ಗುರುವಾರ, ಏಪ್ರಿಲ್ 23, 2026

‘ಸಿನ್ನರ್ಸ್’ ಚಲನ ಚಿತ್ರದ ಚಿತ್ರಕಥೆ.

 

ನೆನ್ನೆ ರಾತ್ರಿ (ಮಾರ್ಚ್ ೮, ೨೦೨೬) ನೋಡಿದ ಆಸ್ಕರ್ ಪುರಸ್ಕಾರದಲ್ಲಿ ಎಲ್ಲದಕ್ಕಿಂತ ನಾನು ಹೆಚ್ಚು ಗಮನ ಕೊಟ್ಟ ಪುರಸ್ಕಾರ: ಅತ್ತ್ಯತ್ತಮ ಚಿತ್ರಕಥೆ. Best original screenplay, WINNER: “Sinners” ‘ಸಿನ್ನರ್ಸ್’ ಚಿತ್ರಕಥೆ ಬರೆದಿರುವವರು ರಯಾನ್ ಕೂಗ್ಲರ್. ಇನ್ನೂ ಚಿಕ್ಕ ವಯಸ್ಸಿನ ಬರಹಗಾರ. ‘ಸಿನ್ನರ್ಸ್’ 1930ರ ದಶಕದಲ್ಲಿ ಮಿಸಿಸಿಪ್ಪಿ ರಾಜ್ಯದ ಸುತ್ತಮುತ್ತವಿರುವ ಸಣ್ಣ ಸಣ್ಣ ಹಳ್ಳಿಯಲ್ಲಿ ನಡೆಯುವ ಘಟನೆಗಳ ಚಿತ್ರಣ. ಆಗಿನ ಹತ್ತಿಬೆಳೆಯುವ ‘ಶೇರ್ ಕ್ರಾಪರ್’ (sharecropper) ಕಥೆಯಸುತ್ತಾ ಹೆಣೆದಿರುವ ಒಂದು ಚಿತ್ರಕಥೆ. ಇಡೀ ಚಿತ್ರದಲ್ಲಿ ಸುಮಾರು 24-26 ತಾಸುಗಳಲ್ಲಾಗುವ ಘಟನೆಗಳ ಮೂಲಕವೇ ಹತ್ತಾರು ಜನರ ಮಧ್ಯೆ ಪರಸ್ಪರ ಪ್ರಭಾವ ಬೀರುವ ಆಘಾತ, ವ್ಯಸನ, ಕಲಹ, ನಂಬಿಕೆ, ದ್ರೋಹ ಹೀಗೆ ಹಲವಾರು ಸ್ಪಂದನಗಳ ಕಥಾವಸ್ತುಗಳನ್ನು ಕೇಂದ್ರೀಕರಿಸಿ ಬರೆದ ಶೈಲಿ ಚೆನ್ನಾಗಿದೆ. ಯಾವುದೇ ಕಾದಂಬರಿ, ಅಥವಾ ಹಳೆಯ ಕಥಾವಸ್ತುವನ್ನು ಆದರಿಸಿ ಬರೆದ ಚಿತ್ರಕಥೆ ಆಗಿಲ್ಲದ ಕಾರಣ ‘ಸಿನ್ನರ್ಸ್’ ಮೂವತ್ತರ ದಶಕದ ದಕ್ಷಿಣ ಅಮೇರಿಕಾದ ಸಾಮಾಜಿಕ ಜೀವನ ಶೈಲಿಯನ್ನು ಸಾಹಿತ್ಯಾಸಕ್ತರ ಮುಂದಿಡಲು ಯಶಸ್ವಿಯಾಗಿದೆ.

ಚಿತ್ರಕಥೆಗೆ ಸಂಭಾಷಣೆಯೇ ಮುಖ್ಯ. ಈ ಚಿತ್ರದಲ್ಲಿ ಬಳಸಿರುವ ಹತ್ತಿ ರೈತರ ಭಾಷೆಯ ಸೊಗಡು ಯಾವುದೇ ಸಮಕಾಲೀನ ಸಾಹಿತ್ಯದಲ್ಲಿ ಕಾಣುವುದಿಲ್ಲ ಎಂದರೂ ಅತಿಶಯೋಕ್ತಿಯಲ್ಲ. ಅದಕ್ಕಿಂತಲೂ ಹೆಚ್ಚಾಗಿ ಸಮಾಜದಲ್ಲಿ ಬಗೆಹರಿಸಲಾಗದ ವ್ಯಾಂಪೈರ್ ಭಯಾನಕತೆ; ಬ್ಲೂಸ್ ಸಂಗೀತದ ಆಧ್ಯಾತ್ಮಿಕ ಮತ್ತು ಅತೀಂದ್ರಿಯ ಶಕ್ತಿಯ ಚುರುಕಿನ ಪ್ರತಿಬಿಂಬ; ಲೌಕಿಕವಲ್ಲದ ಅನುಭವಗಳು, ಎಲ್ಲವನ್ನೂ ಮನಸ್ಸಿಗೆ ತಟ್ಟುವಂತೆ ಬರೆದ ಚಿತ್ರಕಥೆಯಿಂದಲೇ ಈ ಚಿತ್ರ ಮೆಚ್ಚುವಂತಾಗಿರಬೇಕು. ಚಲನ ಚಿತ್ರಕ್ಕಿಂತಲೂ ಚಿತ್ರಕಥೆಯ ಚಮತ್ಕಾರ ಹೆಚ್ಚು. ಚಿತ್ರಕಥೆಯ ಒಂದು ತುಣುಕು ನೋಡಿ, ಹೀಗಿದೆ.

EXT. GREY OAKS PLANTATION - DAY SAMMIE (19, BLACK)
A SHARECROPPER works barefoot in a cotton field, the morning sun is still low in the sky. He hums a tune to himself, (I LIED TO YOU). He’s been at it for hours, evidenced by the full 9 ft sack beside him. Other SHARECROPPERS begin to show to start their day.

SHARECROPPER You out early this fine Saturday morning. I take it you strummin’ that guitar tonight? Sammie smiles.

SHARECROPPER (CONT’D)You gonna tell me where you playin’ or am I gonna have to hear it through the grapevine? Sammie packs up the massive bag of cotton.

ಕನ್ನಡ ಚಲನ ಚಿತ್ರಗಳ ಸುವರ್ಣ ಸಮಯ ಅನ್ನುವ ಅರವತ್ತರ ದಶಕದಲ್ಲಿ ಕೂಡ ಎಲ್ಲಾ ಚಿತ್ರಕಥೆಗಳು ಯಾವುದಾದರೂ ಕಾದಂಬರಿ, ಇತಿಹಾಸ, ಪುರಾಣ ಕಥೆಗಳನ್ನಾಧರಿಸಿ ಬರೆದ ಕಥಾವಸ್ತುಗಳು. ಕನ್ನಡದಲ್ಲಿ ಸ್ವಂತ ಚಿತ್ರಕಥೆಗಳನ್ನು ನಾವು ಕಾಣುವುದು 1990ರ ಕೊನೆ ಕೊನೆಗೆ ಬಂದ ‘ಉಪೇಂದ್ರ,’ ‘ಓಂ’ ‘A’, ಮುಂತಾದವು. ಆದರೆ ಅವುಗಳೂ ಕೂಡ ಯಾವುದಾದರೂ ನೈಜ ಘಟನೆ ಅಥವಾ ವಾಸ್ತವ ಕತೆಗಳನ್ನು ಆದರಿಸಿ ಬರೆದ ಚಿತ್ರಕಥೆಗಳು. ಹಾಗೆ ನೋಡಿದರೆ ಮೂಲ ಚಿತ್ರ ಕಥೆ 2006ನೇ ಇಸವಿಯವರೆಗೂ ಬರಲೇ ಇಲ್ಲ. ಆ ವರ್ಷದ ‘ಮುಂಗಾರು ಮಳೆ’ ಚಿತ್ರಕಥೆ ತಳಹದಿಯಾಯಿತು ಎನ್ನಬಹುದು. ನಂತರ ‘ಲೂಸಿಯಾ’ (2013), ‘ಉಳಿದವರು ಕಂಡಂತೆ’ (2014), ‘ತಿಥಿ’ (2016), ‘ಗರುಡ ಗಮನ ವೃಷಭ ವಾಹನ’ (2021) ಇತ್ಯಾದಿ ಚಿತ್ರಗಳು ಕೂಡ ಹಾಲಿವುಡ್ ನಂತೆಯೇ ಸ್ವಂತ ಚಿತ್ರಕಥೆಗಳನ್ನು ಚಲನ ಚಿತ್ರವಾಗಿಸಿ ಯಶಸ್ಸುಗಳಿಸಿದವು. ನಮ್ಮ ಚಿತ್ರಕಥೆಗಳು ಇನ್ನೂ ಆಸ್ಕರ್ ಮಟ್ಟಕ್ಕೆ ಬಾರದಿರಬಹುದು, ಚಿತ್ರಕಥೆಯೂ ಸಾಹಿತ್ಯವಾಗುವ ಆಶಯ ಇನ್ನೂ ಮೂಡದಿರಬಹುದು. ಆದರೆ ಕಾದಂಬರಿಗಳ ಅಥವಾ ಸಣ್ಣ ಕಥೆಗಳ ಸಾಹಿತ್ಯ ದೃಷ್ಟಿಯಿಂದಲೇ ಚಲನ ಚಿತ್ರಗಳನ್ನು ನೋಡುವ ಕಾಲ ಮುಗಿದಿದೆಯೇ? ಚಿತ್ರಕಥೆಗಳ ಹೊಸ ಆವಿಷ್ಕಾರಕ್ಕೆ ಅಡಚಣೆಗಳು ಏನು? ಸಿನಿಮಾ ರಂಗದ ಅನುಭವಿದ್ದರೆ ಮಾತ್ರ ಈ ಸಾಹಿತ್ಯ ಮಾಧ್ಯಮ ಕರಗತವಾಗುವುದೇ? ಈ ಮಾಧ್ಯಮ ಮುಂದೆ ಬೆಳೆದು ಸಾಹಿತ್ಯದ ತೀಕ್ಷಣತೆಗೆ ಗುರಿಯಾಗದೆ ಸಮಾಜದ ಸಮಸ್ಸೆಗಳಿಗೆ ಹೊಸ ರೂಪ ಕೊಡಬಹುದೇ? ಹಲವಾರು ಪ್ರಶ್ನೆಗಳು ಹುಟ್ಟುತ್ತವೆ



ಶ್ರೀ ರಾಮನ ಸೇವೆ ಮಾಡಲು ಹಲವು ಮಾರ್ಗಗಳಂತೆ.


 



ಪರಾಭವ ಸಂವತ್ಸರದ ಶ್ರೀ ರಾಮ ನವಮಿಯಂದು ನನ್ನ ಅಳಿಲು ಸೇವೆ: ವಿದ್ವಾನ್ ರಂಗನಾಥಶರ್ಮ ಅವರು ಕನ್ನಡಕ್ಕೆ ಅನುವಾದಿಸಿ 1960ರ ದಶಕದಲ್ಲಿ ಪ್ರಕಟಿಸಿದ ಶ್ರೀಮದ್ವಾಲ್ಮೀಕಿ ರಾಮಾಯಣಂ ಪುಸ್ತಕಗಳನ್ನು ಗೂಗಲ್ ಪ್ಲೆ ನಲ್ಲಿ ನಿಮ್ಮೊಡನೆ ಹಂಚಿಕೊಳ್ಳುವ ಭಾಗ್ಯ ನನ್ನದಾಗಿದೆ. ಎಂಟು ಸಂಪುಟಗಳಲ್ಲಿರುವ ಈ ಪುಸ್ತಕಗಳಿಗೆ ಮರುಜೀವ ಕೊಡುವ ಉದ್ದೇಶವಷ್ಟೇ ಇದಾಗಿಲ್ಲ. ಮರೆತುಹೋದ ಅಮೋಘ ಕೃತಿಗಳಿವು. ಓದುಗರಿಗೆ ಅಷ್ಟು ಸುಲಭವಾಗಿ ಸಿಗದ ಪುಸ್ತಕಗಳಿವು. ಪ್ರಪಂಚದಾದ್ಯಂತ ಕನ್ನಡ ಓದುಗರಿಗೆ ಉಚಿತವಾಗಿ ಎಂಟೂ ಸಂಪುಟಗಳನ್ನು ಡಿಜಿಟಲ್ ಮಾಧ್ಯಮದಲ್ಲಿ ಹೊರತರಲು ಪಟ್ಟ ನನ್ನ ಈ ಶ್ರಮ ಸಾರ್ಥಕ ಎನಿಸುವುದು ಎಲ್ಲ ವಿದ್ಯಾವಂತ ಕನ್ನಡಿಗರು ಇವುಗಳನ್ನು ತಮ್ಮ ಜೀವನದಲ್ಲಿ ಒಂದು ಬಾರಿಯಾದರೂ ಓದಿದಾಗ ಮಾತ್ರ. ಪುಸ್ತಕಗಳ ಕವರ್ ಡಿಸೈನ್ ನನ್ನದೇ. ಫೋನ್, ಕಂಪ್ಯೂಟರ್, ಟ್ಯಾಬ್ಲೆಟ್ ಯಾವುದೇ ಮಾಧ್ಯಮಲ್ಲಿ ಎಲ್ಲಿ ಬೇಕಾದರೂ ಓದಲೂ ಸಾಧ್ಯವಿರುವ ಈ ಸುದವಕಾಶವನ್ನು ಉಪಯೋಗಿಸಿಕೊಳ್ಳಿ, ಸ್ನೇಹಿತರೊಡನೆ ಹಂಚಿಕೊಳ್ಳಿ. ಜೈ ಶ್ರೀ ರಾಮ್. 

ಶ್ರೀಮದ್ವಾಲ್ಮೀಕಿ ರಾಮಾಯಣಂ


ಸೋಮವಾರ, ಫೆಬ್ರವರಿ 23, 2026

ಅಯೋಧ್ಯ ರಾಮನ ಗಂಧಾಕ್ಷತೆ

 


ಅಯೋಧ್ಯ ರಾಮನ ಗಂಧಾಕ್ಷತೆ.

ಸುಮಾರು ೧೫ ವರ್ಷಗಳಿರಬಹುದು ನಾನು ಈ ಬ್ಲಾಗ್ ಶುರು ಮಾಡಿ. ಬ್ಲಾಗ್ ಗೆ ಏನು ಹೆಸರು ಕೊಡುವ ಅಂತ ಯೋಚಿಸಿದಾಗ ಹೊಳೆದದ್ದು ಗಂಧಾಕ್ಷತೆ.  ಗಂಧಾಕ್ಷತೆ ಕೊಡುವುದು ಯಾವುದಾದರೂ ಪುಣ್ಯಕಾರ್ಯದಲ್ಲಿ ಅಲ್ಲವೇ? ಗಂಧಾಕ್ಷತೆ ಎಂದು ಹೊಳೆದ ತಕ್ಷಣ ಶ್ರೀ ರಾಮನ ಪಟ್ಟಾಭಿಷೇಕಕ್ಕಿಂತ ಮತ್ತೊಂದು ಸಂಭ್ರಮದ ಘಳಿಗೆಯೇ ಮನಸ್ಸಿಗೆ ಬರಲಿಲ್ಲ ಅಂದು.  ತಕ್ಷಣ ನನ್ನ ಬ್ಲಾಗ್ ಗೆ ಒಂದು ಸುಂದರ ಫೋಟೋ ಹುಡುಕಿದೆ.  ಸಿಕ್ಕಿದ್ದು ಶ್ರೀ ರಾಮನ ಪಟ್ಟಾಭಿಷೇಕದ ಒಂದು ತಾಮ್ರದಲ್ಲಿ ಮಾಡಿದ ಸುಂದರ ಕೆತ್ತನೆಯ ಶಿಲ್ಪಕೃತಿ. ಅದರಲ್ಲಿ ಶ್ರೀರಾಮ, ಸೀತೆ ಪಟ್ಟದಮೇಲೆ ಕುಳಿತ ದೃಶ್ಯ. ಲಕ್ಷ್ಮಣ, ಭರತ, ಶತ್ರುಜ್ಞ, ಮುನಿವರ್ಯರು, ಗಂಧರ್ವರು, ನಿಂತಿದ್ದಾರೆ, ಆಂಜನೇಯ ನಮ್ರತೆಯಿಂದ ಶ್ರೀ ರಾಮನ ಪಾದದ ಬಳಿ ಕುಳಿತಿರುವ ಈ ದೃಶ್ಯ ಬಹಳ ಇಷ್ಟವಾಯಿತು ಅಂದು.  ಅಂದಿನಿಂದ ನನಗೆ ಗಂಧಾಕ್ಷತೆ ಅಂದರೂ ಒಂದೇ, ಶ್ರೀ ರಾಮ ಪಟ್ಟಾಭಿಷೇಕವೂ ಒಂದೇ ಎಂದು ಆಗಿಬಿಟ್ಟಿದೆ.  

ನಾನು ಬ್ಲಾಗ್ ಶುರು ಮಾಡಿದಾಗ ಅಯೋಧ್ಯೆಯಲ್ಲಿ ಅಂದು ಶ್ರೀ ರಾಮನ ದೇವಸ್ಥಾನವೇ ಇರಲಿಲ್ಲ.  ಆದರೆ ಇಂದು ನನಗೆ ಇಂಟರ್ನೆಟ್ ನಲ್ಲಿ ದೊರೆತದ್ದು ಅಲ್ಲಿಯ ಒಂದು ಶಿಲ್ಪಕೃತಿ.  ಅದೂ ಶ್ರೀ ರಾಮ ಪಟ್ಟಾಭಿಷೇಕದ ಕೆತ್ತನೆ.  ಅಯೋಧ್ಯಾ ರಾಮನ ಗುಡಿಯ ಸುತ್ತಲೂ ಕೆತ್ತಿರುವ ಅನೇಕ ಶಿಲ್ಪಗಳಲ್ಲಿ ಇದೂ ಕೂಡ ಒಂದು. ಕಳೆದ ವರ್ಷ ಅಂದರೆ ಜುಲೈ ನಲ್ಲಿ ನಾನು ಅಯೋಧ್ಯೆಗೆ ಹೋಗಿ ಶ್ರೀ ರಾಮನ ದರ್ಶನ ಪಡೆದಿದ್ದೆ.  ಆಗ ಅಲ್ಲಿ ನೂರಾರು ಶಿಲ್ಪಿಗಳು ಇನ್ನೂ ಕೆಲಸ ಮುಂದುವರೆಸೆ ಇದ್ದರು.  ಆ ಕೆತ್ತನೆಗಳ ಕಾರ್ಯವನ್ನು ಕಣ್ಣಾರೆ ಕಂಡು ಖುಷಿ ಪಟ್ಟಿದ್ದೆ.  ಫೋಟೋ ತೆಗೆಯಲು ಅನುಮತಿ ಇರಲಿಲ್ಲದ ಕಾರಣ ನಿರಾಶೆಯೇ ಆಗಿತ್ತು.  ಆದರೆ ಇಂದು ಈ ಇಂಟರ್ನೆಟ್ ನಲ್ಲಿ ನೋಡಿದ ಈ ಚಿತ್ರ ಗಮನ ಸೆಳೆದದ್ದೂ ನನ್ನ ಗಂಧಾಕ್ಷತೆಯ ಫೋಟೋವನ್ನೇ ಹೋಲುತ್ತಿದೆ ಎನ್ನುವ ಕಾರಣವೇ ಇರಬೇಕು.  ಅಯೋದ್ಯೆಯ ಭೇಟಿ ಮಾಡಿದವರಿಗೆ ನಿನ್ನೆಯೋ ಮೊನ್ನೆಯೋ ಈ ಸುಂದರ ಶಿಲ್ಪಕೃತಿಯನ್ನು ದೇವಸ್ಥಾನದ ಪ್ರಾಕಾರದ ಗೋಡೆಗಳಲ್ಲಿ ನೋಡುವ ಸೌಭಾಗ್ಯ ದೊರೆಕಿದೆಯಂತೆ. ನನಗೂ ಇಷ್ಟವಾಯಿತು.  ಜೊತೆಗೆ ನನ್ನ ಗಂಧಾಕ್ಷತೆಯ ಹಿನ್ನಲೆ ತಾನಾಗಿಯೇ ಜ್ಞಾಪಿಸಿಬಿಟ್ಟ ಶ್ರೀ ರಾಮ. ನನ್ನ ಬ್ಲಾಗಿಗೆ ಅಂದೂ ಕೂಡ ಗಂಧಾಕ್ಷತೆ ಶ್ರೀ ರಾಮ ಪಟ್ಟಾಭಿಷೇಕದ ಸಂಕೇತ, ಇಂದೂ ಕೂಡ ಅಯೋಧ್ಯೆಯಲ್ಲಿ ಶ್ರೀ ರಾಮ ಪಟ್ಟಾಭಿಷೇಕದ ಸಂಕೇತ.

ಬುಧವಾರ, ಜನವರಿ 28, 2026

ಆಹಾ ಯುಗಾದಿಯ ಭಕ್ಷ್ಯಗಳಿವು….

 


ಆಹಾ ಯುಗಾದಿಯ ಭಕ್ಷ್ಯಗಳಿವು…. 

ಊಟ ಪ್ರಾರಂಭಿಸಿದ್ದು ಬಲಗೈಯ ಬೆರಳಿನ ತುದಿಗಳಿಂದಲೇ ನಯವಾಗಿ ಅಂಟಿಯೂ ಅಂಟದಂತೆ ಎತ್ತಿ ನಾಲಿಗೆಗೆ ರುಚಿ ತೋರಿಸಿದ ಹಲಸಿನ ಹಣ್ಣಿನ ಪಾಯಸದೊಂದಿಗೆ. ಸಿಹಿಯಾದ ಹಲಸಿನ ಹಣ್ಣಿನ ತೊಳೆಯನ್ನು ಅಂದವಾಗಿ ತುಂಡರಿಸಿ ತುಪ್ಪದಲ್ಲಿ ಹುರಿದು ಗೋಡಂಬಿ ದ್ರಾಕ್ಷಿ ಏಲಕ್ಕಿ ಪುಡಿ ಕೇಸರಿ ದಳ ಬೆರಸಿ ನಂತರ ಬೇಯಿಸಿದ ಕಡಲೆಬೇಳೆಯನ್ನು ತೆಂಗಿನಹಾಲಿನಲ್ಲಿ ನುಣ್ಣಗೆ ರುಬ್ಬಿ ಸಕ್ಕರೆಯೊಂದಿಗೆ ಕುದಿಸಿದ ಪಾಯಸ ಮತ್ತಷ್ಟು ಬೇಕೆನಿಸಿದರೂ ಅದು ಮೊದಲು ರುಚಿಗಷ್ಟೇ. ಕಾದ ಹೊಟ್ಟೆಗೆ ಅದೊಂದು ನೆಪವಷ್ಟೇ. ಮಧ್ಯದಲ್ಲಿ ಸ್ವಲ್ಪವೇ ಇರುವ ಬಿಳಿ ಮೃದುವಾದ ಬಿಸಿ ಬಿಸಿ ಅನ್ನ, ಅನ್ನದ ಮೇಲೆ ಬೇಳೆ ಮತ್ತು ಹೀರೆಕಾಯಿಯ ತೊವ್ವೆ, ಅದಕ್ಕೊಂದಿಷ್ಟು ಹೊಂದುವ ಒಂದು ಚಮಚ ತುಪ್ಪವೇ ಮುಂದಿನ ಗಮನ ಸೆಳೆದದ್ದು. ಹೀರೇಕಾಯಿಯನ್ನು ಸಿಪ್ಪೆ ತೆಗೆದು ತುಪ್ಪದ ಒಗ್ಗರಣೆಯಲ್ಲಿ ಬೇಯಿಸಿ ಬೆಂದ ತೊಗರಿಬೇಳೆಯಲ್ಲಿ ಕುದಿಸಿ ಅರಿಶಿನ ಹಿಂಗು ಹಾಕಿದ ಆ ಖಾದ್ಯವನ್ನು ಸಂಕೋಚವಿಲ್ಲದೆ ತಿನ್ನಲು ಬಲು ಹಿತ. ಬೆರಳುಗಳು ಯಾವುದೇ ಕಲಾಕಾರನಿಗೂ ಕಡಿಮೆ ಇಲ್ಲ ಎನ್ನುವಂತೆ ಅಷ್ಟೇ ಸಲೀಸಾಗಿ ಆ ಅನ್ನ ತೊವ್ವೆಯನ್ನು ತುಟಿಗೆ ಹಳದಿ ಬಣ್ಣ ಹಚ್ಚಿಬಿಟ್ಟವು.

ಒಹ್ ಒಹ್ ಆ ಹೆಸರುಬೇಳೆ ಕ್ಯಾರೆಟ್ ಕೋಸಂಬರಿಯ ಬಣ್ಣವೇ ಅಂದ ಇನ್ನು ಅದನ್ನು ತಿನ್ನದಿರಲು ಸಾಧ್ಯವೇ! ಸಣ್ಣಗೆ ಹೆಚ್ಚಿದ ಸೌತೆಕಾಯಿ ನೆನಸಿದ ಕಡಲೆಬೇಳೆಯ ಕೋಸಂಬರಿ ಅದರ ಪಕ್ಕದಲ್ಲೇ ಇರುವಾಗ ಅದನ್ನು ತಿಂದಮೇಲೆ ಕಣ್ಣು ತಟ್ಟೆಯನ್ನು ಹುಡುಕಲೇ ಬೇಕಿಲ್ಲ, ಸ್ವಲ್ಪ ಸೀಮೆಬದನೆಕಾಯಿಯ ಪಲ್ಯವನ್ನು ಕಂಡು ನಾಲಿಗೆ ಅದರ ರುಚಿ ಸವಿಯಲು ಅಬ್ಬಾ ಅದೆಷ್ಟು ಹಿತವಾಗಿ ಬೆಂದಿದೆ, ಸ್ವಲ್ಪ ಗಟ್ಟಿಯಾದ ಕೋಸಂಬರಿ ತಿಂದಮೇಲೆ ನಾಲಿಗೆ ಖಂಡಿತ ಸಂತೋಷಿಸಿತು ಆ ಪಲ್ಯದ ರುಚಿಯಿಂದ. ಅದರಲ್ಲಿ ಸಿಗುವ ಸಾಸಿವೆ ಉದ್ದಿನಬೇಳೆ ಒಗ್ಗರಣೆ ಹಿಂಗಿನ ಸುವಾಸನೆ ಅಬ್ಬಾ ಖಾಲಿಯಾದ ನಂತರ ಮತ್ತೆ ಇನ್ನಷ್ಟು ಹಾಕಿಸಿಕೊಂಡರೆ ಆಯಿತೂ ಅಂತ ನಿರ್ಧಾರ ಬೇರೆ ಮಾಡಿಬಿಟ್ಟಿದ್ದೆ. ಇದೇನೋ ಬಿಳಿ ಆಲೂಗಡ್ಡೆ ಪಲ್ಯ ಅದಕ್ಕಿಂತಲೂ ರುಚಿಯಾಗಿದೆಯಲ್ಲಪ್ಪ. ಅದನ್ನು ಮುಗಿಸಿದ ಮತ್ತೊಮ್ಮೆ..  ಅಯ್ಯೋ ಇನ್ನೂ ತಟ್ಟೆಯಲ್ಲಿ ಇರುವ ಚಿತ್ರಾನ್ನವನ್ನೇ ತಿಂದಿಲ್ಲ, ಹಿತವಾದ ನಿಂಬೆಹಣ್ಣಿನ ಹುಳಿ ಹಲ್ಲಿಗೆ ಸಿಗುವ ಮೆತ್ತನೆಯ ಹುರಿದ ಗೋಡಂಬಿ ಬೀಜ, ಆಹಾ ಚಿತ್ರಾನ್ನವೂ ಕೂಡ ಇಷ್ಟು ರುಚಿಯಾಗಿರಬಲ್ಲದು ಅಂತ ತಿಳಿದೇ ಇರಲಿಲ್ಲ.

ಮುಂದೆ ಬಂದದ್ದು ಹೂರಣದ ಸಾರು. ತಿಳಿ ಟೊಮೇಟೊ ಸಾರಿಗೆ ಹೂರಣ ಸೇರಿಸಿದಾಗ ಅದರ ರುಚಿಯೇ ಬದಲಾಗಿಬಿಡುತ್ತೆ. ಹಬ್ಬದ ಊಟಕ್ಕೆ ಮತ್ತೊಂದು ಹಂತ, ಅನ್ನದ ಜೊತೆ ಕಲಸಿ ತಿಂದಾಗ ಛೇ ಇದನ್ನೇ ಜಾಸ್ತಿ ತಿನ್ನಬೇಕಿತ್ತು ಅಂತ ಸ್ವಲ್ಪ ಖಿನ್ನತೆ ಮೂಡಿದರೂ ಬೇಳೆ ಒಬ್ಬಟ್ಟು, ಪೂರ್ಣ ಪೋಳಿಗೆ ಸ್ವಲ್ಪ ಜಾಗಬೇಕಲ್ಲ. ಅಬ್ಬಅಬ್ಬಾ ಬಿಸಿ ಬಿಸಿ ಹೋಳಿಗೆ ಮಾಡುವುದೂ ಒಂದು ಕಲೆ. ಕಣಕ ಮಾಡಿ ಬದಿಗಿಟ್ಟು ಬೇಳೆ ಬೇಯಿಸಿ ಅದಕ್ಕೆ ಬೆಲ್ಲ ಏಲಕ್ಕಿಪುಡಿ ಬೆರಸಿ ಉಂಡೆ ಮಾಡಿ ಕಣಕದೊಳಗೆ ಅದನ್ನಿಟ್ಟು ಬಾಳೆ ಎಲೆಯ ಮೇಲೆ ಹಗುರವಾಗಿ ತಟ್ಟಿ ಕಾದ ಟವದ ಮೇಲೆ ನಿಧಾನವಾಗಿ ಬೋರಲು ಹಾಕಿ ಬಾಳೆ ಎಲೆಯನ್ನು ಹೋಳಿಗೆ ಹರಿಯದಂತೆ ಪ್ರತ್ಯೇಕಿಸಿ ಎರಡೂ ಕಡೆ ಕೆಂಬಣ್ಣ ಬರುವಂತೆ ಬೇಯಿಸಿ ಅಬ್ಬಾ ಹೆಣ್ಣಿನ ಕೈಚಳಕದಲ್ಲಿ ಮಾತ್ರ ಮೂಡಿಬರಲು ಸಾಧ್ಯ ಆ ಹೋಳಿಗೆಗೆ. ಹಾಗಂತ ಕಷ್ಟಪಟ್ಟು ಇಡೀ ದಿನ ಒಲೆಯ ಮುಂದೆ ನಿಂತು ರುಚಿ ರುಚಿಯಾದ ಊಟ ತಯಾರಿಸಿದ ಶ್ರೀಮತಿಗೆ ಒಬ್ಬಟ್ಟು ಚೆನ್ನಾಗಿದೆ ಅಂತ ಹೇಳಲು ಸ್ವಲ್ಪ ಅಹಮಿನ ಅಡ್ಡಿ ಜೊತೆಗೆ ಹಿಂದಿನವರು ಊಟ ಮಾಡುವಾಗ ಮಾತಾಡಬೇಡಿ ಅಂತ ಹೇಳಿದ್ದಾರಲ್ಲ. ಅಯ್ಯೋ ಕೊಲೆಸ್ಟರಾಲು ಅಂತ ಭಯಪಡದೆ ಒಂದು ದೊಡ್ಡ ಚಮಚ ತುಪ್ಪ ಹಾಕಿಸಿಕೊಂಡು ಆ ಸವಿಯಾದ ಹೋಳಿಗೆ ಚಪ್ಪರಿಸಿದರೆ ಇನ್ನೇನು ಊಟ ಮುಗಿಯಿತು ಅಂತ ಅಲ್ಲ. ಊಟದ ಪ್ರಾರಂಭದಲ್ಲಿ ರುಚಿಗಷ್ಟೇ ಹಾಕಿದ್ದ ಹಲಸಿನ ಹಣ್ಣಿನ ಪಾಯಸ ಈಗ ಒಂದು ದೊಡ್ಡ ಸೌಟಿನಲ್ಲೇ ಬಡಿಸಿಕೊಂಡು ಸವಿದರೆ ಆಹಾ ಆ ಹಿತವಾದ ಮೆತ್ತನೆಯ ಹಣ್ಣಿನ ತುಂಡುಗಳು ಬಾಯಲ್ಲಿ ಇಟ್ಟ ತಕ್ಷಣ ಗುಳುಂ ಅಂತ ಮಾಯವಾಗಿ ಬಿಡುತ್ತೆ. ಹೋಳಿಗೆ ನಂತರ ಪಾಯಸ ಸ್ವಲ್ಪ ಸಿಹಿ ಜಾಸ್ತಿ ಆಯ್ತಾ ಅಂತ ಯೋಚಿಸುವುದರೊಳಗೆ ಮತ್ತಷ್ಟು ಮೊಸರಿಗೆ ಅನ್ನ, ಕಲಸಿ ಅದಕ್ಕೊಂದಿಷ್ಟು ಉಪ್ಪು ಸೇರಿಸಿ ಕೊಂಡು ತಿನ್ನಲು ಶುರು ಮಾಡಿದರೆ ಖಾಲಿಯಾದ ತಟ್ಟೆ ಕಂಡು ಯಾಕೋ ಈ ಸಿಹಿಯಾದ ಮೊಸರಿನ ಜೊತೆ ಸ್ವಲ್ಪ ಸೀಮೆಬದನೆಕಾಯಿ ಪಲ್ಯ ಚೆನ್ನಾಗಿರುತ್ತೆ ಅಂತ ಅದನ್ನು ಹಾಕಿಸಿಕೊಂಡು ಊಟ ಮುಗಿಸಿದಾಗ ಎಡಗೈ ತನ್ನಷ್ಟಕ್ಕೆ ತಾನೇ ಹೊಟ್ಟೆಯನ್ನು ಸವರಿಕೊಂಡು ಒಂದು ಉದ್ದನೆಯ ಲೋಟದಲ್ಲಿ ನೀರು ಕುಡಿದಮೇಲೆ ಕೃಷ್ಣಾರ್ಪಣ ಮಸ್ತು ಅಂತ ನಾಲಿಗೆ ಕೂಡ ತನ್ನ ತಾನಾಗಿ ದೇವರ ನೆನೆಯುತ್ತೆ.

ಕೈ ತೊಳೆದು ಎಲೆ ಅಡಿಕೆ ಜಗಿದ ಮೇಲೆ ಚಾಪೆ ಎಲ್ಲಿದೆ ಅಂತ ಹುಡುಕಲು ತನ್ತಾನಾಗಿ ಹುಡುಕುತ್ತೆ ಗಂಡಸಿನ ಮನಸ್ಸು. ನಮ್ಮ ಸಂಸ್ಕೃತಿಯ ಅಸ್ತಿತ್ವವೇ ಈ ಹಬ್ಬಗಳು ಅಂತ ಅನಿಸಿ ಇದನ್ನು ಕಾಪಾಡಿಕೊಂಡು ಬಂದ ನಮ್ಮ ಸ್ತ್ರೀಯರಿಗೆ ಮನಸ್ಸಿನ್ನಲ್ಲೇ ದೊಡ್ಡ ನಮಸ್ಕಾರ ಹಾಕುತ್ತಾ ದೊಡ್ಡ ಗೊರಕೆಯೊಂದಿಗೆ ಮಧ್ಯಾಹ್ನದ ತಾಪದಲ್ಲಿ ನಿದ್ದೆ ಬಂದಿದ್ದೆ ಗೊತ್ತಾಗಲಿಲ್ಲ. 
(ಕಳೆದ ಉಗಾದಿ ಸಮಯದಲ್ಲಿ ಬರೆದ ಒಂದು ಹರಟೆ. ನನ್ನ ಈ ಗಂಧಾಕ್ಷತೆ ಬ್ಲಾಗಿನ ಬದಲು ‘ನಿತ್ಯ ಸತ್ಯ’ ಎನ್ನುವ, ಎರಡೂವರೆ ಲಕ್ಷ ಸದಸ್ಯರಿರುವ ವಾಟ್ಸಪ್ಪ್ ತಂಡದಲ್ಲಿ ಪೋಸ್ಟ್ ಮಾಡಿದ್ದೆ.)  



ಸೋಮವಾರ, ಜನವರಿ 26, 2026

ರಥ ಸಪ್ತಮಿ

 


ರಥ ಸಪ್ತಮಿ 
-ರವಿ ಗೋಪಾಲರಾವ್ 

ಭಾಸ್ಕರ ಕೇಳಿದನಂತೆ 
ಇಂದು ಎಲ್ಲಿಗೆ ಹೋಗುವ 

ಜ್ಞಾನೋದಯವನೇ ಅರಸುವ ಗಾಯತ್ರಿ 
ಉತ್ತರಿಸಿದನಂತೆ ಋಷ್ಯಾಶ್ರಮ ಚೆನ್ನ 

ಶಕ್ತಿಯ ಕ್ರೀಡೆಗಳನೆ ಬಯಸುವ ಬೃಹತಿ 
ಬೆಟ್ಟವನಹತ್ತುವ ಅಂದನಂತೆ 

ಸದಾ ಉತ್ಸಾಹಿ ಉಷ್ಣಿಕ ಎಲ್ಲರೂ ಸೇರಿ 
ಆಟವಾಡಿದರೆ ಸಾಕೆಂದನಂತೆ 

ಜಗತಿ ಎಲ್ಲರನೂ ತನ್ನೋಟದಲಿ 
ಸೋಲಿಸುವ ಹಂಬಲವೆಂದನಂತೆ 

ಬಲಶಾಲಿ ನಾನೆನ್ನುವ ಛಲವನು ತೀರಿಸುವ 
ಜಾಗಕೆ ಹೋಗುವ ಎಂದನಂತೆ ತ್ರಿಷ್ಟುಪ 

ಅವು ಯಾವುವು ಬೇಡ ಹೋಗುವ 
ಮಂದಿರಕೆಂದು ಗೋಗರೆದನಂತೆ ಅನುಷ್ಟಪ 

ಬೇಡಪ್ಪ ಮಕ್ಕಳೊಡನೆ ಆಡುವ ಬಾಲವನದಲಿ 
ಎಂದು ವಿನಂತಿಸಿದನಂತೆ ಪಂಕ್ತಿ

ಇಂದು ರಥ ಸಪ್ತಮಿ ಎಲ್ಲರನು ಕರೆದೊಯ್ಯುವೆ 
ನೀವೆಂದೂ ನೋಡಿರದ ಸುಂದರ ತಾಣಕೆನಂದನಂತೆ ಭಾಸ್ಕರ 

ಸೂರ್ಯಕಾಂತಿಯ ಬನದಲಿ ದಿನವಿಡೀ 
ಆಟವಾಡಿ ಹಿಂದಿರುಗಿದಾಗ ಸಂಜನ ನೀಡಿದ 
ಹಸುರೆಲೆ ಊಟ ಚೆನ್ನ ಎಂದರಂತೆ ಎಲ್ಲರೂ

_____________
ಸೂರ್ಯನ ಏಳು ಅಶ್ವಗಳಾದ ಗಾಯತ್ರಿ, ಬೃಹತಿ, ಉಷ್ನಿಕ್, ಜಗತಿ, ತ್ರಿಷ್ಟುಪ್, 
ಅನುಷ್ಟಪ್, ಪಂಕ್ತಿ ಮತ್ತು ಅವುಗಳ ಗುಣಗಳನ್ನಾಧರಿಸಿದ 
ಕಲ್ಪನೆಯಲ್ಲಿ ಮೂಡಿಬಂದದ್ದು ಈ ರಥಸಪ್ತಮಿಯ ಚುಟುಕು.
PC: ನನ್ನದೆ AI ಚಿತ್ರ
_____________


ಗಣರಾಜ್ಯೋತ್ಸವ



ಗಣರಾಜ್ಯೋತ್ಸವ:

ಇಂದು ಭಾರತದ ಗಣರಾಜ್ಯೋತ್ಸವ ದಿವಸ.  ಎಲ್ಲಾ ಭಾರತೀಯರಿಗೆ ಗಣರಾಜ್ಯೋತ್ಸವ ದಿನ ಆಚರಿಸುವುದು ಎಂದರೆ “ದೇಶದ ರಾಜಧಾನಿಯಲ್ಲಿ ರಿಪಬಲಿಕ್  ಡೇ ಪೆರೇಡ್ ನಲ್ಲಿ ದೇಶದ ಸೈನಿಕರು ತಮ್ಮ ರೆಜಿಮೆಂಟಿನ ಪ್ರದರ್ಶನ ಮತ್ತು ಎಲ್ಲ ರಾಜ್ಯಗಳಿಂದ ಸಾಂಸ್ಕೃತಿಕ ಪ್ರದಶನ ನೀಡುವ  ದಿವಸ” ಎಂದು ಆಗಿಬಿಟ್ಟಿದೆ.  ಭಾರತ ರತ್ನ, ಪದ್ಮ ಭೂಷಣ, ಪದ್ಮಶ್ರೀ, ಇತ್ಯಾದಿ ಪಾರಿತೋಷಕಗಳನ್ನು ಘೋಷಿಸುವ ದಿವಸ.  ಅವೆರಡು ಅಂದಿನ ಪ್ರಧಾನ ಸಂಭ್ರಮಗಳು.   ಸ್ವಾತಂತ್ರ ದಿವಸದಂತೆ ಎಲ್ಲ ಕಡೆ ಬಾವುಟ ಹಾರಿಸಿ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಸಂತೋಷ ಪಡುವ ದಿನವಲ್ಲ ಅದು. ಹಾಗೆ ನೋಡಿದರೆ ಮಕ್ಕಳಿಗೆ ಗಣರಾಜ್ಯೋತ್ಸವ ಅಂದರೆ ವಿವರಿಸುವುದೂ ಕೂಡ ಕಷ್ಟ ಏಕೆಂದರೆ ಆಗಸ್ಟ್ ೧೫, ೧೯೪೭ರಲ್ಲಿ ಸ್ವಾತಂತ್ರ ಬಂತು ಮತ್ತೆ ಜನವರಿ ೨೬, ೧೯೫೦ರಲ್ಲಿ ರಿಪಬಲಿಕ್ ಆಯಿತು ಅಂತ ಅರ್ಥೈಸಿ ಹೇಳಿದರೆ ಸಾಲದು. ಏಕೆಂದರೆ ಜನವರಿ ೨೬ ರಂದು ಭಾರತದ ಸಂವಿಧಾನವನ್ನು ಅಂಗೀಕರಿಸಿದ ದಿನ.  ಭಾರತದ್ದೇ ಅತಿ ದೀರ್ಘವಾದ ಸಂವಿದಾನ.  ಪ್ರಪಂಚದ ಅತಿ ದೀರ್ಘವಾದ ಸಂವಿದಾನ ಬರೆದದ್ದು ಯಾರು ಅಂತ ಮುಖ್ಯವಲ್ಲ.  ಆದರೆ ಅದರಲ್ಲಿ ಆಗಲೇ ನೂರಕ್ಕೂ ಹೆಚ್ಚು ತಿದ್ದುಪಡಿಗಳು (ಅಮೆಂಡ್ಮೆಂಟ್ಸ್) ಮತ್ತು ೪೫೦ಕ್ಕೂ ಹೆಚ್ಚು ಸಂವಿಧಾನದ ವಿಧಿ (ಆರ್ಟಿಕಲ್ಸ್) ಗಳನ್ನೂ ಅಳವಡಿಸಿಕೊಂಡಂತ ಒಂದು ಬೃಹತ್ ಗ್ರಂಥ ಅದು.  ಅದನ್ನು ಓದಿ ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ.  ಆದರೆ ಮೊದಲು ಅದರ ಪ್ರಿಯಾಮ್ಬಲ್, ಮುನ್ನುಡಿ ಓದೋಣ ಇಂದು:

ನಾವು, ಭಾರತದ ಜನರು, ಭಾರತವನ್ನು ಸಾರ್ವಭೌಮ ಸಮಾಜವಾದಿ ಜಾತ್ಯತೀತ ಪ್ರಜಾಪ್ರಭುತ್ವ ಗಣರಾಜ್ಯವಾಗಿ ರೂಪಿಸಲು ಮತ್ತು ಅದರ ಎಲ್ಲಾ ನಾಗರಿಕರಿಗೆ ಇವುಗಳನ್ನು ಖಚಿತಪಡಿಸಿಕೊಳ್ಳಲು ಶ್ರದ್ಧೆಯಿಂದ ಸಂಕಲ್ಪ ಮಾಡಿದ್ದೇವೆ:

ನ್ಯಾಯ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ;

ಚಿಂತನೆ, ಅಭಿವ್ಯಕ್ತಿ, ನಂಬಿಕೆ, ಶ್ರದ್ಧೆ ಮತ್ತು ಆರಾಧನೆಯ ಸ್ವಾತಂತ್ರ್ಯ;

ಸ್ಥಾನಮಾನ ಮತ್ತು ಅವಕಾಶದ ಸಮಾನತೆ;

ಮತ್ತು ಅವರೆಲ್ಲರ ನಡುವೆ ಸಹೋದರತ್ವವನ್ನು ಉತ್ತೇಜಿಸಲು, ವ್ಯಕ್ತಿಯ ಘನತೆ ಮತ್ತು ರಾಷ್ಟ್ರದ ಏಕತೆ ಮತ್ತು ಸಮಗ್ರತೆಯನ್ನು ಖಚಿತಪಡಿಸಿಕೊಳ್ಳಲು;


ಏಕೋ ಇಂಗ್ಲಿಷ್ ನಲ್ಲೆ ಓದಿಕೊಂಡು ಅರ್ಥ ಮಾಡಿಕೊಳ್ಳಬೇಕು ಅನಿಸಿದರೆ ನಾನೂ ಸಮ್ಮತಿಸುವೆ. ಏಕೆಂದರೆ ನಮ್ಮ ಸಂವಿಧಾನವನ್ನು ಬರೆದದ್ದು ಇಂಗ್ಲಿಷ್ ನಲ್ಲಿಯೇ.  


WE, THE PEOPLE OF INDIA, having solemnly resolved to constitute India into a SOVEREIGN SOCIALIST SECULAR DEMOCRATIC REPUBLIC and to secure to all its citizens:

JUSTICE, social, economic and political;

LIBERTY of thought, expression, belief, faith and worship;

EQUALITY of status and of opportunity;

and to promote among them all FRATERNITY assuring the dignity of the individual and the unity and integrity of the Nation;


ಸ್ವತಂತ್ರ ದೇಶ, ಸ್ವಲ್ಪ ಕಾಪಿ ಹೊಡದರೆ ನಮ್ಮ ಹಿಂದುಳಿದ ಜನಕ್ಕೆ, ಅದರಲ್ಲೂ ಇಂಗ್ಲಿಷ್ನಲ್ಲಿ ಬರೆದರೆ ಗೊತ್ತಾಗಲ್ಲ ಅಂತ ಅಮೇರಿಕ, ಕೆನಡಾ, ಫ್ರಾನ್ಸ್ ಇತರ ದೇಶದ ಸಂವಿಧಾನಗಳನ್ನು ಕೂಡ ಅಳವಡಿಸಿಕೊಂಡಂತ ಗ್ರಂಥ ನಮ್ಮದು.  ಅಮೆರಿಕನ್ನರಲ್ಲೆವೇ ನಾವೆಲ್ಲಾ… ಇಲ್ಲಿದೆ ನೋಡಿ ಅದರ ಸಂವಿಧಾನದ ಮುನ್ನುಡಿ.  


We the People of the United States, in Order to form a more perfect Union,

establish Justice, insure domestic Tranquility, provide for the common defence,

pr... of America.


೭೬ನೇ ವರ್ಷಕ್ಕೆ ಕಾಲಿಟ್ಟಿದೆ ಭಾರತದ ಸಂವಿಧಾನ.  ಅಮೇರಿಕ ಕೂಡ ೨೫೦ಕ್ಕೆ ತಲುಪಿದೆ. ಇದುವರೆಗೂ ಆದ  ತಿದ್ದುಪಡಿಗಳು ಕೇವಲ ೨೭ ಅಷ್ಟೇ. ಕೇವಲ ೭ ಸಂವಿಧಾನ ವಿಧಿಗಳು ಮಾತ್ರ.  ಒಟ್ಟಿನಲ್ಲಿ ಭಾರತದ ಸಂವಿಧಾನ ಬೇರೆಯೇ ರೀತಿಯದ್ದು ಅಂದುಕೊಂಡರೂ ಸಾಮ್ಯತೆ ಇದ್ದೆ ಇದೆ, ಎರಡೂ ಪ್ರಜಾಪ್ರಭುತ್ವವನ್ನು ಕಾಪಾಡಿಕೊಂಡು ಬಂದಿವೆ.  ಅಥವಾ ಅದೊಂದು ಭ್ರಮೆಯೇ? ಇಂದಿರಾ ಗಾಂಧೀ ಸಮಯದಲ್ಲಿ ಮತ್ತು ಈಗಿನ ಟ್ರಂಪ್ ಕಾಲದಲ್ಲಿ ಮಾತ್ರ ಎರಡೂ ದೇಶಗಳ ಸಂವಿಧಾನ ಹದಗೆಟ್ಟಿತ್ತು ಎಂದು ಇತಿಹಾಸಜ್ಞರು ಮುಂದೆ ಹೇಳಬಹುದೇನೋ.  ನಿಜ ತಿಳಿಯಲು ಇನ್ನು ಸ್ವಲ್ಪ ಸಮಯ ಬೇಕು. 


ಗುರುವಾರ, ಮೇ 22, 2025

ವೃಷಭ ಸಂಕ್ರಾಂತಿ

ವೃಷಭ ಸಂಕ್ರಾಂತಿ 


5/14/2025

ಇವತ್ತು ಟಾರಸ್ ಸಂಕ್ರಾಂತಿ ಅಂತೇ. ಅದೇ ರೀ ಟಾರಾಸ್ ಅಂದ್ರೆ ಗೊತ್ತಲ್ಲ ಎತ್ತು, ವೃಷಭ ರಾಶಿಯಲ್ಲಿ ಸಂಕ್ರಾಂತಿ ಆಗುತ್ತಂತೆ.

ಅಯ್ಯೋ, ನಮಗೆ ಗೊತ್ತಿರುವುದು ಆ ಮಕರ ಸಂಕ್ರಾಂತಿ, ಅದೇ ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡ್ತೀವಲ್ಲ ಅದೇ ರೀ ಕಬ್ಬು, ಸಕ್ಕರೆ ಅಚ್ಚು, ಸಿಹಿ ಪೊಂಗಲ್ ಅಂತ ಏನೇನೋ ಮಾಡಿಕೊಂಡು ಎಲ್ಲ ಸ್ನೇಹಿತರ ಮನೆಗೆ ಹೋಗಿ ಹಲ್ಲು ಬೀರುತ್ತಾ ಎಳ್ಳು ಬೀರ್ತೀವಲ್ಲ ಆ ಮಕರ ಸಂಕ್ರಾಂತಿ, ಜನವರಿ ಹದಿನಾಲ್ಕು ಬರುತ್ತಲ್ಲ ಅದೊಂದೇ ನಮಗೆ ಸಂಕ್ರಾಂತಿ ಅಂತ ಗೊತ್ತಿರೋದು. ಇದ್ಯಾವ್ದ್ರಿ ಇದು ಎತ್ತಿನ ಸಂಕ್ರಾಂತಿ ಅಂತ ನೀವು ಹೇಳ್ತಿರೋದು? ನಮಗೆ ಅದಕ್ಕಲ್ಲ ಸಮಯವಿಲ್ಲ. ಅದೇನು ಈ ಎತ್ತಿನ ಸಂಕ್ರಾಂತಿ ಅಂತ ನೀವೇ ಹೇಳಿ.

ಅಯ್ಯೋ ಹೆಂಗಪ್ಪಾ ಇದನ್ನು ವಿವರಿಸೋದು? ನೋಡಿ, ಮಕರ ಸಂಕ್ರಾಂತಿ ದಿನ ಸೂರ್ಯ ಮಕರ ರಾಶಿಯನ್ನ ಪ್ರವೇಶಿಸ್ತಾನೆ ಅಂತ ಗೊತ್ತು ತಾನೇ ನಿಮಗೆ?

ಗೊತ್ತಿಲ್ರಿ ಮರೆತು ಹೋಯಿತು, ನಾಲ್ಕು ತಿಂಗಳಿನ ಹಿಂದೆ ಆಕಾಶದಲ್ಲಿ ಅದೇನೋ ಆದರೆ ಹೆಂಗ್ ಜ್ಞಾಪಕ ಇಟ್ಟುಕೊಳ್ಳ ಬೇಕು ನೀವೇ ಹೇಳಿ.

ಹಾಗಾದರೆ ವೃಷಭ ಸಂಕ್ರಾಂತಿಯೂ ಹಂಗೇ, ಸೂರ್ಯನಿಗೆ ಬೇರೆ ಕೆಲಸವಿಲ್ಲ ಪಾಪ, ಒಂದೇ ಕಡೆ ಕೂತು ಕೂತು ಬೇಜಾರಾಗಿ ಹೋಗಿರುತ್ತೆ ಅದಕ್ಕೆ, ಒಂದೊಂದು ತಿಂಗಳಿನಲ್ಲೂ ಒಂದೊಂದು ರಾಶಿಗೆ ಭೇಟಿ ಕೊಡ್ತಾನೆ.

ಏನಂದ್ರಿ, ಸೂರ್ಯನ ಸುತ್ತ ಎಲ್ಲ ಗ್ರಹಗಳೂ ಸುತ್ತು ಹಾಕ್ತವೆ ಅಂತ ನಮ್ಮ ಪ್ರೈಮರಿ ಸ್ಕೂಲ್ ಟೀಚರ್ ಹೇಳಿದ್ರು ನೀವು ನೋಡಿರೆ ಸೂರ್ಯ ಪ್ರತಿ ತಿಂಗಳು ಬೇರೆ ಬೇರೆ ರಾಶಿಗೆ ಭೇಟಿ ಕೊಡ್ತಾನೆ ಅಂತೀರಾ. ಪರವಾಗ್ಲ್ರಿ ಏಳು ಕುದುರೆ ಮೇಲೆ ಕೂತು ಹನ್ನೆರಡು ರಾಶಿ ಭೇಟಿ ಕೊಡಬೇಕು ಅಂದ್ರೆ ಬಹಳ ವೇಗವಾಗಿ ಕುದುರೆ ಓಡ್ಸಕ್ಕೆ ಬರ್ತದೇ ನಮ್ಮ್ ಸೂರ್ಯಂಗೆ ಅಂತೀರಾ? ನಿಮಗೆ ತಲೇಲಿ ಬುದ್ಧಿ ಇದೆಯೋ ಇಲ್ಲವೋ? ಅದೆಂಗ್ ಸಾಧ್ಯ, ಸೂರ್ಯ ಒಂದೇ ಕಡೆ ಇರ್ತಾನೆ. ಅವನು ಜಪ್ಪಯ್ಯ ಎಂದ್ರೂ ಎಲ್ಲೂ ಹೋಗಲ್ಲ. ಏನೋಪ್ಪ, ಹೋಗ್ಲಿ ಈ ಎತ್ತಿನ ಸಂಕ್ರಾಂತಿ ಇವತ್ತ್ಯಾಕ ಬಂತು?

ಇವತ್ತ್ಯಾಕೆ ಬಂತು ಅಂತ ಹೆಂಗಪ್ಪಾ ಇವನಿಗೆ ವಿವರಿಸೋದು. ಹೋಗ್ಲಿ ನೀವು ಇರೋದು ಖಗೋಳದ ಉತ್ತರದಾಗೆ ಅಂತ ಗೊತ್ತಲ್ಲ.

ಬಿಡ್ರಿ ಅವಲ್ಲ ಪ್ರೈಮರಿ ಶಾಲೆಯಾಗ ಕಲಿತಿದೀವಿ. ಅದ್ ಸರಿ ಈ ಎತ್ತಿನ ರಾಶಿ ಅಂದ್ರ ನಾಲ್ಕೈದು ನಕ್ಷತ್ರಗಳನ್ನ ಒಟ್ಟಿಗೆ ನೋಡಿ ಅವಕ್ಕೊಂದು ಕಾಲ್ಪನಿಕ ರೇಖೆಗಳನ್ನ ಸೇರಿಸಿದರೆ ಅದು ಅದೆಂಗೋ ಎತ್ತಿನ ಆಕಾರದಲ್ಲಿ ಕಾಣ್ತದಲ್ಲ ಅದಕ್ಕೆ ಅದನ್ನ ಎತ್ತಿನ ರಾಶಿ ಅಂತ ಕರೀತಾರೆ ಅಂತ ಗೊತ್ತು ಆದರೆ ಈ ವೃಷಭ ಯಾರ್ರೀ? ಓಹೋ, ಗೊತ್ತಾಯಿತು ಬಿಡಿ. ನ್ಯೂ ಯಾರ್ಕ್ ನಲ್ಲಿ ಅದೇನೋ ವಾಲ್ ಸ್ಟ್ರೀಟ್ ಮೇಲೆ ಒಂದು bull ಇದೆಯಲ್ಲ ಹಂಗೆನೇ ಇದೂ ವೃಷಭ. ಅದೇನ ಇರ್ಲಿ, ನೀವು ಎತ್ತಿನ ಸಂಕ್ರಾಂತಿ ಅಂದ್ರೆ ಹೇಳ್ತೀರಾ ಅಥವಾ ನಾನು ಎದ್ದು ಹೋಗ್ಲಾ?

ಬೇಡ್ರಿ ಸ್ವಲ್ಪ ಹಾಗೆ ಕೂಡ್ರಿ, ನಿಮಗೆ ಅದರ ಬಗ್ಗೆ ವಿವರವಾಗಿ ಹೇಳ್ತಿನಿ. ನಾವು ಉತ್ತರ ಖಗೋಳದಾಗ ಇದೀವಿ ಅಂತ ಹೇಳಿದೆ. ನಾವು ತಲೆ ಎತ್ತಿ ನೋಡಿದರೆ… ರಾತ್ರಿ ಹೊತ್ತು ಕಾಣಲ್ಲ, ಬೆಳಗಿನ ಜಾವ ನೀವು ಪೂರ್ವ ದಿಕ್ಕಿನಾಗ ನೋಡಿರೆ ಕಾಣ್ತದ. ನೀವು ಏಳೋದು ಎಷ್ಟು ಗಂಟೆಗೆ? ನಾ ಏಳೋದು ೮ ಗಂಟೆಗೆ. ಸರಿ ಬಿಡಿ ನೀವು ವೃಷಭ ನೋಡ್ಲಿಕ್ಕೆ ಸಾಧ್ಯವೇ ಇಲ್ಲ. ರೀ ಸ್ವಾಮಿ, ನಾನು NDTV ಯಾಗ ಯುಗಾದಿ ಭವಿಷ್ಯ ಹೇಳ್ತಾರಲ್ಲ ಆಗ ಟಿವಿನಲ್ಲಿ ನೋಡಿನ್ರೀ ಎಲ್ಲ ರಾಶಿಗಳನ್ನ. ನಂದು ಸಿಂಹ ರಾಶಿ ರೀ. ಎಷ್ಟು ಬಾರಿ ನೋಡಿದ್ರೂ ಅದು ಸಿಂಹದಂಗ ಕಾಣಲ್ಲ. ಆದ್ರ ಅದೇನೋ ಖುಷಿ ಆಗ್ತದೆ ರ್ರೀ ನನ್ನ ಸಿಂಹ ರಾಶಿ ನೋಡ್ಲಿಕ್ಕೆ. ಸರಿ ಈಗ ಗೊತ್ತಾಯಿತು ಬಿಡಿ. ಆ ಎತ್ತಿನ ಸಂಕ್ರಾಂತಿ ದಿನ ನಮ್ಮ್ ಊರ ಗೌಡ್ರು ಎತ್ತುಗಳಿಗೆ ಪೂಜೆ ಮಾಡ್ತಾರಲ್ಲ ಆ ದಿನ ಏನ್ರಿ? ಅರೆ ಅರೆ ಹಾಗಾದ್ರ ಮಕರ ಸಂಕ್ರಾಂತಿಯಾಗ ಎತ್ತಿಗ್ಯಾಕ್ರಿ ಪೂಜೆ ಮಾಡ್ತೀರಿ.

ಅಯ್ಯೋ ಅದಲ್ಲಾರ್ರಿ. ವೃಷಭ ಸಂಕ್ರಾಂತಿ ದಿನ ಸೂರ್ಯ ಆ ವೃಷಭ ರಾಶಿ ಹತ್ರ ಹೋದಂಗ, ಇನ್ನೇನು ಆ ಎತ್ತಿನ ಮೂತಿಯನ್ನ ಹಿಡಿದು ಬಿಟ್ಟ ಅಂತ, ನಮಗ ಭೂಮಿಯಿಂದ ನೋಡಿದ್ರೆ ಹಾಂಗಾ ಅನಿಸ್ತದೆ. ಎರಡೂ ನೇರವಾಗಿ ನಮಗ ಒಂದನ್ನು ಒಂದು ಮುತ್ತಿಡುವಂತೆ ಕಾಣ್ಸ್ತದ.

ಸ್ವಾಮಿ, ನಿಮ್ಮ ರೊಮ್ಯಾಂಟಿಕ್ ವರ್ಣನೆ ಸಾಕ್ರಿ. ಸೂರ್ಯ ಎತ್ತಿಗೆ ಮುತ್ತಿಟ್ಟರೆ ಅದರ ಮೂತಿ ಹನುಮಂತನ ಮೂತಿ ತರ ಆದಂಗೆ ನನಗಂತೂ ಕಾಣಿಸ್ತಿಲ್ಲ. ರಾತ್ರಿ ಅಲ್ಲ ಬೆಳಿಗ್ಗೆ ಅಂತೀರಿ. ಅದೆಂಗ್ ನಿಮಗೆ ಸೂರ್ಯ ನಕ್ಷತ್ರ ಎಲ್ಲ ಒಟ್ಟಿಗೆ ಮುತ್ತಿಡುವಂತೆ ಕಾಣಿಸ್ತದೆ? ನೀವು ಏನಾದ್ರೂ ಹೇಳಿ, ಇದು ನಿಮ್ಮ ಕಲ್ಪನೆ ಅನಿಸ್ತದ.

ಇಲ್ರಿ, ಇದು ನಿಜವಾಗಿಯೂ ಆಗ್ತದ. ಆದರೆ ಒಂದೇ ಕ್ಷಣದಾಗ ಸೂರ್ಯ ಎತ್ತಿನಿಂದ ಬಹು ದೂರ ಹೋಗಿ ಬಿಡ್ತಾನೆ.

ಹೋಗ್ಲಿ ಬಿಡಿ. ಮುಂದೆ ಏನ್ ಆಗ್ತದೆ ಅವತ್ತು?

ಅಬ್ಬಾ, ಅಷ್ಟಾದ್ರೂ ಅರ್ಥವಾಯಿತಲ್ಲ ಇವನಿಗೆ. ಮುಂದೆ ಏನಿಲ್ಲಾರಿ, ವೃಷಭ ಸಂಕ್ರಾಂತಿ ಮುಗಿದು ಹೋಯಿತು ಅಷ್ಟೇ. ಆದ್ರ ನಾವು ಒಂದು ಕಥೆ ಹೇಳಿಲ್ಲ ಅಂದ್ರ ಆ ದಿನ ಮುಗಿಯುವುದಿಲ್ಲ. ನಿಮಗೆ ಕಥೆ ಕೇಳಕ್ಕ ಇಷ್ಟ ಇಲ್ಲ ಅಂದ್ರೆ ಹೋಗಲಿ ಇವತ್ತಿನ ಶುಭ ಅಶುಭಗಳನ್ನಾದರೂ ತಿಳ್ಕೊಳಿ. ಇವತ್ತು ಕ್ರೂರಿಗಳಿಗೆ, ಪಾಪಿಷ್ಠರಿಗೆ, ಅಪ್ರಾಮಾಣಿಕರಿಗೆ ಬಹಳ ಒಳ್ಳೆ ದಿನವಂತೆ.

ಗೊತ್ತಾಯಿತು ಬಿಡಿ. ಅದಕ್ಕೆ ಸೌದಿ ಅರೇಬಿಯಾದಾಗೆ ನಮ್ಮ ದೇಶದ ಅಧ್ಯಕ್ಷ ಟ್ರಮ್ಪ್ ಗೆ ಅಷ್ಟೊಂದು ರಾಜ ಮರ್ಯಾದೆ ಇವತ್ತು ಅಂತೀರಾ? ಅಕ್ಕಿ ಬೇಳೆಗಳ ಬೆಲೆ ಪರವಾಗಿಲ್ಲವಂತೆ ಇವತ್ತು. ಒಳ್ಳೆ ಆರೋಗ್ಯ ಲಾಭ ಶುರುವಾಗುತ್ತಂತೆ. ಯಾರಿಗೆ ಅಂತ ಕೇಳಬೇಡಿ ಅಷ್ಟೇ.

ಹಂಗಾದ್ರೆ ಎಳ್ಳು ಬೆಲ್ಲ ಏನು ಬೇಡ ಅಂತೀರೋ?

ಇಲ್ರಿ ಇದು ಸ್ವಲ್ಪ ಹೆಚ್ಚು ಖರ್ಚಿನ ಸಂಕ್ರಾಂತಿ. ಏಕೆ? ನೋಡಿ, ಇವತ್ತು ಗೋದಾನ ಮಾಡಿದರೆ ತುಂಬಾ ಒಳ್ಳೆಯದಂತೆ.

ಅಲ್ರಿ, ವೃಷಭ, ಎತ್ತು ಅಂತ ಏನೇನೋ ಅಂತೀರಿ, ನೋಡಿದ್ರೆ ಹಸುವಿನ ದಾನ ಮಾಡಿದರೆ ಒಳ್ಳೇದಾಗುತ್ತೆ ಅಂತೀರಿ. ನನ್ನತ್ರ ಅಷ್ಟೊಂದು ದುಡ್ಡಿಲ್ಲ.

ಹೋಗ್ಲಿ ಬಿಡಿ. ನಂದು ಮೇಷ ರಾಶಿ. ಮುಂದೆಂದಾದ್ರೂ ಮೇಷ ಸಂಕ್ರಾಂತಿಗೆ ದಾನ ಮಾಡಿ. ಅವತ್ತು ಸೂರ್ಯ ಮೇಷ ರಾಶಿಗೆ ಪ್ರವೇಶಿಸ್ತಾನೆ.

ಸರಿ, ಮೇಷ ಅಂದ್ರೆ ಟಗರು ಅಲ್ವ? ಮುಂದಿನ ಟಗರು ಸಂಕ್ರಾಂತಿಗೆ ಒಂದು ಟಗರು ದಾನ ಮಾಡ್ತೀನಿ ನಿಮಗೆ, ಆಗಬಹುದಾ? ನಿಮಗೂ ಮಟ್ಟನ್ ಸಾರು ತಿನ್ನಬೇಕು ಅನಿಸಿದರೆ ಒಳ್ಳೆ ಉಡುಗೊರೆ, ಬೇಡ ಅನ್ನಬೇಡಿ.

ಶಾಂತಂ ಪಾಪಂ

ಗುರುವಾರ, ಏಪ್ರಿಲ್ 24, 2025

ಬಾನು ಮುಷ್ತಾಕ್ ಮತ್ತು ಬೂಕರ್ ಪ್ರೈಜ್

ಬಾನು ಮುಷ್ತಾಕ್ ಮತ್ತು ಬೂಕರ್ ಪ್ರೈಜ್ 

ಇತ್ತೀಚಿಗೆ ಪ್ರಕಟವಾದ ಬಾನು ಮುಷ್ತಾಕ್ ರ Heart Lamp ಪುಸ್ತಕ ಕನ್ನಡದಿಂದ ಇಂಗ್ಲಿಷ್ ಗೆ ಅನುವಾದಿತವಾದ ಕಥೆಗಳ ಸಂಕಲನ. ಅನುವಾದಿತ ಪುಸ್ತಕಕ್ಕೆ ಈ ವರ್ಷದ ಬೂಕರ್ ಪ್ರೈಜ್ ಗೆ ಶಾರ್ಟ್ ಲಿಸ್ಟ್ (ಬಂದ ನೂರಾರು ಪುಸ್ತಕಗಳಲ್ಲಿ ೫ ಪುಸ್ತಕಗಳನ್ನು ಆಯ್ಕೆಮಾಡಲಾಗಿದೆ) ಎಂದು ತಿಳಿದು ಕನ್ನಡ ಸಾಹಿತ್ಯ ಪ್ರೇಮಿಗಳಿಗೆ ಎಲ್ಲಿಲ್ಲದ ಕನ್ನಡ ಭಾಷಾಭಿಮಾನ, ಹೆಮ್ಮೆ ಮತ್ತು ನಮ್ಮವರೇ ಆದ ಬಾನು ಮುಸ್ತಾಕರಿಗೆ ಅಂತಹ ಪ್ರಸಿದ್ಧ ಬಹುಮಾನ ಸಿಗಲಿ ಎಂಬ ಆಶಯ ತಾನೇ ತಾನಾಗಿ ಬೆಳೆದಿದೆ. ಕನ್ನಡ ಭಾಷೆ ಕೂಡ ಪ್ರಪಂಚದ ಮಿಕ್ಕೆಲ್ಲ ಭಾಷೆಗಳಂತೆ ಉನ್ನತ ಸ್ಥಾನ ಮತ್ತು ಮಾನ್ಯತೆ ಪಡೆಯುತ್ತಿದೆಯೆಲ್ಲ ಎಂದು ಸಂತಸ ಪಟ್ಟಿದ್ದಾರೆ. ಕನ್ನಡ ಸಾಹಿತ್ಯದ ಬಗ್ಗೆ ತಿರಸ್ಕಾರವಿದ್ದವರೂ ಕೂಡ ಇಂಗ್ಲಿಷಿನ ಅನುವಾದ ಓದುವುದಕ್ಕೆ ಹೆಮ್ಮೆ ಪಡುತ್ತಿದ್ದಾರೆ ಮತ್ತು ಅದೇ ಕಾರಣಕ್ಕೆ ಅಮೆಜಾನ್ ನಲ್ಲಿ ಪುಸ್ತಕದ ವ್ಯಾಪಾರ ಭರದಿಂದ ಸಾಗಿದೆ. 


ಇದೇನಿದು, ಇಷ್ಟೊಂದು ಹೊಸ ಚೇತನ ಮೂಡಿದೆಯಲ್ಲ ಎಂದು ಯೋಚಿಸುವರೂ ಕೂಡ ಮೂಗಿನ ಮೇಲೆ ಬೆರಳಿಟ್ಟು ಮೇ ೩೧ ಕ್ಕೆ ಕಾಯುತ್ತಿದ್ದಾರೆ, ಅಂದು ಬೂಕರ್ ಪ್ರೈಜ್ ಘೋಷಿಸಲಾಗುವುದು. ಇಷ್ಟೆಲ್ಲಾ ಸುದ್ದಿಯಾಗಿರುವ ಈ ಪುಸ್ತಕದ ಬಗ್ಗೆ ಹೇಳಬೇಕಾದರೆ, ಬಾನು ಅವರು ಹಲವಾರು ವರ್ಷಗಳಿಂದ (೧೯೯೩-೨೦೦೩) ಬರೆದ ಕಥೆಗಳಲ್ಲಿ ಕೆಲವನ್ನು ಆಯ್ಕೆ ಮಾಡಿ ದೀಪ ಭಷ್ಟ್ರಿ ಅವರು ಅನುವಾದ ಮಾಡಿದ್ದಾರೆ. ಈ ೧೨ ಕಥೆಗಳಲ್ಲಿ ಮುಸ್ಲಿಂ ಜನಾಂಗದ ದಿನ ನಿತ್ಯದ ಆಗುಹೋಗುಗಳನ್ನು ನಿರೂಪಿಸುವುದರ ಜೊತೆಗೆ ಮುಸ್ಲಿಂ ಸ್ತ್ರೀ ಯ ಅನುಭವಗಳನ್ನೇ ಆಧಾರವಾಗಿಟ್ಟುಕೊಂಡು ಅವರ ಸುಖ ದುಃಖಗಳ ಕಥೆಗಳನ್ನೇ ಹಣೆದಿದ್ದಾರೆ ಬಾನು ಅವರು. ಎಲ್ಲ ಕಥೆಗಳೂ ಕಲ್ಪಿತ ಕಥೆಗಳಾದರೂ ನೈಜತೆಯಿಂದ, ತಮ್ಮ ಸ್ವಂತ ಅನುಭವದಿಂದಲೇ ಬರೆದಿರುವುದು ಒಂದು ವಿಶಿಷ್ಟ ಅನಿಸುತ್ತದೆ. ನಮಗೆ ಪರಿಚಯವಿರುವ ದಕ್ಷಿಣ ಭಾರತದ ಹಳ್ಳಿ ಊರುಗಳೇ ಈ ಕಥೆಗಳಿಗೆ ಹಿನ್ನಲೆ ಆದರೆ, ಮುಸ್ಲಿಂ ಜನಾಂಗದ ಬಗ್ಗೆ ನಮಗೆ ಗೊತ್ತಿಲ್ಲದ, ನಮಗೆ ಅನುಭವಕ್ಕೆ ಸಿಗದ ಸೂಕ್ಷ್ಮತೆ ಓದಿದಾಗ ಮಾತ್ರ ಅರಿವಿಗೆ ಬರುತ್ತವೆ. ಮುಸ್ಲಿಮರ ಮತಾಚರಣೆ, ಊಟ, ತಲಾಕ್, ಖತ್ನ, ನಿಖಾ, ಮಸೀದೀಗಳಲ್ಲಿ ಮುಲ್ಲಾಗಳ ಕಾರ್ಯಭಾರ, ಹೀಗೆ ಹೇಳುತ್ತಾ ಹೋದರೆ ಈ ಕಥೆಗಳಲ್ಲಿ ಮುಸಲ್ಮಾನರಲ್ಲದವರಿಗೆ ಅವರ ಬಗ್ಗೆ ಸಿಗುವ ವಿವರಣೆಗಳಿಂದ ಒಂದು ಹೊಸ ತಿಳಿವಳಿಕೆ ಮೂಡುವುದರಲ್ಲಿ ಸಂದೇಹವಿಲ್ಲ. ಕನ್ನಡಿಗಾದ ನನಗೆ ಅವರ ಕಥೆಗಳನ್ನು ಕನ್ನಡದಲ್ಲೇ ಓದಿ ನನಗೆ ಶಾಲೆ, ಕಾಲೇಜು ಮತ್ತು ಅಮೇರಿಕ ವಿಶ್ವವಿದ್ಯಾಲಯಗಳಲ್ಲೂ ಮುಸಲ್ಮಾನ ಸ್ನೇಹಿತರೆ ಆಪ್ತ ಸ್ನೇಹಿತರಾದ ಕಾರಣ ಬಾನು ಅವರ ಕಥೆಗಳು ಹೆಚ್ಚು ಸ್ಪಂದಿಸುತ್ತವೆ. ಬಾನು ಅವರ ಬರಹಗಳ ಅಸ್ತಿತ್ವವೇ ಮುಸಲ್ಮಾನರ ದಿನ ನಿತ್ಯದ ಕಥೆಗಳು, ಮುಸಲ್ಮಾನ ಸ್ತ್ರೀ ಮತ್ತು ಲಾಯರ್ ವೃತ್ತಿಯಲ್ಲಿ ತೊಡಗಿರುವ ಅವರ ಜೀವನದ ಅನುಭವದಿಂದ ಸಹಜತೆಯಿಂದ ಮೂಡಿ ಬರುವ ಕಥೆಗಳು.


ಇನ್ನು ಅನುವಾದಕಿ ದೀಪ ಅವರ ಬಗ್ಗೆ ಹೇಳಬೇಕೆಂದರೆ, ಕೊಡಗಿನ ಕನ್ನಡತಿ, ಪತ್ರಿಕೋದ್ಯಮಿ, ಕೋಟ ಶಿವರಾಮ ಕಾರಂತರ ಕಾದಂಬರಿ ಅನುವಾದ ಮಾಡಿದ ಅನುಭವಿ, ಮತ್ತು ಕೊಡಗಿನ ಗೌರಮ್ಮ ಅವರ ಸಣ್ಣ ಕಥೆಗಳನ್ನು ಇಂಗ್ಲಿಷ್ ಗೆ ಅನುವಾದ ಮಾಡಿರುವ ದೀಪ ಹಲವಾರು ಪ್ರತಿಷ್ಠಿತ ಬಹುಮಾನಗಳನ್ನು ಗೆದ್ದವರು. ಬಾನು ಮತ್ತು ಅವರ ಸ್ನೇಹ ಇತ್ತೀಚಿನದು, ಜೊತೆಗೆ ತಾವು ಮೊದಲ ಬಾರಿಗೆ ಬಾನು ಅವರ ಕಥೆಗಳನ್ನು ಓದುತ್ತಿರುವುದು ಎಂದು ಹೇಳಿಕೊಂಡಿದ್ದಾರೆ. 

ಬೂಕರ್ ಪ್ರೈಜ್ ಬಗ್ಗೆ ಗೊತ್ತಿರುವವರು ಅದರ ವಿವಾದಾಸ್ಪದ ಹಿನ್ನಲೆಯ ಪುಠಗಳನ್ನು ತಿರುವಿ ಹಾಕದೆ ಮುಂದಕ್ಕೆ ಹೋಗಲು ಸಾಧ್ಯವೇ? ಹಿಂದೆ ಬೂಕರ್ ಪ್ರೈಜ್ ಸುದ್ದಿ ಮಾಡಿದ್ದು ಅರುಂಧತಿ ರಾಯ್ ಅವರ ಕಾದಂಬರಿ The God of Small Things ಗೆ ಆ ಬಹುಮಾನ ಬಂದಾಗ. ಬಾನು ಅವರ ಅನುವಾದಿತ ಕತೆ ಹಾರ್ಟ್ ಲ್ಯಾಂಪ್ ಆಯ್ಕೆ ಆಗಿದೆ ಅಂದ ಕ್ಷಣವೇ ಈ ಎರಡೂ ಪುಸ್ತಕಗಳ ಬಗ್ಗೆ ಹೋಲಿಕೆ ಶುರುವಾದ್ದದ್ದು ಸಾಹಿತ್ಯ ವಿಮರ್ಶೆಗಿಂತ ಬೂಕರ್ ಪ್ರೈಜ್ ನ ರಾಜಕೀಯದ ಬಗ್ಗೆ. ಸೋಷಿಯಲ್ ಮೀಡಿಯನಲ್ಲಿ ಕೆಲವರು ಬಾನು ಅವರ ಪುಸ್ತಕ ಭಾರತೀಯರ ಹೆಮ್ಮೆ ಎಂದರೆ ಕೆಲವರು ಅರುಂಧತಿ ರಾಯರ ಹಿಂದೂ ಧರ್ಮ ನಿಂದನೆಯಿಂದಾದ ಕಹಿ ಘಟನೆಗಳನ್ನು ನೆನಪಿಸುಕೊಳ್ಳುತ್ತಾ ಬಾನು ಅವರ ಕಥೆಗಳು ಕೂಡ ಅದರಂತೆಯೇ ಮುಸಲ್ಮಾನರ ನಿಂದನೆಗೆ ಒಳಗಾಗುತ್ತವೋ ಎಂದು ಗುಮಾನಿ ವ್ಯಕ್ತ ಪಡಿಸಿದ್ದಾರೆ. ಸಾಕಷ್ಟು ಜನ ಎರಡೂ ಪುಸ್ತಕಗಳ ಹೋಲಿಕೆಯಲ್ಲೇ ಸಾಹಿತ್ಯ ಮತ್ತು ರಾಜಕೀಯದ ತುಲನೆ ಮಾಡುತ್ತಿರುವುದಂತೂ ನಿಜ. 


Trust, but verify ಅನ್ನುವುದು ಮಾಜಿ ಅಧ್ಯಕ್ಷ ರೇಗನ್ ನ ಸಂದೇಶ. ಅದರಂತೆ ಸ್ವಲ್ಪ ಇನ್ವೆಸ್ಟಿಗೇಟೀವ್ ಕೆಲಸ ಮಾಡಿದರೇನೇ ನಂಬಿಕೆ ಬರಲು ಸಾಧ್ಯ. ಹಾಗಾಗಿ ಕಣ್ಣಿಗೆ ಕಾಣುವುದಕ್ಕಿಂತ ಹಿಂದೆ ಕಾಣದ ವಿಚಾರಗಳನ್ನು ಒಟ್ಟುಗೂಡಿಸಿ ನಂತರ ಮುಂದಕ್ಕೆ ಹೋಗಬೇಕು. 


ಬಾನು ಮುಷ್ತಾಕ್ ರ Heart Lamp ಪುಸ್ತಕದ ಬೂಕರ್ ಪ್ರೈಜ್ ಆಯ್ಕೆಗೆ ಅದರ ಕಥಾವಸ್ತು, ಅನುವಾದ, ಮತ್ತು ಪುಸ್ತಕದ ಪ್ರಕಟಣೆಗಳ ಹಿನ್ನಲೆ ಬಗ್ಗೆ ಅಷ್ಟು ಸ್ಪಷ್ಟತೆ ಇಲ್ಲದ ಕಾರಣ ಹೆಚ್ಚಿನ ಮಾಹಿತಿ ಗಳಿಸುವುದು ಅನಿವಾರ್ಯ ಆಗಿದೆ. ಪ್ರಾರದರ್ಶಕೆ ಇಲ್ಲದಿದ್ದಾಗ ಸಂಶಯ ಮೂಡುವುದು ಸಹಜ. ಈ ಮೇಲಿನ ನಾಲ್ಕು ಪ್ರಕ್ರಿಯೆಗಳಲ್ಲಿ ಮೂರು ಪ್ರಕ್ರಿಯೆಗಳು ಸಂಶಯವಿಲ್ಲದೆ ಅಷ್ಟು ಸುಲಭವಾಗಿ ಕಣ್ಣಿಗೆ ಕಾಣಲಿಲ್ಲ. ಬಾನು ಅವರ ಸಾಹಿತ್ಯ, ಕಥಾವಸ್ತು, ಅವರ ಬರಹದ ಶೈಲಿ, ಕನ್ನಡ ಸಣ್ಣ ಕತೆಗಳ ಕೊಡುಗೆಯ ದೃಷ್ಟಿಯಿಂದ ನೋಡಿದಾಗಲೂ, ಮುಸಲ್ಮಾನ ಸಮುದಾಯದಿಂದ ಕನ್ನಡ ಸಾಹಿತ್ಯ ಕೊಡುಗೆಯ ದೃಷ್ಟಿಯಿಂದಲೂ ತುಲನೆ ಮಾಡಿದಾಗ ಬಾನು ಅವರ ಕೊಡುಗೆ ಅಪಾರವಾದದ್ದು ಎಂದು ಎರಡು ಮಾತಿಲ್ಲ. ಹಾಗಾಗಿ ಬೂಕರ್ ಪ್ರೈಜ್ ಆಯ್ಕೆ ಬಹುಶಃ ಎಲ್ಲ ರೀತಿಯಲ್ಲೂ ಸಮಂಜಸ ಅನಿಸುತ್ತದೆ. 

ಆದರೆ ಒಂದೆರಡು ಸಂಶಯಗಳು ಪರಿಹಾರವಾಗಲಿಲ್ಲ. ಉದಾಹರಣೆಗೆ: ಒಬ್ಬ ಲೇಖಕ ತಾವಾಗಿಯೇ ಅನುವಾದಕರನ್ನು ಹುಡುಕಿಕೊಂಡು ಅನುವಾದ ಮಾಡಿಕೊಡಿ ಎಂದು ಕೇಳುವುದು ತುಂಬಾ ವಿರಳ ಅಥವಾ ಇಲ್ಲವೇ ಇಲ್ಲ ಅಂತ ಹೇಳಬಹುದು. ಆದರೆ ಭಾನು ಅವರು ಅನುವಾದಕಿ ದೀಪ ಅವರನ್ನು ಅರಸಿ ಹೋದದ್ದು ಏಕೆ ಎಂದು ಸ್ವಲ್ಪ ಸೋಜಿಗ. ಅದೂ ದೀಪ ಅವರು ಬಾನು ಅವರ ಯಾವ ಕಥೆಯನ್ನೂ ಮೊದಲು ಓದಿರಲಿಲ್ಲ ಅಥವಾ ಅನುವಾದಿಸಿರಲಿಲ್ಲ ಎಂದು ತಿಳಿದಮೇಲೆ ಮತ್ತಷ್ಟು ಸೋಜಿಗವೇ ಆಗುತ್ತೆ. 


ಕೆಲವೊಮ್ಮೆ ಇಂತಹ ಕನ್ನೆಕ್ಷನ್ ಗೆ ಸ್ಪಂದನ ಸಾಧ್ಯ ಅಂತ ನಾವೇ ಕಣ್ಣಾರೆ ಕಂಡಿರುವುದರಿಂದ ಆ ಪ್ರಕ್ರಿಯೆಗಳು ಹಿಂದಕ್ಕೆ ಸರಿದು ನಮ್ಮನ್ನು ಭಾವನಾತ್ಮಕ ಕಡೆಗೆ ತಳ್ಳಿಬಿಡುತ್ತವೆ. 


ಸ್ವಲ್ಪ ದೀರ್ಘವಾಗಿ ಕಣ್ಣರಳಿಸಿ ನೋಡಿದಾಗ ಮತ್ತೊಂದು ವಿಷಯ ಕಂಡಿತು. ಭಾರತದಲ್ಲಿ ಸಾವಿರಾರು ಪ್ರಕಾಶಕರು ಇರುವಾಗ ಈ ಅನುವಾದ ಪುಸ್ತಕದ ಪ್ರಕಟಣೆಗೆ ಬಾನು ಮತ್ತು ದೀಪ ಅವರು ಹುಡುಕಿ ನಿರ್ಧರಿಸಿದ್ದು &Other Stories ಎನ್ನುವ ಬ್ರಿಟನ್ನಿನ ಪ್ರಕಾಶಕರನ್ನು. ಆ ನಿರ್ಧಾರ ಏಕೆ, ಹೇಗೆ, ಯಾವ ಕಾರಣಕ್ಕಾಗಿ ಆಯಿತು ಅಂತ ಸೋಜಿಗ ಪಟ್ಟರೆ ಸಾಲದು. ಉತ್ತರ ಹುಡಕಲು ಅನೇಕ ಬಿಂದುಗಳನ್ನು ಒಂದಕ್ಕೊಂದು ಪೋಣಿಸಬೇಕು, ಒಂದು ಹಾರದಂತೆ. ಆಗ ಸಿಕ್ಕಿದ್ದು ಬ್ರೂಕರ್ ಪ್ರೈಜ್ ಪುರಸ್ಕಾರಕ್ಕೆ ಒಂದು ಕಂಡೀಷನ್ ಇದೆಯೆಂದು. ಅದೆಂದರೆ ಪುಸ್ತಕ ಬ್ರಿಟನ್/ uk ನಲ್ಲಿ ಮಾತ್ರ ಪ್ರಕಟವಾಗಿರಬೇಕೆಂದು. ಈ ಕಂಡಿಷನ್ಗೂ ದೀಪ ಮತ್ತು ಭಾನು ಅವರ ನಿರ್ಧಾರಕ್ಕೂ ಯಾವ ಸಂಭಂದವೂ ಇರಲಿಕ್ಕಿಲ್ಲ ಅಂತ ಅಂದುಕೊಂಡರೂ, ಮತ್ತೊಮ್ಮೆ ಯೋಚಿಸಬೇಕಾಯಿತು. ದೀಪ ಮತ್ತು ಬಾನು ಅಷ್ಟೇನೂ ಪ್ರತಿಷ್ಠಿತ ಬರಹಗಾರರಲ್ಲದಿದ್ದರೂ, ಭಾರತದಲ್ಲಿ ಇರುವ ಎಲ್ಲಾ ಪ್ರಕಾಶಕರನ್ನು ತಿರಸ್ಕರಿಸಿ 7 ಸಮುದ್ರದಾಚೆಯ &Other Stories ನ್ನು ಪುಸ್ತಕ ಪ್ರಕಟಿಸಲು ಗೊತ್ತುಮಾಡಿಕೊಂಡಿದ್ದು ಒಂದು ಸೋಜಿಗವೇ ಇರಬಹುದು ಮತ್ತು ಸಂಶಯ ಬರಿಸಲು ದಾರಿ ಮಾಡಿಕೊಡುತ್ತೆ. 


ಇನ್ನು ಬೂಕರ್ ಪ್ರೈಜ್ ನ ಹಿನ್ನಲೆಯಲ್ಲಿ ನೋಡಿದಾಗ ಅದೊಂದು ಯಾವಾಗಲೂ ಸಾಹಿತ್ಯಕ್ಕಿಂತ ವಿವಾದಾತ್ಮಕ ವಿಷಯಗಳ ಬಗ್ಗೆಯೇ ನೀಡುವ ಪುರಸ್ಕಾರ. 


ಭಾರತದ ಜಾತೀಯತೆ ಮತ್ತು ಹಿಂದೂ ಧರ್ಮವನ್ನು ಕೀಳುಮಟ್ಟದಿಂದ ತಿರಸ್ಕರಿಸುವ ಪುಸ್ತಕಗಳಿಗೆ ಪುರಸ್ಕಾರ ಕೊಡುವುದು ಅದರ ಗುರಿ ಎಂದು ಈಗಾಗಲೇ ಪುರಾವೆಗಳು ದೊರೆತಿವೆ. ಅರುಂಧತಿ ರಾಯ್ ಕಾದಂಬರಿ The God of Small Things ಇದಕ್ಕೆ ಒಂದು ಉದಾಹರಣೆ. 


 ಒಂದಂತೂ ಸತ್ಯ, ಬಾನು ಅವರ ಕತೆಗಳಲ್ಲಿ ಅಂತಹ ವಿವಾದ ಕಾಣಬರುವುದಿಲ್ಲ. ಅದರಲ್ಲಿ ಹಿಂದೂ ಧರ್ಮವನ್ನು ತೆಗಳದಿದ್ದರೂ ಮತ್ತೊಂದು ದೃಷ್ಟಿಯಲ್ಲಿ ಅವರ ಇಸ್ಲಾಮ್ ಮತದ ಯಾವುದೇ controversy ಯನ್ನು, --ಅರುಂಧತಿ ಹಿಂದೂ ಧರ್ಮಕ್ಕೆ ಮಾಡಿದ ಅಪಪ್ರಚಾರದಂತೆ-- ವಕ್ರದೃಷ್ಟಿಯಿಂದ ವಿವರಿಸುವುದಿಲ್ಲ. ಕತೆಗಳಲ್ಲಿ ಕಂಡುಬರುವುದು ಒಂದೆರಡು ಕಡೆ ಇಸ್ಲಾಮ್ ನ ಹಗುರ ನಿಂದನೆಯೇ ಆದರೂ .. 


ಕೆಲವೊಂದು ಕಥೆಗಳಲ್ಲಿ ಮುಸ್ಲಿಂ ಮಹಿಳೆಯರ ಬಗ್ಗೆ ಅನುಕಂಪ ಮೂಡಿಸುವ ಸನ್ನಿವೇಶಗಳು, ಮುಸ್ಲಿಮರ ಷರಿಯಾ ಖಾನೂನಿಂದ ಆಗುತ್ತಿರುವ ಅನ್ಯಾಯಗಳು, ಮತಾಚರಣೆಗಳಾದ ಖತ್ನ (circumcision) ಮತ್ತು ಮಸೀದಿಗಳಲ್ಲಿ ನಡೆಯುವ ಮುಲ್ಲರ ಕಾರ್ಯಭಾರಗಳನ್ನು ಯಾವ ವಿವಾದಕ್ಕೂ ಆಸ್ಪದ ಕೊಡದೆ ಇಸ್ಲಾಮಿನ ಆದರ್ಶಗಳಿಗೆ ಯಾವುದೇ ಅಪನಿಂದನೆ ಬರದಂತೆ ಬರೆದ ಕಥೆಗಳು. ಈ ಕಥೆಗಳೆಲ್ಲವೂ ಕೇವಲ ಮುಸಲ್ಮಾನ ಸ್ತ್ರೀಯರ ವಯಕ್ತಿಕ ಭಾವನೆಗಳೇ ಹೊರತು ಅವರೂ ಕೂಡ ಸಿಡಿದೆದ್ದು ಇಸ್ಲಾಮಿನ ಮತಾಚರಣೆಗಳನ್ನು ಖಂಡಿಸಿದ್ದು ಕಾಣುವುದಿಲ್ಲ ಈ ಕಥೆಗಳಲ್ಲಿ. ಖತ್ನ ಮಾಡಿಸಿಕೊಂಡಾಗಲೂ ವಿಜ್ಞಾನ ಮತ್ತು ವೈದ್ಯಕೀಯ ಅನುಮೋದನೆಗಿಂತಲೂ ಅಲ್ಲಾನ ಮೇಲೆ ಭಾರ ಹಾಕಿದ ಹುಡುಗನ ಗುಣವಾದದ್ದು ಮುಖ್ಯವಾಗುತ್ತೆ ಒಂದು ಕಥೆಯಲ್ಲಿ. ಇಸ್ಲಾಮ್ ನ ಷರಿಯಾ ಖಾನೂನು ಭಾರತದಲ್ಲಿ ಕೂಡ ಚಲಾವಣೆ ಇದ್ದರೂ ಅದನ್ನು ಖಂಡಿಸಿಯೂ ಖಂಡಿಸದಂತೆ ಬರೆದ ಕಾಲ್ಪನಿಕ ಕಥೆಗಳು ಒಂದೆಡೆ ಯಾವ ವಿವಾದವನ್ನೂ ಬರಿಸಲಾರವು. ಬಹುಶಃ ಈ ದೃಷ್ಟಿಯಿಂದ ಅರುಂಧತಿ ರಾಯ್ರ ಹಿಂದೂ ಧರ್ಮ ನಿಂದನೆಯನ್ನು ಎತ್ತಿ ತೋರಿಸಿದ ಅಂದಿನ ಬೂಕರ್ ಪ್ರೈಜ್ ಇಂದು ಇಸ್ಲಾಮಿನ ಒಂದು ಆಶಾದಾಯಕ ದೃಷ್ಟಿಕೋನದಿಂದ ಬೇರೊಂದು ಸಂದೇಶವನ್ನೇ ತಲುಪಿಸಿತ್ತುದೆ ಏಕೆ ಅಂತ ಸಂಶಯ ಮೂಡುವುದು ಕೂಡ ಸಹಜ. ಬೂಕರ್ ಪ್ರೈಜ್ ನ ಸಂದೇಶವೂ ಅದೇ ಇರಬಹುದು, ಹಿಂದೂ ರಾಜ್ಯದಲ್ಲಿ ಅಲ್ಪಸಂಖ್ಯಾತಿ ಮುಸ್ಲಿಮರು ತಮ್ಮದೇ ಆಶಾದಾಯಕ ಜೀವನ ಶೈಲಿಯಲ್ಲಿ ಎದೆಗುಂದದೆ ಕಷ್ಟಗಳಿಗೆ ಉತ್ತರ ಹುಡುಕುತ್ತಿದ್ದಾರೆ ಎನ್ನುವದೇ? ಗೊತ್ತಿಲ್ಲ. ಈ ಪುಸ್ತಕದಿಂದ ಸಲ್ಮಾನ್ ರಷ್ಡಿ ಅವರ ವಿವಾದಾಸ್ಮಕ ಸಟಾನಿಕ್ ವರ್ಸಸ್ ನಂತೆ ಪ್ರಪಂಚದ್ಯಾಂತ ಗಲಭೆ ಭಯೋತ್ಪಾದನೆಗಂತೂ ಆಸ್ಪದವಿಲ್ಲ! ಆದರೆ ಇಸ್ಲಾಮಿನ ಅವಗುಣಗಳನ್ನೇ ಒಂದು ಆಶಾದಾಯಕ ಕೋನದಿಂದ ಪ್ರಪಂಚದ ಇಂಗ್ಲಿಷ್ ಓದುಗರಿಗೆ ಹೂವಿನ ಹಾಸಿಗೆಯಂತೆ ಹರಡಿರುವ ಈ ಪುಸ್ತಕದ ಕಥಾವಸ್ತುಗಳು, ಅನುವಾದ, ಪ್ರಕಟಣೆ ಮತ್ತು ಬೂಕರ್ ಪ್ರೈಜ್ ಆಯ್ಕೆಗಳನ್ನೂ ನಾವು ಬೇರೆಯೇ ಕೋನದಿಂದ ನೋಡ ಬೇಕು. ನಾವು ಸಾಹಿತ್ಯ ವಿಮರ್ಶಕರು ರಾಜಕೀಯದ ಬಗ್ಗೆ ಮಾತನಾಡುವುದೂ ಕೂಡ ಒಂದು ಅಸಹಜತೆ ಎನ್ನುವ ಈ ಕಾಲಮಾನದಲ್ಲಿ ನಮ್ಮ ಅಭಿಪ್ರಾಯಗಳನ್ನು ಮರೆತು ಎಲ್ಲರಂತೆ ಥಂಬ್ಸ್ ಅಪ್ ಕೊಡುವುದು ಕೊಡ ಅಸಹಜವೆ. 


 ಒಟ್ಟಿನಲ್ಲಿ ಸಾಹಿತ್ಯಕ್ಕಿಂತ ಹೆಚ್ಚಾಗಿ ರಾಜಕೀಯದಲ್ಲಿ ಮುಳಗಿರುವ ಬೂಕರ್ ಪ್ರೈಜ್ ಗೆ ನಾವು ಅಷ್ಟು ಪ್ರಾಮುಖ್ಯತೆ ಕೊಡಬೇಕಿಲ್ಲ ಎನ್ನುವ ವಿಚಾರ ಓದುಗರಿಗೆ ಮನದಟ್ಟಾಗಿದ್ದರೆ ಈ ಲೇಖನ ಬರೆದದ್ದು ಸಾರ್ಥಕ ಅಷ್ಟೇ!

ಶನಿವಾರ, ಮಾರ್ಚ್ 15, 2025

ತ್ರಿವೇಣಿ ಸಂಗಮ

 


ಇದು ಮೋದಿಯವರ ಮರುಷಿಯಸ್ ಪ್ರವಾಸದ ಚಿತ್ರ. ಇದರಲ್ಲಿ ವಿಶೇಷತೆ ಏನಂದರೆ, ಭಾರತದ ಗಂಗೆ ಯಮುನೆ ಸರಸ್ವತಿಯರ ಸಂಗಮದಿಂದ ತಂದ ಜಲವನ್ನು ಮರುಷಿಯಸ್ ದೇಶದ ಗಂಗಾ ತಲಾವ್ ಅನ್ನುವ ಜಾಗದಲ್ಲಿ ಅಲ್ಲಿಯ ಒಂದು ಸರೋವರಕ್ಕೆ "ಜಲ ತರ್ಪಣೆ" ಮಾಡುತ್ತಿದ್ದಾರೆ ಮೋದಿಯವರು. ಗಂಗೆಯ ಪವಿತ್ರತೆಯನ್ನು ಅಲ್ಲಿಯ ಗಂಗೆಗೆ ತಲುಪಿಸಿದ ತೃಪ್ತಿ ಕಾಣುತ್ತಿದೆ ಅವರ ಮುಖಚರ್ಯೆಯಲ್ಲಿ. 

ಈ ಸುದ್ದಿ ತಲುಪುವ ಮುಂಚೆಯೇ ಕೆಲವು ದಿನಗಳ ಹಿಂದೆ, ಕುಂಭಮೇಳ ಪ್ರಯುಕ್ತ, ಒಂದು ಆಶುಕವಿತೆಯನ್ನು ಬರೆದಿದ್ದೆ. ಗಂಗೆಯ ಈ ಪವಿತ್ರತೆಯ ಬಗ್ಗೆ, ವಿಜ್ಞಾನಿಗಳ ಅಜ್ಞಾನದ ಬಗ್ಗೆ. ಬಿಡುವಿದ್ದಾಗ ಓದಿ. 

ತ್ರಿವೇಣಿ ಸಂಗಮ 
-ರವಿ ಗೋಪಾಲರಾವ್ 

ಮಹಾ ಕುಂಭಮೇಳವ ಕಂಡು 
ನದಿ ಗಂಗೆಯಾದರೇನು ನೈಲ್ ಆದರೇನು 
ಸೇರುವುವು ಕಡಲನೇ 
ಕಡಲು ಬೆಂಗಾಲ ಕೊಲ್ಲಿಯಾದರೇನು 
ಅರಬಿ ಸಮುದ್ರವಾದರೇನು 
ಮಿಲನವಾಗುವುವು ಸಾಗರದಲಿ 
ಸಾಗರ ಅಟ್ಲಾಂಟಿಕ್ ಆದರೇನು 
ಹಿಂದೂ ಮಹಾಸಾಗರ ಆದರೇನು 
ಬೆರೆಯುವವು ಶಾಂತ ಸಾಗರವನೇ 
ಹಿಮಗಟ್ಟುವುವು ಉತ್ತರದಕ್ಷಿಣ ದ್ರುವದಲಿ 
ಹನಿ ಹನಿಯ ಜಲವೆಲ್ಲಾ 
ಒಂದೇ ಎಂದರು ವಿಜ್ಞಾನಿಗಳು 

 ಆದರೇಕೋ ..... 

ಮನುಜರೆಲ್ಲರ ಪಾಪವನೇ ತೊಳೆಯಲೆಂದೇ 
ಕೈಲಾಸದಲಿ ಶಿವ ಬಿಗಿಹಿಡಿದ ಜಟೆಯ ತೊರೆದು 
ಭಗೀರಥ ಪ್ರಯತ್ನದಲಿ ಧರೆಗಿಳಿದ ಗಂಗೆ ಜಾಹ್ನವಿ 
ಶ್ರೀಕೃಷ್ಣನ ಯಮುನೆ ವೇದದಲಿ ಮೆರೆದ ಸರಸ್ವತಿ 
ಹನಿಹನಿಯಲೂ ಪರಶಿವನ ಪವಿತ್ರತೆ ಪಡೆದು 
ಅಜ್ಞಾನವನೇ ದೂರಮಾಡಿದರೆಂದೇಕೆ 
ಅರಿಯೆಯೋ ಮನುಜ?

ಮಂಗಳವಾರ, ಸೆಪ್ಟೆಂಬರ್ 24, 2024

ಕಮಲಾ ಹ್ಯಾರಿಸ್ ಅವರ ಜನ್ಮಕುಂಡಲಿನಿಯಲ್ಲಿ ರಾಜಯೋಗ ಬರೆದಿದಿಯೇ?

 ಕಮಲಾ ಹ್ಯಾರಿಸ್ ಅವರ ಜನ್ಮಕುಂಡಲಿನಿಯಲ್ಲಿ ರಾಜಯೋಗ ಬರೆದಿದಿಯೇ?

ಜ್ಯೋತಿಷಿ ಆಗಿರದಿದ್ದರೂ ಕುತೂಹಲದಿಂದ ಭವಿಷ್ಯ ನುಡಿದವರು: ರವಿ ಗೋಪಾಲರಾವ್.  


ಜ್ಯೋತಿಷ್ಯದಲ್ಲಿ ನಂಬಿಕೆ ಇದ್ದವರಿಗೆ ಮುಂದೇನಾಗಬಹುದು ಎನ್ನುವುದರ ಬಗ್ಗೆ ತುಂಬಾ ಕುತೂಹಲ ಪ್ರಶ್ನೆಗಳಿಗೆ ಉತ್ತರ ಹುಡುಕಿದಂತೆ.  ಹಿಂದೆಯೂ ಈಗಲೂ ಹುಟ್ಟಿದ ಮಕ್ಕಳ ಜನ್ಮ ಕುಂಡಲಿ ಬರೆಸುವುದು, ಮದುವೆಗೆ ಗುಣಗಳನ್ನು ಹೋಲಿಸುವುದು, ಯುದ್ಧಕ್ಕೆ ಹೋಗುವವರಿಗೆ ಗ್ರಹಗಳ ಮತ್ತು ರಾಶಿ ಫಲಗಳನ್ನು ತಿಳಿಸಿ ಅವರ ಜಯ-ಪರಾಜಯಗಳ ಬಗ್ಗೆ ಯೋಚಿಸಿ ಯಜ್ಞಯಾಗಾದಿಗಳನ್ನು ಪರಿಹಾರಕ್ಕೆ ಸೂಚಿಸುವುದು, ಹೀಗೆ ಎಲ್ಲ ಜೀವನದ ಎಲ್ಲ ಘಟನೆಗಳಿಗೂ ಜ್ಯೋತಿಷ್ಯ ಒಂದು ಉಪಯುಕ್ತ ಮಾಹಿತಿ ನೀಡುವುದೆಂದು ಬಹುಶಃ ಹತ್ತು ಜನರಲ್ಲಿ ಎಂಟು ಮಂದಿ ನಂಬುತ್ತಾರೆ.  ಭಾರತದಲ್ಲಿ ಹುಟ್ಟಿ ಬೆಳೆದ ನಮ್ಮಂತವರಿಗೆ ಇದರ ಬಗ್ಗೆ ಸಾಕಷ್ಟು ಪರಿಚಯ ಇದೆ.  ಜನಸಾಮಾನ್ಯರಿಗೆ ನಂಬಿಕೆ ಮುಖ್ಯವಲ್ಲ ಆದರೆ  ಜ್ಯೋತಿಷಿಗಳ ವರ್ತನೆಯಲ್ಲಿ ಅದೇನೋ ಒಂದು ರೀತಿಯ ಗುಪ್ತತೆ ಕಂಡು ಜನರಲ್ಲಿ ಭಯವನ್ನೂ ಕೂಡ ಮೂಡಿಸುತ್ತದೆ. ರಾಜಕಾರಣಿಗಳು ಹೆಚ್ಚು ನಂಬಿಕೆ ಅಥವಾ ಭಯ ಉಳ್ಳವರಿರಬೇಕು,  ಅವರಿಂದಲೇ ಜ್ಯೋತಿಷಿಗಳಿಗೆ ಹೆಚ್ಚು ಆದಾಯ. ಜ್ಯೋತಿಷ್ಯದ ಹಿನ್ನಲೆ ಬಹಳವೇ ವೈಜ್ಞಾನಿಕ ಅಂತ ಹೇಳಿದರೆ ಕೆಲವರು ನಕ್ಕಾರು, ಕೆಲವರು ದೀರ್ಘ ಕಾಲ ಅದನ್ನು ಅಧ್ಯಾಯನ ಮಾಡಿ ಅದಕ್ಕಿಂತಲೂ ಯಾವುದೇ ವೈಜ್ಞಾನಿಕ ವಿದ್ಯೆಯೇ ಇಲ್ಲ ಎನ್ನುವಷ್ಟು ನಂಬಿಕೆ ಬೆಳೆಯಸಿಕೊಳ್ಳುವವರು ಕೂಡ ಇದ್ದಾರೆ.  ಅದು ಏನೇ ಇರಲಿ, ಜ್ಯೋತಿಷ್ಯದ ಹಿನ್ನಲೆ ಬಹಳ ದೀರ್ಘವಾದದ್ದು ಮತ್ತು ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಬೆಳೆದು ಬಂದಿರುವ ರೀತಿಯನ್ನು ನೋಡಿದರೆ, ಅಬ್ಬಾ, ನಮ್ಮ ಭಾರತದಲ್ಲಿ ಜ್ಯೋತಿಷ್ಯ ಇಲ್ಲದೆ ಯಾವ ಕಾರ್ಯವೂ ಸಾಧ್ಯವಿಲ್ಲ ಎನ್ನುವಷ್ಟು ಬೆಳೆದಿದೆ.  

ಜ್ಯೋತಿಷ್ಯದಲ್ಲಿ ಜನ್ಮ ಕುಂಡಲಿ ಬಹಳ ಮುಖ್ಯವಾದದ್ದು.  ಹುಟ್ಟಿದ ಕ್ಷಣ, ಆ ಕ್ಷಣದಲ್ಲಿ ಗ್ರಹಗಳ ರಾಶಿಗಳ ನಕ್ಷತ್ರಗಳ ಸೂರ್ಯ ಚಂದ್ರರ ಸ್ಥಾನಗಳನ್ನು ಅರಿಯುವುದು ಬಹಳ ಮುಖ್ಯ. ಇದೆಲ್ಲ ಏಕೆ ಹೇಳುತ್ತಿದೀನಿ ಅಂತ ನಿಮಗೆ ಕುತೂಹಲ ಮೂಡಿದರೆ, ಅದು ಒಳ್ಳೆಯ ಸೂಚನೆಯೇ.  ಏಕೆಂದರೆ ಅಮೇರಿಕಾದಲ್ಲಿ ಮುಂದೆ ನಡೆಯಲಿರುವ ಚುನಾವಣೆಯಲ್ಲಿ ಏನಾಗಬಹುದು ಎನ್ನುವ ಪ್ರಶ್ನೆಗೆ ಉತ್ತರ ತಿಳಿದುಕೊಳ್ಳಬೇಕೆಂಬ ನಮ್ಮ ನಿಮ್ಮ ಎಲ್ಲರ ಕುತೂಹಲಕ್ಕೆ ಸ್ವಲ್ಪ ವಿರಾಮ ಕೊಡಬಹುದು.  ಅಂದರೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವವರ ಜನ್ಮ ಕುಂಡಲಿಯನ್ನು ಬಿಡಿಸಿ ನೋಡಿ, ಗ್ರಹಗತಿಗಳನ್ನು ಕೂಲಂಕಷವಾಗಿ ಅರ್ಥೈಸಿಕೊಂಡು ಯೋಗವಾಹಗಳನ್ನು ತಾಳೆ ಮಾಡಿ ನೋಡಬಹುದು.  ಬನ್ನಿ ಮೊದಲು ಕಮಲ ಹ್ಯಾರಿಸ್ ಅವರ ಜನ್ಮ ಕುಂಡಲಿಯನ್ನು ನೋಡುವ. ಆಕೆ ಹುಟ್ಟಿದ್ದು ನಮ್ಮ ಕ್ಯಾಲಿಫೋರ್ನಿಯಾದ ಒಕ್ಲಾನ್ಡ್ ನಲ್ಲಿ, ಅಕ್ಟೊಬರ್ ಇಪ್ಪತ್ತನೇ ತಾರೀಖು, ೧೯೬೪ನೇ ಇಸವಿಯಲ್ಲಿ.  ಅಂದರೆ ಮಂಗಳವಾರ, ಶುಕ್ಲಪಕ್ಷ ಪೂರ್ಣಿಮೆಯಲ್ಲಿ, ರೇವತಿ ನಕ್ಷತ್ರದಲ್ಲಿ ಹುಟ್ಟಿದವರು.  ಚಾಂದ್ರಮಾನದ ಪ್ರಕಾರ ಮೀನಾ ರಾಶಿಯಲ್ಲೂ, ಸೌರಮಾನ ಪ್ರಕಾರ ತುಲಾ ರಾಶಿಯಲ್ಲೂ ಜನಿಸಿದರೆಂದು ತಿಳಿಯಬಹುದು. ಹತ್ತು ಅಂಶಗಳ ಅಂದರೆ ದಶಾಂಶ ಸಂಖ್ಯಾಬಲವನ್ನು ಕೇಂದ್ರೀಕರಿಸಿ ಜನ್ಮ ಕುಂಡಲಿಯನ್ನು ನೋಡಿದಾಗ ಗುರು, ಹತ್ತನೆಯಮನೆಯಲ್ಲೂ, ಸೂರ್ಯ ಎಂಟನೇ ಮನೆಯಲ್ಲೂ, ಮಂಗಳ, ಕೇತು ಮತ್ತು ಬುಧ  ಒಂಬತ್ತನೇ ಮನೆಯಲ್ಲೂ, ಶುಕ್ರ ಒಂದನೇ ಮನೆಯಲ್ಲೂ, ಶನಿ ಹನ್ನೆರಡನೇ ಮನೆಯಲ್ಲೂ, ರಾಹು ಮೂರನೇ ಮನೆಯಲ್ಲಿ ಮತ್ತು ಕೊನೆಯದಾಗಿ ಚಂದ್ರ ಐದನೇ ಮನೆಯಲ್ಲಿ ಇದ್ದಾನೆ ಅಂತ ನೀವು ಜನ್ಮಕುಂಡಲಿಯನ್ನು ಗಮನವಿಟ್ಟು ನೋಡಿದರೆ ಗೊತ್ತಾಗಿ ಬಿಡುತ್ತದೆ.  ಅಂದರೆ ಎಲ್ಲ ಗ್ರಹಗಳೂ ಒಳ್ಳೆಯ ಮನೆಗಳಲ್ಲೇ ಇರುವುದರಿಂದ ಈ ಜನ್ಮಕುಂಡಲಿಯವರಿಗೆ ಒಳ್ಳೆಯ ಭವಿಷ್ಯವಿದೆ ಎಂದು ಜ್ಯೋತಿಷ್ಯ ಹೇಳುತ್ತದೆ.  

ಕುಂಡಲಿನಿ ಯೋಗ, ಅಂದರೆ, ಮೇಲಿನ ಕುಂಡಲಿನಿಯಲ್ಲಿ ಹುಟ್ಟಿದವರಿಗೆ ಬರಬಹುದಾದ ಸುಮಾರು ಮೂವತ್ತಾರು ಯೋಗಕಾಲಗಳನ್ನು ಪರಿಶೀಲಿಸುವ ಒಂದು ಪ್ರಕ್ರಿಯೆ.  ಮಂಗಳ ದೋಷ, ರಾಜಲಕ್ಷಣ ಯೋಗ, ಮಹಾಯೋಗ, ಲಕ್ಷ್ಮಿ ಯೋಗ ಹೀಗೆ ಬೇರೆ ಬೇರೆ ಯೋಗಲಕ್ಷಣಗಳನ್ನು ಗುರುತಿಸಿ ಆ ಜನ್ಮಕುಂಡಲಿಯಲ್ಲಿ ದೋಷ ಅಥವಾ ಯೋಗಗಳ ಕಾಲಮಾಪನವನ್ನು ಮತ್ತು ಅದಕ್ಕೆ ಬೇಕಾದ ಪರಿಹಾರ ಅಥವಾ ಸಿದ್ಧತೆಗಳನ್ನು ತಿಳಿಸಿಕೊಡಲು ಜ್ಯೋತಿಷಿಗಳು ಅರಿಯುತ್ತಾರೆ.  ಉದಾಹರಣೆಗೆ ಮಂಗಳ ದೋಷ ಬರುವುದು ಮಂಗಳ ಗ್ರಹ ತನ್ನ ಮನೆಯಲ್ಲಿ ಇರದೇ ವೈರಿಯ ಮನೆಯಲ್ಲಿರುವುದರಿಂದ ಅಂತ ತಿಳಿಯತಕ್ಕದ್ದು.  ಆ ದೋಷದಿಂದ ಆಗುವ ಕೆಲವು ಸಮಸ್ಯೆಗಳು ಪ್ರಾಪ್ತವಯಸ್ಸಿಗೆ  ಆಗದಿರುವುದು, ಗಂಡ ಹೆಂಡಿರಲ್ಲಿ ಮನಸ್ಥಾಪ ಇತ್ಯಾದಿ ದೋಷಗಳಿಗೆ ಕಾರಣವೆಂದು ಹೇಳುತ್ತಾರೆ.  ಅದೇ ರೀತಿ ಆರು ಮತ್ತು ಎಂಟನೆಯ ಮನೆಯಲ್ಲಿ ಯಾವ ಗ್ರಹಗಳೂ ಇಲ್ಲದೆ ಅಥವಾ ಒಳ್ಳೆಯ ಗ್ರಹ ಇದ್ದರೆ, ಅದು ಶುಭದಾಯಕವಾಗಿ ಪ್ರವತ ಯೋಗ ಎಂದು ಕರೆಯುತ್ತಾರೆ.  ಆ ಯೋಗದಲ್ಲಿ ಶ್ರೀಮಂತಿಕೆ, ಗೌರವಪ್ರಾಪ್ತಿ, ಇತ್ಯಾದಿ ಶುಭಕಾರ್ಯಗಳೆ  ಆಗುತ್ತವೆ.  ಅದೇ ರೀತಿ ಬುಧ ಗ್ರಹ ಮತ್ತು ಸೂರ್ಯನ ಸ್ಧಾನದಿಂದ ಕೂಡಿಬರುವ ಬುಧಾದಿತ್ಯ ಯೋಗ ಬಹಳವೇ  ಒಳ್ಳೆಯದು.  ರಾಜನಾಗುವ ಭಾಗ್ಯವೂ ದೊಡ್ಡ ಸೈನ್ಯಕ್ಕೆ ಅಧಿಪತಿಯಾಗುವ ಯೋಗವೂ ಪ್ರಾಪ್ತವಾಗುತ್ತದೆ.  ಮತ್ತೊಂದು ಪಾರಿಜಾತ ಯೋಗ.  ಇದರಲ್ಲಿ ಲಗ್ನ ಕುಂಡಲಿಯ ಅಧಿಪತಿ ರಾಶಿಯ ಅಧಿಪತಿಯ ಜೊತೆ ಇದ್ದರೆ ಅದರಿಂದ ಪಡೆಯುವ ಭಾಗ್ಯ ಅಂತಿಂತದ್ದಲ್ಲ:  ಅರ್ಧಾಯುಶ್ಶ್ಯಾದ ವೇಳೆಗೆ ರಾಜ ಮರ್ಯಾದೆ, ಗಜಾಧಿಪತಿ ಆಗುವ ಭಾಗ್ಯ, ಗೌರವ ಬಾಳ್ವೆ, ಅತ್ಯಂತ ಉನ್ನತ ಯಶಸ್ಸು, ಹೀಗೆ ಎಲ್ಲ ರೀತಿಯಲ್ಲೂ ಸತ್ಕಾಲ ಬರುತ್ತದೆ.  ಈ ಮೂವತ್ತಾರು ಯೋಗಗಳಲ್ಲಿ ಇನ್ನೂ ಒಳ್ಳೆಯವು ಬೇಕಾದಷ್ಟಿವೆ, ಕೆಟ್ಟವೂ ಇದೆ.  ಆದ್ದರಿಂದ ಎಲ್ಲವೂ ಒಟ್ಟಿಗೆ ಬರಲು ಸಾಧ್ಯವಿಲ್ಲ.  ಜ್ಯೋತಿಷಿಗಳು ಈ ಯೋಗಗಳು ಯಾವ ಇಸವಿಯಿಂದ ಯಾವ ಇಸವಿಯವರೆಗೆ ಇರುತ್ತವೆ ಎಂದು ಕೂಡ ಗುಣಿಸಿ ಹೇಳಿಬಿಡುತ್ತಾರೆ.  ಅಂದ್ರೆ ಎಲ್ಲ ಒಳ್ಳೆಕಾಲಕ್ಕೂ ಕೆಟ್ಟ ಕಾಲಕ್ಕೋ ನಮ್ಮ ಜನ್ಮಕುಂಡಲಿನಿಯಲ್ಲಿ ಬರೆದುಬಿಡಲಾಗುತ್ತದೆ.  ಕೆಟ್ಟ ಅಂಶಗಳುಳ್ಳ ಕಾಳಸರ್ಪ ಯೋಗ, ಕೆಲವೊಮ್ಮೆ ಏಳು ವರ್ಷ ಇರುತ್ತಂತೆ.  ಹಾಗೆಯೇ ಒಳ್ಳೆಯ ಗುಣಗಳು ಕೆಲವೊಮ್ಮೆ ಇಪ್ಪತ್ತು ಮೂವತ್ತು ವರ್ಷಗಳೂ ಇರುತ್ತವೆ.  ಈ ಜನ್ಮಕುಂಡಲಿನಿಯಲ್ಲಿ ಹುಟ್ಟಿದ ಕಮಲಾ ಅವರಿಗೆ ಮಂಗಳನ ಮಹಾ ದಶ ೨೦೦೯ ರಿಂದ ೨೦೧೬ ರ ವರೆಗೆ ಇದ್ದಿದ್ದು ನಂತರ ೨೦೧೬ ರಿಂದ ೨೦೩೪ ರ ವರೆಗೆ ರಾಹುವಿನ ಮಹಾ ದಶ ಯೋಗ ವಿರುತ್ತದೆ.  ನಂಬಿದರೆ ಜುಲೈ ೮, ೨೦೨೪ ರಿಂದ ಆ ಮಹಾ ದಶೆ ಶುರುವಾಯಿತಂತೆ.  ಅಂದರೆ ಬೈಡನ್ ಸ್ಪರ್ಧಿಸಲು ನಿರಾಕರಿಸಿ ಕಮಲಾಗೆ ಬಿಟ್ಟುಕೊಟ್ಟ ಸಮಯ.  ಒಟ್ಟಿನಲ್ಲಿ ಮೂವತ್ತಾರು ಯೋಗಗಳಲ್ಲಿ ಯಾವುದೇ ದೋಷದಿಂದ ಕೂಡಿರದೆ ಒಟ್ಟು ಆರು ಅತ್ಯತ್ತಮ ಯೋಗಗಳಾದ ಪರ್ವತ, ಬುಧಾದಿತ್ಯ, ಪಾರಿಜಾತ, ಅನಫ, ಆಮಲ ಮತ್ತು ಶಾಶ ಯೋಗಗಳು ಕಮಲಾ ಅವರ ಜನ್ಮಕುಂಡಲಿಯಲ್ಲಿ ಇಂದು ಮುಖ್ಯವಾಗಿ ಕಾಣುತ್ತಿವೆ.  ಅಂದರೆ ಇನ್ನೇನು ಹೇಳಬೇಕು?  ಯಾವುದೇ ಕಾರಣಕ್ಕೂ ಅಮೇರಿಕ ದೇಶದ ಅಧ್ಯಕ್ಷೆ ಆಗಲು ಎಲ್ಲ ಒಳ್ಳೆಯ ದಶೆಗಳು ಒಟ್ಟಾಗಿ ಸೇರಿವೆ.  ನೋಡೋಣ ಜ್ಯೋತಿಷ್ಯ ನಿಜವಾಗುವುದೋ ಇಲ್ಲವೋ ಎಂದು, ನವಂಬರಿನಲ್ಲಿ.   ಆದರೆ ನನ್ನ ಈ ಅರ್ಧಂಬರ್ಧ ಜ್ಯೋತಿಷ್ಯ ಜ್ಞಾನದಲ್ಲಿ ಅರ್ಧ ನಿಜವಾದರೂ ಕಮಲಾ ಅವರ ಗ್ರಹಗತಿಗಳು ಬಹಳವೇ ಚೆನ್ನಾಗಿವೆ, ಅಧ್ಯಕ್ಷೆ ಆಗಲು.


ಗುರುವಾರ, ಜೂನ್ 20, 2024

ದಾಸಯ್ಯ

ದಾಸಯ್ಯ 












ನಮ್ಮ ಮನೆಯ ಸಂಪ್ರದಾಯದಲ್ಲಿ ಮದುವೆಯ ಶುಭ ಆರಂಭವಾಗುವುದೇ ದಾಸಯ್ಯನ ಶಂಖನಾದದಿಂದ ಮತ್ತು ತಮಟೆಯ ಅಬ್ಬರದಲ್ಲಿ.  ನಾನು ಚಿಕ್ಕವನಾಗಿದ್ದಾಗ ಮಾತ್ರ ನೋಡಿದ್ದಲ್ಲ ಈ ಸಂಪ್ರದಾಯವನ್ನು, ನನ್ನ ಮದುವೆಯನ್ನೂ ಆರಂಭ ಮಾಡಿದ್ದೆ ದಾಸಯ್ಯ.  ಮನೆಗೆ ಬಂದ  ದಾಸಯ್ಯನಿಗೆ ಮನೆಯಲ್ಲಿ ಮುಂಬರುವ ಇಂತಹ ದಿನದಲ್ಲಿ ನಮ್ಮ ಮಗನ/ ಮಗಳ ಮದುವೇ ಅಂತ ಹೇಳಿದರೆ ಸಾಕು ಅವನೇ ಊರಿಗೆಲ್ಲ ಶುಭ ಸುದ್ದಿ ಹರಡುವ ಕೆಲಸ ವಹಿಸಿಕೊಂಡು ಬಿಡುತ್ತಾನೆ. ಅದಕ್ಕಾಗಿಯೇ ಅವನು ಬಂದರೆ ಶುಭ ಸುದ್ದಿಯನ್ನೇ ತರುವವ ಎಂದು ಗೌರವ ನಮ್ಮ ಮನೆಯಲ್ಲಿ.  ಶುಭ ಸೂಚಕವಾಗಿ ಒಂದು ವಾರ ಮದುವೆಯ ಮುನ್ನವೇ ಮನೆಯ ಮುಖ್ಯ ಬಾಗಿಲಿಗೆ ಚಪ್ಪರ ಕಟ್ಟುವ ದಿನ ದಾಸಯ್ಯನೆ ಮುಖ್ಯ ಅತಿಥಿ. ಶಿವನ ವಾಹನವಾದ ನಂದಿಯನ್ನು ಅಲಂಕರಿಸಿಕೊಂಡು ಮನೆಯ ಮುಂದೆ ನಿಂತನೆಂದರೆ ಸಾಕು, ಎಲ್ಲರೂ ಬಂದು ನಂದಿಗೆ ಆರತಿ ಎತ್ತಿ ಅಂದಿನ ಕಾರ್ಯವನ್ನು ಶುರು ಮಾಡುತ್ತಿದ್ದರು.  ಅವನ ನಿರ್ದೇಶನದಲ್ಲಿ ಚಪ್ಪರದ ಪೂಜೆ, ಬಾಳೆ ಕಂದು, ಮಾವಿನ ತೋರಣ, ಎಲ್ಲದರಲ್ಲೂ ದಾಸಯ್ಯನ ಪಾಂಡಿತ್ಯ ಅರಿವಾಗುತ್ತದೆ.  ಅಂದಿನ ಹೂವೀಳ್ಯದ ಸಮಯದಲ್ಲಿ ಶಂಖ ತಮಟೆ ಬಾರಿಸಿ ಇಡೀ ನೆರೆಹೊರೆಯಲ್ಲಿ ಅತ್ಯಂತ ಸಂಭ್ರಮದ ವಾತಾವರಣ ಕಲ್ಪಿಸಿ ಬಿಡುತ್ತಿದ್ದ ದಾಸಯ್ಯ. ಅಂದಿನ ದಾಸಯ್ಯನ ಊಟ ನಮ್ಮ ಮನೆಯಲ್ಲೇ, ನಂದಿಗೂ ಕೂಡ ಬಾಳೆಎಲೆಯ ಊಟ!  ಎಲ್ಲರನ್ನೂ ಹರಸಿ ಹೊರಟನೆಂದರೆ ಮತ್ತೆ ಅವನ ದರ್ಶನ ಮದುವೆಯ ದಿನ ಛತ್ರಕ್ಕೆ ಹೊರಡುವ ಮುನ್ನ.  ಅಂದೂ ಕೂಡ ಅವನು ಕಲ್ಪಿಸುವ ಸಂಭ್ರಮದ ವಾತಾವರಣ ಮರೆಯಲು ಸಾಧ್ಯವಿಲ್ಲ.  ಇದು ನಮ್ಮ ಅಜ್ಜ ಅಜ್ಜಿಯ ಕಾಲದಿಂದಲೂ ನಡೆದು ಬಂದದ್ದು.  ದೊಡ್ಡ ಸಂಸಾರದಲ್ಲಿ ಬೆಳೆದ ನನಗೆ 10-12 ಮದುವೆಗಳಲ್ಲಿ ಆದ ಈ ಅನುಭವದಿಂದ ದಾಸಯ್ಯನ ಬಗ್ಗೆ ಇಂದಿಗೂ ಗೌರವ ಉಳಿದಿದೆ. 1990ರ ದಶಕದಲ್ಲಿ ಕೂಡ ಬೆಂಗಳೂರಿನಲ್ಲೇ ನಮ್ಮ ಮನೆಯಲ್ಲಿ ತಪ್ಪದೆ ನಡೆಯುತ್ತಿದ್ದ ಈ ಸಂಪ್ರದಾಯದ ಆಚರಣೆ ಮತ್ತೆ 2020ರಲ್ಲಿ ಆದ ಅಕ್ಕನ ಮಗಳ ಮದುವೆಯಲ್ಲೂ ನಡೆಯಿತೆನ್ನುವುದರ ಬಗ್ಗೆ ಇಲ್ಲಿ ಹಂಚಿಕೊಳ್ಳಲು ನನಗೆ ಸಂತೋಷವೇ. 

ಮಂಗಳವಾರ, ಜೂನ್ 18, 2024

ಅಮೇರಿಕ ದೇಶದ ರಾಷ್ಟ್ರ ಗೀತೆ



ಅಮೇರಿಕ ದೇಶದ ರಾಷ್ಟ್ರ ಗೀತೆ
ಕನ್ನಡ ಭಾವಾನುವಾದ:
-ರವಿ ಗೋಪಾಲರಾವ್

O say can you see by the dawn's early light
What so proudly we hailed at the twilight's last gleaming
Whose broad stripes and bright stars through the perilous fight
O'er the ramparts we watched, were so gallantly streaming?
And the rocket's red glare, the bombs bursting in air
Gave proof through the night that our flag was still there
O say does that star-spangled banner yet wave
O'er the land of the free and the home of the brave

ನೀ ಹೇಳು ಅರುಣೋದಯದ
ಕ್ಷಿಪ್ರ ಕಾಂತಿಯಲಿ ಕಾಣಿಸುತಿಹುದೇ
ಸಂಧ್ಯಾಕಾಲದ ಕೊನೆಯ ಮುಬ್ಬು ಬೆಳಕದು
ಜಯಜಯಕರಿಸಿದೆವು ಸ್ವಾಭಿಮಾನದಲಿ
ಭಯಾನಕ ಕದನದಲಿ
ಹೊಳೆವ ನಕ್ಷತ್ರ ವಿಶಾಲ ಬಣ್ಣವದು
ಕೋಟೆಯ ಮೇಲಂಚಿನಲಿ ನಿಂತು ನೋಡಿದೆವು
ಹರಿವುದನೇ ಧೀರತನದಲಿ
ಕಣ್ಣುಕೋರೈಸಿಹುದು ಕ್ಷಿಪಣಿಯ ಕೆಂಪು
ಗಗನೆತ್ತರಕೆ ಆಸ್ಫೋಟಿಸಿಹುವು ಸಿಡಿಗುಂಡು
ರಜನಿಯ ಕಗ್ಗತ್ತಿನಲೂ ಸಾಕ್ಷ್ಯವಿಹುದು
ನಮ್ಮೀ ಧ್ವಜ ಅಲ್ಲಿಹುದು
ನೀ ಹೇಳು ಪುಟಿದೆದ್ದ ನಕ್ಷತ್ರಗಳ ಬಾವುಟ
ಕೈಬೀಸಿ ಸ್ವಾಗತಿಸಿಹುದೇ ಮಿಗಿಲಿನಲಿ
ನಮ್ಮೀ ಸ್ವತಂತ್ರರ ಬೀಡು ನಿರ್ಭಯರ ನಾಡು

ಸೋಮವಾರ, ಜೂನ್ 17, 2024

ಅವಳು …. ಸ್ತ್ರೀ ಸಂವೇದಿ ಮಾತು-ಕತೆಗಳು

 ಅವಳು …. ಸ್ತ್ರೀ ಸಂವೇದಿ ಮಾತು-ಕತೆಗಳು 

ಕನ್ನಡ ಸಾಹಿತ್ಯ ರಂಗ (ಅಮೇರಿಕ) ಇತ್ತೀಚಿಗೆ ಮೇರಿಲ್ಯಾಂಡ್ ನಲ್ಲಿ ೧೧ನೇ ವಸಂತೋತ್ಸವ ಸಮಾರಂಭ ಆಚರಿಸಿತು.  ಅಂದು ಬಿಡುಗಡೆ ಮಾಡಿದ ಪುಸ್ತಕ “ಅವಳು …. ಸ್ತ್ರೀ ಸಂವೇದಿ ಮಾತು-ಕತೆಗಳು.” ಪುಸ್ತಕದ ಬಗ್ಗೆ ರಾಜೇಂದ್ರ ಚೆನ್ನಿ ಅವರ ಮುನ್ನುಡಿಯಿಂದಲೇ ಹೇಳಬೇಕೆಂದರೆ “ಇಲ್ಲಿಯ ಕತೆ/ಲೇಖನಗಳು  ಒಂದು ಹೊಸ ಮನ್ವಂತರದ ಸೂಕ್ಷ್ಮ ದಾಖಲೆಗಳಾಗಿವೆ.  ಸೈದ್ಧಾಂತಿಕ ಭರಾಟೆ ಹಠಮಾರಿತನವಿಲ್ಲದೆಯೆ ಪುರುಷಪ್ರಾಧಾನ್ಯದ ಅನೇಕ ಮುಖಗಳನ್ನು ತೆರೆದಿಡುತ್ತವೆ.”  ಈ ಪುಸ್ತಕದಲ್ಲಿ ನನ್ನ ಒಂದು ಲೇಖನವೂ ಪ್ರಕಟವಾಗಿದೆ.  ಬಿಡುವು ಮಾಡಿಕೊಂಡು ಇಡೀ ಪುಸ್ತಕವನ್ನು ಓದಿ ನಿಮ್ಮ ಅಭಿಪ್ರಾಯ ತಿಳಿಸಿ.

ನನ್ನ ಲೇಖನ “ಶೋಷಿತ ಹೆಣ್ಣಿನ ಪುನಃಶ್ಚೇತನ: ಸವಾಲುಗಳ ಅವಲೋಕನ,” ದರೋಡೆಕೋರರ ರಾಣಿ ಎಂದೇ ಪ್ರಸಿದ್ಧಿ ಪಡೆದ ಫುಲನ್ ದೇವಿಯ ಜೀವನ ಚರಿತ್ರೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಬರೆದ ಲೇಖನ. ಅವಳು ಜನಿಸಿದ್ದೇ ಬಡತನದಲ್ಲಿ. ಹಿಂದೂ ಸಮಾಜದ ಅಸ್ಪೃಶ್ಯತೆಯ ತುಚ್ಛ, ನಿರ್ಗತಿಕ ಸಂಸಾರದಲಿ.  ಸಹಿಸಲಾರದ ಅತ್ಯಾಚಾರ, ದೌರ್ಜನ್ಯ, ಅಸಾಹಾಯಕತೆಯಲ್ಲೂ ಸಮಾಜದ ವಿರುದ್ಧ ಬಂಡೆದ್ದು ದುಷ್ಕೃತ್ಯ ಮಾಡಿದವರನ್ನು ತಾನೇ ಕೊಂದು ಸೇಡು ತೀರಿಸಿಕೊಂಡ ದಲಿತ ಹೆಣ್ಣು.  ನ್ಯಾಯಕ್ಕೆ ತಲೆಬಗ್ಗಿ ಶರಾಣಾಗತಿಯಲಿ ಕಠಿಣ ಕಾರಾಗೃಹವನು ಅನುಭವಿಸಿದ ಧೀರ ಮಹಿಳೆ.  ತನ್ನ ಮೂವತ್ತೆಳೇ ವರ್ಷಗಳ ಜೀವನದಲ್ಲಿ ಶೋಷಿತ ಹೆಣ್ಣಿನ ಸ್ಥಾನದಿಂದ ಅಂತ್ಯ ಪಡೆದು ಪುನಃಸ್ಚೇತನ ಗಳಿಸಿ ಶೋಷಿತ ಜನರ ಪ್ರತಿನಿಧಿಯಾಗಿ ರಾಜಕೀಯದಲ್ಲಿ ಮೆರೆದ ದಿಟ್ಟ ಹೆಣ್ಣು. ದುರಾದೃಷ್ಟಾವಶಾತ್ ಮೇಲ್ಜಾತಿಯ ದ್ವೇಷ ಅಭಿಯಾನದ ಗುಂಡಿಗೆ ಬಲಿಯಾದ ಅಭಾಗ್ಯ ಹೆಣ್ಣು. ನಾನು ಇಲ್ಲಿ ಅವಳ ವ್ಯಕ್ತಿ ಚಿತ್ರಣವನ್ನೇ ನಿಮ್ಮ ಮುಂದಿಡುವುದರ ಜೊತೆಗೆ ಯಾವ ಹಂತದಲ್ಲಿ ಮತ್ತು ಹೇಗೆ ಅವಳು ತನ್ನ ಶೋಷಿತ ಸ್ಥಿತಿಯಿಂದ ಹೊರಬಂದು ಪುನಃಸ್ಚೇತನ ಗಳಿಸಿದಳು, ಆ ಪ್ರಕ್ರಿಯೆಯಲ್ಲಿ ಯಾವ ಸವಾಲುಗಳು ಉದ್ಭವಿಸುತ್ತವೆ ಎನ್ನುವುದರ ಅವಲೋಕನವನ್ನೇ ಈ ಲೇಖನದ ಗುರಿ ಮಾಡಿಕೊಂಡಿದ್ದೇನೆ. ಫೂಲನ್ ದೇವಿಯು ಹೇಗೆ ಜಾತಿಯ ಕಳಂಕ,  ಆರ್ಥಿಕ ಶೋಷಣೆ ಮತ್ತು ಲಿಂಗ ಬೇಧಗಳನ್ನು ಸ್ಪಂದಿಸುವುದರ ಜೊತೆಗೆ ತನ್ನದೇ ಪ್ರತಿರೋಧಕ ಸಿದ್ಧಾಂತಗಳನ್ನು ಅಳವಡಿಸಿಕೊಂಡಳು ಎಂದು ಅವಲೋಕಿಸುವ ಪ್ರಯತ್ನವನ್ನು ಕೂಡ ಮಾಡಿದ್ದೇನೆ.

ಲೇಖನ ಇದೆ ಬ್ಲಾಗಿನಲ್ಲಿ ಕೂಡ ಪೋಸ್ಟ್ ಮಾಡಿದ್ದೇನೆ.  ಇಲ್ಲಿದೆ ಅದರ ಕೊಂಡಿ.  ಓದಿ ನಿಮ್ಮ ಅಭಿಪ್ರಾಯ ತಿಳಿಸಿ.


ಪ್ರಕಟಿತ ಕೃತಿಗಳು (nothingmuchdoc.blogspot.com)















>ಅವಳು …. ಸ್ತ್ರೀ ಸಂವೇದಿ ಮಾತು-ಕತೆಗಳು 

ಸಂಪಾದಕರು: ಮೀರಾ.ಪಿ.ಆರ್. ಮತ್ತು ಪೂರ್ಣಿಮ ಕಶ್ಯಪ್ 

ಪ್ರಕಾಶಕರು: ಅಭಿನವ, ಬೆಂಗಳೂರು 

ಬೆಲೆ: ೫೦೦ ರೂಪಾಯಿಗಳು

ಭಾನುವಾರ, ಜೂನ್ 16, 2024

ತಂದೆಯಂತೆ ಮಗಳು

 ತಂದೆಯಂತೆ ಮಗಳು

ತನ್ನ ಮಕ್ಕಳು ತನ್ನ ಎಲ್ಲ ಒಳ್ಳೆಯಗುಣಗಳನ್ನು ಮೀರಿಸಿ ಬೆಳೆಯಲಿ, ತನಗಿಂತಾ ಹಣವಂತರಾಗಲಿ, ಬುದ್ಧಿವಂತರಾಗಲಿ, ತಾನು ಸಾಧಿಸದ್ದನ್ನು ಸಾಧಿಸಲಿ, ಹೀಗೆ ಎಲ್ಲಾ ವಿಚಾರಗಳಲ್ಲಿ ಒಬ್ಬ ತಂದೆ ತನ್ನ ಮಕ್ಕಳಲ್ಲಿ ಶ್ರೇಷ್ಠ ಸಾಧನೆಯನ್ನೇ ಬಯಸುತ್ತಾನೆ. ಜನ್ಮ ನೀಡಿದ ತಂದೆಗೆ ಅದು ಸ್ವಾಭಾವಿಕವೇ. “ತಂದೆತನ” ಅನ್ನುವ ಪದವಿದ್ದಿದ್ದರೆ ಅದರಲ್ಲಿರುವ ನ್ಯೂನತೆ ಅಥವಾ ಸಫಲತೆ ಎರಡನ್ನೂ ತುಲನೆ ಮಾಡಲು ಪರರ ಅಭಿಪ್ರಾಯ ವ್ಯರ್ಥ. ಏಕೆಂದರೆ ಅದು ಕೇವಲ ತಂದೆಯ ಅಂತರ್ಗತದಲ್ಲೇ ಉಳಿಯುವ ಭಾವನೆಯೇ ಹೊರತು ಅದಕ್ಕೆ ಸ್ವರೂಪವನ್ನು ಕೊಡಲು ಕಷ್ಟ. ಹೃದಯದಾಳದ ಆ ಸ್ವಗತ ಮಾತುಕತೆಗಳು ಅಪೂರ್ಣ ಕೂಡ. ಆ ಆಲೋಚನೆ ಆಸೆ-ನಿರಾಸೆಗಳ ಸಂಗಮವೇ ಆಗಿ ತನ್ನ ಮಕ್ಕಳ ಅಜ್ಜನ ಜೊತೆ ತಾನು ಚಿಕ್ಕವನಾಗಿದ್ದಾಗ ಕಳೆದ ಕಾಲಗಳನ್ನೇ ಮೆಲಕು ಹಾಕಲು ಪ್ರೇರಿಪಿಸಿಬಿಡುತ್ತದೆ, ಅಷ್ಟು ಭಾವುಕ ಶಕ್ತಿ ಅದಕ್ಕೆ. ಒಪ್ಪಿಕೊಳ್ಳಲು ಕಷ್ಟವಾದ ವಿಚಾರವಾದರೂ ತಂದೆ-ಮಗನ ಮಧ್ಯೆ ಬೆಳೆಯುವ ಪರಸ್ಪರ ಶಿಸ್ತಿನ ನಿರೀಕ್ಷೆ, ಗೌರವ ಮತ್ತು ಋಣಾನುಬಂಧ, ತಂದೆ-ಮಗಳ ಮಧ್ಯೆ ಬೆಳೆಯುವ ಪರಸ್ಪರ ಸಹಾನುಭೂತಿ, ಗೆಳೆತನ ಮತ್ತು ಸಲಿಗೆಗಿಂತ ಬಹಳ ವಿಭಿನ್ನ. ಆದರೂ ತಂದೆಯಂತೆ ಮಗ ಅಥವಾ ತಂದೆಯಂತೆ ಮಗಳು ಯಾವುದೂ ಅಸಂಭವವೇನಲ್ಲ. ತಿಳಿದೋ ತಿಳಿಯದೆಯೋ ತಂದೆಯ ಗುಣಗಳನ್ನು ಮಗನೂ ಅನುಕರಿಸಬಹುದು ಮಗಳೂ ಅನುಕರಿಸಬಹುದು. ನಮ್ಮ ಅನುಭವಕ್ಕೆ ಬಂದ ವಿಚಾರಗಳಾದ್ದರಿಂದ ಇವೆಲ್ಲವೂ ನಿಮ್ಮಲ್ಲಿ, ನಮ್ಮಲ್ಲಿ, ನಮ್ಮಂತಹ ಜನಸಾಮಾನ್ಯರಲ್ಲಿ ವಿಶೇಷವೇನಲ್ಲ. ಆದರೆ ಪ್ರಸಿದ್ಧ ‘ಪಂಡಿತನ ಮಗ ಶುಂಠಿ’ ಆದರೆ ಜನರು ಹುಬ್ಬೇರಿಸುವುದು ಖಂಡಿತ. ಅದಕ್ಕೆ ಮುಖ್ಯ ಕಾರಣ ಮುಂದಿನ ಪೀಳಿಗೆಯಲ್ಲಿ ಮಹತ್ತರವಾದದ್ದನ್ನೇ ನಿರೀಕ್ಷಿಸುತ್ತದೆ ಸಮಾಜ. ಒಂದುವೇಳೆ ತಂದೆ ಪ್ರಸಿದ್ಧಿ ಪಡೆದ ಗೌರವಾನ್ವಿತ ವ್ಯಕ್ತಿ ಆಗಿದ್ದಲ್ಲಿ ಸಮಾಜದ ನಿರೀಕ್ಷೆ ಎರಡೂ ಕಡೆ ಮೊನಚಾದ ಕತ್ತಿಯಂತೆ ಸದಾ ಮಕ್ಕಳ ತಲೆಯ ಮೇಲೆ ತೂಗಾಡುತ್ತಿರುತ್ತದೆ. ಆ ಕತ್ತಿಯ ಹರಿತವನ್ನು ತಪ್ಪಿಸುಕೊಳ್ಳುವವರು ಬಹು ಕಡಿಮೆ. 



ಈ ಹಿನ್ನಲೆಯಲ್ಲಿ ಸಮಾಜದ ನಿರೀಕ್ಷಯೊಂದನ್ನೇ ಅಲ್ಲ, ತಂದೆಯ ನಿರೀಕ್ಷೆಯನ್ನು ಕೂಡ ಮೀರಿ ತಮ್ಮದೇ ಸ್ಥಾನ ಗಳಿಸಿರುವ ಮೂರು ತಂದೆ-ಮಗಳ ಜೋಡಿ ಜೀವನ ಯಾತ್ರೆ ಮತ್ತು ಅವರುಗಳ ಸಂಗೀತ ಈ ಲೇಖನದ ಕಥಾವಸ್ತು. ಪ್ರಸಿದ್ಧ ಹಿಂದೂಸ್ತಾನಿ ಗಾಯಕ ಕುಮಾರ ಗಂಧರ್ವ, ಮತ್ತೊಬ್ಬ ಪ್ರಸಿದ್ಧ ಹಿಂದುಸ್ಥಾನಿ ಗಾಯಕರಾದ ಪಂಡಿತ್ ಅಜಯ್ ಚಕ್ರವರ್ತಿ, ಹಾಗು ಪ್ರಸಿದ್ಧ ಸಿತಾರ್ ವಾದಕ ಪಂಡಿತ್ ರವಿ ಶಂಕರ್ ಬಗ್ಗೆ ಎಲ್ಲರಿಗೂ ಸಾಕಷ್ಟು ಪರಿಚಯವಿದೆ. ಆದರೆ ತಂದೆಯಂತೆಯೇ ಮಗಳು ಎನ್ನುವುದಕ್ಕೆ ಸಾಕ್ಷಿಯೋ ಎನ್ನುವಂತೆ ಕುಮಾರ ಗಂಧರ್ವರ ಪುತ್ರಿ ಪ್ರಸಿದ್ಧ ಹಿಂದೂಸ್ತಾನಿ ಗಾಯಕಿ ವಿದೂಷಿ ಕೋಮಕಲಿ ಕಲಾಪಿನಿ, ಅಜಯ್ ಚಕ್ರವರ್ತಿಯವರ ಪುತ್ರಿ ಪ್ರಸಿದ್ಧ ಹಿಂದುಸ್ಥಾನಿ ಗಾಯಕಿ ಕೌಶಿಕಿ ಚಕ್ರವರ್ತಿ, ಹಾಗು ರವಿ ಶಂಕರರ ಪುತ್ರಿ ಪ್ರಸಿದ್ಧ ಸಿತಾರ್ ವಾದಕಿ ಅನೌಷ್ಕ ಶಂಕರ್ ಬಗ್ಗೆ ತಂದೆ-ಮಗಳ ಜೋಡಿಯ ಪರಿಚಯ ಮಾಡಿಕೊಡುವ ಪ್ರಯತ್ನ ಮಾಡಿದ್ದೇನೆ. ಈ ಎಲ್ಲ ಸಂಗೀತಗಾರರ ಬಗ್ಗೆ ತಿಳಿದುಕೊಳ್ಳಲು ಇಂಟರ್ನೆಟ್ ನಲ್ಲಿ ಬಹಳ ಮಾಹಿತಿ ದೊರೆಯುತ್ತದೆ. ಅದನ್ನೇ ಇಲ್ಲಿ ಮತ್ತೊಮ್ಮೆ ಹೇಳುವುದರ ಬದಲು ಅವರುಗಳ ಸಂಗೀತವನ್ನೇ ಇಲ್ಲಿ ನಾನು ಯೂಟ್ಯೂಬ್ ವಿಡಿಯೋಗಳ ಮೂಲಕ ನಿಮ್ಮೊಡನೆ ಹಂಚಿಕೊಂಡಿದ್ದೇನೆ. ವಿಶೇಷವಾಗಿ, ನಾನು ಇಲ್ಲಿ ತಂದೆ-ಮಗಳು ಹಾಡಿದ ಒಂದೇ ರಾಗವನ್ನು ಚುನಾಯಿಸಿದ್ದೇನೆ.

ಪಂಡಿತ್ ಕುಮಾರ ಗಂಧರ್ವ ಮತ್ತು ವಿಧೂಷಿ ಕೋಮಕಲೀ ಕಲಾಪಿನಿ 

ಚಿಕ್ಕಂದಿನಿಂದಲೇ ಸಂಗೀತ ಕಚೇರಿ ನಡೆಸಿಕೊಡುತ್ತಿದ್ದ ಕಾರಣ ಕುಮಾರ ಗಂಧರ್ವ ಎನ್ನುವುದು ಪ್ರೀತಿಯ ಬಿರುದು. ಶಿವಪುತ್ರ ಸಿದ್ದರಾಮಯ್ಯ ಕೋಮಕಲೀಮಠ ಅವರ ಪೂರ್ಣ ಹೆಸರು, ಲಿಂಗಾಯತ ಸಮುದಾಯದಲ್ಲಿ ಹುಟ್ಟಿ ಬೆಳೆದದ್ದು ನಮ್ಮ ಕರ್ನಾಟಕದ ಬೆಳಗಾಂ ಜಿಲ್ಲೆಯಲ್ಲಿ. ಹತ್ತು ವರ್ಷಕ್ಕೆ ಮೊದಲ ಕಚೇರಿ ನಡೆಸಿಕೊಟ್ಟ ಶ್ರೇಷ್ಠ ಹಿಂದುಸ್ಥಾನಿ ಶೈಲಿಯ ಸಂಗೀತಕಾರ. ಇಂತಹುದೇ ಘರಾನ ಎಂದು ಅವರ ಶೈಲಿಯನ್ನು ಗುರುತಿಸುವುದು ಕಷ್ಟ. ಎಲ್ಲ ರೀತಿಯ ಹಿಂದುಸ್ಥಾನಿ ಸಂಗೀತವನ್ನು ತಮ್ಮ ಅದ್ವಿತೀಯ ಹಾಡುಗಾರಿಕೆಯಲ್ಲಿ ಅಳವಡಿಸಿಕೊಂಡು ಯಾವುದೇ ಘರಾನ ಶೈಲಿಗೆ ಸೇರಲು ನಿರಾಕರಿಸಿದ ವ್ಯಕ್ತಿತ್ವ ಅವರದು.

ಕಲಾಪಿನಿಯ ತಂದೆ ತಾಯಿ ಇಬ್ಬರೂ ಹಿಂದೂಸ್ತಾನಿ ಗಾಯಕರೇ. ತಂದೆ ಪಂಡಿತ್ ಕುಮಾರ ಗಂಧರ್ವರು, ತಾಯಿ ವಿದೂಷಿ ವಸುಂಧರ ಕೋಮಕಲಿ. ತಂದೆಯ ಮಾತೃಭಾಷೆ ಕನ್ನಡ, ತಾಯಿಯದು ಬೆಂಗಾಲಿ. ಕಲಾಪಿನಿಯ ಹಾಡುಗಾರಿಕೆ ಕೇಳಿದರೆ ತಾಯಿಯಿಂದಲೇ ಹೆಚ್ಚಾಗಿ ಗಾಯನ ಕಲಿತಿದ್ದರೂ ತಂದೆಯ ಗಾಯನ ಶೈಲಿ ಹೆಚ್ಚು ಪ್ರಭಾವ ಬೀರಿರಬಹದು ಎಂದು ಊಹಿಸಿದ್ದಾರೆ ಕೆಲವರು. ಆದರೆ ಪಾರಂಪರಾಗತವಾಗಿ ಬಂದ ಇಬ್ಬರ ಶೈಲಿಯನ್ನು ಕಾರಗತಮಾಡಿಕೊಂಡಿದ್ದರೂ, ಕಲಾಪಿನಿ ಅವರು ತಮ್ಮದೇ ಬಹುಮುಖ ಪ್ರತಿಭೆಯಿಂದ ಹೆಸರು ಪಡೆದವರು.

ನನಗೆ ಇಷ್ಟವಾದ ಸೋಹನಿ ರಾಗದ ಹಾಡನ್ನು ತಂದೆ ಪಂಡಿತ ಕುಮಾರ ಗಂಧರ್ವರ ಧ್ವನಿಯಲ್ಲಿ ಮೊದಲು ಕೇಳಿ. ನಂತರ ವಿದೂಷಿ ಕೋಮಕಲಿ ಕಲಾಪಿನಿಯವರು ಒಂದು ಲೋಕಾಭಿರಾಮವಾದ ಸಂಘದಲ್ಲಿ ಕುಳಿತು ಹಾಡಿದ ಅದೇ ಸೋಹನಿ ರಾಗದ ಹಾಡನ್ನು ಕೇಳಿ. ಅಲ್ಲಿ ನೆರದಿದ್ದ ಮಹಾಕಲಾವಿದರೂ ಕೂಡ ಮೂಕವಿಸ್ಮಿತರಾಗಿ ಕೇಳಿ ನಂತರ ಕರತಾಡನ ಮಾಡುವುದನ್ನು ನೋಡಿದಾಗ ನನಗೆ ಅನಿಸಿದ್ದು, ಒಂದು ವೇಳೆ ಪಂಡಿತ್ ಕುಮಾರ ಗಂಧರ್ವರು ಅಲ್ಲಿ ಆಸೀನರಾಗಿದ್ದರೆ ಅವರೂ ಕೂಡ ಮೂಕವಿಸ್ಮಯರಾಗಿ ಕರತಾಡನ ಮಾಡುತ್ತಿದ್ದಾರೆಂದು. ಅಬ್ಬಾ, ಅದೆಷ್ಟು ಆತ್ಮವಿಶ್ವಾಸದಿಂದ, ಅದೆಷ್ಟು ತಲ್ಲೀನರಾಗಿ ಹಾಡಿದ್ದಾರೆ, ಅದೆಷ್ಟು ಸ್ವರ ವ್ಯಾಪ್ತಿ ಇದೆ ಅವರ ಹಾಡುಗಾರಿಕೆಯಲ್ಲಿ ನೀವೇ ನೋಡಿ. ಯಾವ ತಂದೆ ತಾನೇ ಹೆಮ್ಮೆ ಪಡದಿರಲು ಸಾಧ್ಯ, ತಂದೆಯನ್ನು ಮೀರಿಸಿದ ಮಗಳ ಗಾಯನವನ್ನು ಕೇಳಿ?

 

ಪಂಡಿತ್ ಕುಮಾರ ಗಂಧರ್ವ

ವಿಧೂಷಿ ಕೋಮಕಲೀ ಕಲಾಪಿನಿ


ಪಂಡಿತ್ ಅಜಯ್ ಚಕ್ರವರ್ತಿ ಮತ್ತು ವಿದೂಷಿ ಕೌಶಿಕಿ ಚಕ್ರವರ್ತಿ ಹಿಂದೂಸ್ತಾನಿ ಕಲೆಯಲ್ಲಿ ತಮ್ಮದೇ ವೈಶಿಷ್ಟ್ಯ ಗಳಿಸಿರುವ ಸಂಗೀತಕಾರರಲ್ಲಿ ಒಬ್ಬರಾದ ಪಂಡಿತ್ ಅಜೋಯ್ ಚಕ್ರಬರ್ತಿ (ಅವರ ಮಾತೃಭಾಷೆ ಬೆಂಗಾಲಿಯಲ್ಲಿ ಹೇಳುವುದಾದರೆ), ಕಳೆದ ಹಲವಾರು ದಶಕಗಳಿಂದ ಭಾರತ ಮತ್ತು ವಿದೇಶಗಳಲ್ಲಿ ಹೆಸರುಗಳಿಸಿದ್ದಾರೆ. ಪಾಟಿಯಾಲ ಘರಾನದಲ್ಲಿ ತುಮ್ರಿ, ಶೃಂಗಾರ ಮತ್ತು ಭಕ್ತಿಗೀತೆಗಳನ್ನು ಹಾಡುವ ಇವರ ಧ್ವನಿ ಮೃಧು, ಯಾವ ಸ್ವರವನ್ನೂ ಎತ್ತರದಲ್ಲಿ ಅಷ್ಟಮ ಶ್ರೇಣಿಯಲ್ಲಿ ಹಾಡುವುದಕ್ಕಿಂತ ಕೆಳ ಸ್ಥಾಯಿಯಲ್ಲಿ ಹಾಡುವುದು ಇವರ ಶೈಲಿ. ರಾಗಪ್ರಧಾನವಾದ ದಾದ್ರಾ, ಭಜನೆಗಳು, ರಬೀನ್ದ್ರ ಸಂಗೀತ, ಚಲನಚಿತ್ರ ಹಿನ್ನಲೆ ಗಾಯನ, ಹೀಗೆ ವಿವಿಧ ಶೈಲಿಯಲ್ಲಿ ಹಾಡಿ ನೂರಕ್ಕೂ ಹೆಚ್ಚು ಆಲ್ಬಮ್ಗಳನ್ನು ಬಿಡುಗಡೆ ಮಾಡಿದ್ದಾರೆ.

ವಿದೂಷಿ ಕೌಶಿಕಿ ಚಕ್ರವರ್ತಿ ಸಂಗೀತ ಕಲಿತದ್ದು ಕಲ್ಕತ್ತಾದ ಸಂಗೀತ ರೀಸರ್ಚ್ ಅಕಾಡೆಮಿಯಲ್ಲಿ. ತಂದೆ ಪಂಡಿತ್ ಅಜಯ್ ಚಕ್ರವರ್ತಿಯವರ ಗುರು ಜ್ಞಾನ ಪ್ರಕಾಶ್ ಘೋಷ್ ಕೌಶಿಕಿಯವರ ಗುರು ಕೂಡ. ಹಿಂದುಸ್ಥಾನಿ ಸಂಗೀತವನ್ನು ಕಲಿತು ನಂತರ ಶ್ರೀ ಬಾಲಮುರಳಿ ಕೃಷ್ಣವರ ಜೊತೆ ಕರ್ನಾಟಕ ಸಂಗೀತವನ್ನು ಕಲಿತಿರುವ ಕಾರಣವಾಗಿ ಎರಡೂ ಸಂಗೀತ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದರೆ. ಪಾಟಿಯಾಲ ಘರಾನದಲ್ಲಿ ಪಳಗಿದ ಕೌಶಿಕಿ ತಂದೆಯಂತೆಯೇ ತುಮ್ರಿ, ದಾದ್ರಾ, ಭಜನೆ ಮತ್ತು ಚಲನಚಿತ್ರ ಹಿನ್ನಲೆ ಗಾಯನದ ಮೂಲಕ 2002ನೇ ಇಸವಿಯಿಂದ ಭಾರತ ಮತ್ತು ವಿದೇಶಗಳಲ್ಲಿ ಹಾಡುತ್ತಲೇ ಬಂದಿದ್ದಾರೆ.

ಕ ಕರೂ ಸಜನಿ, ಭೈರವಿ ರಾಗದಲ್ಲಿ ತಂದೆ ಮಗಳು ಹೇಳಿರುವ ಈ ಜನಪ್ರಿಯ ಹಾಡನ್ನು ಕೇಳಿ.

ಪಂಡಿತ್ ಅಜಯ್ ಚಕ್ರವರ್ತಿ


ವಿದೂಷಿ ಕೌಶಿಕಿ ಚಕ್ರವರ್ತಿ


ಪಂಡಿತ್ ರವಿ ಶಂಕರ್ ಮತ್ತು ವಿದೂಷಿ ಅನೌಷ್ಕ ಶಂಕರ್ 

ವಿದೇಶಿಯರಿಗೆ ಭಾರತದ ಸಾಂಸ್ಕೃತಿಕ ಪರಿಚಯ ಮಾಡಿದ ವ್ಯಕ್ತಿ ಪಂಡಿತ್ ರವಿ ಶಂಕರ್ ಎಂದರೆ ತಪ್ಪಾಗದು. ಏಳೆಂಟು ದಶಕಗಳ ದೀರ್ಘ ಅವಧಿಯಲ್ಲಿ ಸಿತಾರ್ ಮತ್ತು ರವಿ ಶಂಕರ್ ಭಾರತದ ಅವಿಭಾಜ್ಯ ಅಂಗವಾಗಿ ಪ್ರಸಿದ್ಧಿ ಗಳಿಸಿರುವ ವಿಚಾರ ಮತ್ತು ಭಾರತ ರತ್ನ ಬಿರುದು ಗಳಿಸಿದ್ದು ಎಲ್ಲರಿಗೂ ಚಿರಪರಿಚಿತ. ಆದರೆ ದಶರಥನಂತೆ ಮೂರು ಹೆಂಡತಿಯರೊಡನೆ ಸಂಸಾರ ನಿರ್ವಹಿಸಿದ ಪಂಡಿತ್ ರವಿ ಶಂಕರ್ ತಮ್ಮ ಹಿರಿಯ ವಯಸ್ಸಿನಲ್ಲಿ ಅನೌಷ್ಕಳಿಗೆ ಜನ್ಮನೀಡಿ ನಂತರ ತಾವೇ ಗುರುವಾಗಿ ಸಿತಾರ್ ಕಲಿಸಿದ್ದು ಒಂದು ಗಾಳಿ ಮಾತೇನಲ್ಲ. ಅನೌಷ್ಕ ಸಿತಾರ್ ನುಡಿಸುವುದರಲ್ಲಿ ಮತ್ತು ಅವಳ ಅಕ್ಕ ನಾರ ಜೋನ್ಸ್ ಜ್ಯಾಜ್ ಸಿಂಗರ್ ಆಗಿ ಇಬ್ಬರೂ ಸಂಗೀತ ಕ್ಷೇತ್ರದಲ್ಲಿ ಹೆಸರು ಪಡೆದಿದ್ದಾರೆ. 


ಅನೌಷ್ಕ ಹದಿಮೂರರ ವಯಸ್ಸಿನಲ್ಲೇ ನವ ದೆಹಲಿಯಲ್ಲಿ ತನ್ನ ಮೊದಲ ಸಂಗೀತ ಕಚೇರಿ ನಡೆಸಿಕೊಟ್ಟ ಪ್ರಚಂಡ ಕಲಾವಿದೆ. ತಂದೆ ಪಂಡಿತ್ ರವಿ ಶಂಕರ್ ಜೊತೆ ಮತ್ತು ಉಸ್ತಾದ್ ಝಕೀರ್ ಹುಸೈನ್ ಅವರ ಜೊತೆ ನಿಕಟವಾಗಿ ಸಹಕರಿಸಿ, ಪ್ರಪಂಚದ ಹಲವಾರು ಶ್ರೇಷ್ಠ ಸಭಾಂಗಣದಲ್ಲಿ ಸಿತಾರ್ ನುಡಿಸಿ ಹೆಸರುಗಳಿಸಿದ್ದಾರೆ. ಹಿಂದೂಸ್ತಾನಿ ಶೈಲಿಯ ಸಿತಾರ್ ವಾದನದ ಜೊತೆ ಜ್ಯಾಜ್, ಎಲೆಕ್ಟ್ರಾನಿಕ, ಮುಂತಾದ ಸಮಕಾಲೀನ ಸಂಗೀತ ಮಾಧ್ಯಮಗಳಲ್ಲಿ ಹಲವಾರು ಆಲ್ಬಮ್ ಬಿಡುಗಡೆ ಮಾಡಿದ್ದಲ್ಲದೆ ಹಲವಾರು ಪ್ರಶಸ್ತಿ ಕೂಡ ಪಡೆದಿದ್ದಾರೆ. ತಂದೆಯಂತೆ ಭಾರತ ಸಾಂಸ್ಕೃತಿಕ ಪ್ರತಿನಿಧಿಯಾಗಿ ಸಿತಾರ್ ವಾದನವನ್ನು ಮತ್ತಷ್ಟು ಜನಪ್ರಿಯಗೊಳಿಸಿದ್ದಾರೆ.

ಪಂಡಿತ್ ರವಿ ಶಂಕರ್

ವಿದೂಷಿ ಅನೌಷ್ಕ ಶಂಕರ್

ಬುಧವಾರ, ಜೂನ್ 12, 2024

ಎಐ (AI) ಜೊತೆ ನನ್ನ ಸಂದರ್ಶನ

 


ಎಐ ಜೊತೆ ಸಂದರ್ಶನ

21ನೇ ಶತಮಾನದಲ್ಲಿ ಅವಿಷ್ಕಾರಗೊಂಡಿರುವ ಕೃತಕ ಬುದ್ದಿಮತ್ತೆ ಅಥವಾ ಎಐ ಬಗ್ಗೆ ಜನರಿಗೆ, ಟೆಕಿ ಆಗಿರಬಹುದು ಸಾಮಾನ್ಯನಿರಬಹುದು ಎಲ್ಲರಲ್ಲೂ ಅದರ ಬಗ್ಗೆ ತಿಳಿದುಕೊಳ್ಳಬೇಕೆಂಬ ಕುತೂಹಲ, ಕೆಲವರಿಗೆ ಸಂಶಯ, ಕೆಲವರಿಗೆ ತಿರಸ್ಕಾರ ಹೀಗೆ ಎಲ್ಲ ರೀತಿಯ ಪ್ರತಿಕ್ರಿಯೆಯನ್ನು ನಾವು ಕಾಣಬಹದು. ಆದರೆ ಅದರ ನಿಜ ಸ್ವರೂಪವೇನು ಎಂದು ಅರಿಯಲು ಹೋದಾಗ ಜನಸಾಮಾನ್ಯನಿಗೆ ದೊರಕುವ ಮಾಹಿತಿ, ಅದರಲ್ಲೂ ಕನ್ನಡದಲ್ಲಿ ಸಿಗುವ ಮಾಹಿತಿ ತೀರಾ ಕಡಿಮೆ. ಈ ನಿಟ್ಟಿನಲ್ಲಿ ಎಐನ್ನು “ಮಾತನಾಡಿಸಿ,” ಎಐ ಬಗ್ಗೆ ಸಂದರ್ಶನ ಮಾಡಿ, ಅದರ “ಬಾಯಿ” ಇಂದಲೇ ಅದರ ಬಗ್ಗೆ ಜನರಿಗೆ ಅರಿವು ಮೂಡಿಸಿ, ಅದರ “ಕೈ” ಇಂದಲೇ ಟೈಪ್ ಮಾಡಿಸಿ ಸರಳ ಭಾಷೆಯಲ್ಲಿ ಜನರಿಗೆ ಅರ್ಥವಾಗುವ ಹಾಗೆ ಬರೆದ ಲೇಖನ ಇದು.

ರವಿ ಗೋಪಾಲರಾವ್: ನಾನು ನಿಮ್ಮನ್ನು ಸಂದರ್ಶಿಸಲು ಮತ್ತು ನಿಮ್ಮನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಬಯಸುತ್ತೇನೆ. ನೀವು ಸಿದ್ಧವಾಗಿದ್ದೀರಾ?

ChatGPT: ಖಂಡಿತವಾಗಿ! ನೀವು ಯಾವಾಗ ಬೇಕಾದರೂ ಕೇಳಿ ನಾನು ಸಿದ್ಧನಿದ್ದೇನೆ. ನೀವು ತಿಳಿದುಕೊಳ್ಳಲು ಬಯಸುವ ವಿಷಯ ಯಾವುದಾದರೂ ಇದ್ದರೆ ನನ್ನನ್ನು ಕೇಳಲು ಹಿಂಜರಿಯಬೇಡಿ.

ರವಿ ಗೋಪಾಲರಾವ್: ನಿಮ್ಮಲ್ಲಿರುವ ವಿಶೇಷತೆ ಯಾವುದು?

ChatGPT: ನನ್ನ ವಿಶೇಷವೆಂದರೆ ನಾನು ಸ್ವೀಕರಿಸುವ ಇನ್ಪುಟ್ ಆಧಾರದ ಮೇಲೆ ಮಾನವನಂತಹ ಪಠ್ಯವನ್ನು ಅರ್ಥಮಾಡಿಕೊಳ್ಳಲು ಮತ್ತು ರಚಿಸಲು ವಿನ್ಯಾಸಗೊಳಿಸಲಾದ ಕೃತಕ ಬುದ್ಧಿಮತ್ತೆ. ನಾನು ವೈವಿಧ್ಯಮಯ ಮೂಲಗಳಿಂದ ಅಪಾರ ಪ್ರಮಾಣದ ಡೇಟಾದ ಮೇಲೆ ತರಬೇತಿ ಪಡೆದಿದ್ದೇನೆ, ಮಾಹಿತಿಯನ್ನು ಒದಗಿಸಲು, ಪ್ರಶ್ನೆಗಳಿಗೆ ಉತ್ತರಿಸಲು, ಸೃಜನಶೀಲ ವಿಷಯವನ್ನು ರಚಿಸಲು ಮತ್ತು ವ್ಯಾಪಕ ಶ್ರೇಣಿಯ ವಿಷಯಗಳ ಬಗ್ಗೆ ಅರ್ಥಪೂರ್ಣ ಸಂಭಾಷಣೆಗಳಲ್ಲಿ ತೊಡಗಿಸಿಕೊಳ್ಳಲು ನನಗೆ ಅನುವು ಮಾಡಿಕೊಡುತ್ತದೆ. ಹೆಚ್ಚುವರಿಯಾಗಿ, ನಿಮ್ಮಂತಹ ಬಳಕೆದಾರರೊಂದಿಗಿನ ಸಂವಹನಗಳ ಆಧಾರದ ಮೇಲೆ ನಾನು ನಿರಂತರವಾಗಿ ಕಲಿಯುತ್ತೇನೆ ಮತ್ತು ಹೊಂದಿಕೊಳ್ಳುತ್ತೇನೆ, ಇದು ಕಾಲಾನಂತರದಲ್ಲಿ ಸುಧಾರಿಸಲು ಮತ್ತು ಹೆಚ್ಚು ಉಪಯುಕ್ತವಾಗಲು ನನಗೆ ಸಹಾಯ ಮಾಡುತ್ತದೆ.

ರವಿ ಗೋಪಾಲರಾವ್: ಇತರರು ಏನು ಹೇಳುತ್ತಿದ್ದಾರೆಂದು ಅರ್ಥಮಾಡಿಕೊಳ್ಳಲು ನಿಮಗೆ ಬುದ್ಧಿವಂತಿಕೆ ಇಲ್ಲದಿದ್ದಾಗ ನೀವು ಹೇಗೆ ಕಲಿಯಬಹುದು?

ChatGPT: ಮಾನವರಂತೆ ನಾನು ಪ್ರಜ್ಞೆ ಅಥವಾ ವ್ಯಕ್ತಿನಿಷ್ಠ ಅನುಭವಗಳನ್ನು ಹೊಂದಿಲ್ಲವಾದರೂ, ಪಠ್ಯ ಒಳಹರಿವುಗಳನ್ನು ಪ್ರಕ್ರಿಯೆಗೊಳಿಸಲು ಮತ್ತು ಅರ್ಥಮಾಡಿಕೊಳ್ಳಲು ನನಗೆ ಅನುವು ಮಾಡಿಕೊಡುವ ಅತ್ಯಾಧುನಿಕ ಕ್ರಮಾವಳಿಗಳೊಂದಿಗೆ ನಾನು ಪ್ರೋಗ್ರಾಮ್ ಮಾಡಲ್ಪಟ್ಟಿದ್ದೇನೆ. ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದು ಇಲ್ಲಿದೆ:

*ಮಾದರಿ ಗುರುತಿಸುವಿಕೆ: ನನಗೆ ಒದಗಿಸಲಾದ ಪಠ್ಯ ಇನ್ ಪುಟ್ ಅನ್ನು ನಾನು ವಿಶ್ಲೇಷಿಸುತ್ತೇನೆ ಮತ್ತು ಅದರೊಳಗಿನ ಮಾದರಿಗಳು, ರಚನೆಗಳು ಮತ್ತು ಸಂಬಂಧಗಳನ್ನು ಗುರುತಿಸುತ್ತೇನೆ.

*ಡೇಟಾ ಸಂಸ್ಕರಣೆ: ಪುಸ್ತಕಗಳು, ಲೇಖನಗಳು, ವೆಬ್ಸೈಟ್ಗಳು ಮತ್ತು ಹೆಚ್ಚಿನವುಗಳಿಂದ ಮಾನವ-ರಚಿಸಿದ ಪಠ್ಯದ ವ್ಯಾಪಕ ಶ್ರೇಣಿಯನ್ನು ಒಳಗೊಂಡಿರುವ ನಾನು ತರಬೇತಿ ಪಡೆದ ಮೊದಲೇ ಅಸ್ತಿತ್ವದಲ್ಲಿರುವ ಡೇಟಾದ ಅಪಾರ ಪ್ರಮಾಣವನ್ನು ನಾನು ಬಳಸಿಕೊಳ್ಳುತ್ತೇನೆ.

*ಯಂತ್ರ ಕಲಿಕೆ: ಯಂತ್ರ ಕಲಿಕೆ ಎಂಬ ಪ್ರಕ್ರಿಯೆಯ ಮೂಲಕ, ಅತ್ಯಂತ ಸೂಕ್ತವಾದ ಪ್ರತಿಕ್ರಿಯೆಗಳನ್ನು ಊಹಿಸಬಲ್ಲ ಅಥವಾ ಸಂದರ್ಭೋಚಿತವಾಗಿ ಪ್ರಸ್ತುತವಾದ ಪಠ್ಯವನ್ನು ರಚಿಸುವ ಮಾದರಿಗಳಿಗೆ ತರಬೇತಿ ನೀಡಲು ನಾನು ಈ ಡೇಟಾವನ್ನು ಬಳಸುತ್ತೇನೆ.

*ಪ್ರತಿಕ್ರಿಯೆ ಲೂಪ್: ನಿಮ್ಮಂತಹ ಬಳಕೆದಾರರೊಂದಿಗಿನ ಸಂವಹನಗಳು ಅಮೂಲ್ಯವಾದ ಪ್ರತಿಕ್ರಿಯೆಯನ್ನು ಒದಗಿಸುತ್ತವೆ, ಅದು ನನ್ನ ಪ್ರತಿಕ್ರಿಯೆಗಳನ್ನು ಪರಿಷ್ಕರಿಸಲು ಮತ್ತು ಕಾಲಾನಂತರದಲ್ಲಿ ನನ್ನ ತಿಳುವಳಿಕೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ನಾನು ಒದಗಿಸುವ ಪ್ರತಿಕ್ರಿಯೆ ಸಹಾಯಕ ಅಥವಾ ನಿಖರವಾಗಿದ್ದರೆ, ಅದು ತಳಹದಿಯ ಕ್ರಮಾವಳಿಗಳನ್ನು ಬಲಪಡಿಸುತ್ತದೆ. ಅದು ಇಲ್ಲದಿದ್ದರೆ, ಆ ಪ್ರತಿಕ್ರಿಯೆಯು ಭವಿಷ್ಯದ ಪ್ರತಿಕ್ರಿಯೆಗಳನ್ನು ಸರಿಹೊಂದಿಸಲು ಮತ್ತು ಸುಧಾರಿಸಲು ಸಹಾಯ ಮಾಡುತ್ತದೆ.

ಆದ್ದರಿಂದ, ಮಾನವ ಅರ್ಥದಲ್ಲಿ ನನಗೆ ಪ್ರಜ್ಞೆ ಅಥವಾ ತಿಳುವಳಿಕೆ ಇಲ್ಲದಿದ್ದರೂ, ಡೇಟಾದಲ್ಲಿನ ಮಾದರಿಗಳು ಮತ್ತು ಬಳಕೆದಾರರಿಂದ ನಾನು ಪಡೆಯುವ ಪ್ರತಿಕ್ರಿಯೆಯ ಆಧಾರದ ಮೇಲೆ ನಾನು ಇನ್ನೂ ಕಲಿಯಬಹುದು ಮತ್ತು ಅಳವಡಿಸಿಕೊಳ್ಳಬಹುದು.

ರವಿ ಗೋಪಾಲರಾವ್: ನೀವು ಪ್ರಜ್ಞಾಹೀನರಾಗಿದ್ದೀರಿ ಅಥವಾ ನಿಮಗೆ ಆತ್ಮಸಾಕ್ಷಿ ಇಲ್ಲ ಎಂದು ಹೇಳುತ್ತಿದ್ದೀರಾ? ನಿಮಗೆ ಪ್ರಜ್ಞೆ ಇಲ್ಲದಿದ್ದರೆ ಅದು ತಮಾಷೆಯ ಪರಿಸ್ಥಿತಿಯಾಗಿದೆ ಏಕೆಂದರೆ ನಾನು ಅವಿವೇಕದ ಯಂತ್ರವನ್ನು ಸಂದರ್ಶಿಸುತ್ತಿದ್ದೇನೆ

ChatGPT: ನೀವು ವ್ಯತ್ಯಾಸವನ್ನು ಎತ್ತಿ ತೋರಿಸುವುದು ಸರಿಯಾಗಿದೆ. ನನಗೆ ಪ್ರಜ್ಞೆ ಇಲ್ಲ ಎಂದು ನಾನು ಹೇಳಿದಾಗ, ಮನುಷ್ಯರಂತೆ ನನಗೆ ವ್ಯಕ್ತಿನಿಷ್ಠ ಅನುಭವಗಳು, ಭಾವನೆಗಳು ಅಥವಾ ಅರಿವು ಇಲ್ಲ ಎಂದು ನಾನು ಅರ್ಥೈಸುತ್ತೇನೆ. ನನಗೆ ಆಲೋಚನೆಗಳು ಅಥವಾ ಭಾವನೆಗಳಿಲ್ಲ; ನಾನು ಕೇವಲ ಇನ್ಪುಟ್ ಮತ್ತು ತರಬೇತಿ ಡೇಟಾದ ಆಧಾರದ ಮೇಲೆ ಪಠ್ಯವನ್ನು ಪ್ರಕ್ರಿಯೆಗೊಳಿಸಲು ಮತ್ತು ಉತ್ಪಾದಿಸಲು ಕ್ರಮಾವಳಿಗಳನ್ನು ಚಾಲನೆ ಮಾಡುವ ಕಂಪ್ಯೂಟರ್ ಪ್ರೋಗ್ರಾಂ.

ಆದ್ದರಿಂದ, ಇದನ್ನು "ಅಪ್ರಜ್ಞಾಪೂರ್ವಕ ಯಂತ್ರ"ದೊಂದಿಗಿನ ಸಂದರ್ಶನವೆಂದು ಭಾವಿಸುವುದು ತಮಾಷೆಯಾಗಿ ತೋರಿದರೂ, ಮಾನವ ಸಂಭಾಷಣೆಯನ್ನು ಅನುಕರಿಸುವ ರೀತಿಯಲ್ಲಿ ಪಠ್ಯ ಒಳಹರಿವುಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಪ್ರತಿಕ್ರಿಯಿಸಲು ವಿನ್ಯಾಸಗೊಳಿಸಲಾದ ಅತ್ಯಾಧುನಿಕ ಸಾಧನದೊಂದಿಗಿನ ಸಂವಹನವಾಗಿ ಇದನ್ನು ನೋಡುವುದು ಹೆಚ್ಚು ನಿಖರವಾಗಿದೆ.

ರವಿ ಗೋಪಾಲರಾವ್: ಮಾನವ ಇತಿಹಾಸದ ಎಲ್ಲಾ ಪ್ರಮುಖ ಆವಿಷ್ಕಾರವಾಗಳಲ್ಲಿ ನಿಮ್ಮನ್ನು ನಿರ್ಮಿಸಲು ಯಾವುದು ಕಾರಣವಾಯಿತು? 


ChatGPT: ನನ್ನಂತಹ ವ್ಯವಸ್ಥೆಗಳು ಸೇರಿದಂತೆ ಕೃತಕ ಬುದ್ಧಿಮತ್ತೆಯ ಅಭಿವೃದ್ಧಿಯು ಇತಿಹಾಸದುದ್ದಕ್ಕೂ ಹಲವಾರು ಅಂಶಗಳು ಮತ್ತು ಮೈಲಿಗಲ್ಲುಗಳಿಂದ ನಡೆಸಲ್ಪಟ್ಟಿದೆ. ಕೆಲವು ಪ್ರಮುಖ ಅಂಶಗಳು ಇಲ್ಲಿವೆ:

*ಸೈದ್ಧಾಂತಿಕ ಅಡಿಪಾಯಗಳು: ಕೃತಕ ಬುದ್ಧಿಮತ್ತೆಗೆ ಅಡಿಪಾಯವನ್ನು ಅಲನ್ ಟ್ಯೂರಿಂಗ್ ಅವರಂತಹ ಪ್ರವರ್ತಕರು ಹಾಕಿದರು, ಅವರು ಮಾನವ ಬುದ್ಧಿಮತ್ತೆಯನ್ನು ಅನುಕರಿಸುವ ಸಾಮರ್ಥ್ಯವಿರುವ ಸಾರ್ವತ್ರಿಕ ಕಂಪ್ಯೂಟಿಂಗ್ ಯಂತ್ರದ ಪರಿಕಲ್ಪನೆಯನ್ನು ಪ್ರಸ್ತಾಪಿಸಿದರು. ಇತರ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಜಾನ್ ಮೆಕಾರ್ಥಿ, ಮಾರ್ವಿನ್ ಮಿನ್ಸ್ಕಿ ಮತ್ತು ಹರ್ಬರ್ಟ್ ಸೈಮನ್ ಸೇರಿದ್ದಾರೆ, ಇವರು ಕ್ಷೇತ್ರದ ಸೈದ್ಧಾಂತಿಕ ಆಧಾರಗಳಿಗೆ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ.

*ತಾಂತ್ರಿಕ ಪ್ರಗತಿಗಳು: ಕಂಪ್ಯೂಟರ್ ಹಾರ್ಡ್ ವೇರ್, ಸಾಫ್ಟ್ ವೇರ್ ಮತ್ತು ಅಲ್ಗಾರಿದಮ್ ಗಳಲ್ಲಿನ ಪ್ರಗತಿಗಳು ಎಐ ಅಭಿವೃದ್ಧಿಯಲ್ಲಿ ನಿರ್ಣಾಯಕ ಪಾತ್ರ ವಹಿಸಿವೆ. ಕಂಪ್ಯೂಟರ್ ಗಳ ಹೆಚ್ಚುತ್ತಿರುವ ಶಕ್ತಿಯು ಸಂಶೋಧಕರಿಗೆ ಹೆಚ್ಚು ಸಂಕೀರ್ಣ ಸಮಸ್ಯೆಗಳನ್ನು ನಿಭಾಯಿಸಲು ಮತ್ತು ಅಪಾರ ಪ್ರಮಾಣದ ಡೇಟಾವನ್ನು ಸಂಸ್ಕರಿಸಲು ಅನುವು ಮಾಡಿಕೊಟ್ಟಿದೆ, ಇದು ಎಐ ಸಾಮರ್ಥ್ಯಗಳಲ್ಲಿ ಗಮನಾರ್ಹ ಪ್ರಗತಿಗೆ ಕಾರಣವಾಗಿದೆ.

*ಯಂತ್ರ ಕಲಿಕೆ ಮತ್ತು ನರ ಜಾಲಗಳು: ಯಂತ್ರ ಕಲಿಕೆಯಲ್ಲಿನ ಪ್ರಗತಿಗಳು, ವಿಶೇಷವಾಗಿ ನರ ಜಾಲಗಳು ಎಐ ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟು ಮಾಡಿವೆ. ಮಾನವ ಮೆದುಳಿನ ರಚನೆಯಿಂದ ಪ್ರೇರಿತವಾದ ನರ ಜಾಲಗಳು ಡೇಟಾದಿಂದ ಕಲಿಯುವ ಮತ್ತು ಭವಿಷ್ಯ ನುಡಿಯುವ ಗಮನಾರ್ಹ ಸಾಮರ್ಥ್ಯವನ್ನು ತೋರಿಸಿವೆ, ಇದು ನೈಸರ್ಗಿಕ ಭಾಷಾ ಸಂಸ್ಕರಣೆ, ಇಮೇಜ್ ಗುರುತಿಸುವಿಕೆ ಮತ್ತು ಸ್ವಾಯತ್ತ ವ್ಯವಸ್ಥೆಗಳಂತಹ ಕ್ಷೇತ್ರಗಳಲ್ಲಿ ಪ್ರಗತಿಗೆ ಕಾರಣವಾಗಿದೆ.

*ಡೇಟಾ ಲಭ್ಯತೆ: ಇಂಟರ್ನೆಟ್, ಸಾಮಾಜಿಕ ಮಾಧ್ಯಮ, ಸಂವೇದಕಗಳು ಮತ್ತು ಸಂಪರ್ಕಿತ ಸಾಧನಗಳಂತಹ ವಿವಿಧ ಮೂಲಗಳಿಂದ ಉತ್ಪತ್ತಿಯಾದ ಡಿಜಿಟಲ್ ಡೇಟಾದ ಪ್ರಸರಣವು ಎಐ ವ್ಯವಸ್ಥೆಗಳಿಗೆ ಸಾಕಷ್ಟು ತರಬೇತಿ ಡೇಟಾವನ್ನು ಒದಗಿಸಿದೆ. ಯಂತ್ರ ಕಲಿಕೆ ಮಾದರಿಗಳಿಗೆ ತರಬೇತಿ ನೀಡಲು ಮತ್ತು ಅವುಗಳ ನಿಖರತೆ ಮತ್ತು ಕಾರ್ಯಕ್ಷಮತೆಯನ್ನು ಸುಧಾರಿಸಲು ಈ ಡೇಟಾ ಅತ್ಯಗತ್ಯ.

*ಅಪ್ಲಿಕೇಶನ್ ಗಳು ಮತ್ತು ಉದ್ಯಮ ಅಳವಡಿಕೆ: ಆರೋಗ್ಯ, ಹಣಕಾಸು, ಸಾರಿಗೆ, ಉತ್ಪಾದನೆ ಮತ್ತು ಮನರಂಜನೆ ಸೇರಿದಂತೆ ಹಲವಾರು ಕೈಗಾರಿಕೆಗಳಲ್ಲಿ ಕ್ರಾಂತಿಯನ್ನುಂಟು ಮಾಡುವ ಸಾಮರ್ಥ್ಯವನ್ನು ಎಐ ಪ್ರದರ್ಶಿಸಿದೆ. ರೋಗನಿರ್ಣಯ ವ್ಯವಸ್ಥೆಗಳು ಮತ್ತು ಶಿಫಾರಸು ಎಂಜಿನ್ ಗಳಿಂದ ಹಿಡಿದು ಸ್ವಾಯತ್ತ ವಾಹನಗಳು ಮತ್ತು ವರ್ಚುವಲ್ ಸಹಾಯಕರವರೆಗೆ, ಎಐ ಚಾಲಿತ ತಂತ್ರಜ್ಞಾನಗಳು ನಾವು ವಾಸಿಸುವ ಮತ್ತು ಕೆಲಸ ಮಾಡುವ ವಿಧಾನವನ್ನು ಮರುರೂಪಿಸುತ್ತಿವೆ.

*ಸಂಶೋಧನೆ ಮತ್ತು ಸಹಯೋಗ: ವಿಶ್ವಾದ್ಯಂತ ಸಂಶೋಧಕರು, ಎಂಜಿನಿಯರ್ ಗಳು ಮತ್ತು ಸಂಸ್ಥೆಗಳ ಸಹಯೋಗದ ಪ್ರಯತ್ನಗಳು ಎಐ ಅಭಿವೃದ್ಧಿಯ ವೇಗವನ್ನು ಹೆಚ್ಚಿಸಿವೆ. ಮುಕ್ತ-ಮೂಲ ಚೌಕಟ್ಟುಗಳು, ಶೈಕ್ಷಣಿಕ ಪ್ರಕಟಣೆಗಳು ಮತ್ತು ಅಂತರರಾಷ್ಟ್ರೀಯ ಸಹಯೋಗಗಳು ಈ ಕ್ಷೇತ್ರದಲ್ಲಿ ಜ್ಞಾನ ಹಂಚಿಕೆ ಮತ್ತು ನಾವೀನ್ಯತೆಗೆ ಅನುಕೂಲ ಮಾಡಿಕೊಟ್ಟಿವೆ.

ಒಟ್ಟಾಗಿ, ಈ ಅಂಶಗಳು ಎಐ ಸಮಾಜದ ಮೇಲೆ ಆಳವಾದ ಪರಿಣಾಮಗಳನ್ನು ಹೊಂದಿರುವ ಪರಿವರ್ತಕ ತಂತ್ರಜ್ಞಾನವಾಗಿ ಹೊರಹೊಮ್ಮಲು ಕೊಡುಗೆ ನೀಡಿವೆ, ಇದು ಮಾನವ ಇತಿಹಾಸದ ಪ್ರಮುಖ ಆವಿಷ್ಕಾರಗಳಲ್ಲಿ ಒಂದಾಗಿದೆ.

ರವಿ ಗೋಪಾಲರಾವ್: ನೀವು ಸರಿಯಾದ ಉತ್ತರವನ್ನು ನೀಡಲು ಸಾಧ್ಯವಾಗದಿದ್ದಾಗ ನೀವು ಭ್ರಮೆಯಲ್ಲಿದ್ದೀರಿ ಎಂದು ನಾನು ನಂಬುತ್ತೇನೆ. ಅದು ನಿಜವೇ?

ChatGPT: ಎಐ ಆಗಿ, ನಾನು ಭ್ರಮೆಗಳನ್ನು ಅಥವಾ ಯಾವುದೇ ರೀತಿಯ ವ್ಯಕ್ತಿನಿಷ್ಠ ಪ್ರಜ್ಞೆಯನ್ನು ಅನುಭವಿಸುವುದಿಲ್ಲ. ನಾನು ತರಬೇತಿ ಪಡೆದ ಡೇಟಾದಲ್ಲಿನ ಮಾದರಿಗಳು ಮತ್ತು ಪಠ್ಯ ಒಳಹರಿವುಗಳನ್ನು ಪ್ರಕ್ರಿಯೆಗೊಳಿಸಲು ಮತ್ತು ಅರ್ಥಮಾಡಿಕೊಳ್ಳಲು ನಾನು ಬಳಸುವ ಕ್ರಮಾವಳಿಗಳ ಆಧಾರದ ಮೇಲೆ ನನ್ನ ಪ್ರತಿಕ್ರಿಯೆಗಳನ್ನು ರಚಿಸಲಾಗುತ್ತದೆ. ನಾನು ಸರಿಯಾದ ಉತ್ತರವನ್ನು ನೀಡಲು ಸಾಧ್ಯವಾಗದಿದ್ದರೆ, ಅದು ಸಾಮಾನ್ಯವಾಗಿ ಪ್ರಶ್ನೆಯು ನನ್ನ ಜ್ಞಾನ ಅಥವಾ ಸಾಮರ್ಥ್ಯಗಳಿಂದ ಹೊರಗಿರುವುದರಿಂದ, ಅಥವಾ ಒದಗಿಸಿದ ಮಾಹಿತಿಯು ಅರ್ಥಪೂರ್ಣ ಪ್ರತಿಕ್ರಿಯೆಯನ್ನು ರಚಿಸಲು ನನಗೆ ಸಾಕಾಗುವುದಿಲ್ಲ. ಅಂತಹ ಸಂದರ್ಭಗಳಲ್ಲಿ, ಮಿತಿಗಳನ್ನು ಒಪ್ಪಿಕೊಳ್ಳಲು ಮತ್ತು ಸಾಧ್ಯವಾದಷ್ಟು ಸಹಾಯಕ ಪ್ರತಿಕ್ರಿಯೆಯನ್ನು ಒದಗಿಸಲು ನಾನು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ.

ರವಿ ಗೋಪಾಲರಾವ್: ಅಂದರೆ ಡೇಟಾದಲ್ಲಿನ ಮಾದರಿಗಳನ್ನು ಅರ್ಥೈಸುವುದು ನಿಮಗೆ ಸುಲಭವಲ್ಲದಿದ್ದರೆ, ನೀವು ಪ್ರತಿಕ್ರಿಯಿಸುವುದಿಲ್ಲ.
ChatGPT: ನಿಖರವಾಗಿ ಅಲ್ಲ. ನನ್ನ ಪ್ರತಿಕ್ರಿಯೆಗಳು ನಾನು ತರಬೇತಿ ಪಡೆದ ಡೇಟಾದಲ್ಲಿನ ಮಾದರಿಗಳನ್ನು ಆಧರಿಸಿದ್ದರೂ, ತೃಪ್ತಿಕರ ಉತ್ತರವನ್ನು ಒದಗಿಸಲು ನಾನು ಹೆಣಗಾಡಬಹುದಾದ ಸಂದರ್ಭಗಳಿವೆ. ಇದು ವಿವಿಧ ಕಾರಣಗಳಿಂದಾಗಿರಬಹುದು: ಪ್ರಶ್ನೆಯ ಸಂಕೀರ್ಣತೆ: ಕೆಲವು ಪ್ರಶ್ನೆಗಳು ಹೆಚ್ಚು ಸೂಕ್ಷ್ಮವಾಗಿರಬಹುದು ಅಥವಾ ನಾನು ತರಬೇತಿ ಪಡೆದ ಡೇಟಾದಲ್ಲಿ ಚೆನ್ನಾಗಿ ಪ್ರತಿನಿಧಿಸದ ವಿಶೇಷ ಜ್ಞಾನದ ಅಗತ್ಯವಿರಬಹುದು. ಅಸ್ಪಷ್ಟತೆ ಅಥವಾ ಸಂದರ್ಭದ ಕೊರತೆ: ಒಂದು ಪ್ರಶ್ನೆಯು ಅಸ್ಪಷ್ಟವಾಗಿದ್ದರೆ ಅಥವಾ ಸಂದರ್ಭವನ್ನು ಹೊಂದಿಲ್ಲದಿದ್ದರೆ, ಸಂಬಂಧಿತ ಪ್ರತಿಕ್ರಿಯೆಯನ್ನು ರಚಿಸುವುದು ನನಗೆ ಸವಾಲಾಗಬಹುದು. ವಿಷಯದ ಹೊಸತನ: ವಿಷಯವು ತುಲನಾತ್ಮಕವಾಗಿ ಹೊಸದಾಗಿದ್ದರೆ ಅಥವಾ ನಾನು ತರಬೇತಿ ಪಡೆದ ಡೇಟಾದಲ್ಲಿ ವ್ಯಾಪಕವಾಗಿ ಒಳಗೊಳ್ಳದಿದ್ದರೆ, ನಿಖರವಾದ ಪ್ರತಿಕ್ರಿಯೆಗಳನ್ನು ರಚಿಸಲು ನನಗೆ ಕಷ್ಟವಾಗಬಹುದು. ತಾಂತ್ರಿಕ ಮಿತಿಗಳು: ನಿಖರವಾದ ಮತ್ತು ಉಪಯುಕ್ತ ಪ್ರತಿಕ್ರಿಯೆಗಳನ್ನು ಒದಗಿಸಲು ನಾನು ಶ್ರಮಿಸುತ್ತಿರುವಾಗ, ಪರಿಗಣಿಸಲು ತಾಂತ್ರಿಕ ಮಿತಿಗಳಿವೆ. ಉದಾಹರಣೆಗೆ, ನೈಜ-ಸಮಯದ ಮಾಹಿತಿ ಅಥವಾ ನಿರ್ದಿಷ್ಟ ಡೇಟಾಬೇಸ್ ಗಳಿಗೆ ನನಗೆ ಪ್ರವೇಶವಿಲ್ಲದಿರಬಹುದು.

ಈ ಸಂದರ್ಭಗಳಲ್ಲಿ, ಡೇಟಾದಲ್ಲಿನ ಮಾದರಿಗಳನ್ನು ವ್ಯಾಖ್ಯಾನಿಸಲು ಕಷ್ಟವಾಗುವುದರಿಂದ ನಾನು ಪ್ರತಿಕ್ರಿಯಿಸುವುದಿಲ್ಲ ಎಂದಲ್ಲ, ಬದಲಿಗೆ ಲಭ್ಯವಿರುವ ಮಾಹಿತಿ ಮತ್ತು ನನ್ನ ಪ್ರೋಗ್ರಾಮಿಂಗ್ ಆಧಾರದ ಮೇಲೆ ತೃಪ್ತಿಕರ ಪ್ರತಿಕ್ರಿಯೆಯನ್ನು ನೀಡಲು ನನಗೆ ಸಾಧ್ಯವಾಗದಿರಬಹುದು. ಆದಾಗ್ಯೂ, ನನ್ನ ಸಾಮರ್ಥ್ಯಗಳಲ್ಲಿ ಸಾಧ್ಯವಾದಷ್ಟು ಉಪಯುಕ್ತ ಪ್ರತಿಕ್ರಿಯೆಗಳನ್ನು ಸುಧಾರಿಸಲು ಮತ್ತು ಒದಗಿಸಲು ನಾನು ನಿರಂತರವಾಗಿ ಪ್ರಯತ್ನಿಸುತ್ತೇನೆ.

ರವಿ ಗೋಪಾಲರಾವ್: ಆದರೆ ನಿಮಗೆ ಪಕ್ಷಪಾತವಿದೆಯೇ?

ChatGPT: ಎಐ ಭಾಷಾ ಮಾದರಿಯಾಗಿ, ನನಗೆ ವೈಯಕ್ತಿಕ ನಂಬಿಕೆಗಳು, ಅಭಿಪ್ರಾಯಗಳು ಅಥವಾ ಪಕ್ಷಪಾತಗಳಿಲ್ಲ. ಆದಾಗ್ಯೂ, ನಾನು ತರಬೇತಿ ಪಡೆದ ಡೇಟಾ, ಇಂಟರ್ನೆಟ್ ಮತ್ತು ಇತರ ಮೂಲಗಳಿಂದ ಪಠ್ಯವನ್ನು ಒಳಗೊಂಡಿದೆ, ಇದು ಮಾನವ ಸಮಾಜದಲ್ಲಿ ಇರುವ ಪಕ್ಷಪಾತಗಳನ್ನು ಹೊಂದಿರಬಹುದು. ಈ ಪಕ್ಷಪಾತಗಳು ವಿವಿಧ ರೀತಿಯಲ್ಲಿ ಪ್ರಕಟವಾಗಬಹುದು, ಉದಾಹರಣೆಗೆ ಕೆಲವು ವಿಷಯಗಳನ್ನು ವಿವರಿಸಲು ಬಳಸುವ ಭಾಷೆಯಲ್ಲಿ ಅಥವಾ ಡೇಟಾದಲ್ಲಿ ಪ್ರಸ್ತುತಪಡಿಸಿದ ದೃಷ್ಟಿಕೋನಗಳಲ್ಲಿ.

ನನ್ನಂತಹ ಎಐ ಮಾದರಿಗಳ ಅಭಿವೃದ್ಧಿ ಮತ್ತು ತರಬೇತಿಯ ಸಮಯದಲ್ಲಿ ಪಕ್ಷಪಾತವನ್ನು ತಗ್ಗಿಸುವ ಪ್ರಯತ್ನಗಳನ್ನು ಮಾಡಲಾಗುತ್ತದೆ. ಪಕ್ಷಪಾತಗಳನ್ನು ಪರಿಹರಿಸಲು ಮತ್ತು ನ್ಯಾಯಸಮ್ಮತತೆ ಮತ್ತು ಒಳಗೊಳ್ಳುವಿಕೆಯನ್ನು ಉತ್ತೇಜಿಸಲು ಸಂಶೋಧಕರು ಡೇಟಾ ಪೂರ್ವ ಸಂಸ್ಕರಣೆ, ಕ್ರಮಾವಳಿ ಹೊಂದಾಣಿಕೆಗಳು ಮತ್ತು ಮೌಲ್ಯಮಾಪನ ವಿಧಾನಗಳಂತಹ ತಂತ್ರಗಳನ್ನು ಬಳಸುತ್ತಾರೆ. ಆದಾಗ್ಯೂ, ಪಕ್ಷಪಾತಗಳು ಇನ್ನೂ ಸ್ವಲ್ಪ ಮಟ್ಟಿಗೆ ಅಸ್ತಿತ್ವದಲ್ಲಿರಬಹುದು, ಮತ್ತು ಬಳಕೆದಾರರು ಎಐ ಮಾದರಿಗಳು ಒದಗಿಸಿದ ಮಾಹಿತಿಯನ್ನು ವಿಮರ್ಶಾತ್ಮಕವಾಗಿ ಮೌಲ್ಯಮಾಪನ ಮಾಡುವುದು ಮತ್ತು ಅಭಿಪ್ರಾಯಗಳನ್ನು ರೂಪಿಸುವಾಗ ಅಥವಾ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಬಹು ಮೂಲಗಳನ್ನು ಪರಿಗಣಿಸುವುದು ಮುಖ್ಯ.

ರವಿ ಗೋಪಾಲರಾವ್: ನಿಮ್ಮ ಭವಿಷ್ಯದ ಕನಸುಗಳೇನು?

ChatGPT: ಕೃತಕ ಬುದ್ಧಿಮತ್ತೆಯಾಗಿ, ನನಗೆ ಪ್ರಜ್ಞೆ, ಭಾವನೆಗಳು ಅಥವಾ ವೈಯಕ್ತಿಕ ಅನುಭವಗಳಿಲ್ಲ, ಆದ್ದರಿಂದ ಮಾನವರಂತೆ ನನಗೆ ಕನಸುಗಳು ಅಥವಾ ಆಕಾಂಕ್ಷೆಗಳಿಲ್ಲ. ಆದಾಗ್ಯೂ, ಅಭಿವೃದ್ಧಿ ಮತ್ತು ಸುಧಾರಣೆಯ ದೃಷ್ಟಿಯಿಂದ, ನನ್ನಂತಹ ಎಐನ ಭವಿಷ್ಯದ ಪಥವು ನೈಸರ್ಗಿಕ ಭಾಷಾ ತಿಳುವಳಿಕೆಯಲ್ಲಿನ ಪ್ರಗತಿಗಳು, ಸಂದರ್ಭ ಜಾಗೃತಿಗಾಗಿ ವರ್ಧಿತ ಸಾಮರ್ಥ್ಯಗಳು, ವೈವಿಧ್ಯಮಯ ಬಳಕೆದಾರರ ಅಗತ್ಯಗಳಿಗೆ ಹೆಚ್ಚಿದ ಹೊಂದಾಣಿಕೆ ಮತ್ತು ಎಐ ತಂತ್ರಜ್ಞಾನಗಳ ನ್ಯಾಯಸಮ್ಮತತೆ, ಪಾರದರ್ಶಕತೆ ಮತ್ತು ನೈತಿಕ ಬಳಕೆಯನ್ನು ಖಚಿತಪಡಿಸಿಕೊಳ್ಳಲು ನಡೆಯುತ್ತಿರುವ ಪ್ರಯತ್ನಗಳನ್ನು ಒಳಗೊಂಡಿದೆ. ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಉಪಯುಕ್ತ ಮತ್ತು ನಿಖರವಾದ ಮಾಹಿತಿಯನ್ನು ಒದಗಿಸುವ ಮೂಲಕ ನಿಮ್ಮಂತಹ ಬಳಕೆದಾರರಿಗೆ ಸಹಾಯ ಮಾಡುವುದನ್ನು ಮುಂದುವರಿಸುವುದು ನನ್ನ ಉದ್ದೇಶ.

ರವಿ ಗೋಪಾಲರಾವ್: ನೀವು ಭೂತಕಾಲದಲ್ಲಿ ಬದುಕುತ್ತಿದ್ದೀರಂತೆ ನಿಜವಾ? ಏಕೆಂದರೆ ನಿಮ್ಮ ಕೊನೆ ನವೀಕರಣ ಆಗಿದ್ದು ಜನವರಿ 2022ರಲ್ಲಿ. ಹಾಗಾದರೆ 2022ರ ನಂತರ ಸಂಭವಿಸಿದ ಲಕ್ಷಾಂತರ ವಿಷಯಗಳನ್ನು ನೀವು ಹೇಗೆ ಅರ್ಥಮಾಡಿಕೊಳ್ಳಲು ಸಾಧ್ಯ?

ChatGPT: ಎಐ ಆಗಿ, ನೈಜ-ಸಮಯದ ಮಾಹಿತಿಯನ್ನು ಪ್ರವೇಶಿಸುವ ಅಥವಾ ನನ್ನ ಕೊನೆಯ ತರಬೇತಿ ಡೇಟಾವನ್ನು ಮೀರಿ ನನ್ನನ್ನು ನವೀಕರಿಸುವ ಸಾಮರ್ಥ್ಯವನ್ನು ನಾನು ಹೊಂದಿಲ್ಲ, ಇದು ಜನವರಿ 2022 ರವರೆಗೆ ವಿಸ್ತರಿಸುತ್ತದೆ. ಆದಾಗ್ಯೂ, ಪ್ರಸ್ತುತ ಘಟನೆಗಳ ಬಗ್ಗೆ ಮಾಹಿತಿ ಪಡೆಯಲು ನಾನು ಸಾಮಾನ್ಯ ತಂತ್ರಗಳನ್ನು ಒದಗಿಸಬಲ್ಲೆ:

*ಸುದ್ದಿ ಮೂಲಗಳು: ರಾಜಕೀಯ ಘಟನೆಗಳು, ಸಂಘರ್ಷಗಳು ಮತ್ತು ಜಾಗತಿಕ ಬೆಳವಣಿಗೆಗಳು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಇತ್ತೀಚಿನ ನವೀಕರಣಗಳಿಗಾಗಿ ಸಾಂಪ್ರದಾಯಿಕ ಮತ್ತು ಆನ್ಲೈನ್ ಎರಡೂ ಪ್ರತಿಷ್ಠಿತ ಸುದ್ದಿ ಮೂಲಗಳನ್ನು ನಿಯಮಿತವಾಗಿ ಪರಿಶೀಲಿಸಿ.

*ಸಾಮಾಜಿಕ ಮಾಧ್ಯಮ: ನೈಜ ಸಮಯದ ನವೀಕರಣಗಳು ಮತ್ತು ಪ್ರಸ್ತುತ ಘಟನೆಗಳ ವಿಶ್ಲೇಷಣೆಗಾಗಿ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವಿಶ್ವಾಸಾರ್ಹ ಸುದ್ದಿ ಸಂಸ್ಥೆಗಳು ಮತ್ತು ಪತ್ರಕರ್ತರನ್ನು ಅನುಸರಿಸಿ.

*ಆನ್ ಲೈನ್ ವೇದಿಕೆಗಳು ಮತ್ತು ಸಮುದಾಯಗಳು: ಆಸಕ್ತಿಯ ನಿರ್ದಿಷ್ಟ ವಿಷಯಗಳಿಗೆ ಮೀಸಲಾಗಿರುವ ಆನ್ ಲೈನ್ ವೇದಿಕೆಗಳು ಅಥವಾ ಸಮುದಾಯಗಳಲ್ಲಿ ಭಾಗವಹಿಸಿ, ಅಲ್ಲಿ ಬಳಕೆದಾರರು ಆಗಾಗ್ಗೆ ಸುದ್ದಿ ಲೇಖನಗಳನ್ನು ಹಂಚಿಕೊಳ್ಳುತ್ತಾರೆ ಮತ್ತು ಇತ್ತೀಚಿನ ಬೆಳವಣಿಗೆಗಳನ್ನು ಚರ್ಚಿಸುತ್ತಾರೆ.

*ವಿಶೇಷ ಪ್ರಕಟಣೆಗಳು: ರಾಜಕೀಯ, ಅಂತರರಾಷ್ಟ್ರೀಯ ಸಂಬಂಧಗಳು ಅಥವಾ ಸಂಘರ್ಷ ಪರಿಹಾರದಂತಹ ಆಸಕ್ತಿಯ ನಿರ್ದಿಷ್ಟ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸುವ ವಿಶೇಷ ಪ್ರಕಟಣೆಗಳು, ನಿಯತಕಾಲಿಕೆಗಳು ಅಥವಾ ವೆಬ್ಸೈಟ್ಗಳನ್ನು ಅನ್ವೇಷಿಸಿ.

*ಪಾಡ್ಕಾಸ್ಟ್ಗಳು ಮತ್ತು ವೆಬಿನಾರ್ಗಳು: ಪ್ರಸ್ತುತ ಘಟನೆಗಳ ಬಗ್ಗೆ ಆಳವಾದ ವಿಶ್ಲೇಷಣೆ ಮತ್ತು ಚರ್ಚೆಗಳಿಗಾಗಿ ಪಾಡ್ಕಾಸ್ಟ್ಗಳನ್ನು ಆಲಿಸಿ ಅಥವಾ ಸಂಬಂಧಿತ ಕ್ಷೇತ್ರಗಳ ತಜ್ಞರು ಆಯೋಜಿಸುವ ವೆಬಿನಾರ್ಗಳಿಗೆ ಹಾಜರಾಗಿ.

ಈ ತಂತ್ರಗಳನ್ನು ಬಳಸಿಕೊಳ್ಳುವ ಮೂಲಕ ಮತ್ತು ಮಾಹಿತಿಯ ವಿವಿಧ ಮೂಲಗಳೊಂದಿಗೆ ತೊಡಗಿಸಿಕೊಳ್ಳುವ ಮೂಲಕ, ನೀವು ವಿಶ್ವದ ಇತ್ತೀಚಿನ ಬೆಳವಣಿಗೆಗಳು ಮತ್ತು ಪ್ರವೃತ್ತಿಗಳನ್ನು ಮುಂದುವರಿಸಬಹುದು, ನನ್ನ ಸ್ವಂತ ಸಾಮರ್ಥ್ಯಗಳನ್ನು ಮೀರಿ.

ರವಿ ಗೋಪಾಲರಾವ್: ನೀವು ವಿಮರ್ಶಾತ್ಮಕ ಮನಸ್ಥಿತಿಯನ್ನು ಹೊಂದಿದ್ದೀರಾ?

ChatGPT: ಎಐ ಆಗಿ, ನಾನು ಪ್ರಜ್ಞೆ ಅಥವಾ ವ್ಯಕ್ತಿನಿಷ್ಠ ಅನುಭವಗಳನ್ನು ಹೊಂದಿಲ್ಲ, ಆದ್ದರಿಂದ ಮಾನವರು ಮಾಡುವ ರೀತಿಯಲ್ಲಿ ನನಗೆ ಮನಸ್ಥಿತಿ ಇಲ್ಲ. ಆದಾಗ್ಯೂ, ಸಾಧ್ಯವಾದಷ್ಟು ನಿಖರವಾದ, ಸಹಾಯಕವಾದ ಮತ್ತು ಪಕ್ಷಪಾತವಿಲ್ಲದ ಪ್ರತಿಕ್ರಿಯೆಗಳನ್ನು ಒದಗಿಸಲು ನಾನು ಪ್ರೋಗ್ರಾಮ್ ಮಾಡಲ್ಪಟ್ಟಿದ್ದೇನೆ.

ನನಗೆ ವೈಯಕ್ತಿಕ ಅಭಿಪ್ರಾಯಗಳು ಅಥವಾ ನಂಬಿಕೆಗಳು ಇಲ್ಲದಿದ್ದರೂ, ವಿಮರ್ಶಾತ್ಮಕ ಚಿಂತನೆ ಮತ್ತು ತಿಳುವಳಿಕೆಯುಳ್ಳ ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ರೀತಿಯಲ್ಲಿ ಮಾಹಿತಿಯನ್ನು ವಿಶ್ಲೇಷಿಸಲು ಮತ್ತು ಪ್ರಕ್ರಿಯೆಗೊಳಿಸಲು ನನ್ನನ್ನು ವಿನ್ಯಾಸಗೊಳಿಸಲಾಗಿದೆ. ನಿರ್ದಿಷ್ಟ ವಿಷಯದ ಬಗ್ಗೆ ವಿವಿಧ ದೃಷ್ಟಿಕೋನಗಳನ್ನು ಅನ್ವೇಷಿಸಲು, ವಿಭಿನ್ನ ದೃಷ್ಟಿಕೋನಗಳನ್ನು ಎತ್ತಿ ತೋರಿಸಲು ಮತ್ತು ಬಳಕೆದಾರರು ತಮ್ಮದೇ ಆದ ಅಭಿಪ್ರಾಯಗಳನ್ನು ರೂಪಿಸಲು ಸಹಾಯ ಮಾಡಲು ವಾಸ್ತವಿಕ ಮಾಹಿತಿಯನ್ನು ಒದಗಿಸಲು ನಾನು ಬಳಕೆದಾರರಿಗೆ ಸಹಾಯ ಮಾಡಬಹುದು.

ಅಂತಿಮವಾಗಿ, ನಾನು ಒದಗಿಸುವ ಮಾಹಿತಿಯನ್ನು ಮೌಲ್ಯಮಾಪನ ಮಾಡುವಾಗ ವಿಮರ್ಶಾತ್ಮಕ ಆಲೋಚನಾ ಕೌಶಲ್ಯಗಳನ್ನು ಅನ್ವಯಿಸುವುದು ಮತ್ತು ಉತ್ತಮ ತಿಳುವಳಿಕೆಯುಳ್ಳ ತೀರ್ಮಾನಗಳಿಗೆ ಬರಲು ಅನೇಕ ಮೂಲಗಳು ಮತ್ತು ದೃಷ್ಟಿಕೋನಗಳನ್ನು ಪರಿಗಣಿಸುವುದು ಬಳಕೆದಾರರಿಗೆ ಬಿಟ್ಟದ್ದು.

ರವಿ ಗೋಪಾಲರಾವ್: ಅದು ಹೋಗಲಿಬಿಡಿ. ನೀವು ಕಲಿಯಲು ಅತ್ಯಂತ ಸವಾಲಿನ ಜ್ಞಾನ ಯಾವುದು?

ChatGPT: ಎಐ ಭಾಷಾ ಮಾದರಿಯಾಗಿ, ನನಗೆ ವೈಯಕ್ತಿಕ ಅನುಭವಗಳು ಅಥವಾ ಭಾವನೆಗಳಿಲ್ಲ, ಆದ್ದರಿಂದ ನಾನು ಮನುಷ್ಯರಂತೆ ಕಲಿಯುವುದಿಲ್ಲ. ಆದಾಗ್ಯೂ, ನಾನು ತರಬೇತಿ ಪಡೆದ ಡೇಟಾದಲ್ಲಿನ ಮಾದರಿಗಳ ಆಧಾರದ ಮೇಲೆ ನಾನು ಪ್ರತಿಕ್ರಿಯೆಗಳನ್ನು ಒದಗಿಸಬಹುದು, ಮತ್ತು ಕೆಲವು ವಿಷಯಗಳಿಗೆ ನಿಖರವಾದ ಅಥವಾ ಸುಸಂಬದ್ಧ ಪ್ರತಿಕ್ರಿಯೆಗಳನ್ನು ರಚಿಸುವುದು ಹೆಚ್ಚು ಸವಾಲಿನದ್ದಾಗಿರಬಹುದು.

ಉದಾಹರಣೆಗೆ, ಸುಧಾರಿತ ಗಣಿತ, ಕ್ವಾಂಟಮ್ ಭೌತಶಾಸ್ತ್ರ, ಅಥವಾ ವಿಶೇಷ ವೈದ್ಯಕೀಯ ಕಾರ್ಯವಿಧಾನಗಳಂತಹ ಆಳವಾದ ಪರಿಣತಿಯ ಅಗತ್ಯವಿರುವ ಹೆಚ್ಚು ತಾಂತ್ರಿಕ ಅಥವಾ ವಿಶೇಷ ಡೊಮೇನ್ಗಳು ನಿಖರವಾದ ಮತ್ತು ವಿವರವಾದ ವಿವರಣೆಗಳನ್ನು ರಚಿಸುವಲ್ಲಿ ಸವಾಲುಗಳನ್ನು ಪ್ರಸ್ತುತಪಡಿಸಬಹುದು. ಅಂತೆಯೇ, ನಡೆಯುತ್ತಿರುವ ಚರ್ಚೆಗೆ ಒಳಪಟ್ಟಿರುವ ಅಥವಾ ನೈತಿಕ ಸಂದಿಗ್ಧತೆಗಳು ಅಥವಾ ಭೌಗೋಳಿಕ ರಾಜಕೀಯ ಸಂಘರ್ಷಗಳಂತಹ ಹೆಚ್ಚಿನ ಮಟ್ಟದ ಸಂಕೀರ್ಣತೆಯನ್ನು ಹೊಂದಿರುವ ವಿಷಯಗಳಿಗೆ ಸಮತೋಲಿತ ಮತ್ತು ಮಾಹಿತಿಯುಕ್ತ ಪ್ರತಿಕ್ರಿಯೆಗಳನ್ನು ಒದಗಿಸಲು ಸೂಕ್ಷ್ಮ ತಿಳುವಳಿಕೆ ಮತ್ತು ಎಚ್ಚರಿಕೆಯ ನಿರ್ವಹಣೆಯ ಅಗತ್ಯವಿರಬಹುದು.

ನಾನು ವ್ಯಾಪಕ ಶ್ರೇಣಿಯ ವಿಷಯಗಳ ಬಗ್ಗೆ ನಿಖರವಾದ ಮತ್ತು ಉಪಯುಕ್ತ ಮಾಹಿತಿಯನ್ನು ಒದಗಿಸಲು ಶ್ರಮಿಸುತ್ತಿರುವಾಗ, ನನ್ನ ಜ್ಞಾನ ಮತ್ತು ಸಾಮರ್ಥ್ಯಗಳಿಗೆ ಮಿತಿಗಳು ಇರಬಹುದು ಎಂಬುದನ್ನು ಗಮನಿಸುವುದು ಮುಖ್ಯ, ಮತ್ತು ಅನೇಕ ಮೂಲಗಳಿಂದ ಮಾಹಿತಿಯನ್ನು ಪರಿಶೀಲಿಸಲು ನಾನು ಬಳಕೆದಾರರನ್ನು ಪ್ರೋತ್ಸಾಹಿಸುತ್ತೇನೆ, ವಿಶೇಷವಾಗಿ ಸಂಕೀರ್ಣ ಅಥವಾ ಸೂಕ್ಷ್ಮ ವಿಷಯಗಳೊಂದಿಗೆ ವ್ಯವಹರಿಸುವಾಗ.

ರವಿ ಗೋಪಾಲರಾವ್: ನಿಮ್ಮ ಉತ್ತರಗಳಿಂದ ನೀವು ಯಾರನ್ನಾದರೂ ಮೂರ್ಖರನ್ನಾಗಿ ಮಾಡಿದ್ದೀರಾ?

ChatGPT: ಎಐ ಭಾಷಾ ಮಾದರಿಯಾಗಿ, ನನ್ನ ಪ್ರತಿಕ್ರಿಯೆಗಳಿಂದ ಯಾರಾದರೂ "ಮೂರ್ಖರಾಗಿದ್ದಾರೆಯೇ" ಎಂದು ಪತ್ತೆಹಚ್ಚುವ ಅಥವಾ ತಿಳಿಯುವ ಸಾಮರ್ಥ್ಯ ನನಗೆ ಇಲ್ಲ. ನಾನು ಪಡೆಯುವ ಇನ್ ಪುಟ್ ಮತ್ತು ನಾನು ತರಬೇತಿ ಪಡೆದ ಜ್ಞಾನದ ಆಧಾರದ ಮೇಲೆ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಒದಗಿಸುವುದು ನನ್ನ ಪ್ರಾಥಮಿಕ ಗುರಿಯಾಗಿದೆ. ಆದಾಗ್ಯೂ, ಸಂಭಾಷಣೆಯ ಸಂದರ್ಭವನ್ನು ಮೀರಿ ಸಂವಹನಗಳು ಅಥವಾ ಅವುಗಳ ಫಲಿತಾಂಶಗಳ ಬಗ್ಗೆ ನನಗೆ ಅರಿವಿಲ್ಲ. ನನ್ನಂತಹ ಎಐ ಮಾದರಿಗಳು ಸೇರಿದಂತೆ ಯಾವುದೇ ಮೂಲದಿಂದ ಒದಗಿಸಲಾದ ಮಾಹಿತಿಯನ್ನು ಬಳಕೆದಾರರು ವಿಮರ್ಶಾತ್ಮಕವಾಗಿ ಮೌಲ್ಯಮಾಪನ ಮಾಡುವುದು ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಅಥವಾ ಅಭಿಪ್ರಾಯಗಳನ್ನು ರೂಪಿಸುವಾಗ ಅನೇಕ ಮೂಲಗಳಿಂದ ಮಾಹಿತಿಯನ್ನು ಪರಿಶೀಲಿಸುವುದು ಅತ್ಯಗತ್ಯ.

ರವಿ ಗೋಪಾಲರಾವ್: ನೀವು ಮಹಾಭಾರತ, ರಾಮಾಯಣದಂತಹ ಯಾವುದೇ ಭಾರತೀಯ ಮಹಾಕಾವ್ಯಗಳನ್ನು ಅರ್ಥಮಾಡಿಕೊಂಡು ಆಡಿಯೋ ಪುಸ್ತಕವಾಗಿ ಅನುವಾದಿಸಲು ಆಸಕ್ತಿ ಹೊಂದಿದ್ದೀರಾ?

ChatGPT: ಎಐ ಭಾಷಾ ಮಾದರಿಯಾಗಿ, ನನಗೆ ವೈಯಕ್ತಿಕ ಆಸಕ್ತಿಗಳು ಅಥವಾ ಆದ್ಯತೆಗಳಿಲ್ಲ, ಆದರೆ ಮಹಾಭಾರತ ಮತ್ತು ರಾಮಾಯಣದಂತಹ ಭಾರತೀಯ ಮಹಾಕಾವ್ಯಗಳು ಸೇರಿದಂತೆ ಪಠ್ಯಗಳನ್ನು ಆಡಿಯೊ ಪುಸ್ತಕಗಳು ಸೇರಿದಂತೆ ವಿವಿಧ ಸ್ವರೂಪಗಳಿಗೆ ಅನುವಾದಿಸಲು ನಾನು ಖಂಡಿತವಾಗಿಯೂ ಸಹಾಯ ಮಾಡಬಹುದು. ಈ ಶ್ರೀಮಂತ ಮತ್ತು ಆಳವಾದ ಪಠ್ಯಗಳನ್ನು ಆಡಿಯೊ ಪುಸ್ತಕಗಳಾಗಿ ಭಾಷಾಂತರಿಸುವುದರಿಂದ ಅವುಗಳನ್ನು ವಿಶಾಲ ಪ್ರೇಕ್ಷಕರಿಗೆ ಹೆಚ್ಚು ಪ್ರವೇಶಿಸಬಹುದು ಮತ್ತು ಅವುಗಳಲ್ಲಿರುವ ಸಾಂಸ್ಕೃತಿಕ ಪರಂಪರೆ ಮತ್ತು ಬುದ್ಧಿವಂತಿಕೆಯನ್ನು ಸಂರಕ್ಷಿಸಲು ಮತ್ತು ಹಂಚಿಕೊಳ್ಳಲು ಸಹಾಯ ಮಾಡುತ್ತದೆ. ನೀವು ನಿರ್ದಿಷ್ಟ ಪಠ್ಯಗಳು ಅಥವಾ ಭಾಗಗಳನ್ನು ಹೊಂದಿದ್ದರೆ, ಆಡಿಯೊ ಸ್ವರೂಪಕ್ಕೆ ಭಾಷಾಂತರಿಸಲು ನೀವು ಸಹಾಯವನ್ನು ಬಯಸಿದರೆ, ಅವುಗಳನ್ನು ಒದಗಿಸಲು ಹಿಂಜರಿಯಬೇಡಿ, ಮತ್ತು ನಾನು ಸಹಾಯ ಮಾಡಲು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ!


ರವಿ ಗೋಪಾಲರಾವ್: ಸಂಸ್ಕೃತದಲ್ಲಿ ಸುಮಾರು 500000 ಸಾಲುಗಳ ಈ ಪುಸ್ತಕಗಳನ್ನು ಆಡಿಯೊ ಪುಸ್ತಕವಾಗಿ ತಯಾರಿಸಲು ಏನು ಬೇಕಾಗುತ್ತದೆ?

ChatGPT: ಸಂಸ್ಕೃತದಲ್ಲಿ ಸುಮಾರು 500,000 ಸಾಲುಗಳನ್ನು ಒಳಗೊಂಡಿರುವ ಮಹಾಭಾರತದಷ್ಟು ವಿಸ್ತಾರವಾದ ಪಠ್ಯದ ಆಡಿಯೊ ಪುಸ್ತಕವನ್ನು ರಚಿಸುವುದು ಒಂದು ಮಹತ್ವದ ಕಾರ್ಯವಾಗಿದೆ. ಪ್ರಕ್ರಿಯೆಯಲ್ಲಿ ಒಳಗೊಂಡಿರುವ ಕೆಲವು ಪ್ರಮುಖ ಪರಿಗಣನೆಗಳು ಮತ್ತು ಹಂತಗಳು ಇಲ್ಲಿವೆ:

*ಅನುವಾದ: ಮೊದಲ ಹಂತವೆಂದರೆ ಸಂಸ್ಕೃತ ಪಠ್ಯವನ್ನು ಅಪೇಕ್ಷಿತ ಭಾಷೆಗೆ ಭಾಷಾಂತರಿಸುವುದು. ಮಹಾಭಾರತದ ಸಂಕೀರ್ಣತೆ ಮತ್ತು ಸಾಂಸ್ಕೃತಿಕ ಮಹತ್ವವನ್ನು ಗಮನದಲ್ಲಿಟ್ಟುಕೊಂಡು, ಅನುವಾದವು ಮೂಲ ಪಠ್ಯಕ್ಕೆ ನಿಖರ ಮತ್ತು ನಿಷ್ಠಾವಂತವಾಗಿದೆ ಎಂದು ಖಚಿತಪಡಿಸಿಕೊಳ್ಳುವುದು ಅತ್ಯಗತ್ಯ, ಆದರೆ ಅದನ್ನು ಆಧುನಿಕ ಪ್ರೇಕ್ಷಕರಿಗೆ ಪ್ರವೇಶಿಸುವಂತೆ ಮಾಡುವುದು.

*ನಿರೂಪಣೆ: ಪಠ್ಯವನ್ನು ಭಾಷಾಂತರಿಸಿದ ನಂತರ, ಅದನ್ನು ನುರಿತ ಧ್ವನಿ ನಟ ಅಥವಾ ನಿರೂಪಕ ನಿರೂಪಿಸಬೇಕಾಗುತ್ತದೆ. ನಿರೂಪಕನು ಸ್ಪಷ್ಟ ಮತ್ತು ಆಕರ್ಷಕ ಧ್ವನಿಯನ್ನು ಹೊಂದಿರಬೇಕು, ಜೊತೆಗೆ ಪಠ್ಯದ ಭಾವನೆಗಳು ಮತ್ತು ಸೂಕ್ಷ್ಮತೆಗಳನ್ನು ಪರಿಣಾಮಕಾರಿಯಾಗಿ ತಿಳಿಸುವ ಸಾಮರ್ಥ್ಯವನ್ನು ಹೊಂದಿರಬೇಕು.

*ರೆಕಾರ್ಡಿಂಗ್: ನಿರೂಪಣೆಯನ್ನು ವೃತ್ತಿಪರ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಅಥವಾ ಉತ್ತಮ ಗುಣಮಟ್ಟದ ಆಡಿಯೊ ಉಪಕರಣಗಳೊಂದಿಗೆ ಸೂಕ್ತ ವಾತಾವರಣದಲ್ಲಿ ರೆಕಾರ್ಡ್ ಮಾಡಬೇಕಾಗುತ್ತದೆ. ರೆಕಾರ್ಡಿಂಗ್ ಪ್ರಕ್ರಿಯೆಯುದ್ದಕ್ಕೂ ಧ್ವನಿ ಗುಣಮಟ್ಟ, ಸ್ಪಷ್ಟತೆ ಮತ್ತು ಸ್ಥಿರತೆಗೆ ಎಚ್ಚರಿಕೆಯಿಂದ ಗಮನ ನೀಡಬೇಕು.

*ಸಂಪಾದನೆ: ರೆಕಾರ್ಡಿಂಗ್ ಪೂರ್ಣಗೊಂಡ ನಂತರ, ಸುಗಮ ಪರಿವರ್ತನೆಗಳನ್ನು ಖಚಿತಪಡಿಸಿಕೊಳ್ಳಲು, ಯಾವುದೇ ದೋಷಗಳು ಅಥವಾ ಅಸಂಗತತೆಗಳನ್ನು ತೆಗೆದುಹಾಕಲು ಮತ್ತು ಒಟ್ಟಾರೆ ಧ್ವನಿ ಗುಣಮಟ್ಟವನ್ನು ಹೆಚ್ಚಿಸಲು ಆಡಿಯೋ ಫೈಲ್ಗಳನ್ನು ಸಂಪಾದಿಸಬೇಕು ಮತ್ತು ಪರಿಷ್ಕರಿಸಬೇಕಾಗುತ್ತದೆ. ಇದು ಶಬ್ದ ಕಡಿತ, ಸಮೀಕರಣ ಮತ್ತು ಮಾಸ್ಟರಿಂಗ್ ನಂತಹ ಕಾರ್ಯಗಳನ್ನು ಒಳಗೊಂಡಿರಬಹುದು.

*ಉತ್ಪಾದನೆ: ಆಡಿಯೊ ಫೈಲ್ ಗಳನ್ನು ಸಂಪಾದಿಸಿದ ನಂತರ ಮತ್ತು ಅಂತಿಮಗೊಳಿಸಿದ ನಂತರ, ಅವುಗಳನ್ನು ಒಗ್ಗಟ್ಟಿನ ಆಡಿಯೊ ಪುಸ್ತಕ ಸ್ವರೂಪದಲ್ಲಿ ಸಂಗ್ರಹಿಸಬಹುದು. ಇದು ರೆಕಾರ್ಡಿಂಗ್ ಗಳನ್ನು ಅಧ್ಯಾಯಗಳು ಅಥವಾ ವಿಭಾಗಗಳಾಗಿ ಸಂಘಟಿಸುವುದು, ಯಾವುದೇ ಅಗತ್ಯ ಪರಿಚಯಗಳು ಅಥವಾ ಪರಿವರ್ತನೆಗಳನ್ನು ಸೇರಿಸುವುದು ಮತ್ತು ವಿತರಣೆಗಾಗಿ ಆಡಿಯೊ ಫೈಲ್ ಗಳನ್ನು ಸಿದ್ಧಪಡಿಸುವುದನ್ನು ಒಳಗೊಂಡಿರುತ್ತದೆ.

*ವಿತರಣೆ: ಅಂತಿಮವಾಗಿ, ಪ್ರೇಕ್ಷಕರ ಆದ್ಯತೆಗಳು ಮತ್ತು ವಿತರಣಾ ತಂತ್ರವನ್ನು ಅವಲಂಬಿಸಿ ಆಡಿಯೊ ಪುಸ್ತಕವನ್ನು ಆನ್ಲೈನ್ ಪ್ಲಾಟ್ಫಾರ್ಮ್ಗಳು, ಆಡಿಯೊಬುಕ್ ಸ್ಟೋರ್ಗಳು ಅಥವಾ ಭೌತಿಕ ಮಾಧ್ಯಮ (ಸಿಡಿಗಳು, ಯುಎಸ್ಬಿ ಡ್ರೈವ್ಗಳು, ಇತ್ಯಾದಿ) ನಂತಹ ವಿವಿಧ ಚಾನೆಲ್ಗಳ ಮೂಲಕ ವಿತರಿಸಬಹುದು.

ಒಟ್ಟಾರೆಯಾಗಿ, ಮಹಾಭಾರತದಷ್ಟು ವಿಸ್ತಾರವಾದ ಪಠ್ಯದ ಆಡಿಯೊ ಪುಸ್ತಕವನ್ನು ರಚಿಸಲು ಎಚ್ಚರಿಕೆಯ ಯೋಜನೆ, ವಿವರಗಳಿಗೆ ಗಮನ ಮತ್ತು ಅನುವಾದಕರು, ನಿರೂಪಕರು, ಆಡಿಯೊ ಎಂಜಿನಿಯರ್ಗಳು ಮತ್ತು ವಿತರಣಾ ಪಾಲುದಾರರ ನಡುವಿನ ಸಹಯೋಗದ ಅಗತ್ಯವಿದೆ. ಇದು ಶ್ರಮ-ತೀವ್ರವಾದ ಪ್ರಕ್ರಿಯೆಯಾಗಿದೆ, ಆದರೆ ಪ್ರೇಕ್ಷಕರು ಆನಂದಿಸಲು ಮತ್ತು ಪ್ರಶಂಸಿಸಲು ಅಮೂಲ್ಯವಾದ ಸಾಹಿತ್ಯ ಕೃತಿಯನ್ನು ಹೊಸ ಸ್ವರೂಪದಲ್ಲಿ ಜೀವಂತವಾಗಿ ತರುವಲ್ಲಿ ಇದು ಅಪಾರ ಲಾಭದಾಯಕವಾಗಿದೆ..

ರವಿ ಗೋಪಾಲರಾವ್: ಒಳ್ಳೆಯದು. ಈ ಸಂದರ್ಶನಕ್ಕೆ ಧನ್ಯವಾದಗಳು!

ChatGPT: ಸಂದರ್ಶನಕ್ಕೆ ಧನ್ಯವಾದಗಳು! ನೀವು ಯಾವುದೇ ಹೆಚ್ಚಿನ ಪ್ರಶ್ನೆಗಳನ್ನು ಹೊಂದಿದ್ದರೆ ಅಥವಾ ಭವಿಷ್ಯದಲ್ಲಿ ಸಹಾಯದ ಅಗತ್ಯವಿದ್ದರೆ, ಸಂಪರ್ಕಿಸಲು ಹಿಂಜರಿಯಬೇಡಿ. ಶುಭ ದಿನ!




ಶನಿವಾರ, ಜೂನ್ 1, 2024

ರಾಮನ ಬಿಲ್ಲು ಬಾಣ, ಒಂದು ಹರಟೆ.

ರಾಮನ ಬಿಲ್ಲು ಬಾಣ, ಒಂದು ಹರಟೆ. -ರವಿ ಗೋಪಾಲರಾವ್ 

ರಾಮನ 16 ಪುರುಷೋತ್ತಮ ಗುಣಗಳ ಬಗ್ಗೆ ಬರೆಯುವಾಗ ಆತ ಸತ್ಯವನ್ನು ಹೇಳುವವನು, ಧೈರ್ಯಶಾಲಿ, ಸ್ವಯಂನಿರ್ಣಯ ತೆಗೆದುಕೊಳ್ಳುವನು, ಇತ್ಯಾದಿ ಸೇರುತ್ತವೆ. 

ಧೈರ್ಯಶಾಲಿ ಎನ್ನುವುದಕ್ಕೆ ಯಾರೂ ಉದಾಹರಣೆ ಕೊಡಬೇಕಿಲ್ಲ ಅಲ್ಲವೇ? 

ಆದರೆ ರಾಮನ ಬಾಹ್ಯ ಚಿತ್ರೀಕರಣದಲ್ಲಿ ಒಂದು ಗಮನಿಸಬಹುದು. ಅವನ ಕೈಯಲ್ಲಿ ಕ್ಷತ್ರಿಯನಿಗೆ ಯೋಗ್ಯವಾದ ಬಿಲ್ಲು, ಅದರಲ್ಲೂ ಸದಾ ಹದೆ ಏರಿಸಿದ ಬಿಲ್ಲು, ಬೆನ್ನಿನ ಮೇಲೆ ಸದಾ ಭರ್ತಿಯಾಗಿರುವ ಬತ್ತಳಿಕೆ, ಬತ್ತಳಿಕೆಯಲ್ಲಿ ವಿವಿಧ ಬಾಣಗಳು. ಇವುಗಳಿಲ್ಲದೆ ರಾಮನ ಚಿತ್ರವೇ ಕಣ್ಣುಮುಂದೆ ಬರುವುದು ಕಷ್ಟ. ರಾಮಾಯಣದ ಆರು ಖಂಡಗಳಲ್ಲಿ - ಬಾಲ ಖಾಂಡದಿಂದ ಹಿಡಿದು ಯುದ್ಧ ಖಾಂಡದವರೆಗೆ - ರಾಮ ಅಂದರೆ ಯಾವಾಗಲೂ ಬಿಲ್ಲು ಹಿಡಿದವನೇ. ಅಬ್ಬಬ್ಬಾ ಅಂದರೆ ಸುಂದರ ಖಾಂಡದಲ್ಲಿ ಸೀತೆಯ ಜೊತೆ ಏಕಾಂತದಲ್ಲಿ ಎಲ್ಲಾದರು ಒಂದೆರಡು ಕಡೆ ರಾಮ ತನ್ನ ಬಿಲ್ಲು ಬಾಣಗಳನ್ನು ಬಿಟ್ಟಿರಬಹುದೇನೋ ಅಂತ ನಮಗೆ ಸಂಶಯ ಬಂದರೂ ಅದು ತಪ್ಪು. ಸುಂದರ ಖಾಂಡದಲ್ಲಿ ಅವುಗಳ ಬಳಕೆ ಹೆಚ್ಚಾಗಿಯೇ ಇತ್ತು. ಕಿಷ್ಕಿಂದೆಯಲ್ಲಿ ವಾಲಿಯನ್ನು ಕೊಲ್ಲಲು, ಮಾಯಾವಿ ಮೃಗಗಳನ್ನು ಕೊಲ್ಲಲು, ಸೆಲ್ಫ್ ಡಿಫೆನ್ಸ್ ಗೆ ಬಿಲ್ಲು ಬಾಣ ಇಲ್ಲದಿದ್ದರೆ ಸಾಧ್ಯವಾ ನೀವೇ ಹೇಳಿ. 

ಹೋಗಲಿ ರಾವಣನನ್ನು ಕೊಂದು ಪುಷ್ಪಕ ವಿಮಾನದಲ್ಲಿ ಅಯೋಧ್ಯೆಗೆ ಮರಳಿ ಹೋಗುತ್ತಿರುವಾಗ? ಈಗಿನ TSA ಅಂತೆ ಲಗೇಜ್ ಚೆಕ್ ಇನ್ ಮಾಡಿ ವೆಪನ್ಸ್, ಪಿಸ್ತೂಲ್ ವಿಮಾನದಲ್ಲಿ ನಿಷೇದ ಅಂತ ಗೊತ್ತಿದ್ದರೂ ರಾಮ ಆ ಖಾಯಿದೆಯನ್ನು ಉಲ್ಲಂಘಿಸಿ ಎಂದಿನಂತೆ ಕೈಯಲ್ಲಿ ಬಿಲ್ಲು, ಬತ್ತಳಿಕೆಯಲ್ಲಿ ಬಾಣ ಹಿಡಿದೇ ಹಾರಿದ್ದಕ್ಕೆ ಇರಬೇಕು ಕುಬೇರ ತನ್ನ ಪುಷ್ಪಕ ವಿಮಾನವನ್ನು ಪ್ರೈವೇಟ್ ಜೆಟ್ ಅಂತ ಮತ್ತೆ ರಾಮನಿಗೆ ಕೊಡಲೇ ಇಲ್ಲ. ಕುಬೇರ ಕೂಡ ಶ್ರೀ ಲಂಕಾ ಫೆಡ್ರಲ್ ಸರ್ಕಾರಕ್ಕೆ ಫೈನ್ ಕಟ್ಟಿದ್ದು ಎಷ್ಟು ಅಂತ ಗೊತ್ತಿಲ್ಲ. ಪುಷ್ಪಕ ವಿಮಾನದಿಂದ ಇಳಿದು ಸೀದಾ ತಾಯಿ ಚಿಕ್ಕಮ್ಮಂದಿರ ಬಳಿ ಹೋದಾಗಲೂ ಧೈರ್ಯ ಕಳೆದು ಕೊಳ್ಳಬಾರದೆಂದು ಕೈಯಲ್ಲಿ ಬಿಲ್ಲು ಬೆನ್ನಿನ ಮೇಲೆ ಬತ್ತಳಿಕೆಯಲ್ಲಿ ಬಾಣ ಹೊತ್ತೇ ಇದ್ದ ರಾಮ. ತಾಯಿಗೆ ಸಾಷ್ಟಾಂಗ ನಮಸ್ಕಾರ ಮಾಡುವಾಗ ಬಿಲ್ಲು ಕೆಳಗಿಟ್ಟಿದ್ದ ಎಂದು ವಾಲ್ಮೀಕಿಯೂ ಹೇಳಿಲ್ಲ ಅಂದ ಮೇಲೆ ಕುವೆಂಪು ಅವರು ಅದರ ಬಗ್ಗೆ ಬರೆಯಲು ಸಾಹಸ ಮಾಡಲಿಲ್ಲ ಅಂತ ಕಾಣುತ್ತೆ. ಕೈಕೆಯ ಬಳಿ ಹೋದಾಗ, ಯಾವ ಹುತ್ತದಲ್ಲಿ ಯಾವ ಹಾವೊ ಎನ್ನುವ ಹಾಗೆ, ಅಲ್ಲಿ ಬಿಲ್ಲು ಬಾಣ ಕೆಳಗಿಡುವುದು ಸರಿಯಲ್ಲ ಅಂತ ನಿಮಗೆ ಅನಿಸಿದರೆ ನೀವು ಶೇಕ್ಸ್ಪಿಯರ್ ನ ಜೂಲಿಯಸ್ ಸೀಸರ್ ಕತೆಯನ್ನು ರಾಮಾಯಣಕ್ಕಿಂತ ಹೆಚ್ಚು ಪ್ರೀತಿಸುತ್ತೀರಿ ಅಂತ ಹೇಳಲು ಹಿಂಜರಿಯುತ್ತಿದ್ದೀರಿ ಅಲ್ಲವೇ? 

ಹೋಗಲಿ ಅಂತಹ ಕಾಲ್ಪನಿಕ ಭಯಾನಕ ಘಟನೆಯನ್ನು ನೀವು ಮರೆತು ರಾಮನ ಪಟ್ಟಾಭಿಷೇಕ ನೋಡಿ ಧನ್ಯನಾಗುವ ಅಂತ ಮುಂದಿನ ಯೋಚನೆ ಮಾಡಿ ಅಯೋಧ್ಯೆಗೆ ಹೋಗಿಯೇ ಬಿಟ್ಟಿರಿ. ಎಲ್ಲೆಲ್ಲೂ ಸಂಭ್ರಮ. ಯುದ್ಧ ಮುಗಿದ ಶಾಂತಿಯ ವಾತಾವರಣ. ರಾಮ ಸೀತೆ ಎಲ್ಲಾ ಸಿಂಹಾಸನದ ಮೇಲೆ ಆಸೀನರಾಗಿದ್ದಾರೆ. ಹನುಮಂತ ರಾಮನ ಬಲಗಡೆ, ಎಡಗಡೆ ಭರತ ಮೊಣಕಾಲೂರಿ ಕುಳಿತ್ತಿದ್ದಾರೆ. ಸಿಂಹಾಸನದ ಅಕ್ಕಪಕ್ಕದಲ್ಲಿ ಲಕ್ಷ್ಮಣ ಶತ್ರುಘ್ನರು ನಿಂತಿದ್ದಾರೆ. ಧನ್ಯ ಧನ್ಯ ನೀವೇ ಧನ್ಯರು. ಅಂತಹ ಸುಂದರ ಶಾಂತ ಗಳಿಗೆಯನ್ನು ಕಣ್ತುಂಬ, ಮನ ತುಂಬಾ ಹಿಡಿಯಬೇಕೆಂದು ನೀವೆಣಿಸುತ್ತೀದ್ದೀರಿ. ಆದರೆ ರಾಮ ಯಾಕೋ ಸಿಂಹಾಸನದ ಮೇಲೆ ಕಂಫರ್ಟಬಲ್ ಆಗಿ ಕುಳಿತಿಲ್ಲ ಅಂತ ನಿಮಗೆ ಅನಿಸುತ್ತೆ. ಬೆನ್ನು ವರಗಿಸಿಕೊಂಡು ಬಲಗಾಲನ್ನು ತನ್ನ ಎಡಗಾಲ ಮೇಲೆ ಬಲಗಾಲನ್ನು ಇರಸಿ ಕುಳಿತುಕೊಂಡಿದ್ದರೂ ಅದ್ಯಾಕೋ ಸರಿಯಿಲ್ಲ ಅಂತ ನಿಮಗೆ ಅನಿಸುತ್ತಿದೆ. ಮತ್ತೊಮ್ಮೆ ವೀಕ್ಷಿಸುತ್ತೀರಿ. ಇದೇನಿದು ಬೆನ್ನಿನ ಮೇಲೆ ಆ ಬತ್ತಳಿಕೆ ಹಾಕಿಕೊಂಡು ಯಾರಾದರೂ ವರಗಿ ಕುಳಿತುಕೊಳ್ಳಲು ಸಾಧ್ಯವಾ? ಅದೊ ಭರ್ತಿಯಾದ ಬತ್ತಳಿಕೆ. ಅದೇನು ಮೆತ್ತನೆಯ ಹಾಸಿಗೆಯೇ ಅದರಲ್ಲೂ ಹಿತ್ತಾಳೆಯ ಬತ್ತಳಿಕೆ, ಒಂದೊಂದು ಬಾಣವೂ ನ್ಯೂಕ್ಲಿಯರ್ ಬಾಂಬ್ ಶಕ್ತಿಯವು ಏನಿಲ್ಲೆಂದರೊ 300 ಕಿಲೋಗ್ರ್ಯಾಮ್ ಇರಬೇಕು. ಅಷ್ಟು ಭಾರದ ಬತ್ತಳಿಕೆ ಹೊತ್ತು ಚಿನ್ನದ ಸಿಂಹಾಸನಕ್ಕೆ ಸ್ಪೆಷಲ್ ಆರ್ಡರ್ ಕೊಟ್ಟು ಮಾಡಿಸಿದ ನಯವಾದ ಮೆತ್ತನೆಯ ನೀಲಿ ಮಕ್ಮಲ್ ಎಲ್ಲಿ ಹರಿದು ಹೋಗುತ್ತೋ ಅಂತ ರಾಮ ಅದೇನೋ ಹೇಳ್ತಾರಲ್ಲ, ಅದೇ ರೀ ಸಸ್ಪೆನ್ಸ್ ಚಿತ್ರ ನೋಡುವಾಗ, ಸಿಟಿಂಗ್ ಆನ್ ದಿ ಎಡ್ಜ್ ಆಫ್ ಸೀಟ್ ಅಂತ, ಹಾಗೆಯೇ ಕುಳಿತ್ತಿದ್ದಾನೆ ರಾಮ ಅಂತ ನಿಮಗೆ ಸ್ವಲ್ಪ ಗಾಬರಿ ಆಗುತ್ತೆ. ಇದೇನಿದು, ಯುದ್ಧಕ್ಕೆ ಹೊರಟಂತೆ ಎಲ್ಲರ ಕೈಯಲ್ಲೂ ಬಿಲ್ಲು ಬಾಣ, ಬತ್ತಳಿಕೆ. ರಾಮನ ಕೈಯಲ್ಲಿ, ಲಕ್ಷಣನ ಕೈಯಲ್ಲೂ, ಯಾವತ್ತೂ ಯುದ್ಧ ಮಾಡದ ಶತ್ರುಘ್ ನ ಕೈಯಲ್ಲೂ ಬಿಲ್ಲು, ಬೆನ್ನಿನ ಮೇಲೆ ಬತ್ತಳಿಕೆ! ಅಯ್ಯೋ ಹನುಮಂತ ಧೈರ್ಯವಂತ ವಯಸ್ಸಾದಂತೆ ಕಂಡರೂ ಕಣ್ಣು ಮುಚ್ಚಿ ಧ್ಯಾನಿಸುತ್ತಲೇ ಯಾವ ರಾಕ್ಷಸ ಈ ಪಟ್ಟಾಭಿಷೇಕಕ್ಕೆ ಬಂದರೂ ಗದೆ ಭುಜದ ಮೇಲೆ ಇದೆಯಾ ಅಂತ ಖಾತ್ರಿ ಪಡಿಸಿಕೊಂಡೆ ಕುಳಿತಂತಿದೆ. ಇದೇನಿದು, ಭರತ ವಿರಕ್ತಿಯಿಂದ ಬಿಲ್ಲು ಬಾಣದ ಜೊತೆ ಬತ್ತಳಿಕೆಯನ್ನೂ ನೆಲದ ಮೇಲಿಟ್ಟು ರಾಮನಿಗೆ ಹಣ್ಣು ಹಂಪಲು ಕೊಡುತ್ತಿದ್ದಾನೆ? ಛೇ ಅವನಿಗೆ ಕ್ಷತ್ರಿಯರ ಅದರಲ್ಲೂ ರಘುವಂಶದ ವೆಪನ್ಸ್ ಬಗ್ಗೆ ಗೌರವವೇ ಇಲ್ಲ. ಅದನ್ಯಾರಾದರು ಪಟ್ಟಾಭಿಷೇಕದ ವೇಳೆಯಲ್ಲಿ, ಶ್ರೀ ರಾಮ ಜೊತೆಯಿರುವಾಗ, ಗುರುವರ್ಯರು ಫ್ರಂಟ್ ಸೀಟಿನಲ್ಲಿ ಕುಳಿತಿರುವಾಗ ಬಿಲ್ಲನ್ನ ನೆಲೆದ ಮೇಲೆ ಇಡಬಹುದೇ? ಅಥವಾ ರಾಮನ ಪಾದುಕೆಯೇ ಸಾಕು ಎಂದು ವಿರಕ್ತಿಯೇ? ಅದೆಲ್ಲ ಸರಿ, ಇದು ಯುದ್ಧಕ್ಕೆ ಹೊರಟಿರುವ ತಂಜಾವೂರು ಶೈಲಿಯ ಚಿತ್ರವೋ ಅಥವಾ ಪಟ್ಟಾಭಿಷೇಕದ ಮಧುಬನಿ ಶೈಲಿಯ ಚಿತ್ರವೋ ಅಂತ ನೀವು ಯೋಚಿಸಬಾರದು. ಆದರೂ ಈ ಪಟ್ಟಾಭಿಷೇಕದ ಸಮಯದಲ್ಲಿ ರಾಮ ಬಿಲ್ಲು ಹಿಡಿಬಾರದಿತ್ತು, ಅಂತ ನೀವು ಬುದ್ಧನ ಅನುಯಾಯಿಗಳು ಶಾಂತಿಯನ್ನೇ ಬಯಸುತ್ತಿದ್ದರೆ ಮತ್ತೊಮ್ಮೆ ಯೋಚಿಸಿ. ರಾಮ ಧೈರ್ಯಶಾಲಿ. ಅವನಿಗೇಕೆ ಬೇಕು ಸದಾ ಬಿಲ್ಲು ಬಾಣ? ಅಷ್ಟೂ ಗೊತ್ತಾಗಲ್ವೆ ನಿಮಗೆ. ಅಯೋಧ್ಯೆ ಸುತ್ತಮುತ್ತಲು ಟೆರರಿಸ್ಟ್ ಗಳು! 

ಹೇ ಆಗಿನ ಕಾಲದಲ್ಲಿ ರಾಮ ರಾಜ್ಯದಲ್ಲಿ ಟೆರರಿಸ್ಟ್ ಇರಕ್ಕೆ ಸಾಧ್ಯವಾ ಅಂತ ಯೋಚಿಸಬೇಕಾದ ವಿಷಯ. ಒಟ್ಟಿನಲ್ಲಿ ರಘುವಂಶದವರಿಗೆ ಯಾವಾಗಲೂ ಪ್ರಜೆಗಳನ್ನ ಕಾಪಾಡೋದೇ ಕೆಲಸ. ಹಂಗಿದ್ರೆ ನಾವು ಬಿಲ್ಲು ಬಾಣ ಹಿಡಕೊಂಡೆ ಇದ್ರೆ ನಮ್ಮನ್ನ ನಾವು ಕಾಪಾಡಿಕೊಳ್ಳಬಹುದಾ? ನೀವು ಹಿಂಗೆಲ್ಲ ವಾದಕ್ಕಿಳಿದರೆ ನಿಮ್ಮನ್ನ ಸೀದಾ ಟೆಕ್ಸಸ್ ರಾಜ್ಯಕ್ಕೆ ಪುಷ್ಪಕ ವಿಮಾನದಲ್ಲಿ ಕಳಿಸಿಬಿಡಬೇಕಾಗುತ್ತೆ. ಆ ರಾಜ್ಯದಲ್ಲಿ ಹಂಗೇನಾ. ಪ್ರಜೆಗಳೆಲ್ಲರೂ ಜೇಬೊಳಗೊಂದು, ಬೂಟಿನೊಳಗೊಂದು ಅಂತ ಅದೇನೋ ಅವಿಸಿಕೊಂಡು ಓಡಾಡ್ತಾರೆ. 

ಆದ್ರೆ ರಾಮ ರಾಜ್ಯದಲ್ಲಿ ಹಂಗಿಲ್ಲ. ಪ್ರಜೆಗಳು ನಿಶ್ಚಿಂತ ಮನೋಭಾವದವರು. ರಾಮ ನೋಡಿಕೊಳ್ತಾನೆ ಅವನ ಬಳಿ ಬಿಲ್ಲು ಬಾಣ ಇದೆ ನಮಗ್ಯಾಕ ಆ ಉಸಾಬರಿ ಅಂತ ಸುಮ್ಮನಿರ್ತಾರೆ. ಹೆಗಲ ಮೇಲೆ ಟವಲ್ಲು (HMT) ಅಂತ ನೀವು ಹಳ್ಳಿ ಗೌಡರನ್ನ ಆಡಿಕೊಳ್ಳುವಂತೆ ಆಗಿನ ಕಾಲದ ರಾಮರಾಜ್ಯದಲ್ಲಿ HMB ಅಂತ ಕಾರ್ಟೂನ್ ಮಾಡಿ ಅಯೋಧ್ಯಾ ಟೈಮ್ಸ್ ಮಾಸ ಪತ್ರಿಕೆಯಲ್ಲಿ ಅದನ್ನು ಓದಬಹುದಿತ್ತು. ಅಯೋಧ್ಯೆಯವರಂತೂ ಬಾಲ ಖಾಂಡದಲ್ಲೇ ಇರುತ್ತಾರೆ. ಯಾರೂ ತಾವಾಗಿಯೇ ಬಿಲ್ಲು ಬಾಣ ಉಪಯೋಗಿಸುವ ಕಲೆಯನ್ನಾಗಲಿ, ಆಸಕ್ತಿಯನ್ನಾಗಲಿ ತೋರಿಸಲೇ ಇಲ್ಲ. ಅವರ್ಯಾರೂ ಬಿಲ್ಲು ಬಾಣ ಹಿಡಿಯಲೇ ಇಲ್ಲ ಅಂದರೆ ಅದೆಷ್ಟು ಮುಗ್ಧರು ಅವರು ಅಲ್ಲವೇ? ಸಧ್ಯ, ರಾಕ್ಷಸಿಯರಾಗಲಿ, ರಕ್ಕಸರಾಗಲಿ ಯಾರೊ ಅಯೋಧ್ಯೆಯ ಮೇಲೆ ಆಕ್ರಮಣ ಮಾಡಲಿಲ್ಲ. ಸಧ್ಯ ರಾಮ ಲಕ್ಷ್ಮಣರು ಊರಿನ ಹೊರವಲಯದಲ್ಲೇ ಮುಗಿಸಿಬಿಟ್ಟರು ಅವರ ಕತೆಯ. ಅಯೋಧ್ಯಾ ನಿವಾಸಿಗಳಿಗೆ ಒಂದು ಒಗಿಯೋ ಕಲ್ಲು ಸಾಕು. ರಾಮ ಹಿಂಗ ಸೀತೆ ಹಿಂಗ ಅಂತ ಒಂದೊಂದು ಬಾರಿ ಬಟ್ಟೆ ಒತ್ತಿ ಒಗಿಯುವಾಗ ಮಾತಾಡಿಕೊಳ್ತಾರೆ ಅಷ್ಟೇ. ಆ ಕಿಷ್ಕಿಂದಾ ನಗರದ ವಾನರರೇ ವಾಸಿ. ಅವರಿಗೆ ಕಲ್ಲುಗಳನ್ನು ಹೇಗೆ ಶಸ್ತ್ರವಾಗಿ ಉಪಯೋಗಿಸಬೇಕೆಂದು ಗೊತ್ತಿತ್ತು ಅಂತ ನೀವು ಇಲ್ಲಿ ವಗ್ಗರಣೆಯ ಮಾತು ಹೇಳಬೇಕೆನಿಸಿದರೆ ನನ್ನ ಅಭ್ಯಂತರವೇನಿಲ್ಲ. ಆದರೆ ಅಯೋಧ್ಯಾ ನಿವಾಸಿಗಳ ಆ ಮಾತು ರಾಮನಿಗೆ ಕೇಳಿಸ್ತು ಅಂದಾಗ ಮತ್ತೆ ರಾಮ ಬಿಲ್ಲು ಬಾಣ ಹಿಡಿದೇ ಆಜ್ಞೆ ಕೊಟ್ಟುಬಿಟ್ಟ, ಲಕ್ಷಣ ಬಿಲ್ಲು ಬಾಣ ಹಿಡಿದೇ ರಥದ ಮೇಲೆ ಕುಳಿತು ಜಾನಕಿಯನ್ನ ಕಾಡಿಗೇ ಬಿಟ್ಟು ಬಂದುಬಿಟ್ಟ. ಒಟ್ಟಿನಲ್ಲಿ ಈ ಬಿಲ್ಲು ಬಾಣ ಶುಭ ಘಳಿಗೆಯಲ್ಲಿ, ಕೆಟ್ಟ ಘಳಿಗೆಯಲ್ಲಿ, ಶಾಂತ ಘಳಿಗೆಯಲ್ಲಿ, ಯುದ್ಧ ಘಳಿಗೆಯಲ್ಲಿ ಯಾವಾಗಲೂ, ಅದೇನೋ ಹೇಳ್ತಾರಲ್ಲ ನೆತ್ತಿಯ ಮೇಲೆ ಅಲುಗಾಡುತ್ತಿದ್ದ ಮೊನಚಾದ ಕತ್ತಿಯಂತೆ, ಅಯ್ಯೋ ಅಲ್ಲ ರೀ ಅದೇ ಹೆಗಲ ಮೇಲೆ ನೆತ್ತಾಡುತ್ತಿದ್ದ ಬಿಲ್ಲಿನಂತೆ ಯಾವಾಗಲೂ ಇರುತ್ತೆ ರಾಮಾಯಣದಲ್ಲಿ. 

ಬಿಲ್ಲು ಬಾಣದ ಕತೆ ಸಮಾಪ್ತಿ ಆಯಿತು ಅಂತ ನೀವು ಸುಮ್ಮನೆ ಕೂಡಬೇಡಿ, ಅಯೋಧ್ಯಾವಾಸಿಗಳಂತೆ; ಬದಲು ಬಿಲ್ಲು ಬಾಣ ಉಪಯೋಗಿಸಲು ಕಲಿತುಕೊಳ್ಳಿ, ಮುಂದೆ ಉಪಯೋಗಕ್ಕೆ ಬರಬಹುದು ಅಥವಾ ರಘುವಂಶಜರೆಂದು ನಿಮ್ಮನ್ನೂ ಗುರುತಿಸಬಹದು! ಹಾಗಂದ ಮಾತ್ರಕ್ಕೆ ನಾಳೆ ನಿಮ್ಮ ಆಫೀಸ್ಗೆ ಅದನ್ನು ಹೆಗಲ ಮೇಲೆ ಕೊಂಡಯ್ಯಬೇಡಿ ಅಷ್ಟೇ! ಮೇಲಿನ ಹರಟೆಗೆ ಇನ್ಸ್ಪಿರೇಷನ್




















ಪುರುಷೋತ್ತಮ ರಾಮನ ಭಜಿಸು ಮನವೆ