ರಥ ಸಪ್ತಮಿ
-ರವಿ ಗೋಪಾಲರಾವ್
ಭಾಸ್ಕರ ಕೇಳಿದನಂತೆ
ಇಂದು ಎಲ್ಲಿಗೆ ಹೋಗುವ
ಜ್ಞಾನೋದಯವನೇ ಅರಸುವ ಗಾಯತ್ರಿ
ಉತ್ತರಿಸಿದನಂತೆ ಋಷ್ಯಾಶ್ರಮ ಚೆನ್ನ
ಶಕ್ತಿಯ ಕ್ರೀಡೆಗಳನೆ ಬಯಸುವ ಬೃಹತಿ
ಬೆಟ್ಟವನಹತ್ತುವ ಅಂದನಂತೆ
ಸದಾ ಉತ್ಸಾಹಿ ಉಷ್ಣಿಕ ಎಲ್ಲರೂ ಸೇರಿ
ಆಟವಾಡಿದರೆ ಸಾಕೆಂದನಂತೆ
ಜಗತಿ ಎಲ್ಲರನೂ ತನ್ನೋಟದಲಿ
ಸೋಲಿಸುವ ಹಂಬಲವೆಂದನಂತೆ
ಬಲಶಾಲಿ ನಾನೆನ್ನುವ ಛಲವನು ತೀರಿಸುವ
ಜಾಗಕೆ ಹೋಗುವ ಎಂದನಂತೆ ತ್ರಿಷ್ಟುಪ
ಅವು ಯಾವುವು ಬೇಡ ಹೋಗುವ
ಮಂದಿರಕೆಂದು ಗೋಗರೆದನಂತೆ ಅನುಷ್ಟಪ
ಬೇಡಪ್ಪ ಮಕ್ಕಳೊಡನೆ ಆಡುವ ಬಾಲವನದಲಿ
ಎಂದು ವಿನಂತಿಸಿದನಂತೆ ಪಂಕ್ತಿ
ಇಂದು ರಥ ಸಪ್ತಮಿ ಎಲ್ಲರನು ಕರೆದೊಯ್ಯುವೆ
ನೀವೆಂದೂ ನೋಡಿರದ ಸುಂದರ ತಾಣಕೆನಂದನಂತೆ ಭಾಸ್ಕರ
ಸೂರ್ಯಕಾಂತಿಯ ಬನದಲಿ ದಿನವಿಡೀ
ಆಟವಾಡಿ ಹಿಂದಿರುಗಿದಾಗ ಸಂಜನ ನೀಡಿದ
ಹಸುರೆಲೆ ಊಟ ಚೆನ್ನ ಎಂದರಂತೆ ಎಲ್ಲರೂ
_____________
_____________
ಸೂರ್ಯನ ಏಳು ಅಶ್ವಗಳಾದ ಗಾಯತ್ರಿ, ಬೃಹತಿ, ಉಷ್ನಿಕ್, ಜಗತಿ, ತ್ರಿಷ್ಟುಪ್,
ಅನುಷ್ಟಪ್, ಪಂಕ್ತಿ ಮತ್ತು ಅವುಗಳ ಗುಣಗಳನ್ನಾಧರಿಸಿದ
ಕಲ್ಪನೆಯಲ್ಲಿ ಮೂಡಿಬಂದದ್ದು ಈ ರಥಸಪ್ತಮಿಯ ಚುಟುಕು.
PC: ನನ್ನದೆ AI ಚಿತ್ರ
_____________
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ