಿಗೆ ತರಲು ಸಫಲಳಾದಳು. ಚಂಬಲ್ಲ್ನಲ್ಲಿ ಮಾತ್ರ ಡಕಾಯಿತಿ ನಡೆಯುತ್ತಿದೆ ಅಂದು ಕೊಂಡರೆ ಸಾಲದು. ದಿಲ್ಲಿಯಲ್ಲೂ ಬೇರೆ ಮಾರ್ಗಗಳಿಂದ ಎಲ್ಲಕಡೆ ಲೂಟಿಮಾಡುವರೇ ಇದ್ದಾರೆ. ನಾಗರೀಕ ವರ್ತನೆ ಕೂಡ ಪುನಃಸ್ಚೇತನಗೊಳ್ಳಲಿ ಎನ್ನುವುದು ಅವಳ ಆಶಯವಾಗಿತ್ತು. ಡಕಾಯಿತ ಜೀವನಕ್ಕೆ ವಿರುದ್ಧವಾಗಿ, ದಿನದಲ್ಲಿ ಒಂದುಬಾರಿ ಒಬ್ಬರಿಗೋ ಇಬ್ಬರಿಗೋ ಸಹಾಯ ಮಾಡಿದರೆ ಅದೇ ಸಾರ್ಥಕ ಬದುಕಾಗುತ್ತದೆ ಎನ್ನುವ ದೃಢ ನಂಬಿಕೆಯನ್ನು ಬೆಳಸಿಕೊಂಡಳು. ರಾಜಕೀಯದಲ್ಲಿ ತನ್ನ ಸುತ್ತಮುತ್ತಲು ಆಗುತ್ತಿದ್ದ ಎಷ್ಟೊಂದು ವಿಚಾರಗಳು ಅವಳ ಪ್ರಜ್ಞೆಗೆ ಬರುತ್ತಲೇ ಇರಲಿಲ್ಲ. ಉದಾಹರಣೆಗೆ ಪ್ರಪಂಚದ ಬೇರೆ ಬೇರೆ ದೇಶಗಳ ಪತ್ರಿಕೋದ್ಯಮಿಗಳು ಅವಳ ಬಗ್ಗೆ ಅವರದೇ ಭಾಷೆಯಲ್ಲಿ ಏನು ಬರೆಯುತ್ತಿದರು ಎನ್ನುವುದಾಗಲಿ, ಯಾರು ತನ್ನ ಕಥೆಯನ್ನು ತಿರುಚಿ ತಮ್ಮ ಸ್ವಂತ ಲಾಭಕ್ಕಾಗಿ ಬಳಸುಕೊಳ್ಳುತ್ತಿದರು ಎನ್ನುವ ವಿಚಾರಗಳೆಲ್ಲವೂ ಅವಳ ಗಹನೆಗೆ ಬರುತ್ತಿರಲಿಲ್ಲ. ವಿದೇಶದ ಪುಸ್ತಕ ಮತ್ತು ಹಿಂದಿ ಸಂಚಿಕೆಗಳಲ್ಲಿ ತನ್ನ ಫೋಟೋಗಳು ಮುದ್ರಿತವಾಗುವುದನ್ನು ಕಂಡು ಸಂತೋಷ ಪಡುತ್ತಿದ್ದಳು ಅಷ್ಟೇ. ಅವಳಲ್ಲಿದ್ದ ಪ್ರತೀಕಾರದ ಬದಲು ಮತ್ತೆ ಅಮಾಯಕಳಾಗಿ ಪುನಃಸ್ಚೇತನಗೊಂಡಿದ್ದಳು. ಹಿಂದುಸ್ಥಾನದ ಎಲ್ಲ ಶೋಷಿತ ಜನಾಂಗಕ್ಕೂ ಆಕೆ ತೋರಿಸಿಕೊಟ್ಟದ್ದೆಂದರೆ “ನಾವು ಯಾವಾಗ ಸಂಕಲ್ಪ ಮಾಡುತ್ತೆವೆಯೋ ಆಗ ತಪ್ಪುಗಳನ್ನು ಮತ್ತು ದೌರ್ಜನ್ಯವನ್ನು ಕಸಿದುಕೊಂಡು ಸಮಾಜವನ್ನು ಸತ್ಯದ ನೇರ ದಾರಿಯಲ್ಲಿ ಹೋಗಲು ಅನುವು ಮಾಡಿಕೊಡಬಹುದು.” ಒಂದುವೇಳೆ ಆಕೆಯ ಹತ್ಯೆ ಆಗದಿದ್ದರೆ, ಇಂದಿಗೂ ಜೀವಿತವಾಗಿದ್ದರೆ ಬಹುಶಃ ತನ್ನ ಸಮುದಾಯದ ಅತಿ ದೊಡ್ಡ ಪುನಃಸ್ಚೇತನಗೊಂಡ ಪ್ರತಿನಿಧಿ ಆಗುತ್ತಿದ್ದಳು. ಅವಳು ಈಗ ನಮ್ಮ ಜೊತೆ ಇಲ್ಲದಿರಬಹುದು, ಆದರೆ ಅವಳು ನಂಬಿದ ವ್ಯಕ್ತಿಯೇ ಅವಳನ್ನು ಗುಂಡಿಟ್ಟು ಕೊಲ್ಲುವುದು ಅವಳ ದುರ್ಭಾಗ್ಯವೋ ಅಥವಾ ನಮ್ಮ ಸಮಾಜದ ಅನೀತಿಯೋ ಎಂದು ಗೊತ್ತಿಲ್ಲ.
ಮುಕ್ತಾಯ:
ಫೂಲನ್ ದೇವಿ ಹಂತ ಹಂತವಾಗಿ ನಿರ್ಧಿಷ್ಟ ದಿಕ್ಕಿನಲ್ಲಿ ಚಲಿಸಿ, ಶೋಷಿತ ಹೆಣ್ಣಿನ ಸ್ಥಾನದಿಂದ ಸಮಾಜದ ಉನ್ನತ ಸ್ಥಾನ ಪಡೆದ ಕಥೆ ರೋಚಕ. ಇದರಲ್ಲಿ ಪುನಃಸ್ಚೇತನ ಒಂದು ಪ್ರಭಾವಿ ಪ್ರಕ್ರಿಯೆ ಮತ್ತು ಸಾಧನ. ಎಲ್ಲ ಶೋಷಿತರಿಗೂ ಆ ಪ್ರಕ್ರಿಯೆಯ ಬಗ್ಗೆ ಒಂದೇ ರೀತಿಯ ಹತೋಟಿ ಇರಲು ಸಾಧ್ಯವಿಲ್ಲ. ಈ ಪುಟಿದೇಳುವ ಪ್ರಕ್ರಿಯೆಯಿಂದಲೇ ಸಮುದಾಯದ ಜನಪದದಲ್ಲಿ “ದೇವಿ” ಎಂದು ಬಿರುದು ಪಡೆದದ್ದು ಫೂಲನ್ ದೇವಿಯ ಆತ್ಮ ಸಾಧನೆ. ಆದರೆ ತನ್ನ ಮೇಲೆ ಅತ್ಯಾಚಾರ ಮಾಡಿದ ದುಷ್ಕರ್ಮಿಗಳ ಮೇಲಿನ ಪ್ರತೀಕಾರವೇ ಅವಳನ್ನು ಹೊರಗಿನ ಪ್ರಪಂಚಕ್ಕೆ ಕುಖ್ಯಾತಳನ್ನಾಗಿ ಪರಿಚಯ ಮಾಡಿಕೊಟ್ಟಿದ್ದು, ಶೋಷಿತ ದಲಿತ ಹೆಣ್ಣು ಮೇಲ್ಜಾತಿಯ ಪುರುಷರನ್ನು ಸಾಲಾಗಿ ನಿಲ್ಲಿಸಿ ಬಂದೂಕಿನಿಂದ ಕೊಂದದ್ದು ಕೆಲವರಿಗೆ ಕ್ರೌರ್ಯ ಮತ್ತೆ ಕೆಲವರಿಗೆ ನ್ಯಾಯಸಮ್ಮತ. ತನ್ನ ಕ್ರೌರ್ಯದಿಂದ ಠಾಕೂರ ಸ್ತ್ರೀಯರೇ ಶೋಷಿತರಾದಾಗ ಅವಳ ವಿವೇಚನೆಗೆ ಸಮರ್ಥನೆ ಇದೆಯೇ? ಸರಿ ತಪ್ಪಿನ ಸವಾಲುಗಳನ್ನು ಅವಲೋಕನೆ ಮಾಡಲು ಈ ಲೇಖನ ನಿಷ್ಪಕ್ಷಪಾತದಲ್ಲಿ ಫೂಲನ್ ದೇವಿಯ ವ್ಯಯಕ್ತಿಕ ವ್ಯಕ್ತಿಚಿತ್ರಣ ನೀಡಿದೆ. ಈ ಚಿತ್ರಣದಲ್ಲಿ ಮೇಲ್ನೋಟಕ್ಕೆ ಅವಳು ಅಮಾಯಕ ಮತ್ತು ಕ್ರೂರತನದ ದ್ವಂದ್ವದಲ್ಲಿ ಸಿಲುಕಿದ್ದರೂ, ಕೊನೆಗೆ ಕಂಬಳಿಹುಳ ಚಿಟ್ಟೆ ಆಗುವ ರೀತಿಯಲ್ಲಿ ರೂಪಾಂತರಗೊಂಡು ಸಮಾಜದ ಉಪಯುಕ್ತ ವ್ಯಕ್ತಿ ಆಗುತ್ತಾಳೆ. ಈ ಪರ್ಯಟನೆಯ ಅನ್ವೇಷಣೆಯಲ್ಲಿ ಮುಖ್ಯವಾಗಿ ವ್ಯಕ್ತವಾಗುವುದು ಅವಳ ಕಷ್ಟಸಹಿಷ್ಣುತೆ, ದೃಢತೆ ಮತ್ತು ತನ್ನಲ್ಲಿ ಕಾರ್ಯತತ್ಪರತೆಗೆ ಇರದ ಗುಣಗಳನ್ನು ತನ್ನೊಡನೆ ಸ್ಪಂದಿಸುವವರ ಸಹಾಯ ಯಾಚಿಸಿ ಕಾರ್ಯ ಸಾಧಿಸುವ ಛಲ. ಇದರಲ್ಲಿ ಪುರುಷರ ಮತ್ತು ಸಮಾಜದ ಬೆಂಬಲಕ್ಕೆ ಶರಣು ಹೋಗಿದ್ದಲ್ಲದೆ ಧಾರ್ಮಿಕ ಪರಿವರ್ತನೆಯ ಮೂಲಕ ಹಿಂದಿನ ಪ್ರತೀಕಾರ ಮನೋವೃತ್ತಿಯನ್ನು ಸಕಾರಾತ್ಮಕವಾಗಿ ಬದಲಾಯಿಸಿಕೊಳ್ಳಲು ಫೂಲನ್ ದೇವಿಗೆ ಸಾಧ್ಯವಾಯಿತು.
Reference:
The Bandit Queen of India : An Indian Woman's Amazing Journey from Peasant to International Legend, by Phoolan Devi 2003 Internet Archive
Gestures of Cultural Justice: Narrative Justice for Phoolan Devi in Epic Recounting February 2022 Economic and Political Weekly 57(9)
Devi, Phoolan (1996). Cuny, Marie-Therese; Rambali, Paul (eds.). I, Phoolan Devi: The autobiography of India's bandit queen. London: Little, Brown and Company. ISBN 0-316-87960-6.
India's Bandit Queen : the True Story of Phoolan Devi, by Sen, Mala.
Outlaw : India's Bandit Queen and Me, by Moxham, Roy, 2010.
"From Heroic Durga to the Next Victim of an Oppressive Patriarchal Indian Culture: Too Many Variants of Phoolan Devi's Biography". Cracow Indological Studies. 20 (2): 257–280. doi:10.12797/CIS.20.2018.02.12. S2CID 165523279.
Several YouTube and Internet Media interviews with Phoolan Devi
“Bandit Queen,” Hindi Film directed by Shekar Kapoor.
________________________
-ರವಿ ಗೋಪಾಲರಾವ್, ಸ್ಯಾನ್ ಹೋಸೆ, ಕ್ಯಾಲಿಫೋರ್ನಿಯ
ಅಲ್ಲ್ರೀ ಪಾಟೀಲ್ ಸಾಹೇಬ್ರ, ಹತ್ತೊಂಬತ್ತನೂರ್ ತೊಂಬತ್ತರದಶಕದಾಗ ನಮ್ಮ್ಕನ್ನಡ್ಕೂಟ ಹೆಂಗಿತ್ರಿ ಅಂತ್ ನೀವ್ ಕೇಳೀರಿ. ನಾ ನಿಮ್ಮನ್ಭೇಟಿಯಾದದ್ದು ೯೩ರಲ್ಲ್ವೇನ್ರಿ, ಪಾಟೀಲ್ರ. ಅಂದರ ಮೂವತ್ತ್ವರ್ಷದ್ ಹಿಂದಾಯ್ತಲ್ರಿ. ಸನ್ನಿವೇಲ್ ದೇವಸ್ಥಾನ್ದಾಗ ಕೂಟದ ಗಣೇಶ್ಪೂಜೆಯ್ಯಾಗ್ ನಿಂತ್ ನನ್ನಹಾಂಗಾ ನೀವೂ ತೀರ್ಥ ಕುಡಿಲಿಕ್ಕ ತ್ರಾಸ್ ಬೀಳ್ತಿದ್ರಿ, ಯಾಕಂದ್ರ ನಮ್ಮಿಬ್ಬರ ಭುಜದ್ಮ್ಯಾಲಿದ್ ಕೂಸುಗಳು ಜಪ್ಪಯ್ಯಂದ್ರೂ ಕೆಳಗಿಳೀಲಿಲ್ಲ. ಒಂದಾಕೈಯ್ಯಾಗ ತೀರ್ಥ್ಕುಡಿದಿದ್ದ್ ನೆಪ್ ಬಂತೇನ್ರೀ? ಆದಿವಸ್ಪೂಜೆ ಮಾಡಿಸ್ದೂರು ಶ್ರೀ ಹರಿಹರೇಶ್ವರ ಮತ್ತ್ ನಾಗಲಕ್ಷ್ಮಿ ದಂಪತಿಗಳನ್ನ್ ನಾವ್ ಹೆಂಗಾಮರೆಯೋದ್ ನೀವೇ ಹೇಳ್ರಲ. ನಮ್ಮಂತ್ ಹೊಸಬ್ರ ಜೊತೆಯಾಗ್ ಅದೆಷ್ಟ್ ಸುಲಭದಾಗ್ ಸ್ನೇಹಬೆಳಸಿಬಿಡ್ತಿದ್ರೀ ಆ ದಂಪತಿಗಳ್, ನನಗಾ ಈಗ್ಲೂ ಅವರಮನೀಗ್ಹೋಗಿ ಚಲೋ ನಾಷ್ಟಾಮ್ಮಾಡಿದ್ದ್ ನೆನಪಿಸ್ಕೊತಿರ್ತೀನ್ರಿ. ಅವರಹಾಂಗಾ ನಂಗೂ ಕೂಟದ್ಹೊಸ ಮಂದಿಯೋರ್ನ ಪರಿಚಯ ಮಾಡ್ಕೊಳ್ಳಿಕ್ಕ ಆಸೆರ್ರಿ, ಆದ್ರ ಈಗಿನ್ ಸದಸ್ಸ್ಯಾರನ್ನ್ ನೀವ್ನೋಡಿಲ್ರಿ, ತೊಂಬತ್ತರಾಗ ಅವ್ರು ಹುಟ್ಟ್ಯಾರೋ ಇಲ್ಲೋ ಅಂತ ನನಗಂತೂ ಸಂದೇಹ ಬರ್ತಾದ್ರಿ. ನೀವ್ ಆಗ್ಲಾ ಮುತ್ಯಾಗೀರೀ, ಆದ್ರ ಈಗಿನ್ ಅನಿವಾಸಿಗಳ್ ನಮಗಿಂತ್ ಭಾಳ್ ಶಾಣ್ಯಾ ಇದಾರ್ರಿ. ಕೈಯಾಗ ಸದಾ ಟೆಲಿಫೋನ್, ಡಿಜಿಟಲ್ ವಾಚ್, ಅಷ್ಟೆಅಲ್ರಿ ಇಡೀ ಮನ್ಯಾಗ ಅಂಗಳದೊಂದ್ ಕ್ಯಾಮರಾ, ಹಿತ್ತ್ಲಾಗೊಂದ್ ಕ್ಯಾಮರಾ, ಅದೇನೋ ದ್ರೋಣಾಂತ ಆಕಾಶದ್ಮ್ಯಾಲಿಂದ್ ಮತ್ತೊಂದ್, ಹಿಂಗಾ ಎಲ್ಲಾ ಕಡಿ ಫೋಟೋ ತೆಗೀತಿರ್ತಾರ್ರ. ಅದೊಂದ್ ಕಾಲಿತ್ತ್ರಿ ಒಂದು ಸ್ಟೇಜ್ ಮ್ಯಾಲ್ನ್ಯಾಗ ಫೋಟೋ ತೆಗೀಬೇಕಂದ್ರಾ, ಅದೇರ್ರಿ ನೇಪ್ಬರ್ತಿಲ್ಲಾ, ಅದೇನೋ ಫಿಲಂ ರೋಲ್ ಅಂತ ಅದನ್ನ ಕತ್ತಲ್ನ್ಯಾಗ ಕ್ಯಾಮರ ಒಳಗ್ಹಾಕಿ ಕೂಡ್ಲೇ ಅದರ ಬಾಗ್ಲ್ನಮುಚ್ಚಿ ಹೆಗಲ್ಮೇಲ್ ಕ್ಯಾಮರ ಹೇರಿಸ್ಕೊಂಡ್ ಹೊರ್ಟ್ರಾಂದರ ನೀವೇರ್ರಿ ಹೀರೊ. ಜನಗಳ್ಮುಂದ ಶೋಕಿಯಾಗಿ ತೆಗೆದ ಆ ರೋಲ್ನ ಮತ್ತೆ ಫೋಟೋ ದುಖಾನ್ಗೆ ಕೊಟ್ಮ್ಯಾಗ್ ಅಂವಾ ಅದೇನೋ ಕತ್ಲಾಗ ಅದಕ್ಕ್ ಜಲಕಮಾಡ್ಸಿ ಪ್ರಿಂಟ್ ನಂಕೈಸೇರಲಿಕ್ಕ ಏನಿಲ್ಲಾಂದ್ರ ಒಂದು ಹಫ್ತೆ ಬೇಕಾಗ್ತಿತ್ತ್ರಿ. ನಮ್ಮುಖ ನೋಡ್ಕೊಳ್ಳಿಕ್ಕ ಅಷ್ಟು ದಿವಸ್ ಕಾಯ್ಬೇಕಿತ್ರಿ ಅಂತ ನೀವ್ ನಮ್ ನವಪೀಳಿಗ್ಹೇಳಿಯಾರ್ರೀ ಅಂದ್ರ್ ಅವರ್ ನಗಲಿಕ್ಕಿಲ್ವೇನ್ರಿ? ಹುಷ್, ಕಪ್ಪು ಬಿಳುಪು ಚಿತ್ರ ಕೂಡ ತೆಗಿತಿದ್ವ್ರಿ ಅಂತ ಅವರಿಗ್ಹೇಳ್ಬೇಡ್ರಿ, ಪಾಟೀಲ್ರ, ಮತ್ತ್ನಕ್ಕಾರ್ರು.
ಕೂಟದ್ಮಂದಿಯರ್ನ ಕಾರ್ಯಕ್ರಮಕ್ಕ್ಬರ್ರಿ ಅಂತ ಹೇಳೋಕಾ ಫೋನ್ ಸಂಖ್ಯಾನ “ಗುಮಾಯಿಸಿ ಗುಮಾಯಿಸಿ” ಕರೆಹಚ್ಚಿ ನಂತರ ಗಪ್ಪೆ ಮಾತಾಡ್ಲಿಕ್ಕ್ ಚಲೋಯಿತ್ರಿ. ಆಗ್ ಅದೇನೋ ಮಿಂಚಂಚೆ, ಯಾಹೂ, ಮೈಕ್ರೋಸಾಫ್ಟ್ ಅಂತ್ರಿ ಹೀಂಗಾ ಎಲ್ಲಾಕಡೀ ಸುದ್ದಿಮಾಡ್ಲಿಕ್ಕ್ಹತ್ತಿದ್ವ್ರಿ. ಗೂಗಲ್ ಹೆಸರೂ ಕೇಳ್ದಾಂಗಿಲ್ರಿ. ನಾವ್ಕೂಡೆ ಒಂದು ಕೈನೋಡ್ಬಿಡುವಾಂತ ಆಫೀಸ್ನಾಗ, ವಿಶ್ವವಿದ್ಯಾಲಯ್ದಾಗ್ ಎಲ್ಲಿದ್ರಲ್ಲಿ ಕುಂತು ಮುಚ್ಚುಮರೀ ಮಾಡಿ ಒಂದ್ ಖಬರ್ ಟೈಪ್ಮಾಡಿ “ಸೆಂಡ್” ಅಂತ್ ಕಳಿಸ್ಲಿಕ್ಕ್ ಕಲ್ತಿದ್ ನೆಪ್ ಇದಾರಿ. ನೋಡ್ರಿ, ನಾವ್ ಕನ್ನಡ್ಕೂಟ ಬೆಳಿಸಿರೋದ್ಹಾ ಹೀಂಗಾಂತ ಹೇಳೊಕಾ ನಮಗ್ ಖುಷಿಕೊಡ್ತಾದ್ರಿ, ಹಂಗಾ ಅಂವಾ ಅಮೆರಿಕಾದ್ ಅಧ್ಯಕ್ಷ ಬಿಲ್ ಕ್ಲಿಂಟನ್ ಜೊತಿ ಉಪಾಧ್ಯಕ್ಷ ಇದ್ನಲ್ಲ ಅಂವಾ ಹೇಳ್ದಂಗಾ ನಮ್ ಸಿಲಿಕಾನ್ಕಣಿವೆಯಾಗ ಇಂಟರ್ನೆಟ್, ಸಾಫ್ಟ್ವೇರ್ ಕೂಡ ನಾವ್ರಿ ಕಂಡುಹಿಡಿದ್ದಂತಾ ಜಂಬ್ಕೂಡಐತ್ರಿ ನಮಗ. ನೀವ್ ಕೇಳಿರೋಇಲ್ಗೊತ್ತಿಲ್ಲ ನಮ್ಮ್ಕನ್ನಡ್ಕೂಟದ ಬಿವಿ ಜಗದೀಶ್ ಆಗಿನ್ಕಾಲ್ದಾಗ ದೊಡ್ಡ್ ಸ್ಟಾರ್ಟಪ್ ಆರಂಭ್ಮಾಡಿ ನೂರಾರು ಹೈಕಳಿಗೆ, ಅಲ್ರಿ, ಹೈ ಟೆಕಿಗಳಿಗೆ ಕೆಲ್ಸಕೊಟ್ರೂಅಂತ ಹೇಳ್ಲಿಕ್ಕ್ ಖುಷಿಯಾಗ್ತದ್ರಿ. ಯುಗಾದಿ, ಗಣೇಶ್ಪೂಜಾ, ದೀಪಾವಳಿ ಅಂತ ಕಾರ್ಯಕ್ರಮದಾಗ ನಾವೆಲ್ಲ ಭೇಟಿಯಾತೂಅಂದ್ರ ನೀವೆಲ್ಕೆಲಸ ಮಾಡೀರಿ ಅಂತ ನೀವ್ ಕೇಳಿರೋ ಮುಗಿತ್ರಿ, ಹೋಟೆಲ್ನ್ಯಾಗ ಮಾಣಿ ‘ದೋಸೆ, ಇಡ್ಲಿ, ಪೂರಿ ಸಾಗು, ವಡೆ ಸಾಂಬಾರ್” ಅಂತ ನಿಲ್ಲಿಸ್ದಾಂಗ ಹೇಳ್ತಾನಲ್ರಿ ಹಾಂಗಾನೆ ಆಪಲ್, ಆರಕಲ್, ಯಾಹೂ, ಎಚ್.ಪಿ, ಅಂತ ನೂರಾರು ಕಂಪನಿ ಹೆಸರು ಕೇಳಿಸ್ತಿತ್ರಿ. ಹೋಟೆಲ್ ಅಂದ್ ಮ್ಯಾಗ ನೆಪ್ ಬಂತ್ರಿ, ಕೂಟದ ಊಟ ಅಂದ್ರ ಆಗೆಲ್ಲ ಬಾಯಾಗ್ ನೀರ್ಬರಿಸೋ ಮೈಸೂರ್ಪಾಕ್, ಜಾಮೂನ್ ಇತ್ಯಾದಿ ಜೊತಿ ಬಿಸಿಬೇಳೆಬಾತ್, ಮೊಸರನ್ನ, ಪಲಾವ್, ಚಪಾತಿ ಹೀಂಗಾ ಹೇಳ್ಲಿಕ್ಕ್ಹೋದ್ರಾ ಪಟ್ಟಿ ಮುಗಿಯೋದಿಲ್ರಿ. ಊಟಕ್ಕ್ ಬೀಡ್ ಆದ್ರ ಆಡಿಟೋರಿಯಂ ಒಳಗ ಕೂಡ್ಲಿಕ್ಕೂ ಜಾಗಸಿಗ್ತಿರಲಿಲ್ರಿ, ಹಿಂದ್ನಿಂತು ಚಪ್ಪಾಳಿ ಹೊಡೆಯೋದು, ಶಿಳ್ಳಿಹಾಕಾದು ಅಂದ್ರ್ ಅದೇನು ಖುಷಿ ಅಂತೀರ್ರೀ! ಛಲೋ ಕಾರ್ಯಕ್ರಮಗಳಲ್ಲಿ ನೃತ್ಯ, ನಾಟಕ, ಸಂಗೀತ ಹೀಂಗಾ ದೋಫರ್ ನಾಲ್ಕ್ ಗಂಟಿಗ್ ಶುರುವಾತ್ ಅಂದ್ರ ಎಲ್ಲಾ ಕಾರ್ಯಕ್ರಮ ಮುಗಿಯೋ ವೇಳಿ ಪೌನೆ ಒಂಬತ್ತು, ಹತ್ತ್ ಘಂಟಿ ಆಗ್ತಿತ್ತ್ರಿ. ನನಗ್ ಭಾಳ್ ಇಷ್ಟ್ಆದ್ ಕಾರ್ಯಕ್ರಮವೊಂದ್ ಅಂದ್ರ ಒಂದ್ಬಾರಿ ನಾವ್ ಧಾರ್ವಾಡ್ಕಡೀ ಮಂದಿಯಲ್ಲ ಸೇರಿ ರಸ್ತೆ ನಾಟಕ ಮಾಡೀವ್ರಿ. ವೇದಿಕೆಯಾಮ್ಯಾಲೆ ನಾಟಕ ಮಾಡ್ಲಿಕ್ಕಿಂತ ರಸ್ತೆಯಾಗ ನಿಂತು ಅಭಿನಯಸುದೂನ್ದ್ರ ಅದೇನ್ ಚಲೋ ಇತ್ತಂದ್ರ, ನಾ ನಮ್ಮೂರಾಗ್ಕೂಡ್ ನೋಡಿರಲಿಲ್ರಿ. ಅದಕ್ಕಾ ನಾ ಹೇಳೋದು ನಮ್ಮ್ಕನ್ನಡ್ಕೂಟದಾಗ್ ಇರೋ ಪ್ರತಿಭೆಆಂದ್ರಾ ನೀವ್ ಎಲ್ಲ್ಕಡಿ ಹುಡ್ಕಿದ್ರೂ ಸಿಗಲಿಕ್ಕಿಲ್ಲಾಂತ್ ನನಗ್ ಖಾತ್ರಿಯಾಗದ. ನನಗ್ ಮತ್ತೊಂದ್ಬಾರಿ ಇಷ್ಟಾದ್ ಹಾಡಾನ್ದ್ರ, ಜಯ ಭಾರತ ತನುಜಾತೆ ಅಂತ ಕುವೆಂಪುಅವ್ರ ಕವನ್ಅದಾರಲ್ರಿ ಅದನ್ನ ಆಡಿಟೋರಿಯುಮನಾಗ್ ಸೇರಿದ್ದ ಮಂದಿಯೆಲ್ಲಾ ಜೊತೆಗೂಡಿ ಒಂದಾಸಮ ಹಾಡಿದ್ದು ಭಾಳ್ ಛಲೊಇತ್ರಿ. ನಾ ಬಾತ್ರೂಮ್ನ್ನಾಗ್ ಹಾಡೋಕ್ಕೂ ಹೆದ್ರಕೋಳಾವ್ವ ಅಂದ್ ಜೋರಾಗ್ ಹಾಡಿದ್ದ್ ಕೇಳಿ ನನ್ನಾಕಿಗ್ಕೂಡ ಅಚ್ಚರಿಯಾಗಿತ್ರೀ. ನೀವ್ ಅದೇನ್ ಕನ್ನಡತನಂತೀರೊ ಅದರ್ ಪ್ರಭಾವ ನಮ್ಮ್ಯಾಗ್ ಬೀರೋವಷ್ಟು ಶಕ್ತಿ ನಮ್ಮ್ಕನ್ನಡ್ಕೂಟಕ್ಕ್ ಬಿಟ್ಟ್ ಇನ್ಯಾವ್ ಸಂಸ್ಥೆಗಿಲ್ರಿ. ಆದ್ರ ಒಂದ್ಬಾರಿ ಕೂಟದ್ಮ್ಯಾಲ ಭಾಳ್ ಕೋಪಬಂದಿತ್ರಿ, ಯಾಕಂತೀರಾ? ಡಿಸಂಬರ್ ೩೧ರ ರಾತ್ರಿ ಹೊಸವರ್ಷ ಸನ್ನಿವೇಲ್ ದೇವಸ್ಥಾನದಾಗ ಕಾರ್ಯಕ್ರಮಮಾಡ್ಲಿಕ್ಹತ್ತೀವಿ ನೀವೂ ಬರ್ರಿಅಂತ ಎಲ್ಲ ಸದಸ್ಸ್ಯಾರ್ಗ ಆಹ್ವಾನ ಬಂದಿತ್ತ್ರಿ, ನಮ್ಮ್ ಕೂಟದ್ ಅಧ್ಯಕ್ಷರಿಂದ. ಮುನ್ನೂರಕ್ಕೂ ಹೆಚ್ಚ್ ಸಂಸಾರಸ್ತ್ ಮಂದಿ ಬಂದಿದ್ರ. ಆದ್ರ ಅಸಂಪ್ರದ್ದಾಯಿಕ್ ಘಟನಾ ಅಂದ್ರ ಅಂವಾ ಅಂದ್ ರಾತ್ರಿ ಹನ್ನೆರ್ಡ್ಗಂಟೆಯಾಗ ವೈನು, ಬೀಯರ್, ವಾಡ್ಕ ಅಂತ ಎಲ್ಲರಿಗೂ ಕುಡೀಲಕ್ಕ್ ಸರಬರಾಜಮಾಡ್ಲಿಕ್ಕ್ ಹತ್ಯಾನ. ಅಲ್ರಿ ನಮ್ ದೇವಸ್ಥಾನದ ಆಡಿಟೋರಿಯಂನಾಗ ಯಾರಾದ್ರ ಹಂಗ್ಮಾಡಾದ್ ಕೇಳೀರಿ ನೀವು? ಮಾರ್ನ್ಯಾದಿವ್ಸ್ ಕೂಟದ್ ಸಮಿತಿಯಲ್ಲಿದ್ದವರೆಲ್ಲರಿಗೂ ಕಪಾಳಮೋಕ್ಷಾಗೊಂದು ಬಾಕಿಇತ್ರಿ, ಆದ್ರ ಅಷ್ಟು ಬೈಗುಳ ಬಿತ್ರಿ ಅವರ್ಗ. ಅದೊಂದು ಘಟನೆಯಾ ಬಿಟ್ಟ್ರಾ, ನಾ ಮೂವತ್ತವರ್ಷದಾಗ್ ನೂರಾರ್ ಕಾರ್ಯಕ್ರಮನಾ ನೋಡೀನ್ರಿ, ಎಲ್ಲ್ ಚಂದಿರ್ತಾದ್ರಿ. ತಪ್ಪನ್ನತಿದ್ಕೊಂಡ್ ಮುಂದಾಹೋಗುದ್ಕೂಡ ಕಲಿತರೆ ಸಂಸ್ಥೆ ಬೆಳಿತಾದ ಅಂತ್ ನಮಗ್ ತಿಳಿಹೇಳ್ದವರು ನಮ್ಮ್ ರವಿ ರವೀಂದ್ರನಾಥ್, ಜಿ.ಎಸ್. ಸತ್ಯ, ತಿರು ನಾರಾಯಣ್ ಐಯಂಗಾರ್, ಈ ಹಿರಿಯರಿಗೆಲ್ಲಾ ಸಂಸ್ಥೆ ಚಿರಋಣಿಯಾಗಾದ್ರಿ.
ಕೂಟದ್ ಇಪ್ಪತೈದ್ವರ್ಷ, ಅಂದ್ರ ಬೆಳ್ಳಿ ಹುಟ್ಟಹಬ್ಬಾದಾ ಎರಡು ದಿವಸ್ ಕಾರ್ಯಕ್ರಮ ನೋಡ್ಲಿಕ್ಕ್ ಎರಡು ಕಣ್ಣುಸಾಲಾದಾತ್ರೀ. ಒಂದಾದ್ ನಂತರ ಮತ್ತೊಂದು ನಮ್ಮೂರ್ ಶಾಣ್ಯಾ ಮಕ್ಕಳಿಂದ್ ಹಿಡಿದ್ ಮುತ್ಯಾ ಮಂದೀವರ್ಗೆ ಎಲ್ರೂ ಕಾರ್ಯಕ್ರಮ್ದಾಗ್ ಅಂದು ಭಾಗವಹಿಸ್ದ್ರಾ. ನಮ್ಮ್ ಕರ್ನಾಟಕ್ದಿನ್ದ ರಗಡ್ ಗಣ್ಯರನ್ನ್ ಕರೆಸಿ ಅವರಾ ಕೈಯಾಗ ಸಂಗೀತ, ನಾಟಕ, ಸಾಹಿತ್ಯ, ಭಾವಗೀತ, ಜಾದೂ ಷೋ, ಹೀಂಗಾ ಹತ್ತಾರು ಕಾರ್ಯಕ್ರಮ ಕೊಟ್ಟಾರ್ರಿ ಅವರೆಲ್ಲ. ಸಾಹಿತಿ ಯು. ಆರ್. ಅನಂತಮೂರ್ತಿ ಅವರ್ಕೂಡ್ ನಮ್ಮ್ ಸದಸ್ಸ್ಯಾರ್ಜೊತಿ ಭಾಳ್ ಸಂತೋಷದಾಗ್ ಸಮಯಕಳೆದಾರ್ರಿ ಅಂದು, ಬಿಗುಮಾನಿಲ್ದಾ ಅಂತ್ಯಾಕ್ಷರಿ ಕಾರ್ಯಕ್ರಮದಾಗ ಹಾಡ್ಹೇಳಿದ್ದು ಚಂದಿತ್ರಿ. ಆ ಎರಡ್ ದಿವಸಾದ್ ನೆನಪ್ ಬಗ್ಗೆ ಬರೀಲಿಕ್ಕ್ ಬಾಳ್ ಸಮಯ್ಬೇಕಾತದ್ರಿ ಅದಕ್ಕ್ ನೀವ್ ಒಂದು ಕೆಲ್ಸ್ಮಾಡ್ರಲ್ಲ, ನಿಮ್ಮ್ ಮನಿಯಾಗ ಪುಸ್ತಕದ್ಲಮಾರ್ ಇದ್ರ ಅದರಾಗ್ಹುಡುಕಿ ಬೆಳ್ಳಿ ಹಬ್ಬದೊಂದ್ ಸಂಚಿಕೆ ಸಿಗ್ತಾದ, ಹಂಗಾ ಅದ್ರಪುಟ್ಗಳನ್ನ್ ನೋಡ್ರಿ. ಈಗಿನಾಂಗ ಬಣ್ಣದ್ ಪುಟಗಳಿಲದ್ರಾಗ ಆದ್ರ ಆಗಿನ್ ಕಪ್ಪುಬಿಳುಪ್ ಚಿತ್ರ ನಿಮ್ಮನ್ ಆ ಕಾಲಕ್ಕವೈತದ. ನಿಮಗ್ಹೇಳಾದ್ ಮರೆತೇ; ನಮ್ಮ್ಕನ್ನಡ್ಕೂಟದ್ ಭಾಳ್ ಮಂದಿ ತೊಂಬತ್ತರ ದಶಕದಾಗ್ ಬಿಡುಗಡೆಯಾದ್ಚಿತ್ರ ‘ಅಮೇರಿಕ ಅಮೆರಿಕ’ದಾಗ ನಟಿಸಿಯಾರ್ರ, ಜೊತಿಗಿ ಕಥೀಬರೀಲಿಕ್ಕ್ ಕೂಡ್ ಸಹಾಯ್ಮಾಡಾರ್ರ. ನಾ ಮೊದಿಲೀಹೇಳ್ದಾಂಗ ಪ್ರತಿಭೆಗೆ ಅಭಾವಿಲ್ರಿ ನಮ್ಮ್ ಸಿಲಿಕಾನ್ಕಣಿವೆಯಾಗ. ರೊಕ್ಕಕ್ಕೂ ಅಭಾವಿರಲಿಲ್ರಿ ಆಗ, ಈಗ್ಲೂಹಂಗಾರ್ರೀ, ನಮ್ಮ್ಕನ್ನಡ್ಕೂಟದ್ ಮಂದಿ ದಾನಮಾಡ್ಲಿಕ್ಕ್ ಎತ್ತಿದ್ಕೈರ್ರಿ. ಆಗ್ ನಮ್ಮ್ ಖಜಾನೆಯಾಗ್ ಹತ್ತು ಸಾವಿರ ಡಾಲರ್ ರೋಕ್ಕ್ಬಂದ್ರ ಅದ್ರಾಗ್ ಕೂಡ ಕರ್ನಾಟ್ಕದಾಗಿರೋ ಬಡಬಗ್ಗರ ಸಂಸ್ಥೆಗಳಿಗ್ ದಾನ ಮಾಡೊದಲ್ದೆ ಸ್ವಯಂಸೇವಕರಾಗಿ ಬಹಳಸಹಾಯ್ ಮಾಡ್ತಾರ್ರೀ ನಮ್ಮ್ ಸಹೃದಯಿ ಕನ್ನಡಿಗರು. ಅದಾ ಕಾರಣಕ್ಕಿರಬೇಕ್ರಿ ಆಗ್ ಚಾಲೂ ಆದ ಹತ್ತಾರ್ ಸೇವಾ ಸಂಸ್ಥೆಗಳ್ ಈಗ್ಲೂ ಹೆಸರ್ಮಾಡಾವಾ. ಆಗ್ ಮುನ್ನೂರ್ನಾನೂರ್ ಕನ್ನಡಿಗರಿದ್ರಾ ಈಗ್ ಬರೋಬರಿ ಡೇಡ್ ಹಜಾರ್ ಮಂದಿಯಿದಾರ್ರಿ, ಹಾಂಗಾ ನಮ್ಮ್ ಖಜಾನೆಯಾಗ್ ರೊಕ್ಕೂಡ ಐನೂರಸಾವಿರ ಮುಟ್ಟಾದ. ಅಂದ್ರ, ಅಡ್ಕಿಮರಿ ಹಾಂಗಾ ಸಪೂರಿದ್ದ್ ನಮ್ಮ್ಕನ್ನಡ್ಕೂಟ ಈಗ್ ನೋಡ್ರಲ್ಲಾ ಅರಳೀಮರದಾಂಗ ಇಡೀ ಸಿಲಿಕಾನ್ಕಣಿವೆಯಾಗ ಬೆಳೆದ್ನಿಂತದ. ಟಿಸಿಲು ಮತ್ತ್ ಬೇರು ಅಗಾಧವಾಗ್ಬೆಳದಾದ, ಅದರಾಗ ನಮ್ಮ್ನಿಮ್ಮ್ ಬೆವರು ಬೆರತಾದ ಅಂತ್ ಹೇಳ್ಲಿಕ್ಕ್ ನನಗ ಖುಷಿಯಾಗ್ತದ. ಅಮೆರಿಕಾದ್ ಬೇರೆ ಕನ್ನಡಕೂಟಗಳಿಗೂ ಮಾದರಿಯಾಗದ. ಬೇರೆ ಕೂಟದ್ ಮಂದಿರ್ನಕರೆಸಿ ನಾಟಕ ಮತ್ತ್ ಸಂಗೀತ್ಕಚೇರಿ ನೆಡಸಾದ್ ನಮ್ಮ್ ಕಾಲದಾಗ್ ಶುರುವಾತಿಲ್ಲೋ, ಹಾಂಗಾನೆ ಈಗ್ ಅದಕ್ಕ್ “ಅಕ್ಕ” ಅಂತ್ ಒಂದ್, “ನಾವಿಕ” ಅಂತಮತ್ತೊಂದ್ ಭಾಳ್ ದೊಡ್ದ್ಸಂಸ್ಥೆಗಳ ಮಾಡಿಯಾರ್ರಿ. ಅಮೆರಿಕಾದ್ ಎಲ್ಲ್ ಕನ್ನಡಿಗರ್ಸೇರಿ ನಮ್ಮ್ಸಂಸ್ಕೃತಿಯನ್ನ್ ಮತ್ತೊಂದು ಉನ್ನತಘಟ್ಟಕ್ಕ್ ಮುಟ್ಟಿಸಿಯಾರ್ರಿ. ಸಿಲಿಕಾನ್ಕಣಿವೆಯಾಗ ಭಾರತದಿಂದ್ಬಂದು ನೆಲಸಿದೋರ್ರು ಭಾಳ್ಮಂದಿಯಿದರ್ರಾ, ಅವರ ಸಂಘಗಳಿಗೂ ನಮ್ಮ್ಕನ್ನಡ್ಕೂಟ ಮಾದರಿಯಾಗಾದ್ರಿ. ನಮಮ್ದೇಶದ್ ಮಂದಿ ಎಲ್ಲ ಕೂಡಿ ಸ್ವತಂತ್ರದಿವಸ್ ಆಚರಿಸೋದ್ ನೋಡ್ಲಿಕ್ಕ್ ನಾವೆಲ್ಲ್ ಮೆರವಣಿಗೆಯಾಗ್ ಹೋಗ್ತಿದ್ವಿರ್ರಿ. ಬಣ್ಣಬಣ್ಣದ್ ವಸ್ತ್ರಧರಿಸಿ ಕೆಂಪು ಹಳದಿ ಜಂಡಾ ಹಿಡಿದು, ತಮಟೆ ಬಾರಿಸಿಕೊಂಡ್, ಹಾಡ್ಹೇಳ್ತಾ, ನೃತ್ಯಮಾಡ್ತ ಆ ಅಲಂಕರಿಸಿರೋ ವಾಹನದಾಗ ಮೆರವಣಿಗೆ ಹೊರಟಾನ್ದ್ರ ದೇಶಪ್ರೇಮ ಉಕ್ಕಿಬರ್ತೀತ್ರಿ. ೨೦೦೦ ನೇ ಇಸವಿ ಮೈಲಿಗಲ್ಲ್ ವಿಚಾರಾಂದ್ರ ನಮ್ಮ್ಕನ್ನಡ್ಕೂಟದ್ ಫ್ಲೋಟ್, ಅಂದ್ರ ಸಾಂಸ್ಕೃತಿಕ ಮೆರವಣಿಗೆಗೆ ಮೊದಲ್ನೇ ಬಹುಮಾನ್ ಸಿಕ್ಕಿತ್ತ್ರಿ. ಈ ವಿಷಯ ನಂಗೂ ನೆಪ್ಪಿರ್ಲಿರ್ರಿ, ಆದ್ರ ಇದೆಲ್ಲ ಅಮೃತ, ಶ್ರೀಮುಖ, ವಿಕ್ರಮ ಅಂತ ಕೂಟದ್ ಸಂಚಿಕೆಯಾಗ ಮತ್ತ್ ಓದ್ಕೊಳ್ಲಿಕ್ಕ್ ಹೋದ್ರ ನೆನಪಿನ್ದೋಣಿಯಾಗ್ಕೂತ್ ನೌಕಾಯಾನ ಮಾಡಿದ್ಹಾಂಗಾ ಅನಿಸುತ್ತ್ರೀ. ಕೂಟದ್ಸದಸ್ಯಾರ್ ಬರೆದ ಕಥೆ, ಕವನ, ಟಿಪ್ಪಣಿ, ಚಿತ್ರಕಲೆ, ವರದಿ, ಹೀಂಗಾ ಸಂಚಿಕೆ ಕೂಡ ನಮ್ಮ್ ಪ್ರತಿಭೆಗೆ ಕಳ್ಶಿಟ್ಟಂಗ್ ವರ್ಷಾದ್ಕೊನೆಯಾಗ್ ಬಿಡುಗಡೆ ಆಗ್ತಿತ್ತ್ರ್ರಿ. ನೀವ್ಬಿಡ್ರಲ್ಲ, ಅದೆಷ್ಟ್ ಅಂದವಾಗಿ ಆ ಪುಸ್ತಕಾದ್ ಮುಖಪುಠ ಬಿಡಿಸ್ತೀದ್ರ್ರಿ. ಹಾ, ನೇಪ್ಬೆಂತ್ರಿ, ನಮ್ಮ್ಕೂಟಕ್ಕ್ ಒಂದ್ ಚಲೋ ಪ್ರತೀಕ ಇದ್ದಹಾಂಗ ಒಂದು ಚಿನ್ಹೆ, ಅಂದ್ರ, ಲೋಗೋ ಕೂಡ ನಮ್ಮ್ಸದಸ್ಸ್ಯಾರೆ ಚಿತ್ರಿಸಿದ್ದು. ಒಂದ್ಕಾಲ್ದಾಗ ಸಂಚಿಕೆಯಾಗ ಬರೀ ದೊಡ್ಡವರ್ರೇ ಕನ್ನಡದಾಗ್ ಮಾತ್ರ ಬರಿತೀದ್ರಿ. ನಂತರ ಕೂಟದ್ ಶಾಲಾ ಮಕ್ಕಳ್ ಹಾಗೂ ಎರಡನೇ ಪೀಳಿಗೆ ಯುವಕರ್ಕೂಡ ಬರೀಲಿಕ್ಕ್ಹತ್ತಾರ್ರೀ. ಮುಂದ್ ಅವರಾ ಕೈಯಲ್ಲವೇನ್ರಿ ನಂಮಸಂಸ್ಕೃತಿಯನ್ನ್ ಅಮೆರಿಕದಲ್ಲಿ ಬೆಳಸಾಕ ಜವಾಬ್ದಾರಿ ಇರೋದು. ಅದಕ್ಕಾ ನಾ ಮಕ್ಕಳ್ ಎಲ್ಲ್ಕಂಡ್ರೂ ಕನ್ನಡ್ದಾಗೆ ಮಾತಾಡಿಸೋದು, ಅವರ ತಂದಿತಾಯ್ಗ್ ನಿಮ್ಮ್ಮಕ್ಕಳ್ ಭಾಳ್ ಶಾಣ್ಯಾಇದಾರ್ರಿ ಕೂಟದ್ ಕಾರ್ಯಕ್ರಮಕ್ಕಾಬರ್ರೀ ಅಂತ್ ಹೇಳೋದು. ನಿಮ್ಮ್ಹುಡ್ಗ ಆಗ್ಲೇ ಡಾಕ್ಟರಾಗವಾ ಅಂತ್ ಕೇಳಿ ಭಾಳ್ ಖುಷಿಯಾತ್ರಿ. ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ ಅಂತ್ ಅಂವಾ ಸ್ಟೇಜ್ಮ್ಯಾಲ್ ಹಾಡಿದ್ದ್, ಮಕ್ಕಳ್ನೃತ್ಯ, ನಾಟಕ ಹಿಂಗಾ ಎಷ್ಟು ಚಲೋ ವರ್ಷಗಳ್ಹೋದದ್ದಾ ಗೊತ್ತಾಗುದಿಲ್ರಿ ನಮ್ಮ್ಕೊಟದಾಗ. ನಮ್ಮ್ಮಕ್ಕಳಹಾಂಗಾ ನಾವೂಕೂಡ್ ಕೂಟದ್ಜೊತೆಗೀ ಬೆಳೆದದ್ಧಾಂತ್ ಅನ್ನಿಸ್ಲಿಕ್ಕ್ಹತ್ತಾದ್ರಿ.
ಪ್ರಜಾರಾಜ್ಯದಾಗ ಹೆಂಗಚಾಲೂಅದ ಹಂಗಾನಾ ನಮ್ಮ್ಕೂಟದಾಗ ಚುನಾವಣೆ ನೆಡೀತಿತ್ರಿ, ಆದ್ರ ಒಂದ್ಬಾರೀ ಕೂಡ ಅಧ್ಯಕ್ಷರಸ್ಥಾನಕ್ಕ್ ಸ್ಪರ್ಧೆಯಾಗ್ಲಿ ವಿರೋದಾಗ್ಲಿ ಇರ್ತಿರ್ಲಿರಿ, ಒಮ್ಮತ ಅಂದ್ರ ಅದೂರ್ರಿ. ಅಷ್ಟೆಅಲ್ಲ್ರಿ ತಾರಾ ಬೇಲೂರ್, ಅಲಮೇಲು ಐಯಂಗಾರ್, ರಮಾ ವಿಠ್ಠಲ್, ವಿಮಲಾ ನಾಗರಾಜ್, ಬ್ರಹ್ಮರ ಶಾಸ್ತ್ರಿ ಅಂತ್ಹೆಸ್ರಗಳನ್ನ್ ನೀವ್ಕೇಳಿರಿಲ್ಲೋ, ಈ ಎಲ್ಲ್ ಗಣ್ಯಸ್ತ್ರೀಯಾರು ನಮ್ಮ್ಕೂಟದ ಅಧ್ಯಕ್ಷರಾಗಿ ಸೇವೆಸಲ್ಲಿಸಿದ ಕಾಲ ಅದು. ಬೇರಿಕಡಿಹಾಂಗಾ ಪುರುಷಪ್ರಧಾನ ಸಂಸ್ಥೆ ಆಗಿಲ್ರಿ, ಮುಂದ್ ೨೧ನೇ ಶತಮಾನದ್ದಾಗ ಪದ್ಮ ಕಡೂರ್, ಶಾಂತಲಾ ಭಂಡಿ, ಶುಭ ಪ್ರಿತ್ವಿರಾಜ್, ಅಧ್ಯಕ್ಷಾರಾಗಿ ಸೇವೆಸಲ್ಲಿಸಾರ್ರಿ. ಜೊತಿಗಿ ಕಾರ್ಯಕಾರಿ ಸಮಿತಿಯಾಗ, ಮನರಂಜನಾ ಕಮಿಟಿಯಾಗ, ಊಟದ್ವ್ಯವಸ್ಥೆಯಾಗ ಹೀಂಗಾ ಎಲ್ಲಾದ್ರಲ್ಲೂ ಸ್ತ್ರೀಯಾರು ಪುರುಷರಿಗಿಂತ ಹೆಚ್ಚಕೆಲಸಮಾಡ್ಯಾರ್ರಿ. ಅವರಿಲ್ದಾ ನಮ್ಮ್ಕೂಟ ನಡೀತಿರ್ಲ್ಲ್ರಿ, ನಾನಂತೂ ಅವರೆಲ್ಲರ್ರಿಗೂ ಪ್ರಣಾಮ್ಮಾಡತ್ತೇನ್ರೀ. ಹಾಂಗಾನಾ ನಮ್ಮನ್ ಅಗಲಿದ ಗಣ್ಯವ್ಯಕ್ತೀರನ್ನ ನೆಪ್ ಮಾಡ್ಕಾಳಾದ್ ಎಲ್ರ್ಕರ್ತವ್ಯ್ಕೂಡ್ರಿ, ನೀವೇನಂತೀರ್ರೀ, ಪಾಟೀಲ್ರ. ರವಿ ರವೀಂದ್ರನಾಥ್, ಹರಿಹರೇಶ್ವರ, ನಾಗಲಕ್ಷ್ಮಿ ಹರಿಹರೇಶ್ವರ, ಪ್ರಭು ದೇವ್, ಅರಕೆರೆ ವಾಸುದೇವ್, ಇವರೆಲ್ರಿಗೂ ಶ್ರದ್ಧಾಂಜಲಿ ಅರ್ಪಿಸಿ ಅವ್ರುಕಟ್ಟಿದ್ ನಮ್ಮ್ಕನ್ನಡಕೂಟಕ್ಕ್ ಈ ಸುವರ್ಣವರ್ಷ ಅದ್ಭುತ ಸಾಧನೆಯ್ವರ್ಷವಾಗ್ಲಿ ಅಂತ್ಹಾರೈಸ್ತೀನ್ರ್ರಿ.
_________________________
ಬೃಂದಾವನದೊಳಗಿನ ರಹಸ್ಯ
-ಗಂಧಾಕ್ಷತೆ, ಐಯೋವಾ, USA.
ಚಿಕ್ಕಂದಿನಿಂದಲೂ ನನಗೆ ಈಜಿಪ್ಟಿನ ಪಿರಮಿಡ್ಗಳ ಬಗ್ಗೆ ಕುತೂಹಲ. ಅದರೊಳಗಿನ ಕತ್ತಲೆ ಕೋಣೆ, ಬಣ್ಣಬಣ್ಣದ ಗೋಡೆ, ಎಲ್ಲೋ ಅವಿತ ರಾಜರಾಣಿಯರ ಮಮ್ಮಿಗಳು, ಚಿನ್ನದ ಮುಖವಾಡ ಎಲ್ಲ ನೋಡುವ ಆಸೆ. ಕಾಲೇಜಿನಲ್ಲಿದ್ದಾಗ ತಾಜ್ ಮಹಲ್ ನೋಡುವ ಕುತೂಹಲ. ಜೀವನದ ಮತ್ತೊಂದು ಘಟ್ಟ ಸೇರಿದಾಗ ಅದೇ ದೃಷ್ಟಿಯಿಂದಲ್ಲದಿದ್ದರು ಭಕ್ತಿಭಾವದಲ್ಲಿ ಯತಿಗಳ ಬೃಂದಾವನ ನೋಡುವ ಮತ್ತು ಅದರ ರಹಸ್ಯ ಅರಿತುಕೊಳ್ಳಲು ವಿಷಯಲಾಲಸೆ ಹುಟ್ಟಿದ್ದು ಇತ್ತೀಚಿಗೆ. ಭವ್ಯತೆಯಲ್ಲಿ ಸಮರೂಪ ಎನಿಸದಿದ್ದರೂ, ಈ ಮೂರೂ ಮಾನವ ನಿರ್ಮಿತ ಕಟ್ಟಡಗಳೇನೋ ಸರಿ ಆದರೆ ಶತಮಾನಗಳಿಂದ ಯಾತ್ರಿಕರು ಕೇವಲ ಮೃತ ರಾಜರಾಣಿಯರನ್ನು ಯಾ ಯತಿಗಳನ್ನು ಭೇಟಿ ಕೊಡಲು ಬರುತ್ತಾರೆಯೇ ಅಥವಾ ಇನ್ಯಾವುದೋ ಸೆಳೆತವಿದೆಯೇ ಎಂದು ನನ್ನ ಶೋಧನೆ ಆರಂಭವಾಯಿತು.
ಈ ವಿಶ್ಲೇಷಣಾತ್ಮಕ ಅಧ್ಯಯನದ ಹಿನ್ನಲೆಯಲ್ಲಿ ಎರಡು ಬೃಂದಾವನ-ಸಂಬಂಧಿ ಘಟನೆಗಳು ನನ್ನ ಶೋಧನೆಯನ್ನು ಭದ್ರಪಡಿಸಿದವು. ಈ ಎರಡು ಘಟನೆಗಳನ್ನು ಮೊದಲು ನೋಡೋಣ.
1. ವರದಾ ನದಿಯತೀರ, ಹೊಸರಿತ್ತಿ ಎನ್ನುವ ಗ್ರಾಮ, ಇಸವಿ 1791. ಕಾರಣಾಂತರಗಳಿಂದ ಅಲ್ಲಿದ್ದ ಶ್ರೀ ಸುಧೀಂದ್ರ ತೀರ್ಥರ ಬೃಂದಾವನವನ್ನು ಮತ್ತೊಂದು ಜಾಗಕ್ಕೆ ಸ್ಥಳಾಂತರಿಸುವ ಸಮಯದಲ್ಲಿ ಆ ಘಟನೆಯ ಬಗ್ಗೆ ಬರೆಯುತ್ತ “ಅವರ ಶರೀರ ಆಗ ತಾನೇ ಅರಳಿದ ಹೂವಿನಂತೆ, ಬೃಂದಾವನ ನಿರ್ಮಿಸಿದ ಸಮಯದಲ್ಲಿ ಪ್ರಜ್ವಲಿಸುತ್ತಿದ್ದ ಹಾಗೆಯೇ ಕಾಣುತ್ತಿತ್ತು. ಕೊರಳಲ್ಲಿ ಇದ್ದ ಕಂದದ ತುಳಸಿ ಮಾಲೆಯ ಸುಗಂಧ, ಹಣೆಯಮೇಲಿನ ನಾಮ, ಅಕ್ಷತೆ ಎಲ್ಲವು 6 ವರ್ಷಗಳ ನಂತರವೂ ಹಾಗೆಯೇ ಇರುವುದು ಆಶ್ಚರ್ಯ ತಂದಿದೆ.”
2. ತುಂಗಾ ನದಿಯ ತೀರ, ಆನೆಗೊಂದಿ ಗ್ರಾಮ, ಇಸವಿ 2019. ನವಬೃಂದಾವನಗಳಲ್ಲಿ ಒಂದಾದ ಶ್ರೀ ವ್ಯಾಸರಾಜ ತೀರ್ಥರ ಬೃಂದಾವನವನವನ್ನು ನಿಧಿ ಹುಡುಕುವ ಕೆಲವು ಭ್ರಷ್ಟರು ಒಡೆದು ಉರುಳಿಸಿ ಹಾಕಿದ್ದಾರೆ. ಆ ಭ್ರಷ್ಟರಿಗೆ ಸಿಕ್ಕಿದ್ದು ಬರಿ ಕಲ್ಲುಮಣ್ಣು. ಆದರೆ ಮಾರೆನೆಯ ದಿನವೇ ಸಾವಿರಾರು ಸ್ವಯಂಸೇವಕರು ಸೇರಿ ಬೃಂದಾವನವನ್ನು ಮತ್ತೆ ಕಟ್ಟಿ ನಿಲ್ಲಿಸಿ ಮರುಪ್ರತಿಷ್ಠಾಪನೆ ಮಾಡಿದರು.
228 ವರ್ಷಗಳ ಅಂತರದಲ್ಲಿ ಜರುಗಿದ ಈ ಎರಡು ವ್ಯತಿರಿಕ್ತ ಘಟನೆಗಳು ನಮ್ಮ ಮೂಲಭೂತ ನಂಬಿಕೆಯನ್ನೇ ಪ್ರಶ್ನಿಸುತ್ತವೆ ಅಲ್ಲವೇ? ಹೌದೆನಿಸಿದರೆ ಬನ್ನಿ ಈ ಅನ್ವೇಷಣೆಯಲ್ಲಿ ಜೊತೆಗೂಡಿ ನಡೆಯೋಣ.
******
ಮೃತರಾದವರನ್ನು ಅಗ್ನಿಗೆ ಸಮರ್ಪಿಸಿ ಅಂತ್ಯೇಷ್ಟಿ ಮಾಡುವುದು ಹಿಂದೂ ಧರ್ಮದಲ್ಲಿ ಇರುವ ಬಹು ಪುರಾತನ ಆಚರಣೆ. ಆದರೆ ಕೆಲವೊಂದು ಯೋಗಿಗಳು, ಸನ್ಯಾಸಿಗಳು ಮತ್ತು ಪವಾಡಪುರುಷರನ್ನು ಆ ರೀತಿ ಅಂತ್ಯೇಷ್ಟಿ ಮಾಡದೇ ಮಣ್ಣುಮಾಡುವುದು ಅಥವಾ ಬೃಂದಾವನ ಕಟ್ಟಿ ಆರಾಧಿಸುವುದು ಕೂಡ ಹಳೆ ಪದ್ಧತಿ. ವೈಖಾನಸಸ್ಮಾರತಸೂತ್ರದಲ್ಲಿ ಯತಿಗಳು ಮತ್ತು ಯೋಗಿಗಳ ಶವಸಂಸ್ಕಾರ ಮಾಡುವ ರೀತಿಯನ್ನು ವರ್ಣಿಸಲಾಗಿದೆ. ಯಾರು ಆಗಲೇ ಜೀವನದಿಂದ ಮುಕ್ತಿಪಡೆದಿರುವರೋ, ಯಾರ ಆತ್ಮ ಆಗಲೇ ದೇವರಲ್ಲಿ ಐಕ್ಯವಾಗಿರುವುದೋ ಅಂತಹವರ ದೇಹವನ್ನು ಅಗ್ನಿಗೆ ಸಮರ್ಪಿಸುವುದು ಸಹಜವೆನಿಸುವುದಿಲ್ಲ. ಹಾಗೆಯೇ ಆತ್ಮ ಅಮರವಾದರೆ ಅಂತಹ ಯತಿಗಳ ಮಾರ್ಗದರ್ಶನವನ್ನು ಭುವಿಯಲ್ಲಿ ಸತತವಾಗಿ ಪಡೆಯಬಹುದು ಎನ್ನುವುದೇ ಈ ಹಿಂದೂ ಸಮಾಧಿ, ಬೃಂದಾವನಗಳ ಹಿನ್ನಲೆ.
ಹಾಗಾದರೆ ಶ್ರೀರಾಮ ಮತ್ತು ಶ್ರೀ ಕೃಷ್ಣ ನಾರಾಯಣನ ಮನುಷ್ಯ ರೂಪದ ಎರಡು ಅವತಾರಗಳು, ಭುವಿಯಲ್ಲಿ ಧರ್ಮವನ್ನು ಮತ್ತೆ ಸಂಸ್ಥಾಪಿಸಿ ಕೊನೆಗೆ ಇಬ್ಬರೂ ಜಲಸಮಾಧಿಯ ಕ್ರಿಯೆಯಲ್ಲಿ ದೇಹವನ್ನು ತ್ಯಜಿಸಿದರೆಂದು ತಿಳಿದಾಗ ಆಶ್ಚರ್ಯವೆನಿಸದಿದ್ದರೂ ಮನುಷ್ಯರೇಕೆ ಅವರ ಬೃಂದಾವನ ಕಟ್ಟಲಿಲ್ಲ ಎನ್ನುವ ಪ್ರಶ್ನೆ ಮೂಡುತ್ತದೆ.
ತ್ರೇತಾಯುಗದಲ್ಲೂ ದ್ವಾಪರಯುಗದಲ್ಲೂ ವೇದಕಾಲದಲ್ಲಿಯೂ ಜಾರಿಯಲ್ಲಿರದ ಬೃಂದಾವನ ಸಮಾಧಿ ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಹೇಗೆ ಮತ್ತು ಯಾವಾಗ ಮೊದಲಬಾರಿಗೆ ಉದಯಿಸಿತು?
ಆ ಪ್ರಶ್ನೆಗೆ ಉತ್ತರ ಸಿಕ್ಕಿದ್ದು ಶಂಕರಾಚಾರ್ಯರ ಕಾಲದಲ್ಲಿ -- ದಂಡಿ (ಕುಂಕುಮಕೇಸರಿಯ ಬಟ್ಟೆಯನ್ನು ಒಂದು ಬಿದರಿನ ಕೋಲಿಗೆ ಕಟ್ಟಿಕೊಂಡು ಭಿಕ್ಷೆ ಬೇಡುವವರು) ಎನ್ನುವ ಒಂದು ಶೈವ ಒಳಪಂಗಡದವರು ನಿರ್ಗುಣ ಮೂರ್ತಿಗಳನ್ನು ಆರಾಧಿಸುತ್ತಿದ್ದರಲ್ಲದೆ ಅವರಲ್ಲಿ ಅಗ್ನಿಯನ್ನು ಬಳಸುವ ನಿಷೇದವಿದ್ದ ಕಾರಣ ಮೊದಲ ಬಾರಿಗೆ ಹಿಂದುಗಳಲ್ಲಿ ಮೃತರಾದವರನ್ನು ಹೂಳುವ ಅಥವಾ ಜಲಸಮಾಧಿ ಮಾಡುವ ಅಭ್ಯಾಸ ಕಾಣಿಸುತ್ತದೆ. ಹಿಂದೂ ಅಂತ್ಯೇಷ್ಟಿ ಸಂಸ್ಕಾರದಲ್ಲಿ ಈ ವಿಧಾನವನ್ನು ಅಷ್ಟಾಗಿ ವಿವರಿಸಿಲ್ಲ. ಆದರೆ ಆ ವೇಳೆಯ ಹೊತ್ತಿಗೆ (8-9 ನೇ ಶತಮಾನ) ಮುಸ್ಲಿಮರ ದಾಳಿಯಿಂದ ಹಿಂದೂ ಧರ್ಮದಲ್ಲಿ ಪರಮತೀಯರ ಪ್ರಭಾವ ಕಾಣಿಸುತ್ತಿತ್ತಾದರೂ 13ನೇ ಶತಮಾನದವರೆಗೂ ಬೃಂದಾವನ ನಿರ್ಮಿಸಿದ ಹಾಗೆ ಕಾಣುವುದಿಲ್ಲ. ಹಾಗಿದ್ದಲ್ಲಿ ಬೃಂದಾವನವೂ ಕೂಡ ಕ್ರೈಸ್ತ, ಇಸ್ಲಾಂ, ಯಹೂದಿ, ಅಥವಾ ವೀರಶೈವ ಪವಾಡಪುರುಷರ ಗೋರಿಯ ರೂಪದಲ್ಲಿ ಹೂಳುವ ಮತಾಚರಣೆಯ ರೀತಿಯಂತೆಯೇ ಎಂದು ನಿಮಗೆ ಅನಿಸಿದರೆ ಮತ್ತೊಮ್ಮೆ ಯೋಚಿಸಿ. ಬೇರೆ ಮತಗಳಲ್ಲಿ ಮೃತರಾದವರೆಲ್ಲರನ್ನು ಮಣ್ಣಿನಲ್ಲಿ ಹೂಳುತ್ತಾರೆ. ಆದರೆ ಹಿಂದೂಗಳಲ್ಲಿ ಅದು ಆಗಮ್ಯ ಮಹಿಮೆಯ ಯತಿಗಳಿಗೆ, ಪವಾಡ ಪುರುಷರಿಗೆ ಮತ್ತು ಸಮಾಧಿ ಗಳಿಸಿದವರಿಗೆ ಮಾತ್ರ ಅನ್ವಯಿಸುತ್ತದೆ.
ಈ ಅವಲೋಕನದಲ್ಲಿ ಮೊದಲು ಸಮಾಧಿ ಎಂದರೇನು ಎಂದು ತಿಳಿಯುವುದು ಮುಖ್ಯ. ಇದನ್ನು ಗೋರಕ್ಸಶತಕದಲ್ಲಿ ವರ್ಣಿಸಲಾಗಿದೆ. ಯಾರು ಸತತ ಯೋಗದಿಂದ ಪಂಚೇಂದ್ರಿಯಗಳ ಗ್ರಹಿಕೆ ತೊರೆದು, ಬೆಣ್ಣೆಯೊಳಗೆ ಬೆಣ್ಣೆ ಬೆರೆತಂತೆ, ಬೆಂಕಿಯೊಳಗೆ ಬೆಂಕಿ ಬೆರೆತಂತೆ, ಪರಿಶುದ್ಧ, ನಿಶ್ಚಲ, ನಿರಂತರ, ಗುಣಾತೀತ, ನಿಶ್ಚಿಂತ, ದ್ವಂದ್ವರಹಿತದ ಅತ್ಯುನ್ನತ ಸ್ಥಿತಿಲ್ಲಿ ಬ್ರಹ್ಮವನ್ನು ಸೇರುತ್ತಾರೋ ಅಂತಹ ಯತಿವರ್ಯರು ಸಮಾಧಿ ಸ್ಥಿತಿಯಲ್ಲಿರುವರು ಎಂದು ನಮ್ಮ ನಂಬಿಕೆ. ಅಂದರೆ ಅಂತಹ ಮಹರ್ಷಿಗಳಿಗೆ ಮಾತ್ರ ಬೃಂದಾವನ ನಿರ್ಮಿಸುವ ಪದ್ಧತಿ ಉದಯಿಸಿತು.
ಆ ನಂಬಿಕೆಯಲ್ಲಿ ಉದಯಿಸಿದ ಬೃಂದಾವನ ಎನ್ನುವ ಕಲ್ಪನೆಗೆ ಮತ್ತು ಅದರ ನಿರ್ಮಾಣಕ್ಕೆ ಆಕಾರ ಕೊಡುವ ಹಂತದಲ್ಲಿ ಬಹುಶಃ ಆ ಕಾಲದಲ್ಲಿ ಪ್ರಚಲಿತವಿದ್ದ ತುಳಸಿ ಕಟ್ಟೆಯನ್ನು ಮಾದರಿಯಾಗಿ ಬಳಸಿದರೆಂದು ನಾವು ಊಹಿಸಬಹುದು. ಏಕೆಂದರೆ ನಮ್ಮ ಪುರಾಣಗಳಲ್ಲಿ ಬರುವ ತುಳಸಿ ಗಿಡದ ಮಹಿಮೆ, ಜಲಂಧರ ಮತ್ತು ವೃಂದಳ ಕಥೆ ಜನಜನಿತವಾಗಿದೆ. ಬೃಂದಾವನದ ಸಂಸ್ಕರಿಸದ ವಿನ್ಯಾಸ ಹೇಗಿತ್ತೆಂದು ಹೇಳುವುದು ಸುಲಭ. ದೇಹವನ್ನು ಪದ್ಮಾಸನದಲ್ಲಿ ಕುಳ್ಳಿರಿಸಿ ಹೂಳುವುದು, ನಂತರ ಸುತ್ತಲೂ ಮರಳು, ಉಪ್ಪು ಹಾಕಿ ಅದರ ಮೇಲೆ ಇಟ್ಟಿಗೆ ಯಾ ಕಲ್ಲು ಬಳಸಿ ಘನಾಕೃತಿಯ ಬೃಂದಾವನ ಕಟ್ಟುವುದು ಅಥವಾ ಆ ಜಾಗದಲ್ಲಿ ಒಂದು ಲಿಂಗವನ್ನು ಸ್ಥಾಪಿಸುವುದು ವಾಡಿಕೆಯಾಗಿ ಬೆಳೆಯಿತು. ತುಳಸಿ ಮತ್ತು ಲಿಂಗವು, ಈ ಜಾಗದಲ್ಲಿ ಮಹಾನ್ ಚೈತನ್ಯವೊಂದು ದೇಹತ್ಯಾಗ ಮಾಡಿದೆ ಎಂದು ಸಾರುವ ಸಂಕೇತಗಳಾಯಿತು. ಆ ರೀತಿ ಪದ್ಮಾಸನದಲ್ಲಿ ಕುಳ್ಳರಿಸಿದ ದೇಹವನ್ನು ಆತ್ಮ ತ್ಯಜಿಸುವುದು ಕಪಾಲದ ಮೂಲಕ ಎಂದು ನಂಬಿಕೆಯಿರುವುದರಿಂದ ಕೆಲವೊಮ್ಮೆ ತೆಂಗಿನಕಾಯಿಂದ ಬುರುಡೆ ಒಡೆಯುವ ಆಚರಣೆ ಕೂಡ ಇದೆ. ಮತ್ತೊಂದು ಆಚರಣೆಯಲ್ಲಿ ಯತಿವರ್ಯರು ಜೀವಂತವಾಗಿರುವಾಗಲೇ ಸ್ವಇಚ್ಛೆಯಿಂದ ಬೃಂದಾವನ ಸಮಾಧಿಯೊಳಗೆ ಕುಳಿತು ದೇಹತ್ಯಾಗ ಮಾಡುವುದು ಕೂಡ ಪದ್ಧತಿಯಲ್ಲಿದೆ. ಆ ರೀತಿ ಸಜೀವ ಸಮಾಧಿಯಲ್ಲಿ ದೇಹತ್ಯಾಗ ಮಾಡಿದವರಲ್ಲಿ ಶ್ರೀ ವಾದಿರಾಜ ತೀರ್ಥರು ಮೊದಲಿಗರು. ನಂತರ ಸಿಗುವ ಸಜೀವ ಬೃಂದಾವನದ ಉದಾಹರಣೆಗಳಲ್ಲಿ ಉತ್ತರಾದಿ ಮಠದ ರಘುತ್ತಮ ತೀರ್ಥರು (1595) ಮತ್ತು ಸತ್ಯವ್ರತ ತೀರ್ಥರು, ಮಂತ್ರಾಲಯದ ಶ್ರೀ ಗುರು ರಾಘವೇಂದ್ರರದ್ದು ಬಹಳ ಪ್ರಸಿದ್ಧಿಯಾದದ್ದು. 1671ರಲ್ಲಿ ನಿರ್ಮಿತವಾದ ಈ ಬೃಂದಾವನದಲ್ಲಿ ಗುರು ರಾಘವೇಂದ್ರರ ಆತ್ಮ 700 ವರ್ಷಗಳ ಕಾಲ ಭಕ್ತರಿಗೆ ಮಾರ್ಗದರ್ಶನ ನೀಡುವುದು ಎಂದು ನಂಬಿಕೆ ಇದೆ. ಮಂತ್ರಾಲಯ ಬೃಂದಾವನ ದರ್ಶನಕ್ಕೆ ಮತ್ತು ಭಕ್ತರ ಅವಿರತ ಸೆಳವಿಗೆ ಇದೆ ಮುಖ್ಯ ಕಾರಣ ಎಂದು ಹೇಳಬಹುದು. ಯತಿಗಳ ನಶ್ವರ ದೇಹಕ್ಕೆ, ವಸ್ತುಸಂಬಂಧಿ ಪ್ರಾಮುಖ್ಯತೆ ಇಲ್ಲ ಎಂದಾಯಿತು.
ಈ ಮೂಲ ಬೃಂದಾವನದ ಸಾವಿರಾರು ಮ್ರಿಥಿಕ ರೂಪಕಗಳು ದಕ್ಷಿಣ ಭಾರತದಲ್ಲಿ ಅನೇಕ ಕಡೆ ಕಂಡುಬರುತ್ತವೆ. ಬಾಗೇವಾಡಿ ಚೆನ್ನಗಿರಿ ಬೇಟಗಿರಿ ಹೊನ್ನಾಳಿ ಕಡೂರ್ ಮುಂತಾದವು ಕೆಲವು ಉದಾಹರಣೆಗಳು. ಅಷ್ಟೇ ಏಕೆ ಲೋಹಗಳಲ್ಲಿ ಮಾಡಿದ ಬೃಂದಾವನದ ಕಿರು ಆಕೃತಿಗಳನ್ನು ಮನೆಗಳಲ್ಲಿ ಪೂಜಿಸುವುದು ವೈಷ್ಣವ ಸಂಪ್ರದಾಯ. ಹಾಗಾದರೆ ಮೂಲದಲ್ಲಿರುವಷ್ಟೇ ಮ್ರಿಥಿಕ ಬೃಂದಾವನಗಳಲ್ಲಿಯೂ ಕೂಡ ವಸ್ತುಸಂಬಂಧಿ ವಿಷಯಗಳಿಗೆ ಪ್ರಾಮುಖ್ಯತೆ ಇಲ್ಲ ಎಂದಾಯಿತು. ಆದರೆ ಪೂಜ್ಯಭಾವನೆಯೇ ಮುಖ್ಯವೆಂದಾಯಿತು. ಮೂಲ ರೂಪದಲ್ಲಿಯೂ, ಮ್ರಿತಿಕರೂಪದಲ್ಲಿಯೂ, ಪ್ರತಿಮೆಯ ರೂಪದಲ್ಲಿಯೂ ಭಕ್ತರಿಗೆ ಬೃಂದಾವನದ ಸೆಳೆತ ವಾಸ್ತವಿಕ. ಉದಾಹರಣೆಗೆ ರಾಘವೇಂದ್ರಸ್ವಾಮಿ ಬೃಂದಾವನವು ನರಸಿಂಹ (ಶತ್ರು ಮತ್ತು ಭಯ ನಿವಾರಿಸವವನು), ರಾಮದೇವರು (ಕಳೆದುಕೊಂಡ ಆಸ್ತಿ, ಸಾಮ್ರಾಜ್ಯ, ಅಧಿಕಾರ ನೀಡುವವನು), ಕೃಷ್ಣ (ಮದುವೆಯಾಗಲಿ, ಮಕ್ಕಳಾಗಲಿ ಎನ್ನುವ ಆಕಾಂಕ್ಷೆ ಉಳ್ಳವರಿಗೆ ವರ ನೀಡುವವನು) ಮತ್ತು ವೇದವ್ಯಾಸರ (ಜ್ಞಾನ ಸಂಪತ್ತನ್ನು ನೀಡುವವನು) - ಈ ನಾಲ್ವರ ಸನ್ನಿಧಾನ ಅಥವಾ ವೃಂದ ಎಂದು ನಂಬಿಕೆ.
ಮೇಲೆ ಕೊಟ್ಟಿರುವ ಎರಡನೇ ಘಟನೆಯ ಹಿನ್ನಲೆಯಲ್ಲಿ ನೋಡಿದಾಗ, ಆನೆಗೊಂದಿಯಲ್ಲಿರುವ ನವಬೃಂದಾವನದಲ್ಲಿ ಇರುವ ಒಂಬತ್ತು ಬೃಂದಾವನಗಳ ಇತಿಹಾಸ ಕುತೂಹಲ ಮೂಡಿಸುತ್ತವೆ. ಏಕೆಂದರೆ ಒಂದೇ ಸ್ಥಳದಲ್ಲಿ ಇವುಗಳನ್ನು ಸ್ಥಾಪಿಸಲು ಸುಮಾರು 300 ವರ್ಷಗಳೆ ತೆಗೆದುಕೊಂಡಿವೆ. ಇಸವಿ 1324ರಲ್ಲಿ ಶ್ರೀಪದ್ಮನಾಭ ತೀರ್ಥರು, 1399ರಲ್ಲಿ ಕವೀಂದ್ರ ತೀರ್ಥರು, 1407ರಲ್ಲಿ ವಾಗೀಶ ತೀರ್ಥರು, 1539ರಲ್ಲಿ ವ್ಯಾಸರಾಜ ತೀರ್ಥರು, 1559ರಲ್ಲಿ ಶ್ರೀನಿವಾಸ ತೀರ್ಥರು, 1588ರಲ್ಲಿ ರಾಮಚಂದ್ರ ತೀರ್ಥರು, 1623ರಲ್ಲಿ ಸುಧೀಂದ್ರ ತೀರ್ಥರು, ಎಂದು ಗಮನಕ್ಕೆಬರುತ್ತದೆ. ಉಳಿದ ರಘುವರ್ಯ ತೀರ್ಥರು ಹಾಗು ಗೋವಿಂದ ಒಡೆಯರುಗಳ ಬೃಂದಾವನ ಕಟ್ಟಿದ ಇಸವಿಗಳು ದಾಖಲಾಗಿಲ್ಲ. ಈ ಒಂಬತ್ತು ಸಜೀವ ಬೃಂದಾವನಗಳಲ್ಲ. ವಾಸ್ತುಶಿಲ್ಪದಲ್ಲಿ ಯಾವುದೇ ನಿಗಧಿತ ರೂಪರೇಖೆಯೂ ಇದ್ದಂತಿಲ್ಲ. ಒಂದು ನಾಲ್ಕು ಅಡಿ ಎತ್ತರದ ಚಿಕ್ಕ ತುಳಸಿಕಟ್ಟೆಯಂತಿದ್ದರೆ ಮತ್ತೊಂದು ಹತ್ತಾರು ಅಡಿಗಳ ಘನಾಕೃತಿ. ದೇವಸ್ಥಾನಗಳನ್ನು ನಿರ್ಮಿಸುವ ಪೂರ್ವಪಶ್ಚಿಮ ಅಕ್ಷರೇಖೆಯ ನಿಯಮವೂ ಇದ್ದಂತಿಲ್ಲ. ಅಶಿಸ್ತಿನ ಛಾಯೆ ಕಾಣುತ್ತದೆ. ಹಾಗಿದ್ದಲ್ಲಿ ವಾಸ್ತುಶಿಲ್ಪದ ನಿಯಮಗಳಿಗಿಂತ ಪ್ರಾಣಪ್ರತಿಸ್ಥಾಪನೆ ಮಾಡಿದ ನಂತರ ಈ ಬೃಂದಾವನಗಳಿಗೆ ಪಾವನತ್ವ ದೊರಕಿದೆ ಎಂದಾಯಿತು. ಆದರೆ ಅವುಗಳ ಮೂಲ ನಿರ್ವಹಣ ವಿಧಾನ ಒಂದೇ ಎಂದು ಹೇಳಬಹುದು.
ಬೃಂದಾವನದ ಪ್ರತಿಷ್ಠಾಪನೆ ಕೂಡ ಗುಡಿಯಲ್ಲಿ ಮೂಲದೇವರ ಪ್ರತಿಷ್ಠಾಪನೆಯಂತೆ ಬಹಳಷ್ಟು ವ್ರತಾಚರಣೆ ಮತ್ತು ಕಲಶಪೂಜೆಯ ನಿಯಮಗಳನ್ನೊಳಗೊಂಡಿರುತ್ತದೆ. ಇಲ್ಲಿಯವರೆಗೆ ದೊರಕಿರುವ ದಾಖಲೆಗಳ ಪ್ರಕಾರ 1785ರಲ್ಲಿ ಸ್ಥಾಪಿತವಾದ ಸುಧೀಂದ್ರ ತೀರ್ಥರ ಬೃಂದಾವನವೇ ಕೊನೆಯದು. ಇತ್ತೀಚಿನ ನೆಲಸಮವಾದ ವ್ಯಾಸರಾಜರ ಬೃಂದಾವನವನ್ನು ಎಲ್ಲ ವ್ರತಾಚಾರಣೆ ಮತ್ತು ಕಳಶಪೂಜೆಯೊಂದಿಗೆ ಮರುಪ್ರತಿಷ್ಠಾಪನೆ ಮಾಡಲಾಯಿತು. ಹಾಗಾದರೆ ಕಳೆದ 235 ವರ್ಷಗಳಲ್ಲಿ ಹೊಸ ಬೃಂದಾವನ ಪ್ರತಿಷ್ಠಾಪನೆ ಆಗಿಲ್ಲ ಎನ್ನುವುದು ಒಂದು ಸೋಜಿಗದ ಸಂಗತಿ. ಅಥವಾ ಈ ಕಾಲಾವಧಿಯಲ್ಲಿ ಅತ್ತ್ಯುನ್ನತ ಸಮಾಧಿ ಸ್ಥಿತಿಯನ್ನು ಗಳಿಸಿದ ಯತಿವರ್ಯರು ಜನಿಸಲಿಲ್ಲವೋ ಎನ್ನುವುದೂ ಕೂಡ ಸೋಜಿಗ. ಇದನ್ನು ಮತ್ತಷ್ಟು ಅವಲೋಕಿಸಿದಾಗ ಯತಿಗಳಿಗೆ ಬೃಂದಾವನ ಕಟ್ಟುವ ನಿರ್ಣಯ ಯಾರು ಮಾಡುತ್ತಾರೆ ಎನ್ನುವ ಪ್ರಶ್ನೆ ಏಳುತ್ತದೆ. ದೇಹ ತ್ಯಾಗ ಮಾಡಿದ ನಂತರ ಭಕ್ತಾದಿಗಳು ಅಥವಾ ಮಠದ ಪ್ರಾದಿಕಾರಿಗಳು ಬೃಂದಾವನ ನಿರ್ಣಯಿಸುವ ಸನ್ನಿವೇಶವೇ ಹೆಚ್ಚು. ಇದಕ್ಕೆ ಭಿನ್ನವಾಗಿ ಶ್ರೀ ರಾಘವೇಂದ್ರರು ಸ್ವತಃ ತಾವೇ ನಿರ್ಣಯ ಮಾಡಿ ತಾವು ಇಂತಹ ಘಳಿಗೆಯಲ್ಲಿ ಸಜೀವ ಸಮಾಧಿ ಹೊಂದುವುದಾಗಿ ಹೇಳಿದ್ದಲ್ಲದೇ, ಬೃಂದಾವನದ ಯೋಜನೆ, ಅದರ ವಿನ್ಯಾಸ, ಅದಕ್ಕೆ ಬೇಕಾದ ಸರಕು, ಕಲಶದಲ್ಲಿಡಲು 700 ಸಾಲಿಗ್ರಾಮಗಳು ಮತ್ತು ಪ್ರತ್ಯೇಕ ಶಿಲೆಯನ್ನು ಹೊರನಾಡಿನಿಂದ ತರಿಸಿಕೊಂಡು ತಮ್ಮದೇ ಬೃಂದಾವನದ ನಿರ್ಮಾಣದಲ್ಲಿ ಸಕ್ರಿಯವಾಗಿದ್ದರು. ಶ್ರೀ ರಾಮ ಮತ್ತು ಸೀತೆ ಕುಳಿತ ಶಿಲೆಯನ್ನು ತಮ್ಮ ದಿವ್ಯದೃಷ್ಟಿಯಿಂದ ಹುಡುಕಿ ಬೃಂದಾವನಕ್ಕೆ ಕೂರ್ಮಾಸನದ ಪೀಠಕ್ಕೆ ಬಳಸಲು ಆದೇಶ ನೀಡಿದ್ದರಂತೆ. ಇಲ್ಲಿ ಗಮನಿಸಬೇಕಾದ್ದು ಮೊದಲೇ ಹೇಳಿದಂತೆ ವಸ್ತುಸಂಬಂಧಿ ವಿಚಾರಗಳು ಅಪಕೃತ ಎನಿಸಿದರೂ, ಸಾಲಿಗ್ರಾಮ, ರಾಮಶಿಲೆ ಮತ್ತು ಕೂರ್ಮಾಸನದ ಪೀಠ ಇವೆಲ್ಲದಕ್ಕೂ ಪ್ರಾಚೀನ ಪ್ರಜ್ಞೆಯ ತಳಹದಿ ಇರುವುದು ಸ್ಪಷ್ಟವಾಗುತ್ತದೆ. ಏಕೆಂದರೆ ಸಾಲಿಗ್ರಾಮ ವಿಷ್ಣುವಿನ ಸಾರ್ವತ್ರಿಕ ತತ್ವ, ಮತ್ತು ಕೂರ್ಮಾಸನದ ಪೀಠ, ಜ್ಞಾನಾರ್ಜನೆಯ ಸಂಕೇತಗಳು. ಕೂರ್ಮಪುರಾಣದಲ್ಲಿ ಇದರ ಬಗ್ಗೆ ಸೂಕ್ಷ್ಮ ವಿವರಣೆಗಳನ್ನು ಓದಿಕೊಳ್ಳಬಹುದು. ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಕೂರ್ಮಾಸನ ಪೀಠ ಉಪಾಸಕನಲ್ಲಿ ಜ್ಞಾನ, ಭಕ್ತಿ ಮತ್ತು ವೈರಾಗ್ಯ ಬೆಳೆಸುವುದು.
ಹಾಗಾದರೆ ಬೃಂದಾವನ ನಿರ್ಮಾಣದ ಮೂಲ ಉದ್ದೇಶ ಶ್ರೀಹರಿಯ ಧಾಮವನ್ನು ಭುವಿಯಲ್ಲಿ ಲಾಕ್ಷಣಿಕವಾದ ರೂಪದಲ್ಲಿ ನಿರ್ಮಿಸಿ, ಯತಿವರ್ಯರ ಆತ್ಮ ನೆಲೆನಿಂತ ಪವಿತ್ರಸ್ಥಾನವನ್ನಾಗಿಸುವುದು. ವ್ಯಾಸರಾಜರು “ಇದು ನಮ್ಮ ಸಮಾಧಿ ಅಲ್ಲ. ಭಗವಂತನ ಆವಾಸಮಂದಿರ,” ಎಂದು ಹೇಳಿದ್ದಾರೆ. ಆದರೂ ಬೃಂದಾವನದ ವಾಸ್ತುಶಾಸ್ತ್ರ ನಮಗೆ ಪರಿಚಯವಿರುವ ಗುಡಿಯ ವಾಸ್ತುಶಾಸ್ತ್ರಕ್ಕಿಂತ ಭಿನ್ನ. ಅದನ್ನು ವಿವರಿಸುವ ಶ್ರಮಪಡುವ ಬದಲು ಬೃಂದಾವನದ ಈ ರೇಖಾಚಿತ್ರ ನೋಡಿದರೆ ಅದನ್ನು ಹರಿಧಾಮ ಎಂದು ಏಕೆ ಕರೆಯುವರು ಎನ್ನುವುದು ತಾನಾಗಿಯೇ ಸ್ಪಷ್ಟವಾಗುತ್ತದೆ. ಭಕ್ತಾದಿಗಳಲ್ಲಿ ಸಾಮಾನ್ಯವಾಗಿ ಮೂಡುವ ನೋಟ ಬೃಂದಾವನದೊಳಗೆ ಯತಿವರ್ಯರು ಕುಳಿತಿರುವರೆಂದು. ಆದರೆ ಬೃಂದಾವನ ಶಿಲೆಯಲ್ಲಿ ನಿರ್ಮಿಸಿದ ಘನಾಕೃತಿ, ಅದರಲ್ಲಿ ಕೊಠಡಿಯಂತೆ ಜಾಗವಿರುವುದಿಲ್ಲ ಎನ್ನುವ ತರ್ಕವನ್ನು ನಿರಾಕರಿಸುವರು ನಿಷ್ಠೆಯ ಉಪಾಸಕರು. ಅತಿ ದೊಡ್ಡ ಘನಾಕೃತಿಯ ವಿಸ್ತೀರ್ಣ ಕೂಡ ಸುಮಾರು 6x6 ಅಡಿಗಳು ಮಾತ್ರ. ಎತ್ತರ ಸುಮಾರು 7-8 ಅಡಿಗಳು. ರಾಘವೇಂದ್ರರ ಬೃಂದಾವನದಲ್ಲಿರುವಂತೆ ಕೆಲವಕ್ಕೆ ಮಾತ್ರ ವಿಸ್ತಾರವಾದ ಮಂಟಪ ನಿರ್ಮಿಸಲಾಗಿದೆ. ಆದ್ದರಿಂದ ಯತಿವರ್ಯರ ಪಾರ್ಥಿವ ಶರೀರ ಎಲ್ಲಿರುತ್ತದೆ ಎನ್ನುವ ಪ್ರಶ್ನೆ ಮೂಡುತ್ತದೆ. ಬೃಂದಾವನದ ಭೂಮಿಯ 8-10 ಅಡಿಗಳ ಕೆಳಗಿರುವ ರಹಸ್ಯ ಗುಹೆಯಂತಿರುವ ಸಮಭುಜದ ಕೊಠಡಿಯೊಳಗೆ ಪದ್ಮಾಸನದಲ್ಲಿ ಸಾಮಾನ್ಯವಾಗಿ ಯತಿಗಳ ಶರೀರವಿರುತ್ತದೆ. ಗುಹೆಯ ದ್ವಾರವನ್ನು ಎಲ್ಲ ದಿಕ್ಕುಗಳಿಂದ ಮುಚ್ಚಿಬಿಡುವುದರಿಂದ ಎಂದೆಂದಿಗೂ ರಹಸ್ಯವಾಗೇ ಉಳಿಯುತ್ತದೆ. ಆದರೆ ಸಮಾಧಿ ಸ್ಥಿತಿಯಲ್ಲಿರುವ ಆ ದೇಹ ಎಂದೆಂದಿಗೂ ನಿಷ್ಕಳಂಕ ಸ್ಥಿತಿಯಲ್ಲೇ ಇರುವುದೆಂಬ ಅರಿವು ಅನಿವರ್ಚನೀಯ. ಆತ್ಮ-ಪರಮಾತ್ಮ ಒಂದಾಗಿ ಅಜ್ಞಾನ ನಿರ್ಮೂಲಮಾಡಿದಂತೆ. ವಿಜ್ಞಾನ ಇದನ್ನು ಮೂಢನಂಬಿಕೆಯೆಂದರೂ, ಮೇಲೆ ವಿವರಿಸಿದ ಹೊಸರಿತ್ತಿ ಗ್ರಾಮದ ಘಟನೆಯನ್ನು ಮತ್ತೊಮ್ಮೆ ಉಪಾಸಕರ ದೃಷ್ಟಿಕೋನದಿಂದ ನೆನಪಿಸಿಕೊಳ್ಳೋಣ. ಮೇಲೆ ವಿವರಿಸಿದ ಆನೆಗೊಂದಿ ಘಟನೆಯಲ್ಲಿ ಭ್ರಷ್ಟರು ಮೇಲಿನ ಘನಾಕೃತಿಯ ಬೃಂದಾವನವನ್ನು ನಿರ್ನಾಮಮಾಡಿದರೂ ರಹಸ್ಯಚೈತನ್ಯ ಹಾಗೆಯೇ ಮುಂದುವರಿದಿದೆ.
ಮೂಲ ಬೃಂದಾವನದಲ್ಲಿ ಯತಿಗಳ ಅಯಸ್ಕಾಂತತ್ವವೇ ಸಬೀಜವಾಗುವುದರಿಂದ ದೇಹ ನಶಿಸದೆ ಪರಮಾತ್ಮವೂ ನಿರಂತರವಾಗಿರುತ್ತದೆ ಎನ್ನುವುದು ಭಕ್ತರ ನಂಬಿಕೆ. ಆದರೆ ಯತಿಗಳ ಸಮಾಧಿ ಸ್ಥಿತಿ ಮತ್ತು ಅದರ ಕಾಲಾವಧಿ ಅವರ ಅಯಸ್ಕಾಂತತ್ವ ಶಕ್ತಿಯ ಮೇಲೆ ಅವಲಂಬಿಸಿದೆ. ಆ ಕಾಲಾವಧಿ ಕೆಲವು ಶತಮಾನಗಳಷ್ಟೇ ಇರುವುದರಿಂದ ಯತಿಗಳು ಭಕ್ತರನ್ನು ಹರಿಸಿ, ಸಮಸ್ಯೆಗಳಿಗೆ ಮಾರ್ಗದರ್ಶನ ಕೊಡುವರೆಂಬ ನಂಬಿಕೆ ಇರುವುದರಿಂದಲೇ ಈ ಬೃಂದಾವನಗಳು ಭಕ್ತರನ್ನು ಸೆಳೆಯುತ್ತವೆ. ಅದೇ ತರ್ಕದಲ್ಲಿ, ನಿಗಧಿತ ಅವಧಿಯಲ್ಲಿ ಯತಿಗಳ ಅಯಸ್ಕಾಂತತ್ವ ಕ್ಷೀಣಿಸಿ ಹೋಗುವುದಾದರೆ ಭಕ್ತರ ಸೆಳೆತವೂ ಕಡಿಮೆ ಆಗುತ್ತದೆಯೇ? ಮುಂದೊಮ್ಮೆ ಹೊಸ ಯತಿಗಳ ಬೃಂದಾವನ ನಿರ್ಮಾಣವಾಗದಿದ್ದಲ್ಲಿ ಆ ಪರಿಕಲ್ಪನೆಯೇ ಅಂತಿಮಗೊಳ್ಳುವ ಸಾಧ್ಯತೆ ಇದೆಯೇ? ಆಗ ಮತ್ತೊಂದು ಪ್ರಶ್ನೆ ಸಹಜ: ಎಲ್ಲವೂ ನಶ್ವರ ಎನ್ನುವುದೇ ಹಿಂದೂ ಧರ್ಮದ ಸಿದ್ಧಾಂತವಾಗಿರುವಾಗ, ಪಾಳುಬಿದ್ದ, ಬಳಕೆಯಲ್ಲಿರದ ಬೃಂದಾವನಗಳ ಘಟಕಾಂಶಗಳನ್ನು ಪ್ರಕೃತಿಗೆ ಹಿಂದುರಿಗಿಸಿದರೆ ಯತಿಗಳ ಆತ್ಮಕ್ಕೆ ಭುವಿಯ ಭಕ್ತರ ಮಾರ್ಗದರ್ಶನದ ಜವಾಬ್ದಾರಿಯಿಂದ ಅಂತಿಮ ಮುಕ್ತಿ ಸಿಗಬಹುದೇ? ಹಾಗೆ ಮಾಡದಿದ್ದರೆ ಭಕ್ತರು ತಮ್ಮ ಕರ್ತವ್ಯ ಪಾಲಿಸುವುದು ಹೇಗೆ ಸಾಧ್ಯ?
ವೈಜ್ಞಾನಿಕ ದೃಷ್ಟಿಯಿಂದ ಪರಿಶೀಲಿಸಿದರೆ ಮೂಢನಂಬಿಕೆ ಎನಿಸಿದರೂ, ವಿಜ್ಞಾನ ಮತ್ತು ಮತಾಚರಣೆಗಳು ಅನಾದಿಕಾಲದಿಂದಲೂ ತದ್ವಿರುದ್ದ ದಿಕ್ಕಿನಲ್ಲೇ ಚಲಿಸುತ್ತಿವೆ. ಅದರಲ್ಲಿ ಯಾವುದು ಸರಿ ತಪ್ಪು ಎನ್ನುವುದನ್ನು ವಿಶ್ಲೇಷಿಸುವುದು ಈ ಪ್ರಬಂಧದ ಉದ್ದೇಶವಲ್ಲ. ಮೇಲೆ ಕೊಟ್ಟಿರುವ ಎರಡು ಘಟನೆಗಳನ್ನು ವಿಶ್ಲೇಷಿಸಿದಾಗ ಸುಧೀಂದ್ರ ತೀರ್ಥರ ದೇಹ ಯಾವುದೇ ಬದಲಾವಣೆ ಇಲ್ಲದಿರುವುದು ನಂಬಿಕೆ, ಅವೈಜ್ಞಾನಿಕ ಎನಿಸಿದರೆ, ವ್ಯಾಸರಾಜ ತೀರ್ಥರ ಬೃಂದಾವನ ನೆಲಸಮವಾದರೂ ಭಕ್ತಿಯಿಂದ ಮರುಪ್ರತಿಷ್ಠಾಪನೆ ಮಾಡಿದ್ದನ್ನು ನೋಡಿದಾಗ ನಾಶ ಮಾಡಿದ ಭ್ರಷ್ಟರೇ ಅಜ್ಞಾನಿಗಳು ಎಂದು ಅನಿಸುವುದು.
- ವ್ಯಕ್ತಿಗತ ಗುಣವಿಶೇಷಗಳು: ಒಂದೇ ಕುಟುಂಬದ ಮೂರು ತಲೆಮಾರಿನ ಸದಸ್ಯರ ಗುಣವಿಶೇಷಗಳನ್ನು ಮತ್ತು ಕಾಲಾವಧಿಯನ್ನು ಕೂಲಂಕಷವಾಗಿ ಮೊದಲನೇ ಭಾಗದಲ್ಲಿ ಕೊಟ್ಟಿದ್ದೇನೆ.
- ತಾತ್ವಿಕ ಮೌಲ್ಯಗಳು: ನಂತರ ಈ ಕುಟುಂಬದ ಮೂರೂ ತಲೆಮಾರಿನಲ್ಲಿ ಅಡಕವಾಗಿರುವ ತಾತ್ವಿಕ ಮೌಲ್ಯಗಳ ಬಗ್ಗೆ ಮತ್ತು ಆ ಮೌಲ್ಯಗಳನ್ನು ಪರಿಪಾಲಿಸುವ ಪದ್ದತಿಯ ಬಗ್ಗೆ ಎರಡನೇ ಭಾಗದಲ್ಲಿ ಹೆಚ್ಚು ವಿವರಣೆ ಕೊಟ್ಟಿದ್ದೇನೆ.
- ಮೌಲ್ಯಗಳ ಬದಲಾವಣೆ: ಈ ಎಂಬತ್ತು ವರ್ಷಗಳ ಕಾಲಾವಧಿಯಲ್ಲಿ ಪರಸಂಸ್ಕೃತಿಯ ಪ್ರಭಾವದಿಂದ ಆದ ಮೌಲ್ಯಗಳ ಬದಲಾವಣೆ, ಸೃಜಿಸಿದ ಹೊಸ ಮೌಲ್ಯಗಳು, ಮೌಲ್ಯಗಳ ಹೊಂದಾಣಿಕೆ ಮತ್ತು ಸಮೀಕರಣವಾದ ಮೌಲ್ಯಗಳ ಬಗ್ಗೆ ಮೂರನೇ ಭಾಗದಲ್ಲಿ ವಿವರಿಸಿ ಕಾರಣಗಳನ್ನು ಕೊಟ್ಟಿದ್ದೇನೆ.
- ವಿಶ್ಲೇಷಣೆ: ಕೊನೆಯಲ್ಲಿ ವೈಯುಕ್ತಿಕ ಮಾಪನ ಬಳಸಿ ಈ ಮೂರೂ ತಲೆಮಾರಿನಲ್ಲಿ ಆದ ಮೌಲ್ಯಗಳ ರೂಪಾಂತರ ಮತ್ತು ವ್ಯತ್ಯಾಸವನ್ನು ವಿಶ್ಲೇಷಿಸಿ ಪರಸಂಸ್ಕೃತಿಯನ್ನು ಸ್ವೀಕಾರ ಮಾಡುವುದರಿಂದ ಮೂಲಭೂತ ಮೌಲ್ಯಗಳು ಬದಲಾಗುತ್ತವೆಯೇ ಎನ್ನುವ ಪ್ರಶ್ನೆಗೆ ನಿರ್ಣಾಯಕರ ಉತ್ತರ ಕೊಡುವ ಪ್ರಯತ್ನ ಮಾಡಿದ್ದೇನೆ.
- ದೇವರಲ್ಲಿ ನಂಬಿಕೆ, ಶಾಂತಿ ಮತ್ತು ಧಾರ್ಮಿಕ ಸಂಪ್ರದಾಯಗಳನ್ನು ಪರಿಪಾಲಿಸುವ ಮೌಲ್ಯವನ್ನು ವಿಶ್ಲೇಷಿಸಿದಾಗ, ಬ್ರಿಟಿಷ್ ಪರಸಂಸ್ಕೃತಿಯಲ್ಲಿ ಮೊದಲನೇ ತಲೆಮಾರಿಗೆ (1935-60) ಹೆಚ್ಚಾಗಿ ಪರಿವರ್ತನೆ ಆಗಲಿಲ್ಲ. ವ್ಯಾವಹಾರಿಕ ಮತ್ತು ದಿನನಿತ್ಯದ ಮತಾಚಾರಗಳನ್ನು ಬದಲಾವಣೆಗಿಂತ ಹೊಂದಾಣಿಕೆಯಲ್ಲಿ ಸರಿದೂಗಿಸಿದರು. ಅಮೆರಿಕದ ಪರಸಂಸ್ಕೃತಿಯಲ್ಲಿ ಎರಡನೇ ತಲೆಮಾರಿಗೆ (1985-2015) ವ್ಯಾವಹಾರಿಕ ಮತ್ತು ದಿನನಿತ್ಯದ ಮತಾಚಾರಗಳಲ್ಲಿ ಹೆಚ್ಚಿನ ಬದಲಾವಣೆ ಮಾಡಬೇಕಾಯಿತಾದರೂ ಸಮೀಕರಣದ ಮೂಲಕ ಎರಡು ಸಂಸ್ಕೃತಿಯನ್ನು ಸರಿದೂಗಿಸಿದೆವು. ಆದರೆ ಮೂರನೇ ತಲೆಮಾರಿಗೆ (1985-2015 ಮತ್ತು ಅದರಾಚೆ) ತೀವ್ರ ಬದಲಾವಣೆಯಾಗಿ ತಳಹದಿ ಭದ್ರವಾಗಿದ್ದರೂ ಮುಂದೆ ಏನಾಗುವುದು ಎಂದು ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ದೇವರಲ್ಲಿ ನಂಬಿಕೆ ಉಳಿದರೂ ಧಾರ್ಮಿಕ ಸಂಪ್ರಧಾಯಗಳು ಮುಂದುವರೆಯುವ ಸಾಧ್ಯತೆ ಶೂನ್ಯವೆಂದೇ ಹೇಳಬಹುದು.
- ಮಿತವ್ಯಯ ಮತ್ತು ಸಂಪನ್ಮೂಲಗಳನ್ನು ದುಂದು ವೆಚ್ಚ ಮಾಡದಿರುವ ಮೌಲ್ಯ ಮೂರೂ ಸಂಸ್ಕೃತಿಗಳಿಂದ ಮೂರೂ ತಲೆಮಾರಿಗೆ ವರ್ಗಾವಣೆಯಾಗಿ, ಕೆಲವೊಂದು ಸೃಜಿಸಿದ ಮೌಲ್ಯಗಳನ್ನು ಅಳವಡಿಸಿಕೊಂಡು ಯಾವ ಬದಲಾವಣೆಯ ಅವಶ್ಯವಿಲ್ಲದೆ ಮುಂದುವರಿಯುತ್ತಿದೆ. ಸೃಜಿಸಿದ ಮೌಲ್ಯಗಳಿಗಿಂತ ತಾತ್ವಿಕ ಮೌಲ್ಯಗಳೇ ಆಧಾರಸ್ಥಂಭಗಳಾಗಿವೆ.
- ಕುಟುಂಬ ಮತ್ತು ಕುಟುಂಬದ ಐಕ್ಯತೆಗೆ ಹೆಚ್ಚು ಪ್ರಾಧಾನ್ಯ ಕೊಡುವ ಮೌಲ್ಯ, ಪರಸಂಸ್ಕೃತಿಗಳ ಪ್ರಭಾವ ಮತ್ತು ಸಮಾಜದಲ್ಲಾದ ಬದಲಾವಣೆಗಳಿಂದ, ಹೆಚ್ಚು ಪಾಲು ವಿಲೀನಗೊಂಡು ವೈಯುಕ್ತಿಕತೆಗೆ ಮತ್ತು ಒಂಟಿತನದ ಅಸ್ತಿತ್ವಕ್ಕೆ ಪ್ರಾಧಾನ್ಯ ತಂದಿವೆ. ಬ್ರಿಟಿಷರ ಪರಸಂಸ್ಕೃತಿಯಲ್ಲೇ ಮೊದಲನೇ ತಲೆಮಾರಿನಲ್ಲಿ ಶುರುವಾದ ಈ ಪರಿವರ್ತನೆ ಅಮೆರಿಕದಲ್ಲಿ ಎರಡನೇ ತಲೆಮಾರಿಗೆ ಸುಪರಿಚಿತವಾಗಿ ಮೂರನೇ ತಲೆಮಾರಿನಲ್ಲಿ ವಿಲೀನಗೊಂಡು ಬೇರೂರಿದೆ.
- ವಿದ್ಯಾಭ್ಯಾಸ ಮತ್ತು ಶಿಸ್ತಿನ ಜೀವನವನ್ನು ಗೌರವಿಸಿವುವ ಮೌಲ್ಯ, ಮೂರೂ ಸಂಸ್ಕೃತಿಗಳಿಂದ ಮೂರೂ ತಲೆಮಾರಿಗೆ ವರ್ಗಾವಣೆಯಾಗಿ ಯಾವ ಬದಲಾವಣೆಯ ಅವಶ್ಯವಿಲ್ಲದೆ ಮುಂದುವರಿಯುತ್ತಿದೆ.
- ಅಹಿಂಸೆ ಮತ್ತು ಆಹಾರ ಪದ್ದತಿಯನ್ನು ಅನುಸರಿಸುವ ಮೌಲ್ಯದಲ್ಲಿ, ಬ್ರಿಟಿಷ್ ಪರಸಂಸ್ಕೃತಿ ನನ್ನ ತಂದೆ ತಾಯಿಯ ತಲೆಮಾರಿಗೆ ಅಷ್ಟೇನೂ ಪ್ರಭಾವ ಬೀರದಿದ್ದರೂ, ಅಮೆರಿಕದ ಪರಸಂಸ್ಕೃತಿಯಲ್ಲಿ ಎರಡನೇ ಮತ್ತು ಮೂರನೇ ತಲೆಮಾರಿನವರು ಸಾಕಷ್ಟು ಪರಿವರ್ತನೆ ಮಾಡಿಕೊಂಡು ಹೆಚ್ಚಾಗಿ ಸಮೀಕರಣ ಮತ್ತು ಸೃಜಿಸಿದ ಮೌಲ್ಯಗಳನ್ನು ಅಳವಡಿಸಿಕೊಂಡಿದ್ದೇವೆ. ಈ ವಿಚಾರದಲ್ಲಿ ಪ್ರತ್ಯೇಕೀಕರಣ ಹೆಚ್ಚು ಯಶಸ್ಸು ತಂದಿದೆ ಎಂದೇ ಹೇಳಬಹುದು.
- ತಾತ್ವಿಕ ಮೌಲ್ಯಗಳು ಮೊದಲ ಎರಡು ತಲೆಮಾರಿನಲ್ಲಿ ಹೆಚ್ಚು ಬದಲಾಗದೆ ಉಳಿದಿವೆ.
- ಮೊದಲೆರಡು ತಲೆಮಾರಿನಲ್ಲಿ ಪರಿವರ್ತನೆ ಮತ್ತು ಸಮೀಕರಣವೇ ಮೇಲುಗೈ ಪಡೆದಿದೆ.
- ಅಮೆರಿಕದ ಸಾಮಾಜಿಕ ಪರಿವರ್ತನೆಯ ಫಲಿತಾಂಶವೆ ಇರಬಹುದೇನೋ ಎನ್ನುವಂತೆ, ಮೂರನೇ ತಲೆಮಾರಿನಲ್ಲಿ ತಾತ್ವಿಕ ಮೌಲ್ಯಗಳು ಸೃಜಿಸಿದ ಮೌಲ್ಯಗಳೊಡನೆ ಬೆರೆತು ಹೊಸ ರೂಪ ತಾಳಿವೆ. ಜೊತೆಗೆ ಈ ತಲೆಮಾರಿನ ಧಾರ್ಮಿಕ ಸಂಪ್ರದಾಯ ಮತ್ತು ಕುಟುಂಬದ ಐಕ್ಯತೆಯಲ್ಲಿ ತೀರ್ವ ಬದಲಾವಣೆಗಳಾಗಿ, ತಾತ್ವಿಕ ಮೌಲ್ಯ ಒಂದು ಅನಿರ್ಧಿಷ್ಠಿತ ದಿಸೆಯಲ್ಲಿ ಸಾಗುತ್ತಿದ್ದರೂ ಅಡಿಪಾಯ ಭದ್ರವಾಗಿದೆ.
- ಪರಸಂಸ್ಕೃತಿಯಲ್ಲಿ ತಾತ್ವಿಕ ಮೌಲ್ಯಗಳನ್ನು ಉಳಿಸಿಕೊಳ್ಳಲು ಹೊರಗಿನಿಂದ ಎಷ್ಟೇ ದಾಳಿಯ ಭೀತಿ, ಒತ್ತಡವಿದ್ದರೂ ಕೊನೆಗೆ ನಮ್ಮ ಹಿಂದಿನ ತಲೆಮಾರಿನಿಂದ ನಾವು ಕಲಿತದ್ದನ್ನು ನಮ್ಮದಾಗಿಸಿಕೊಳ್ಳುವುದು ನಮ್ಮ ಕೈಯಲ್ಲೇ ಇದೆಯೇ ಹೊರತು ಪರಸಂಸ್ಕೃತಿಯನ್ನು ಆಕ್ಷೇಪಿಸುವುದರಿಂದಾಗಲಿ ಅಥವಾ ನಕಲು ಮಾಡುವುದರಿಂದ ಸಾಧ್ಯವಿಲ್ಲ. ಪರಸಂಸ್ಕೃತಿಯಲ್ಲಿ ತಾತ್ವಿಕ ಮೌಲ್ಯಗಳನ್ನು ಕಾಪಾಡಲು ಪ್ರತಿಯೊಂದು ತಲೆಮಾರಿಗೂ ಬೇರೆಯೇ ಹೊಣೆಗಾರಿಕೆ ಕಾಣಿಸಿಕೊಳ್ಳುತ್ತದೆ. ಅವುಗಳನ್ನು ನಿಷ್ಪಕ್ಷಪಾತವಾಗಿ ಅಳವಡಿಸಿಕೊಳ್ಳಲು ಬದಲಾವಣೆ, ಹೊಂದಾಣಿಕೆ, ಸಮೀಕರಣ, ವಿಲೀನಗೊಳಿಸುವಿಕೆ ಅಥವಾ ಪ್ರತ್ಯೇಕೀಕರಣದನಂತಹ ಪರಿಹಾರ ಮಾರ್ಗಗಳ ಮೇಲೆ ಬೆಳಕು ಚೆಲ್ಲಿದೆ, ಈ ಲಘುಲೇಖನ.
- Acculturation -- Wikipedia
- Rethinking the Concept of Acculturation: Implications for Theory and Research, Seth J. Schwatrz et al., American Psychology, May-June 2010, Pages: 237-251.
Acculturation: Living successfully in two cultures, John W. Berry., International Journal of Intercultural Relations, Volume 29, Issue 6, November 2005, Pages 697-712
- Several blogs and internet sites. Specifically Thoughtco.com
______________________________
--------------------------------------------------------------------------
ವೇದೋಪನಿಷಿತ್
|
ಆಗಮ
|
ಜ್ಞಾನ ಮಾರ್ಗ
|
ಭಕ್ತಿ ಮಾರ್ಗ
|
ಅಗ್ನಿ ಮಾಧ್ಯಮ
|
ನೇರವಾಗಿ ದೇವರ ಪೂಜೆ
|
ಬಲಿ ಮತ್ತು ಆಹುತಿ
|
ಪ್ರಸಾದ ಮತ್ತು ನೈವೇದ್ಯ
|
ನೂರಾರು ದೇವರಿಗೆ ಪೂಜೆ
|
ಒಂದೇ ದೇವರ ಪೂಜೆ
|
ಮಂತ್ರಕ್ಕೆ ಹೆಚ್ಚು ಸ್ಥಾನ
|
ಭಜನೆ, ನಮನೆಗೆ ಹೆಚ್ಚು ಸ್ಥಾನ
|
ವಿಗ್ರಹ ಇಲ್ಲ
|
ಮೂರ್ತಿ ಹಾಗು ಪ್ರತೀಕಗಳು
|
ದೇವಸ್ಥಾನಗಳಿಲ್ಲ
|
ಸಾಮೂಹಿಕ ಪೂಜೆಗೆ ದೇವಸ್ಥಾನ
|
೧೬ ಸಂಸ್ಕಾರಗಳು
|
ದೀಕ್ಷೆ
|
ವರ್ಣಾಶ್ರಮ
|
ಎಲ್ಲ ಮನುಷ್ಯರು ಒಂದೇ
|
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ